ಬೆಂಗಳೂರು, ಮೇ.5 www.bengaluruwire.com : ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ನಕಲಿ ದುಷ್ಕರ್ಮಿಯೊಬ್ಬ ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ (Manageing Director) ಮಹಾಂತೇಶ ಬೀಳಗಿ ಹಾಗೂ ಇತರೆ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದಿದ್ದು, ಈ ಬಗ್ಗೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಲು ತನಿಖೆ ಕೈಗೊಂಡಿದ್ದಾರೆ. ಈ ಕುರಿತ ಎಫ್ ಐಆರ್ ಪ್ರತಿ ಬೆಂಗಳೂರು ವೈರ್ ಬಳಿ ಲಭ್ಯವಿದೆ.
ಬೆಸ್ಕಾಂ ಅಧಿಕಾರಿ ಮೃತ್ಯುಂಜಯ ಅವರು ಬೆದರಿಕೆ ಕರೆಗಳ ಬಗ್ಗೆ ಮೇ.3ರಂದು ದೂರು ನೀಡಿದ್ದಾರೆ. ‘ಮೇ 1ರಂದು ಮೃತ್ಯುಂಜಯ ಅವರಿಗೆ ಕರೆ ಮಾಡಿದ್ದ ಅಪರಿಚಿತ, ತಾನು ಲೋಕಾಯುಕ್ತ ಪೊಲೀಸ್ ಎಂಬುದಾಗಿ ತಿಳಿಸಿದ್ದ. ತಮ್ಮ ಕಚೇರಿಯಲ್ಲಿರುವ ಎಲ್ಲಾ ಅಧಿಕಾರಿಗಳ ಮೇಲೆ ದಾಳಿ ಮಾಡುವುದಾಗಿ ಹೇಳಿ ಬೆದರಿಕೆ ಹಾಕಿದ್ದ. ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ, ಅವರ ಆಪ್ತ ಕಾರ್ಯದರ್ಶಿ ಪಿ. ಚಂದ್ರಶೇಖರ್, ತಾಂತ್ರಿಕ ಸಹಾಯಕ ಎಸ್.ವಿ. ನವನೀತ್ ಕೃಷ್ಣನ್ ಅವರಿಗೂ ಬೇರೆ ಬೇರೆ ಹೆಸರಿನಲ್ಲಿ ತಾನು ಲೋಕಾಯುಕ್ತ ಪೊಲೀಸ್ ಎಂದು ಕರೆ ಮಾಡಿ ಆರೋಪಿ ಮಾತನಾಡಿದ್ದ” ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಟ್ರೂ ಕಾಲರ್ ನಲ್ಲಿ ಲೋಕಾಯುಕ್ತ ಡಿವೈಎಸ್ ಪಿ ಎಂಬ ಹೆಸರಿನಲ್ಲಿ ಕರೆ ಬರುತ್ತಿತ್ತು. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯನ್ನು ಸಂಪರ್ಕಿಸಿದಾಗ ಪೊಲೀಸ್ ಠಾಣೆಗೆ ದೂರು ನೀಡಲು ತಿಳಿಸಿದರು. ಅದರಂತೆ ಠಾಣೆಗೆ ದೂರು ನೀಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಲೋಕಾಯುಕ್ತ ಪೊಲೀಸರ ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆ ಮಾಡುವ ಪ್ರಕರಣಗಳು ಕೇಳಿಬರುತ್ತಿರುತ್ತದೆ, ಕೆಲವು ಕಡೆಗಳಲ್ಲಿ ಈ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುತ್ತದೆ.