ಬೆಂಗಳೂರು, ಆ.08 www.bengaluruwire.com : ರಾಜಧಾನಿ ಬೆಂಗಳೂರಿನ ಹಳೆಯ ಏರಿಯಾಗಳಲ್ಲಿ ಒಂದಾಗಿರುವ ವಿಜಯನಗರ (Vijayanagar) ಮುಖ್ಯ ರಸ್ತೆಯಲ್ಲಿ 2017ರಲ್ಲಿ ಬೀದಿಬದಿಯ ವ್ಯಾಪಾರಿಗಳಿಗಾಗಿ ಈ ಭೂಗತ ಮಾರುಕಟ್ಟೆ (Underground Market) ಕಾಮಗಾರಿ ಆರಂಭಿಸಿ 2024 ಆಗಸ್ಟ್ ತಿಂಗಳ ತನಕವೂ ಕಾಮಗಾರಿ ಮಾಡುತ್ತಿದ್ದರೂ ಇನ್ನೂ ಮುಗಿದಿಲ್ಲ. ಅಂದರೆ 80 ನೆಲಮಾಳಿಗೆ ಅಂಗಡಿ ಕಟ್ಟಲು ಬರೋಬ್ಬರಿ 8 ವರ್ಷ ಬೇಕಾಯಿತು. ಇದೀಗ ಪಾಲಿಕೆ ಬಜಾರ್ (Palike Bazar) ಮಾರುಕಟ್ಟೆ ಅಂತಿಮ ಹಂತದಲ್ಲಿದೆ.
ಈ ಪಾಲಿಕೆ ಬಜಾರ್ ಹೇಗಿದೆಯೆಂದರೆ ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವ ಎನ್ನುವಂತೆ ಈ ಅಂಡರ್ ಗ್ರೌಂಡ್ ಮಾರ್ಕೆಟಿನಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಮಾರುಕಟ್ಟೆ ಆಸುಪಾಸು ಮಾರುಕಟ್ಟೆಗೆ ಬಂದು ಹೋಗುವ ಗ್ರಾಹಕರಿಗೆ ಸೂಕ್ತ ವಾಹನ ನಿಲ್ದಾಣ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಆದರೆ ಅಂಗಡಿಗೆ ಬಂದು ಹೋಗುವ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಕೂಲವಾಗುವಂತೆ ಪಾಲಿಕೆ ಬಜಾರ್ ಎಂಬ ಅಂಡರ್ ಗ್ರೌಂಡ್ ಎಸಿ ಮಾರುಕಟ್ಟೆಯನ್ನು ಬಿಬಿಎಂಪಿಯ ಯೋಜನಾ ವಿಭಾಗ ಸರ್ಕಸ್ ಮಾಡಿ ಕಟ್ಟಡ ಕಟ್ಟಿದೆ. ಪರಿಚಿತ್ ಕನ್ಸಸ್ಟ್ರಕ್ಷನ್ ಎಂಬ ಗುತ್ತಿಗೆದಾರರಿಗೆ ಈ ಮಾರುಕಟ್ಟೆಯನ್ನು ಕಟ್ಟಲು ಕಾರ್ಯಾದೇಶ ನೀಡಿತ್ತು. ಹೀಗೆ ಕಟ್ಟಿರುವ ಪಾಲಿಕೆ ಬಜಾರ್ ಕಟ್ಟಡದ ಗೋಡೆಗಳು, ಭೂಗತ ಸ್ಥಳದಲ್ಲಿ ಬೆಳಕು ಬರುವಂತೆ ಕಲ್ಪಿಸಿರುವ ಸ್ಕೈಲೈಟ್ ಬಳಿಯಲ್ಲಿನ ಗೋಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಮಳೆ ಬಂದರೆ ಈಗಲೂ ಪಾಲಿಕೆ ಬಜಾರ್ ಭಾಗದಲ್ಲಿ ನೀರು ಹರಿದು ಬರುತ್ತಿದ್ದು, ಮುಂಜಾಗ್ರತೆಯಾಗಿ ನೀರಿನ ಪಂಪ್ ಸೆಟ್ ಇಡಲಾಗಿದೆ. ಹೀಗಾದರೆ ಕಾಮಗಾರಿ ಗುಣಮಟ್ಟ ಎಷ್ಟರ ಮಟ್ಟಿಗೆ ಕಳಪೆಯಾಗಿರಬಹುದು ಎಂದು ಮೂಲಗಳು ತಿಳಿಸಿವೆ.


ಪಾಲಿಕೆ ಬಜಾರ್ ಮೂಲಸೌಕರ್ಯ ಕೊರತೆ ಹಾಗೂ ಮಳೆಯಿಂದ ಕಟ್ಟಡ ಸೋರಿಕೆ, ಗೋಡೆಯಲ್ಲಿ ನೀರು ಇಳಿಯುತ್ತಿರುವ ಬಗ್ಗೆ ಬಿಬಿಎಂಪಿ ದಕ್ಷಿಣ ವಲಯದ ಯೋಜನಾ ವಿಭಾಗವನ್ನು ಸಂಪರ್ಕ ಮಾಡಲು ಪ್ರಯತ್ನಿಸಿದಾಗ ಹಿಂದೆ ಇದ್ದ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಅವರು ಕಳೆದ ತಿಂಗಳು ನಿವೃತ್ತರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂತು. ಆ ಬಳಿಕ ಈ ಹುದ್ದೆಯಲ್ಲಿ ಪ್ರಭಾರ ಹುದ್ದೆಯಲ್ಲಿರುವ ಎಇಇ ರಂಗರಾಜು ಅವರಿಗೆ ಪಾಲಿಕೆ ಬಜಾರ್ ಕುರಿತು ಮಾಹಿತಿಯಿಲ್ಲ ಎಂದರು. ಬಳಿಕ ಇದೇ ವಿಯಜನಗರ ಉಪ ವಿಭಾಗದ ಎಇಇ ಫರ್ ಜಾನ್ ಅವರನ್ನು ಕೇಳಿದಾಗ ಸೂಕ್ತ ಮಾಹಿತಿ ಲಭ್ಯವಾಗಲಿಲ್ಲ.
ಪಾಲಿಕೆ ಬಜಾರ್ ಕಟ್ಟುವ ಸ್ಥಳದಲ್ಲಿ ಹಿಂದೆ ಬೀದಿ ವ್ಯಾಪಾರಿಗಳನ್ನು ಕಾಲಿ ಮಾಡಿಸುವಾಗ ಆರಂಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಂತ ನಿರ್ಮಾಣ ಮಾಡಿದ್ದರೂ ಈಗ ನೋಡಿದರೆ ಟೆಂಡರ್ ಮೂಲಕ ಮಳಿಗೆಗಳನ್ನು ಹಂಚಿಕೆ ಮಾಡಲು ಬಿಬಿಎಂಪಿಯು ಚಿಂತನೆ ನಡೆಸಿದೆ. ಹಿಂದೆ 10 ಕೋಟಿ ರೂ. ವೆಚ್ಚದಲ್ಲಿ 18 ತಿಂಗಳಲ್ಲಿ ಈ ನೆಲಮಾಳಿಗೆ ಮಾರುಕಟ್ಟೆ ಕಟ್ಟಿ ಮುಗಿಸಲು ಪಾಲಿಕೆ ಯೋಜಿಸಿ ಅದರಂತೆ ಕಾರ್ಯಾದೇಶ ನೀಡಿತ್ತು. ಆ ನಂತರ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ವಿಸ್ತರಣೆ, ವಿದ್ಯುತ್ ಮತ್ತು ಕುಡಿಯುವ ನೀರಿನ ಪೈಪ್ ಲೈನ್ ಸ್ಥಳಾಂತರ, ಕೋವಿಡ್ ಮತ್ತಿತರ ಕಾರಣಗಳಿಗಾಗಿ ಕಾಮಗಾರಿ ವಿಳಂಬವಾಯಿತು.

ಬಳಕೆಯಾಗದೆ ಉಳಿದ ಪಾದಚಾರಿ ಸುರಂಗ ಮಾರ್ಗ ಪಾಲಿಕೆ ಬಜಾರ್ ಆಗಿದ್ದು ಹೇಗೆ? :


ಅದೇ ರೀತಿ ಕಾಮಗಾರಿ ಸ್ವರೂಪ ಬದಲಾದಂತೆ ವೆಚ್ಚವೂ 10 ಕೋಟಿ ರೂ.ಗಳಿಂದ 15 ಕೋಟಿ ರೂ.ಗಳಿಗೆ ಹೆಚ್ಚಾಯಿತು. ಅಸಲಿಗೆ ಹವಾನಿಯಂತ್ರಿತ ಪಾಲಿಕೆ ಬಜಾರ್ ಸ್ಥಳದಲ್ಲಿ ಈ ಹಿಂದೆ ಹೈಟೆನ್ಷ್ ವಿದ್ಯುತ್ ಲೈನ್ ಹಾಗೂ ಜಲಮಂಡಳಿಯ ಪೈಪ್ ಗಳಿದ್ದು, ಅದನ್ನು ಸ್ಥಳಾಂತರಿಸುವುದು ಪಾಲಿಕೆಗೆ ವೆಚ್ಚದಾಯಕವಾಗಿತ್ತು. ಕೊನೆಗೆ ಪಾಲಿಕೆಯು ಸುಮಾರು 1.5 ಕೋಟಿ ರೂ. ಕರ್ಚು ಮಾಡಿ ಬೆಸ್ಕಾಂ ವಿದ್ಯುತ್ ವೈರ್ ಹಾಗೂ ಜಲಮಂಡಳಿ ಪೈಪ್ ಗಳನ್ನು ಸ್ಥಳಾಂತರಿಸಿತು. ಆದರೆ ಈ ವೆಚ್ಚವನ್ನು ಎಸಿ ಪಾಲಿಕೆ ಬಜಾರ್ ಕಾಮಗಾರಿ ವೆಚ್ಚದಲ್ಲಿ ಸೇರ್ಪಡೆ ಮಾಡಲಿಲ್ಲ. ಇನ್ನೊಂದೆಡೆ ಈ ಹಿಂದೆ ಪಾದಚಾರಿಗಳಿಗೆ ಇದೇ ಸ್ಥಳದಲ್ಲಿ ಸುರಂಗ ಮಾರ್ಗವನ್ನು ನಿರ್ಮಿಸಲಾಗಿತ್ತು. ಆದರೆ ವಿಜಯನಗರದ ಪಾದಚಾರಿಗಳು ಅದನ್ನು ಬಳಸದೆ ನಿರುಪಯೋಗಿಯಾಗಿತ್ತು. ಇದೇ ಸ್ಥಳದ ಆಸುಪಾಸಿನಲ್ಲೇ ಬೀದಿ ವ್ಯಾಪಾರಿಗಳು ದಿನನಿತ್ಯ ಹೂವು-ಹಣ್ಣು, ತರಕಾರಿ, ದೈನಂದಿನ ಅವಶ್ಯಕತೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಆನಂತರ ಇದೇ ಪಾದಚಾರಿ ಸುರಂಗ ಮಾರ್ಗವನ್ನು ಮಾರ್ಪಡಿಸಿ ಹಾಗೂ ವಿಸ್ತರಣೆ ಮಾಡಿ ಪಾಲಿಕೆ ಬಜಾರ್ ಮಾಡಲಾಯಿತು ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸಿದ ಸ್ಥಳೀಯ ವ್ಯಾಪಾರಿಯೊಬ್ಬರು.
8 ವರ್ಷಗಳಲ್ಲಿ ಮೆಟ್ರೋ ನಿಲ್ದಾಣಗಳೇ ನಿರ್ಮಾಣವಾಗುತ್ತಿದ್ದವು :
ಇಷ್ಟು ವರ್ಷಗಳ ಕಾಲದಲ್ಲಿ ಬಹುಶ: ಬೆಂಗಳೂರಿನ ಮೆಟ್ರೋ ನಾಲ್ಕೈದು ನಿಲ್ದಾಣಗಳೇ ಮುಗಿದು ಹೋಗುತ್ತಿದ್ದವು, ಮಧ್ಯಮ ಪ್ರಮಾಣದ ಮಾಲ್ ಕಾಮಗಾರಿಯೇ ಮುಗಿಯುತ್ತಿತ್ತು ಎನ್ನಲಾಗುತ್ತಿದೆ. ಬೀದಿ ಇಲ್ಲಿನ 80 ಅಂಗಡಿಗಳು 8 ಅಡಿ ಅಗಲ, 11 ಅಡಿ ಉದ್ದದ 80 ಅಂಗಡಿಗಳಿಗೆ 3.5 ಟನ್ ಲೋಡ್ ತಡೆಯುವ 28 ಹವಾನಿಯಂತ್ರಣ ಯಂತ್ರವನ್ನು ಅಂಗಡಿಗಳ ಮುಂದೆ ಅಳವಡಿಸಲಾಗಿದೆ. ಪಾಲಿಕೆ ಬಜಾರ್ ಒಳಗೆ ಬಂದು ಹೋಗಲು ಒಂದು ಲಿಫ್ಟ್, ಮೂರು ಮೆಟ್ಟಿಲು ಮಾರ್ಗ ಹಾಗೂ ಎರಡು ಸ್ವಯಂಚಾಲಿತ ಎಸ್ಕಲೇಟರ್ ವ್ಯವಸ್ಥೆ, ಸಂಪೂರ್ಣ ವಿದ್ಯುತ್ ದೀಪಗಳನ್ನು ಕಲ್ಪಿಸಲಾಗಿದೆ. ಈತನಕ ಶೇ.90ಕ್ಕೂ ಹೆಚ್ಚು ಕಾಮಗಾರಿಗಳು ಪೂರ್ಣವಾಗಿದೆ ಎಂದು ಬಿಬಿಎಂಪಿ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ. ವಿಜಯನಗರ ಮಾರುಕಟ್ಟೆ ಬೆಂಗಳೂರಿನಲ್ಲಿನ ಅತ್ಯಂತ ಹಳೆಯ ಮಾರುಕಟ್ಟೆಯಾಗಿದ್ದು, ಈ ಮಾರುಕಟ್ಟೆ ಸ್ಥಳವನ್ನು 2014ರ ಬೀದಿ ವ್ಯಾಪಾರಿಗಳ ಕಾಯ್ದೆಯಂತೆ ನೈಸರ್ಗಿಕ ಮಾರುಕಟ್ಟೆ ಎಂದು ಅಧಿಸೂಚನೆ ಹೊರಡಿಸಲು ಬಿಬಿಎಂಪಿಯಿಂದ ಪಟ್ಟಣ ವ್ಯಾಪಾರ ಸಮಿತಿಯನ್ನು ರಚಿಸಲಾಗಿದ್ದರೂ, ಸಮಿತಿ ರಚನೆಯಾಗಿ ಒಂದೂವರೆ ವರ್ಷಗಳು ಕಳೆದರೂ ಒಂದು ಸಭೆ ನಡೆಸಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.


ಕಿಷ್ಕಿಂಧೆಯಂತಹ ಪಾಲಿಕೆ ಬಜಾರ್ ಲೋಪ ಸರಿಪಡಿಸಬೇಕು :
ಈ ಕಿಷ್ಕಿಂಧೆಯಂತಹ ಸ್ಥಳದಲ್ಲಿ ಪಾಲಿಕೆ ಬಜಾರ್ ಕಟ್ಟಿರುವುದರಿಂದ ಸೂಕ್ತ ಮೂಲಭೂತ ಸೌಕರ್ಯಗಳಿಲ್ಲದಿರುವ ಕಾರಣಕ್ಕೆ ವಿಜಯನಗರ ಹಾಗೂ ಸುತ್ತಮುತ್ತಲ ಸ್ಥಳದ ನಾಗರೀಕರು ಒಂದೊಮ್ಮೆ ಅಂಗಡಿಗಳಿಗೆ ಬಂದರೂ, ಬರುವ ಗ್ರಾಹಕರ ಪ್ರಮಾಣ ಕಡಿಮೆಯಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾಕಷ್ಟು ಮೂಲಭೂತ ಸೌಕರ್ಯದ ಕೊರತೆ, ಕಳಪೆ ಕಾಮಗಾರಿ ಸೇರಿದಂತೆ ಹಲವು ಲೋಪಗಳಿರುವ ಪಾಲಿಕೆ ಬಜಾರ್ ನಲ್ಲಿ ಒಂದೊಮ್ಮೆ ಎಸಿ ಬಳಕೆಯಾದರೆ, ಹೂವು- ಹಣ್ಣು, ತರಕಾರಿಯಂತಹ ಪದಾರ್ಥಗಳನ್ನು ಮಾರಾಟ ಮಾಡುವಾಗ ಅನಿಯಂತ್ರಿತ ದುರ್ವಾಸನೆಗಳು ಬಂದಲ್ಲಿ ಅದನ್ನು ನಿವಾಸಿರುವ ವಿಧಾನಗಳ ಬಗ್ಗೆಯೂ ಬಿಬಿಎಂಪಿ ಅಧಿಕಾರಿಗಳು ಕೂಲಂಕುಷವಾಗಿ ಗಮನಹರಿಸಬೇಕಿದೆ. ಅಲ್ಲದೆ ಈ ಬಗ್ಗೆ ಕೂಡಲೇ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಬಗಹರಿಸಬೇಕು ಎಂದು ಸಾರ್ವಜನಿಕರು, ಬೀದಿ ಬದಿಯ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
ಪ್ರಥಮವಾಗಿ ಮೂಲಸೌಕರ್ಯ ಕಲ್ಪಿಸಿ ಇಲ್ಲದಿದ್ದರೆ ಗೋಡೋನ್ ಮಾಡಿ :
“ಮೊದಲಿಗೆ ಈ ಪಾಲಿಕೆ ಬಜಾರ್ ನಲ್ಲಿ ಮೂಲಸೌಕರ್ಯ ಕಲ್ಪಿಸಿದ ನಂತರವಷ್ಟೇ ಮಾರುಕಟ್ಟೆ ಪ್ರಾರಂಭಿಸಬೇಕು. ಈ ಹಿಂದೆ ಈ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದ 33 ಬೀದಿ ವ್ಯಾಪಾರಿಗಳಿಗೆ ಪಾಲಿಕೆಯು ಬೇರೆಡೆ ಸ್ಥಳಾಂತರ ಮಾಡುವಾಗ ಫಲಾನುಭವಿಗಳು ಎಂದು ಹೇಳಿದೆ. ಪಾಲಿಕೆ ಬಜಾರ್ ಗಾಗಿ 15-16 ಕೋಟಿ ರೂ. ಕರ್ಚು ಮಾಡಿರುವ ಬಿಬಿಎಂಪಿ ಆ ಹಣವನ್ನು ವಾಪಸ್ ಪಡೆಯಲು ಈಗ ಟೆಂಡರ್ ಮೂಲಕ ಅಂಗಡಿಗಳನ್ನು ಹಂಚಿಕೆ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಹೀಗಾದರೆ ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರ ಕಥೆಯೇನು? ಅಂಗಡಿಗಳ ಬಾಡಿಗೆ ದರ ಹೆಚ್ಚಾದರೆ ಬೀದಿ ವ್ಯಾಪಾರಿಗಳು ಅದನ್ನು ಪಡೆಯುವುದಾದರೂ ಹೇಗೆ? ಬಜಾರ್ ನಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗದಿದ್ದರೆ, ಆ ಅಂಗಡಿಗಳನ್ನು ಮೇಲ್ಭಾಗದಲ್ಲಿ ವ್ಯಾಪಾರ ಮಾಡುತ್ತಿರುವವರಿಗೆ ಗೋದಾಮುಗಳಂತೆ ಬಾಡಿಗೆ ಆಧಾರದಲ್ಲಿ ಹಂಚಿಕೆ ಮಾಡಲಿ.”

- ಎಸ್.ಬಾಬು, ಬೆಂಗಳೂರು ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ



















