ಬೆಂಗಳೂರು, ಜೂ.6 www.bengaluruwire.com : ಬೈಯ್ಯಪ್ಪನಹಳ್ಳಿಯಲ್ಲಿರುವ ರಾಜಧಾನಿಯ ನೂತನ ಮೂರನೇ ರೈಲ್ವೆ ನಿಲ್ದಾಣವಾದ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣ (SMVB) ಇಂದಿನಿಂದ ಅಧಿಕೃತವಾಗಿ ತನ್ನ ಸೇವೆಯನ್ನು ಆರಂಭಿಸಿದೆ. ಇದು ದೇಶದ ಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (KIAL)ದ ಹೋಲಿಕೆಯಂತಿರುವ ಈ ರೈಲ್ವೆ ನಿಲ್ದಾಣದಿಂದ ಇಂದು ಎರ್ನಾಕುಲಂ, ಕೊಚುವೇಲಿ ಹಾಗೂ ಪಾಟ್ನಾ ಸ್ಥಳಗಳಿಗೆ ರೈಲು ಸೇವೆ ಆರಂಭವಾಗಿದೆ. ಜೂ.20ರಿಂದ ಎಸ್ಎಂವಿಬಿ ನಿಲ್ದಾಣದಿಂದ ಬಂಗಾರಪೇಟೆಗೆ ರೈಲು ಸೇವೆ ಪ್ರಾರಂಭವಾಗಲಿದೆ. ಮುಂದೆ 50 ಸ್ಥಳಗಳಿಗೆ ಈ ರೈಲು ನಿಲ್ದಾಣದಿಂದ ರೈಲು ಸೇವೆ ನೀಡಲು ನೈರುತ್ಯ ರೈಲ್ವೆ ನಿರ್ಧರಿಸಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲು ನಿಲ್ದಾಣ ಒಟ್ಟು 4,200 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಪೂರ್ಣರೂಪದ 900 ಚದರ ಮೀಟರ್ ವಿಸ್ತೀರ್ಣದ ಎಸಿ ಲಾಬಿ ಹೊಂದಿದ ದೇಶದ ಮೊದಲ ರೈಲ್ವೆ ನಿಲ್ದಾಣ ಇದಾಗಿದೆ.
ಒಟ್ಟು 7 ಪ್ಲಾಟ್ ಫಾರಮ್ ಹೊಂದಿರುವ ಈ ರೈಲು ನಿಲ್ದಾಣ, ಮೆಜಿಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣದ ಬಳಿಕ ರಾಜಧಾನಿಯ ಮೂರನೆಯ ರೈಲು ನಿಲ್ದಾಣವಾಗಿ ಹೊರಹೊಮ್ಮಿದೆ. ಚೆನ್ನೈ ಮತ್ತು ಮುಂಬೈ ಮಾರ್ಗದ ರೈಲುಗಳು ಬಂದು ಹೋಗಲು ಅನುವಾಗುವ ನಿಟ್ಟಿನಲ್ಲಿ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣವು ಸೇವೆ ಒದಗಿಸಲಿದೆ. ಇದರಿಂದಾಗಿ ಮೆಜಿಸ್ಟಿಕ್ ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮೇಲಿನ ಒತ್ತಡವು ಕಡಿಮೆಯಾಗಲಿದೆ.
ಪ್ರಯಾಣಿಕರಿಗಾಗಿ ಎರಡು ಮೇಲ್ಸೇತುವೆ ಹಾಗೂ 2 ಕೆಳಸೇತುವೆಗಳನ್ನು ಹೊಂದಿದ್ದು, ವಿಶೇಷ ಚೇತನರು ಇವುಗಳನ್ನು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮೇಲ್ಸೇತುವೆ ಹಾಗೂ ಕೆಳಸೇತುವೆಗಳು ಇಲ್ಲಿನ ಎಲ್ಲಾ ಏಳು ಪ್ಲಾಟ್ ಫಾರ್ಮ್ ಗಳಿಗೆ ಸಂಪರ್ಕ ಹೊದಂದಿದೆ. ಪ್ರಯಾಣಿಕರ ಓಡಾಟಕ್ಕಾಗಿ ಮೆಟ್ಟಿಲುಗಳ ಪಕ್ಕ ಎಸ್ಕಲೇಟರ್, ಲಿಫ್ಟ್ ಸೌಲಭ್ಯವನ್ನು ನೈರುತ್ಯ ರೈಲ್ವೆ ಇಲಾಖೆಯು ಕಲ್ಪಿಸಿದೆ.

314 ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಸ್ಟೇಷನ್ ನಿರ್ಮಾಣ :
ಈ ರೈಲ್ವೆ ನಿಲ್ದಾಣ ಸಿವಿಲ್ ಕಾಮಗಾರಿ, ಕಟ್ಟಡ, ಪ್ಲಾಟ್ ಫಾರಮ್, ಸಿಗ್ನಲಿಂಗ್, ಎಲೆಕ್ಟ್ರಿಕ್ ಕಾರ್ಯ ಹಾಗೂ ಟೆಲಿಕಮ್ಯುನಿಕೇಶನ್ ಸೇರಿದಂತೆ ಎಲ್ಲಾ ಕೆಲಸಗಳಿಗೆ ಒಟ್ಟಾರೆ 314 ಕೋಟಿ ರೂ. ವೆಚ್ಚವಾಗಿದೆ ಎಂದು ರೈಲ್ವೆ ಇಲಾಖೆ ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿವೆ.
900 ದ್ವಿಚಕ್ರ ನಿಲ್ಲಿಸಲು ವಿಸ್ತಾರವಾದ ಸ್ಥಳ ಹೊಂದಿದ ರೈಲ್ವೆ ಸ್ಟೇಷನ್ :
ಪುರುಷರು ಮತ್ತು ಮಹಿಳೆಯರಿಗಾಗಿ ಕಾಯುವಿಕೆ ಹಾಲ್, ಮೀಸಲು ಲಾಂಜ್, ಆಹಾರ ವಿತರಣಾ ವಿಭಾಗವನ್ನು ಈ ನಿಲ್ದಾಣವು ಹೊಂದಿದೆ. 250 ಕಾರು, 900 ದ್ವಿಚಕ್ರ ವಾಹನಗಳು, 50 ಆಟೋರಿಕ್ಷಾಗಳು ಮತ್ತು 20 ಕ್ಯಾಬ್ ಗಳನ್ನು ನಿಲ್ಲಿಸಲು ಅನುವಾಗುವಂತೆ ಸ್ಥಳವನ್ನು ಮೀಸಲಿಡಲಾಗಿದೆ. ನಗರದ ಪ್ರಮುಖ ಸ್ಥಳಗಳಿಗೆ ಇಲ್ಲಿಂದಲೇ ಬಸ್ ನಲ್ಲಿ ತೆರಳಲು ಅನುವಾಗುವಂತೆ ಬಸ್-ಬೇ ಸೌಲಭ್ಯವನ್ನು ಎಸ್ಎಂವಿಬಿ ನಿಲ್ದಾಣ ಒಳಗೊಂಡಿದೆ.
4 ಲಕ್ಷ ಲೀ. ತ್ಯಾಜ್ಯ ನೀರು ಸಂಸ್ಕರಣ ಘಟಕ :
ಪರಿಸರ ಸಂರಕ್ಷಣೆ ದೃಷ್ಟಿಯಿಂದಲೂ ಈ ರೈಲು ನಿಲ್ದಾಣವು ದೇಶದ ಇತರ ರೈಲ್ವೆ ಸ್ಟೇಷನ್ ಗಳಿಗೆ ಮಾದರಿಯಾಗುವಂತಿದೆ. ಏಕೆಂದರೆ, ಮಳೆನೀರು ಕೊಯ್ಲು ಸೌಲಭ್ಯವನ್ನು ಅಳವಡಿಸಿಕೊಳ್ಳಲಾಗಿದ್ದು, ಬಳಸಿದ ನೀರನ್ನು ಮರು ಬಳಸಲು ಅನುಕೂಲವಾಗುವಂತೆ 4 ಲಕ್ಷ ಲೀಟರ್ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ಇಲ್ಲಿ ಕಲ್ಪಿಸಲಾಗಿದೆ. ರೈಲುಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ಅತ್ಯಾಧುನಿಕ ಕೇಂದ್ರೀಕೃತ ವ್ಯವಸ್ಥೆಯನ್ನು ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೇ ನಿಲ್ದಾಣವು ಹೊಂದಿದೆ. ಟರ್ಮಿನಲ್ ನಲ್ಲಿರುವ ರೈಲ್ವೆ ಮಾರ್ಗಕ್ಕೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಸಂಪರ್ಕ ನೀಡಲಾಗಿದೆ.
ವಿಮಾನ ನಿಲ್ದಾಣದ ವಿನ್ಯಾಸವನ್ನು ಹೊಂದಿರುವ, ದಿವ್ಯಾಂಗ ಸ್ನೇಹಿ, ಪರಿಸರ ಸ್ನೇಹಿಯಾಗಿರುವ ರೈಲ್ವೇ ಸ್ಟೇಷನ್ ಭಾರತೀಯ ರೈಲ್ವೆ ಇತಿಹಾಸದಲ್ಲೇ ಹೊಸದೊಂದು ಶಖೆ ಆರಂಭವಾಗಿರುವುದಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಮೂಲಕ ಪ್ರಯಾಣಿಕರಿಗೆ ನೀಡುವ ಸೇವೆಯ ಗುಣಮಟ್ಟವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟಿದೆ. ಇದು ಬೆಂಗಳೂರಿನಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ.






















