ಬೆಂಗಳೂರು, ಜು.15 www.bengaluruwire.com: ರಾಜಧಾನಿ ಬೆಂಗಳೂರಿನಲ್ಲಿ ಸ್ವಂತದ್ದೊಂದು ನಿವೇಶನ ಹೊಂದಬೇಕು ಎಂದು ದಶಕಗಳಿಂದ ಕನಸು ಕಾಣುತ್ತಿರುವ ಜನಸಾಮಾನ್ಯರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಹುದೊಡ್ಡ ಸಿಹಿಸುದ್ದಿ ನೀಡಿದೆ.
ಬಹುನಿರೀಕ್ಷಿತ ‘ಡಾ. ಶಿವರಾಮ ಕಾರಂತ ಬಡಾವಣೆ’ಯಲ್ಲಿ ನಿವೇಶನಗಳ ಹಂಚಿಕೆ ಪ್ರಕ್ರಿಯೆಗೆ ಬಿಡಿಎ ಅಧಿಕೃತವಾಗಿ ಸಜ್ಜಾಗಿದ್ದು, ಸಾರ್ವಜನಿಕರಿಂದ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲು ತೀರ್ಮಾನ ಕೈಗೊಂಡಿದೆ.
ತಿಂಗಳಾಂತ್ಯಕ್ಕೆ ಅರ್ಜಿ ಆಹ್ವಾನ:
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಬಿಡಿಎ ಪ್ರಾಧಿಕಾರದ ಉನ್ನತ ಮಟ್ಟದ ಸಭೆಯಲ್ಲಿ ನಿವೇಶನ ಹಂಚಿಕೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ನಿರ್ಣಯದಂತೆ, ಇದೇ ಜುಲೈ ತಿಂಗಳ ಅಂತ್ಯದೊಳಗೆ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲು ಅಗತ್ಯವಿರುವ ಎಲ್ಲ ಆಡಳಿತಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರಿಗೆ 2,500 ನಿವೇಶನಗಳನ್ನು ಮೀಸಲಿರಿಸಲಾಗಿದೆ.

ಬೆಂಗಳೂರಿಗರಿಗೆ ಸುವರ್ಣಾವಕಾಶ:
ಹಲವು ವರ್ಷಗಳಿಂದ ಬಿಡಿಎ ಬಡಾವಣೆಗಳಿಗಾಗಿ ಕಾಯುತ್ತಿರುವ ಸಾವಿರಾರು ಅರ್ಜಿದಾರರಿಗೆ ಶಿವರಾಮ ಕಾರಂತ ಬಡಾವಣೆ ಹೊಸ ಭರವಸೆ ಮೂಡಿಸಿದೆ. ಯೋಜನೆಗೆ ಜಮೀನು ನೀಡಿರುವ ರೈತರಿಗೆ 18,400 ನಿವೇಶನ, ಕಂದಾಯ ನಿವೇಶನದಾರರಿಗೆ 3,200 ಮತ್ತು ಸಾರ್ವಜನಿಕರಿಗೆ 2,500 ನಿವೇಶನ (30×40 ಅಡಿ) ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಕಳೆದ ವರ್ಷ ಒಂದು ಚದರ ಅಡಿಗೆ ₹4,900 ದರ ನಿಗದಿಪಡಿಸಲಾಗಿತ್ತು. ದರ ಪರಿಷ್ಕರಣೆ ಕುರಿತು ಪ್ರಾಧಿಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬಡಾವಣೆಯಲ್ಲಿನ 80 ಅಡಿ ಮತ್ತು 100 ಅಡಿ ರಸ್ತೆಯಲ್ಲಿರುವ 140 ನಿವೇಶನಗಳನ್ನು ಹರಾಜು ಮಾಡಲು ಬಿಡಿಎ ತೀರ್ಮಾನಿಸಿದೆ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅರ್ಜಿ ಶುಲ್ಕ ₹500, ಸಾಮಾನ್ಯ ವರ್ಗದವರಿಗೆ ₹1000, ನೋಂದಣಿ ಶುಲ್ಕ ₹2,000 ಇದ್ದು, ಈ ಹಣವನ್ಬು ಹಿಂತಿರುಗಿಸಲಾಗುವುದಿಲ್ಲ. ಎಂದು ಬಿಡಿಎ ಮೂಲಗಳು ತಿಳಿಸಿವೆ.
ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಅನುಮತಿ ನೀಡುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯನ್ನು ಜುಲೈ 3ರಂದು ಹೈಕೋರ್ಟ್ ಪುರಸ್ಕರಿಸಿತ್ತು. ಇದರ ಬೆನ್ನಲ್ಲೇ ನಿವೇಶನ ಹಂಚಿಕೆ ನಿರ್ಧಾರ ಕೈಗೊಳ್ಳಲಾಗಿತ್ತು. ನಗರದ ಉತ್ತರ ಭಾಗದಲ್ಲಿರುವ ಪ್ರತಿಷ್ಠಿತ ಡಾ.ಶಿವರಾಮ ಕಾರಂತ (ಎಸ್.ಕೆ) ಬಡಾವಣೆಯನ್ನು 3837 ಎಕರೆ 5.25 ಗುಂಟೆ ಜಮೀನಿನಲ್ಲಿ ನಿರ್ಮಿಸಿದ್ದು 32 ಸಾವಿರ ನಿವೇಶನ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ 20X30 30X40 60X40 50X80 ಚದರ ಅಡಿ ಅಳತೆಯ ನಿವೇಶನಗಳು ಲಭ್ಯವಾಗಲಿವೆ.
ಕೆಎಸ್ಆರ್ಸಿಎಎಲ್ ಮತ್ತು ಸಿಇಜಿ ಯುಎಲ್ಎಂಎಸ್ ಸಾಫ್ಟ್ವೇರ್ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಸ್ವೀಕರಿಸಲು ಮತ್ತು ನಿವೇಶನಗಳನ್ನು ವಿತರಿಸಲು ಈ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. ರೈತರ ಮಾಹಿತಿ ಹಾಗೂ ಭೂಮಿ ವಿಸ್ತೀರ್ಣವನ್ನು ಇದರಲ್ಲಿ ಅಳವಡಿಸಲಾಗುತ್ತಿದೆ. ಪಾರದರ್ಶಕತೆ ಕಾಪಾಡಲು ಹಾಗೂ ಮಾನವ ಹಸ್ತಕ್ಷೇಪ ತಪ್ಪಿಸಲು ತಂತ್ರಜ್ಞಾನದ ನೆರವು ಪಡೆಯಲಾಗುತ್ತಿದೆ.
ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಈ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅತ್ಯಂತ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಲು ಬಿಡಿಎ ಮುಂದಾಗಿದೆ. ಶೀಘ್ರದಲ್ಲೇ ಈ ಕುರಿತ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸಿದ್ಧರಾಗುವಂತೆ ಸೂಚಿಸಲಾಗಿದೆ.























