ಬೆಂಗಳೂರು, (www.bengaluruwire.com) : ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್ ಟಿಒ)ಯಲ್ಲಿ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿಯ ಸರ್ಟಿಫಿಕೇಟ್ ಒಳಗೊಂಡ ಸ್ಮಾರ್ಟ್ ಕಾರ್ಡ್ ಪೂರೈಕೆಯಲ್ಲಿ ಹಲವು ವರ್ಷಗಳಿಂದ ಪದೇ ಪದೇ ವ್ಯತ್ಯಯ ಕಂಡು ಬರುತ್ತಿದೆ. ಗುಣಮಟ್ಟದ ಸೇವೆ ನೀಡಲು ಆರ್ ಟಿಒ ಎಡವಲು, 12 ವರ್ಷಗಳಾದರೂ ಸ್ಮಾರ್ಟ್ ಕಾರ್ಡ್ ವಿತರಣೆ ಗುತ್ತಿಗೆಯನ್ನು ರೋಸ್ಮೆರ್ಟಾ ಸಂಸ್ಥೆಗಾಗಿ ಮುಂದುವರೆಸಿದ್ದು ಕಾರಣ ಎನ್ನಲಾಗುತ್ತಿದೆ.
ದಿನನಿತ್ಯ ಕಂಪ್ಯೂಟರ್, ಸ್ಮಾರ್ಟ್ ಕಾರ್ಡ್ ಪೂರೈಕೆ, ಪ್ರಿಂಟಿಂಗ್ ಮತ್ತಿತರ ಸಮಸ್ಯೆಗಳಿಂದ ರಾಜ್ಯದ 67 ಆರ್ ಟಿಒ ಕಚೇರಿಗಳು ನಲಗುತ್ತಿದ್ದು, ಇದರ ನೇರ ಪರಿಣಾಮ ದೈನಂದಿನ ಕೆಲಸಗಳಿಗೆಂದು ಓಡಾಡುವ ನಾಗರೀಕರು ಅನುಭವಿಸುತ್ತಿದ್ದಾರೆ.
2009-10ರಲ್ಲಿ ವಾಹನ ಸವಾರರ ಹಾಗೂ ವಾಹನ ನೋಂದಣಿ ಮಾಹಿತಿ ಒಳಗೊಂಡ ಸ್ಮಾರ್ಟ್ ಕಾರ್ಡ್ ಪೂರೈಕೆಗೆ ಟೆಂಡರ್ ಪಡೆದುಕೊಂಡ ರೋಸ್ಮೆರ್ಟಾ ಸಂಸ್ಥೆಯ ಗುತ್ತಿಗೆ ಅವಧಿ 2016-17ರಲ್ಲಿ ಮುಗಿದರೂ ಪುನಃ ಗುತ್ತಿಗೆ ಅವಧಿಯನ್ನು ಸಾರಿಗೆ ಇಲಾಖೆ 2024ರ ಇಸವಿ ತನಕ ವಿಸ್ತರಿಸಿದೆ. ಹೀಗಾಗಿ ಕಳೆದ 12 ವರ್ಷಗಳಿಂದ ಇಲಾಖೆಯಲ್ಲಿ ಪ್ರಭಾವ ಬೆಳಸಿಕೊಂಡ ರೋಸ್ಮೆರ್ಟಾ ಸಂಸ್ಥೆ ಪಡೆದ ಶುಲ್ಕ ಹಣಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ನೀಡಲು ಮರೆತಿದೆ ಎಂದು ಹೇಳುತ್ತಾರೆ ಆರ್ ಟಿಒ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು.
2009ರಲ್ಲಿ ರಾಜ್ಯದಲ್ಲಿ ವಾಹನ ಚಾಲನಾ ಪರವಾನಗಿ (ಡಿಎಲ್) ಹಾಗೂ ವಾಹನ ನೋಂದಣಿ ಪ್ರಮಾಣಪತ್ರ (ವಿಆರ್ ಸಿ) ದತ್ತಾಂಶ ಒಳಗೊಂಡ ಚಿಪ್ ನಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ಹಾಗೂ ಆರ್ ಟಿಒ ಕಚೇರಿಯಲ್ಲಿ ಕಂಪ್ಯೂಟರೀಕರಣಗೊಳಿಸುವ ಟೆಂಡರ್ ಪಡೆದುಕೊಂಡಿತು. ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆಯ ಕಾಂಟ್ರಾಕ್ಟ್ ಪಡೆದಿರುವ ರೋಸ್ ಮರ್ತಾ ಸಂಸ್ಥೆ ರಾಜ್ಯದಲ್ಲೂ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದೆ.

“ರೋಸ್ಮೆರ್ಟಾ ಸಂಸ್ಥೆ ಈ ಹಿಂದೆ ಸಾರಿಗೆ ಇಲಾಖೆ ಜೊತೆ ಮಾಡಿಕೊಂಡ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹಿಂದಿನ ಪ್ರಧಾನ ಕಾರ್ಯದರ್ಶಿಗಳು ತನಿಖೆಗೆ ಆದೇಶಿಸಿ ಮಧ್ಯಂತರ ವರದಿ ಬಂದಿತ್ತು. ಆ ವರದಿಯಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿರದ ಕಾರಣ ಅವುಗಳ ಬಗ್ಗೆ ಪರಿಶೀಲನೆ ನಡಿಸಿದ ಮೇಲೆ ಮರು ತನಿಖೆ ನಡೆಸಿ ವರದಿ ನೀಡುವಂತೆ ಸಾರಿಗೆ ಆಯುಕ್ತರಿಗೆ ಸೂಚಿಸಿದ್ದೇನೆ. 2009ರಲ್ಲಿ ರೋಸ್ಮೆರ್ಟಾ ಸಂಸ್ಥೆ ಗುತ್ತಿಗೆ ಪಡೆದುಕೊಂಡ ನಂತರ ಹಲವು ಬಾರಿ ಸಂಸ್ಥೆಯು ಗುಣಮಟ್ಟದ ಸೇವೆ ನೀಡದ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಇವರ ಬಳಿಯಿರುವ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಸಾಕಷ್ಟು ಹಳೆಯದಾಗಿದೆ. ಹೀಗಾಗಿ ಆಯುಕ್ತರ ವರದಿ ಬಂದ ಬಳಿಕ ಆ ಸಂಸ್ಥೆಗೆ ನೀಡಿದ ಗುತ್ತಿಗೆ ರದ್ಧುಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕಾ? ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಎರಡು ತಿಂಗಳಲ್ಲಿ ಬದಲಾವಣೆ ನಿರೀಕ್ಷಿಸಿ. ”
– ರಾಜೇಂದ್ರ ಕುಮಾರ್ ಕಟಾರಿಯಾ, ಪ್ರಧಾನ ಕಾರ್ಯದರ್ಶಿ, ಸಾರಿಗೆ ಇಲಾಖೆ
ಆರ್ ಟಿಒಗಳಲ್ಲಿ ಸ್ಮಾರ್ಟ್ ಕಾರ್ಡ್ ರೀಡರ್ ಯಂತ್ರಗಳ ಕೊರತೆಯಿದೆ :
ಕೇವಲ ಸ್ಮಾರ್ಟ್ ಕಾರ್ಡ್ ರೀಡರ್ ಮೂಲಕ ಕಾರ್ಡ್ ಸ್ಕ್ಯಾನ್ ಮಾಡಿದಾಕ್ಷಣ ಡಿಎಲ್ ಸ್ಮಾರ್ಟ್ ಕಾರ್ಡ್ ಆದರೆ ವಾಹನ ಚಾಲಕನ ಹೆಸರು, ವಿಳಾಸ, ಭಾವಚಿತ್ರ, ಸಹಿ ಸೇರಿದಂತೆ ಮತ್ತಿತರ ಮಾಹಿತಿಗಳು ಅಧಿಕಾರಿಗಳಿಗೆ ಲಭ್ಯವಾಗುತ್ತದೆ. ಅದೇ ರೀತಿ ಆರ್ ಸಿ ಸ್ಮಾರ್ಟ್ ಕಾರ್ಡ್ ನಲ್ಲಿ ವಾಹನ ನೋಂದಣಿ ಸಂಖ್ಯೆ, ಅದರ ಮಾಡೆಲ್, ಮಾಲೀಕರ ಹೆಸರು, ವಿಳಾಸ, ಭಾವಚಿತ್ರ, ಒಂದೊಮ್ಮೆ ವಾಹನದ ಮಾಲೀಕ ಸಂಚಾರ ನಿಯಮ ಉಲ್ಲಂಘಿಸಿದರೆ ಅದರ ಮಾಹಿತಿ ಈ ಸ್ಮಾರ್ಟ್ ಕಾರ್ಡ್ ನ ಚಿಪ್ ನಲ್ಲಿ ಲಭ್ಯವಿರಲಿದೆ.
ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುವಂತೆ ರಾಜ್ಯದ 67 ಆರ್ ಟಿಒ ಕಚೇರಿಯ ಬಹುತೇಕ ಕಡೆ, ಡಿಎಲ್- ಆರ್ ಸಿ ಸ್ಮಾರ್ಟ್ ಕಾರ್ಡ್ ಗಳನ್ನು ರೀಡ್ ಮಾಡುವ ಸ್ಮಾರ್ಟ್ ಕಾರ್ಡ್ ರೀಡರ್ ಯಂತ್ರವನ್ನೇ ಸರಿಯಾಗಿ ರೋಸ್ಮೆರ್ಟಾ ಸಂಸ್ಥೆ ಪೂರೈಸಿಲ್ಲ. ಕೆಲವು ಸ್ಮಾರ್ಟ್ ಗಳಂತೂ ಈ ಕಾರ್ಡ್ ರೀಡರ್ ನಲ್ಲಿ ಹಾಕಿದರೆ ಮಾಹಿತಿಯೇ ಲಭ್ಯವಾಗಲ್ಲ ಎಂದು ದೂರುತ್ತಾರೆ.
ನಿಗಧಿತ ಅವಧಿಯಲ್ಲಿ ಸ್ಮಾರ್ಟ್ ಕಾರ್ಡ್ ಗ್ರಾಹಕರಿಗೆ ಲಭ್ಯವಾಗುತ್ತಿಲ್ಲ :
ಬೆಂಗಳೂರಿನ ಪ್ರಮುಖ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಗಳಾದ ಜಯನಗರ, ಯಶವಂತಪುರ, ಕೆ.ಆರ್.ಪುರಂ, ಜ್ಞಾನಭಾರತಿ, ಕೋರಮಂಗಲ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಸ್ಮಾರ್ಟ್ ಕಾರ್ಡ್ ಗಳನ್ನು ಬೇಡಿಕೆಗೆ ತಕ್ಕಂತೆ ಸೂಕ್ತ ರೀತಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಹೊಸದಾಗಿ, ನವೀಕರಣ ಮಾಡಿಕೊಳ್ಳುವ ಡಿಎಲ್, ವಾಹನ ನೋಂದಣಿ ಮಾಡಿಕೊಂಡವರಿಗೆ ನಿಗಧಿತ ಅವಧಿಯಲ್ಲಿ ಸ್ಮಾರ್ಟ್ ಕಾರ್ಡ್ ನಲ್ಲಿ ಚಾಲಕರು, ವಾಹನದ ವಿವರ ಕಾರ್ಡ್ ನಲ್ಲಿ ಮುದ್ರಿಸಿ, ಸ್ಮಾರ್ಟ್ ಕಾರ್ಡ್ ಚಿಪ್ ನಲ್ಲಿ ಅದರ ದತ್ತಾಂಶವನ್ನು ಶೇಖರಿಸಿಟ್ಟು ಸ್ಮಾರ್ಟ್ ಕಾರ್ಡನ್ನು ಡಿಎಲ್, ವಿಆರ್ ಸಿ ನೋಂದಣಿಯಾದ ದಿನದಿಂದ 30 ದಿನದ ಒಳಗಾಗಿ ಗ್ರಾಹಕರ ಮನೆ ಅಥವಾ ಕಚೇರಿ ವಿಳಾಸಕ್ಕೆ ತಲುಪಿಸಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಆರ್ ಟಿಒ ಕಚೇರಿಯ ಅಧಿಕಾರಿಗಳು.
“ಸಾರಿಗೆ ಇಲಾಖೆಯು ಕಳೆದ 12 ವರ್ಷಗಳಾದರೂ, ಹೊಸದಾಗಿ ಟೆಂಡರ್ ಕರೆಯದೇ, ರೋಸ್ಮೇರ್ಟಾ ಕಂಪನಿಗೇ ಈಗಿರುವ ಟೆಂಡರ್ ಅನ್ನೇ ಮತ್ತೆ ಮುಂದುವರಿಸಿರುವ ಹಿಂದೆ ಕಾಣದ ಕೈಗಳು ಹಾಗೂ ಕುರುಡು ಕಾಂಚಾಣ ಕೆಲಸ ಮಾಡಿದಂತೆ ಕಾಣುತ್ತೆ. ರೋಸ್ಮೇರ್ಟಾ ಕಂಪನಿಯು ಸಾರಿಗೆ ಇಲಾಖೆಯಲ್ಲಿ ಕಂಪ್ಯೂಟರೀಕರಣ ಹಾಗೂ ಸ್ಮಾರ್ಟ್ ಕಾರ್ಡ್ ವಿತರಣೆ ಸೇವೆ ಸರಿಯಾಗಿ ಕೊಡುತ್ತಿಲ್ಲ ಎಂಬ ಬಗ್ಗೆ ಸಾಕಷ್ಟು ದೂರುಗಳಿವೆ. ಹೀಗಿರುವಾಗ ಗುಣಮಟ್ಟದ ಸೇವೆ ನೀಡಲು ಸಾರಿಗೆ ಇಲಾಖೆಯು ಪರ್ಯಾಯ ವ್ಯವಸ್ಥೆ ಕಲ್ಪಿಸಿ ಇದೇ ರೀತಿ ಸೇವೆ ನೀಡುವ ಇತರ ಕಂಪನಿಗಳಿಗೂ ಅವಕಾಶ ಕಲ್ಪಿಸಬೇಕು. ಆಗ ಕಡಿಮೆ ವೆಚ್ಚದಲ್ಲಿ ಸಾರಿಗೆ ಇಲಾಖೆಗೆ ಆಧುನಿಕ ವ್ಯವಸ್ಥೆಯ ಸೇವೆ ಲಭ್ಯವಾಗಲಿದೆ. ಒಂದೇ ಕಂಪನಿಗೆ ಸ್ಮಾರ್ಟ್ ವಿತರಣೆ ಜವಾಬ್ದಾರಿ ಕೊಟ್ಟಿರುವುದು ತಪ್ಪು.”
– ರಾಧಾಕೃಷ್ಣ ಹೊಳ್ಳ, ಅಧ್ಯಕ್ಷ, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ
ಜ್ಞಾನಭಾರತಿ ಸಾರಿಗೆ ಕಚೇರಿ ಒಂದರಲ್ಲೇ ಆಗಸ್ಟ್ 26ರಿಂದ ಖಾಲಿ (ಬ್ಲಾಂಕ್) ಸ್ಮಾರ್ಟ್ ಕಾರ್ಡ್ ಪೂಕೈಕೆಯಾಗದೇ ಡಿಎಲ್, ಆರ್ ಸಿ ಸ್ಮಾರ್ಟ್ ಕಾರ್ಡ್ ಪ್ರಿಂಟಿಂಗ್ ಆಗದೆ ಅದರ ವಿತರಣೆ ಮಾಡಲಾಗುತ್ತಿಲ್ಲ. ಉನ್ನತ ಮೂಲಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ ಆಗಿ ಬ್ಲಾಂಕ್ ಸ್ಮಾರ್ಟ್ ಕಾರ್ಡ್ ಗಳ ಚಿಪ್ ಪ್ರಿಂಟಿಂಗ್ ಉಪಕರಣಗಳು ಹಾಳಾಗಿದೆ. ಹಾಗಾಗಿ ಸ್ಮಾರ್ಟ್ ಕಾರ್ಡ್ ಪೂರೈಕೆಯಲ್ಲಿ ಕಳೆದ ಒಂದು ವಾರದಿಂದ ವ್ಯತ್ಯಯವಾಗಿದೆ. ಇತ್ತೀಚೆಗಷ್ಟೆ 20 ಸಾವಿರ ಕಾರ್ಡ್ ಗಳನ್ನು ರಾಜ್ಯಾದ್ಯಂತ ಪೂರೈಕೆ ಮಾಡಿದ್ದರು. ಕೆಲವು ದಿನದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ರೋಸ್ಮೆರ್ಟಾ ಸಂಸ್ಥೆಯಲ್ಲಿನ ಮೂಲಗಳು ತಿಳಿಸಿದೆ.
ಈ ಬಗ್ಗೆ ರೋಸ್ಮೆರ್ಟಾ ಸಂಸ್ಥೆಯ ಕರ್ನಾಟಕ ವಿಭಾಗದ ಯೋಜನಾ ಸಂಯೋಜಕ ನಾಗೇಶ್, ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ರಾಜ್ಯದಲ್ಲಿ ಸ್ಮಾರ್ಟ್ ಕಾರ್ಡ್ ಪೂರೈಕೆಯಲ್ಲಿ ಕೊರತೆಯಾಗಿಲ್ಲ. ಸಂಸ್ಥೆವತಿಯಿಂದ ಕೇಂದ್ರ ಕಚೇರಿಯಿರುವ ನವದೆಹಲಿಗೆ ಇಂಡೆಂಟ್ ಹಾಕುತ್ತೇವೆ. ಲಾಜಿಸ್ಟಿಕ್ಸ್ ಸಮಸ್ಯೆಯಿಂದ ಕೊಂಚ ವಿಳಂಬವಾಗಿದೆ. ಇನ್ನು ಎರಡು ದಿನದಲ್ಲಿ ಸ್ಮಾರ್ಟ್ ಕಾರ್ಡ್ ಪೂರೈಕೆ ಸಮಸ್ಯೆ ಬಗೆಹರಿಯಲಿದೆ. ಆರ್ ಟಿಒ ಕಚೇರಿಗಳಿಗೆ ಪ್ರತಿದಿನ ಅಥವಾ ವಾರಕ್ಕೊಮ್ಮೆ ಕಾರ್ಡ್ ಗಳನ್ನು ಪೂರೈಕೆ ಮಾಡುತ್ತೇವೆ” ಎಂದಷ್ಟೇ ಹೇಳಿದ್ದಾರೆ.
ಒಂದೊಂದು ಸ್ಮಾರ್ಟ್ ಕಾರ್ಡಿಗೆ ರೋಸ್ಮೆರ್ಟಾ ಗೆ ಸಿಗೋ ಹಣವೆಷ್ಟು?
ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಯಾವುದೇ ವ್ಯಕ್ತಿಯ ಡಿಎಲ್ ಅಥವಾ ನವೀಕೃತ ಡಿಲ್, ವಾಹನದ ಆರ್ ಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದಾಗ ಸಾರಿಗೆ ಇಲಾಖೆಗೆ ಪ್ರತಿ ಕಾರ್ಡಿಗೆ 200 ರೂಪಾಯಿ ಶುಲ್ಕವನ್ನು ನೀಡುತ್ತಾರೆ. ಆ ಪೈಕಿ 200 ರೂ. ನಲ್ಲಿ ರೋಸ್ಮೆರ್ಟಾ ಸಂಸ್ಥೆಗೆ ಡಿಎಲ್ ಸ್ಮಾರ್ಟ್ ಕಾರ್ಡ್ ಗೆ 49 ರೂಪಾಯಿ ಹಾಗೂ ಆರ್ ಸಿ ಕಾರ್ಡ್ 63 ರೂಪಾಯಿ ಶುಲ್ಕ ಸಂದಾಯವಾಗುತ್ತೆ. ಈ ಹಣದಲ್ಲಿ ಸಂಸ್ಥೆಯು ಆರ್ ಟಿಒ ಕಚೇರಿಗಳಿಗೆ ಬ್ಲಾಂಕ್ ಕಾರ್ಡ್ ಪೂರೈಸಿ, ಚಾಲಕ ಅಥವಾ ವಾಹನ ಮಾಲೀಕ, ವಾಹನದ ಸಂಪೂರ್ಣ ವಿವರವನ್ನು ಸಾರಿಗೆ ಇಲಾಖೆಯಲ್ಲಿ ತಾನು ನಿರ್ವಹಿಸುತ್ತಿರುವ ಸರ್ವರ್ ಮೂಲಕ ಪಡೆದು ಆಯಾ ಆರ್ ಟಿಒ ಕಚೇರಿಯಲ್ಲೇ ರೋಸ್ಮೆರ್ಟಾ ಸಂಸ್ಥೆಯ ಸಿಬ್ಬಂದಿ, ಕಾರ್ಡ್ ನಲ್ಲಿ ಪ್ರಿಂಟ್ ಹಾಕಿ ವಿತರಿಸಬೇಕು.
ಡಿಎಲ್ ರಿನಿವಲ್, ವಿಆರ್ ಸಿ ವರ್ಗಾವಣೆಯಲ್ಲಿ ಗೋಲ್ ಮಾಲ್….!
ರೋಸ್ಮಾರ್ಟ್ ಸಂಸ್ಥೆಯು ನಿಯೋಜಿಸಿದ ತಾಂತ್ರಿಕ ಸಹಾಯಕರು ಈ ಹಿಂದೆ ಬ್ರೋಕರ್ ಗಳ ಜೊತೆ ಸೇರಿ ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸದೇ ನೇರವಾಗಿ ಬೋಗಸ್ ಡಿಎಲ್ ರಿನಿವಲ್, ವಾಹನಗಳ ಡೂಪ್ಲಿಕೇಟ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಒಳಗೊಂಡ ಸ್ಮಾರ್ಟ್ ಕಾರ್ಡ್ ವಿತರಿಸಲು ಸಾರಿಗೆ ಇಲಾಖೆಯ ಸರ್ವರ್ ಗೆ ಕನ್ನ ಹಾಕಿ ಮಾಹಿತಿ ಪಡೆದು ಕಾರ್ಡ್ ಪ್ರಿಂಟ್ ಹಾಕಿ ಅಕ್ರಮವಾಗಿ ವಿತರಿಸುತ್ತಿದ್ದ ಬಗ್ಗೆ ಆರ್ ಟಿಒನಲ್ಲಿ ದೂರು ದಾಖಲಾಗಿತ್ತು. ಆ ಸಂದರ್ಭದಲ್ಲಿ ವಿವಿಧ ಪ್ರಕರಣಗಳಲ್ಲಿ ರೋಸ್ಮಾರ್ಟ್ ಸಂಸ್ಥೆಯು ನೇಮಿಸಿದ 9 ತಾಂತ್ರಿಕ ಸಹಾಯಕರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗಿತ್ತು ಎನ್ನುತ್ತಾರೆ ಸಾರಿಗೆ ಇಲಾಖೆ ಸಿಬ್ಬಂದಿ.
2009 ರಿಂದ 2020ರ ತನಕ 1.68 ಕೋಟಿ ಡಿಎಲ್ ಸ್ಮಾರ್ಟ್ ಕಾರ್ಡ್ ವಿತರಣೆ :
ರಾಜ್ಯದಲ್ಲಿ 2009 ರಿಂದ ಡ್ರೈವಿಂಗ್ ಲೈಸೆನ್ಸ್ ಹಾಗೂ ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇರುವ ಸ್ಮಾರ್ಟ್ ಕಾರ್ಡ್ ವಿತರಣೆ ಆರಂಭಿಸಲಾಗಿದೆ. 2009ರಿಂದ 2020ರ ಮಾರ್ಚ್ ತನಕ ಸಾರಿಗೆ ಇಲಾಖೆಯು ಒಟ್ಟಾರೆ 1.68 ಕೋಟಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಣೆ ಮಾಡಿದೆ. ಅದೇ ರೀತಿ 2.33 ಕೋಟಿ ಆರ್ ಸಿ ಸ್ಮಾರ್ಟ್ ಕಾರ್ಡ್ ಗಳನ್ನು ಗ್ರಾಹಕರಿಗೆ ನೀಡಿದೆ.
“ರೋಸ್ಮೇರ್ಟಾ ಸಂಸ್ಥೆಗೆ 2009 ರಿಂದ ಸಾರಿಗೆ ಇಲಾಖೆಯಲ್ಲಿ ಡಿಎಲ್- ಆರ್ ಸಿ ಸ್ಮಾರ್ಟ್ ಕಾರ್ಡ್ ವಿತರಣೆ ಗುತ್ತಿಗೆ ನೀಡಲಾಗಿದೆ. 2016-17ರಲ್ಲಿ ಗುತ್ತಿಗೆ ಅವಧಿ ಮುಕ್ತಾಯವಾದ ಬಳಿಕ ಇಲಾಖೆಯು ಪುನಃ 2024ರ ತನಕ ಗುತ್ತಿಗೆಯನ್ನು ನವೀಕರಣ ಮಾಡಿದೆ. ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ಕೊರತೆಯಾಗುತ್ತಿರುವ ಬಗ್ಗೆ ತಮಗೆ ಮಾಹಿತಿಯಿಲ್ಲ. ಎಲ್ಲೆಲ್ಲಿ ಕಾರ್ಡ್ ಹಂಚಿಕೆ ಕೊರತೆಯಾಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.”
– ಶಿವಕುಮಾರ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು
2019-20ನೇ ಆರ್ಥಿಕ ವರ್ಷದ ಒಂದರಲ್ಲೇ ರಾಜ್ಯಾದ್ಯಂತ ಇದ್ದ 65 ಆರ್ ಟಿಒ ಕಚೇರಿಗಳಲ್ಲಿ 22,75,381 ಡಿಎಲ್ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಗಿದೆ. ಇದೇ ಅವಧಿಯಲ್ಲಿ ರಾಜ್ಯದಲ್ಲಿ 15,75,627 ಹೊಸ ವಾಹನಗಳು ರಿಜಿಸ್ಟರ್ ಆಗಿದೆ. ಪರಿಸ್ಥಿತಿ ಹೀಗಿರುವಾಗ ಸ್ಮಾರ್ಟ್ ಕಾರ್ಡ್ ಗಳು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದಿದ್ದರೆ ಅಂತಿಮವಾಗಿ ತೊಂದರೆಗೆ ಒಳಗಾಗುವುದು ಸಾಮಾನ್ಯ ಜನರು.
ಆರ್ ಟಿಒ ಕಚೇರಿಯಲ್ಲಿ ಒಂದು ಕಡೆ ಸ್ಮಾರ್ಟ್ ಕಾರ್ಡ್ ಗಳ ಪೂರೈಕೆ ಸಮಸ್ಯೆಯಲ್ಲದೆ ಮತ್ತೊಂದೆಡೆ ಸಂಪೂರ್ಣ ಗಣಕೀರಣಗೊಂಡರೂ ಕಂಪ್ಯೂಟರ್ ಬಿಡಿಭಾಗಗಳು, ಪ್ರಿಂಟರ್, ಸರ್ವರ್, ನೆಟ್ ವರ್ಕ್ ಮತ್ತಿತರ ಸಮಸ್ಯೆಗಳು ಪ್ರತಿನಿತ್ಯ ಆರ್ ಟಿಒ ಕಚೇರಿಯಲ್ಲಿ ಕಂಡು ಬರುತ್ತಿದೆ. ಇದರಿಂದ ಆರ್ ಟಿಒ ಕಚೇರಿಯ ಸಿಬ್ಬಂದಿ ಬೇಸೆತ್ತಿದ್ದು, ತಮ್ಮದಲ್ಲದ ತಪ್ಪಿಗೆ ಗ್ರಾಹಕರಿಂದ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದಾರೆ. ಈ ಸಮಸ್ಯೆಗಳಿಂದಾಗಿ ಒಂದು ಗಂಟೆಯೊಳಗೆ ಆಗುವ ಕೆಲಸ ಎರಡು ಗಂಟೆ ಕೆಲವು ವೇಳೆ ಸಾರ್ವಜನಿಕರು ಈ ಕೋವಿಡ್ ಪರಿಸ್ಥಿತಿಯಲ್ಲೂ ಪದೇ ಪದೇ ಆರ್ ಟಿಒ ಕಚೇರಿಗೆ ಅಲೆಯುವಂತಾಗಿದೆ.
ವರ್ಷಂಪ್ರತಿ ರಾಜ್ಯ ಸರ್ಕಾರಕ್ಕೆ 6 ಸಾವಿರ ಕೋಟಿ ರೂಪಾಯಿಗೂ ಮಿಗಿಲಾದ ಆದಾಯ ತಂದು ಕೊಡುವ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ, ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೂ ಈತಕ, ಅಲ್ಲಿ ಹಬ್ಬಿರುವ ಭ್ರಷ್ಟ ವ್ಯವಸ್ಥೆಯನ್ನು ತೊಲಗಿಸಲು ಸಾಧ್ಯವಾಗುತ್ತಿಲ್ಲ. ಆನ್ ಲೈನ್ ನಲ್ಲಿ ಕಲಿಕಾ ಚಾಲನಾ ಪರವಾನಗಿ, ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವಂತೆ ಆರ್ ಟಿಒ ಹೇಳಿದರೂ ಸಾರಿಗೆ ಇಲಾಖೆಗೆ ಅಲೆಯುವ ಪರಿಪಾಠ ಮಾತ್ರ ನಿಂತಿಲ್ಲ. ಇಷ್ಟೆಲ್ಲಾ ಸಮಸ್ಯೆಗೆ ಯಾವಾಗ ಪರಿಹಾರ ದೊರೆಯುತ್ತದೆಂದು ನಾಗರೀಕರು ಎದುರು ನೋಡುತ್ತಿದ್ದಾರೆ.

























