ಬೆಂಗಳೂರು, ಜು.15 www.bengaluruwire.com: “ಆಸ್ತಿಯ ಸಂಪೂರ್ಣ ಹಕ್ಕು ಅದರ ಮಾಲೀಕರಿಗಿರಬೇಕು. ಆಸ್ತಿ ಖರೀದಿಸಿದ ಬಳಿಕ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದ್ದು, ಇದಕ್ಕೆ ಶಾಶ್ವತ ಮುಕ್ತಿ ನೀಡಲು ಸರ್ಕಾರ ಬದ್ಧವಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ನಗರದಲ್ಲಿ ‘ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಕಾಯ್ದೆ-2026’ರ ಕುರಿತು ಅಪಾರ್ಟ್ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು ಹಾಗೂ ಬೆಂಗಳೂರು ಭಾರತದ ಹೃದಯವಾಗಬೇಕು ಎಂಬ ಆಶಯದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಆರನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ’ಗೆ ಜನರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ರಾಜ್ಯದಲ್ಲಿ ಇ-ಖಾತಾ ಕ್ರಾಂತಿ:

ಆಸ್ತಿ ಖರೀದಿಸುವಾಗ ಅದರ ಸಾಧಕ-ಬಾಧಕಗಳನ್ನು ಮಾಲೀಕರು ಪರಿಶೀಲಿಸಿಕೊಳ್ಳುವ ವ್ಯವಸ್ಥೆ ಇರಬೇಕು. ಒಪ್ಪಂದ, ನೋಂದಣಿ ಪ್ರಕ್ರಿಯೆ ಮುಗಿದು ಮನೆಯೊಳಗೆ ಕಾಲಿಟ್ಟ ನಂತರ ಡೆವಲಪರ್ಗಳು ಹಾಗೂ ಇತರೆ ಕಾರಣಗಳಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಕಷ್ಟಪಟ್ಟು ಗಳಿಸಿದ ಆಸ್ತಿಯನ್ನು ಮಾಲೀಕರು ನೆಮ್ಮದಿಯಿಂದ ಅನುಭವಿಸಬೇಕು ಎಂಬುದು ನಮ್ಮ ಆಶಯ. ಇದಕ್ಕಾಗಿ ಮನೆ ಬಾಗಿಲಿಗೆ ‘ಇ-ಖಾತಾ’ ತಲುಪಿಸುವ ಮೂಲಕ ರಾಜ್ಯದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಲಾಗಿದೆ. ಬೆಂಗಳೂರಿನ 40 ಲಕ್ಷ ಆಸ್ತಿಗಳ ಪೈಕಿ ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಇ-ಖಾತಾ ಮಾಡಿಕೊಡಲಾಗಿದ್ದು, ಇಡೀ ದೇಶದಲ್ಲಿ ಇಂತಹ ಮತ್ತೊಂದು ವ್ಯವಸ್ಥೆ ಇಲ್ಲ ಎಂದು ಮುಖ್ಯಮಂತ್ರಿಗಳು ಹೆಮ್ಮೆಯಿಂದ ನುಡಿದರು.
ಡೆವಲಪರ್ಗಳ ಸಮಸ್ಯೆ ಹಾಗೂ ದಾಖಲಾತಿ ವರ್ಗಾವಣೆ:
ಕೆಲವು ಡೆವಲಪರ್ಗಳು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಉದ್ದೇಶಪೂರ್ವಕವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ದೂರುಗಳಿವೆ. ಅವರೊಂದಿಗೂ ಮಾತುಕತೆ ನಡೆಸಿ, ದಾಖಲಾತಿಗಳ ವರ್ಗಾವಣೆ (Handover) ಸರಾಗವಾಗಿ ಆಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಅಪಾರ್ಟ್ಮೆಂಟ್ಗಳಲ್ಲಿ ಎಸ್ಟಿಪಿ (STP) ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಲವು ಸುಧಾರಣೆಗಳನ್ನು ತರಲಾಗಿದೆ. ಕಾವೇರಿ 5ನೇ ಹಂತದ ಯೋಜನೆ ಹಾಗೂ ಅಂತರ್ಜಲ ವೃದ್ಧಿ ಮೂಲಕ ನೀರಿನ ಬವಣೆ ನೀಗಿಸಲು ಸರ್ಕಾರ ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಸಿಎಂ ಭರವಸೆ ನೀಡಿದರು.
ಆಡಳಿತ ವಿಕೇಂದ್ರೀಕರಣ: ಐದು ಕಾರ್ಪೊರೇಷನ್ ರಚನೆ:
“ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಪ್ರಮುಖ ಉದ್ದೇಶ. ಈಸ್ ಆಫ್ ಡೂಯಿಂಗ್ ಬಿಸಿನೆಸ್ (Ease of Doing Business) ಉತ್ತೇಜಿಸಲು ಹಾಗೂ ಆಡಳಿತ ಸುಧಾರಣೆಗಾಗಿ ನಗರದಲ್ಲಿ ಐದು ಕಾರ್ಪೊರೇಷನ್ಗಳನ್ನು ರಚಿಸಲಾಯಿತು. ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಬೆಳೆಯುತ್ತಿರುವ ಪ್ರದೇಶಗಳಲ್ಲಿನ ಅಪಾರ್ಟ್ಮೆಂಟ್ಗಳ ನಡುವಿನ ಸಮಸ್ಯೆಗಳನ್ನು ವ್ಯಾಜ್ಯಗಳಿಗೆ ಹೋಗದೆ ಬಗೆಹರಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೂಲಸೌಕರ್ಯ ಮತ್ತು ಹೈ-ರೈಸ್ ಕಟ್ಟಡಗಳಿಗೆ ಒತ್ತು:
ಬೆಂಗಳೂರಿನಲ್ಲಿ 1.35 ಕೋಟಿ ವಾಹನಗಳಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲೆಂದೇ ಬರೋಬ್ಬರಿ 4000 ಕೋಟಿ ರೂ. ವೆಚ್ಚ ಮಾಡಲಾಗಿದೆ. ನಗರದಲ್ಲಿ ಹೈ-ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದ್ದು, ರಸ್ತೆಗಳ ವಿಸ್ತರಣೆಗೂ ಆದ್ಯತೆ ನೀಡಲಾಗಿದೆ. 132 ಕಿ.ಮೀ ಉದ್ದದ ಪೆರಿಫೆರಲ್ ವರ್ತುಲ ರಸ್ತೆ (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ದೇಶದಲ್ಲೇ ಅತಿ ಹೆಚ್ಚು ಪರಿಹಾರವನ್ನು ರಾಜ್ಯದ ರೈತರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಬೆಂಗಳೂರಿನತ್ತ ಜಾಗತಿಕ ಹೂಡಿಕೆದಾರರ ಒಲವು:
ಮುಂಬೈ ಸೇರಿದಂತೆ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಟ್ಟಡಗಳು ಹಾಗೂ ಜಾಗದ ಬೆಲೆ ಕಡಿಮೆಯಿದೆ. ಇದು ವಿಶ್ವದ ನಾಯಕರನ್ನು ಬೆಂಗಳೂರಿನತ್ತ ಆಕರ್ಷಿಸುತ್ತಿದೆ. ದಾವೋಸ್ ಪ್ರವಾಸದ ವೇಳೆ ಅನೇಕ ವಿದೇಶಿ ಹೂಡಿಕೆದಾರರು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿದ್ದಾರೆ. ಎರಡನೇ ವಿಮಾನ ನಿಲ್ದಾಣವೂ ನಿರ್ಮಾಣವಾಗುತ್ತಿರುವುದರಿಂದ ಹೂಡಿಕೆಗೆ ಬೆಂಗಳೂರು ಅತ್ಯುತ್ತಮ ಕೇಂದ್ರವಾಗಿದೆ ಎಂದರು.
ಸಲಹೆಗಳಿಗೆ ಆಗಸ್ಟ್ 6ರವರೆಗೆ ಅವಕಾಶ:
ಅಪಾರ್ಟ್ಮೆಂಟ್ಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಹೆಜ್ಜೆ ಇಟ್ಟಿದೆ. ಹೊಸದಾಗಿ ಜಾರಿಗೆ ತರಲು ಉದ್ದೇಶಿಸಿರುವ ಅಪಾರ್ಟ್ಮೆಂಟ್ ಕಾಯ್ದೆಯು ಆಸ್ತಿ ಖರೀದಿದಾರರ ಅನುಕೂಲಕ್ಕಾಗಿಯೇ ಇದೆ. ಈ ವಿಧೇಯಕದ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿರುವ ಯಾವುದೇ ಸಲಹೆ, ಅಭಿಪ್ರಾಯಗಳಿದ್ದರೂ ಆಗಸ್ಟ್ 6ರ ಒಳಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಸಲ್ಲಿಸಬಹುದು ಎಂದು ಸಿಎಂ ಮನವಿ ಮಾಡಿದರು. ಟೀಂ ಕರ್ನಾಟಕವಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಭೈರತಿ ಸುರೇಶ್, ಕೆ.ಜೆ.ಜಾರ್ಜ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಅಪಾರ್ಟ್ಮೆಂಟ್ ಸಂಘಗಳ ಅಧ್ಯಕ್ಷ ರಾಜೀವ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





















