ಬೆಂಗಳೂರು, ಜು.10 www.bengaluruwire.com: ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಯನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ರೈತರ ಜಮೀನುಗಳಿಗೆ ತಕ್ಷಣ ನೀರು ಬಿಡದಿದ್ದರೆ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವುದಾಗಿ ಉಗ್ರ ಎಚ್ಚರಿಕೆ ನೀಡಿದ್ದಾರೆ.
ರೈತರ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಸರ್ಕಾರ:
ರಾಜ್ಯದಲ್ಲಿ ಸೂಕ್ತ ಮಳೆಯಾಗದೆ ಕೆರೆ-ನಾಲೆಗಳು ಬತ್ತುತ್ತಿವೆ, ರೈತರ ಜಮೀನುಗಳು ಒಣಗಿ ಕರಕಲಾಗುತ್ತಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಮತ್ತು ಹೈಕಮಾಂಡ್ ನಾಯಕರನ್ನು ತೃಪ್ತಿಪಡಿಸಲು ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದೆ. ಇದು ಅನ್ನದಾತರಿಗೆ ಮಾಡುತ್ತಿರುವ ಮಹಾದ್ರೋಹ ಎಂದು ಆರ್. ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಮಂಡ್ಯದಲ್ಲಿ ನದಿಯೊಳಗೆ ಇಳಿದು ಹೋರಾಡುತ್ತಿರುವ ರೈತರ ಆಕ್ರೋಶವನ್ನು ಸಿಎಂ ಕಣ್ಣು ಬಿಟ್ಟು ನೋಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಪಕ್ಷ ನಾಯಕರ ಪ್ರಮುಖ ಮೂರು ಆಗ್ರಹಗಳು:
ಆರ್. ಅಶೋಕ್ ಅವರು ಸರ್ಕಾರದ ಮುಂದೆ ತಕ್ಷಣ ಈಡೇರಿಸಬೇಕಾದ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ:
ಕೂಡಲೇ ಐಸಿಸಿ (ICC) ಸಭೆ ನಡೆಸಿ: ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣವೇ ಕರೆದು, ನಮ್ಮ ರಾಜ್ಯದ ಜಲಾಶಯಗಳ ನೈಜ ಸ್ಥಿತಿಯನ್ನು ಪರಿಶೀಲಿಸಿ ರೈತರಿಗೆ ಧೈರ್ಯ ತುಂಬಬೇಕು.
ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ: ನೆರೆ ರಾಜ್ಯಕ್ಕೆ ನೀರು ಹರಿಸುವ ರಹಸ್ಯ ಒಪ್ಪಂದವನ್ನು ತಕ್ಷಣವೇ ಕೈಬಿಟ್ಟು, ಕಾವೇರಿ ಗೇಟ್ಗಳನ್ನು ಬಂದ್ ಮಾಡಬೇಕು.
ಕೆರೆ-ನಾಲೆಗಳಿಗೆ ನೀರು ಬಿಡಿ: ನಮ್ಮ ಹಳ್ಳಿಗಳ ಕೆರೆಗಳಿಗೆ ಮತ್ತು ನಾಲೆಗಳಿಗೆ ತಕ್ಷಣ ನೀರು ಬಿಟ್ಟು, ರೈತರ ಜಮೀನುಗಳಿಗೆ ಮತ್ತು ಬೆಳೆಗಳಿಗೆ ನೀರು ಒದಗಿಸುವ ಕೆಲಸವಾಗಬೇಕು.
ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ:
”ಕನ್ನಡಿಗರ ತಾಳ್ಮೆ ಪರೀಕ್ಷಿಸಬೇಡಿ, ರೈತರ ಹೊಟ್ಟೆಗೆ ಹೊಡೆದು ನೀವು ಯಾರನ್ನು ಉದ್ಧಾರ ಮಾಡಲು ಹೊರಟಿದ್ದೀರಿ?” ಎಂದು ಪ್ರಶ್ನಿಸಿರುವ ಅಶೋಕ್, ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ನೀರಾವರಿ ಸಲಹಾ ಸಮಿತಿ (ICC) ಸಭೆ ನಡೆಸಿ ರೈತರ ಜಮೀನುಗಳಿಗೆ ನೀರು ಹರಿಸದಿದ್ದರೆ, ಇಡೀ ಕಾವೇರಿ ಕೊಳ್ಳದ ಸಾವಿರಾರು ರೈತರನ್ನು ಒಟ್ಟುಗೂಡಿಸಿ ಕೆಆರ್ಎಸ್ (KRS) ಜಲಾಶಯಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.



















