ಬೆಂಗಳೂರು, ಆ.08 www.bengaluruwire.com : ರಾಜ್ಯ ವಿಧಾನಸಭೆಯಲ್ಲಿ ಜು.23ರಂದು ಮಂಡಿಸಲಾದ ಬೃಹತ್ ಬೆಂಗಳೂರು ಆಡಳಿತ ಮಸೂದೆ (Greater Bangalore Bill 2024 – GBG) ಮಸೂದೆಯು 21ನೇ ಶತಮಾನದಲ್ಲಿ ಸ್ಪಂದನಾತ್ಮಕ ಹಾಗೂ ಆಧುನಿಕ ಬೆಂಗಳೂರನ್ನು ನಿರ್ಮಿಸಲು ಅಗತ್ಯವಾದ ಆಡಳಿತದ ಅನೇಕ ಪ್ರಗತಿಪರ ಅಂಶಗಳನ್ನು ಒಳಗೊಂಡಿಲ್ಲ ಎಂದು ಜನಾಗ್ರಹ (Janaagraha) ಸಂಘಟನೆ ಅಧ್ಯಯನ ವರದಿಯು ತಿಳಿಸಿದೆ.
ನಗರ-ವ್ಯವಸ್ಥೆಗಳ ಚೌಕಟ್ಟಿನ ಆಧಾರದ ಮೇಲೆ ಜಿಬಿಜಿ ಮಸೂದೆ 2024 ಮತ್ತು ಬ್ರಾಂಡ್ ಬೆಂಗಳೂರು ಸಮಿತಿಯ ಬೃಹತ್ ಬೆಂಗಳೂರು ಆಡಳಿತ ಮಸೂದೆ, 2024(Brand Bangalore Committee Greater Bangalore Committee Bill – BBC- GBG Bill), ಪ್ರಸ್ತುತ ಜಾರಿಯಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ (ಬಿಬಿಎಂಪಿ), 2020 ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ (ಕೆಎಂಸಿ) ಕಾಯ್ದೆ, 1976 ಅನ್ನು ಆಳವಾಗಿ ತುಲನಾತ್ಮಕ ವಿಶ್ಲೇಷಣೆಯನ್ನು ಕೈಗೊಂಡಾಗ ಈ ಅಂಶವು ಕಂಡು ಬಂದಿದೆ. ಈ ಅಧ್ಯಯನಕ್ಕೆ, ಜನಾಗ್ರಹದ ಭಾರತದ ನಗರ-ವ್ಯವಸ್ಥೆಗಳ ವಾರ್ಷಿಕ ಸಮೀಕ್ಷೆ (Annual Survey of Urban Systems in India – ASICS) ಎಂಬ ಪ್ರಮುಖ ವರದಿಯಲ್ಲಿ ವಿವರಿಸಲಾದ ಚೌಕಟ್ಟನ್ನು ಆಧಾರವಾಗಿಟ್ಟುಕೊಂಡು ಈ ವಿಶ್ಲೇಷಣೆಯನ್ನು ನಡೆಸಿದೆ.
ಈ ಅಧ್ಯಯನವು ಎರಡು ಮಸೂದೆ ಹಾಗೂ ಎರಡು ಕಾಯ್ದೆಗಳ 33 ನಿಯತಾಂಕಗಳ ಜೊತೆಗೆ ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಅವುಗಳಿಗೆ 0 ರಿಂದ 10 ರ ಪ್ರಮಾಣದಲ್ಲಿ ಅಂಕಗಳನ್ನು ನೀಡಿದೆ. ಹೆಚ್ಚಿನ ಸ್ಕೋರ್, ಮಸೂದೆಗಳ/ಕಾಯ್ದೆಗಳ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಎಂದು ತಿಳಿಸುತ್ತದೆ. ನಗರದಲ್ಲಿ ಗುರುವಾರ ಜನಾಗ್ರಹ ವಿಷಯ ತಜ್ಞರ ನೇತೃತ್ವದಲ್ಲಿ ಜಿಬಿಜಿ ಮತ್ತು ಇತರ ಆಡಳಿತ ರಚನೆಗಳ ತುಲನಾತ್ಮಕ ವಿಶ್ಲೇಷಣೆ ನಡೆಸಿ ಅದರ ವರದಿಯನ್ನು ಬಿಡುಗಡೆಗೊಳಿಸಿತು.

ಬಿಬಿಸಿ- ಜಿಬಿಜಿ ಬಿಲ್ ಗಿಂತ ಅರ್ಧದಷ್ಟು ಪರಿಣಾಮಕಾರಿ ಜಿಬಿಜಿ ಮಸೂದೆ :

ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯು ನಗರ ಯೋಜನೆ ಮತ್ತು ವಿನ್ಯಾಸ, ನಗರ ಸಾಮರ್ಥ್ಯಗಳು ಹಾಗೂ ಸಂಪನ್ಮೂಲಗಳು, ಅಧಿಕಾರ ಮತ್ತು ಕಾನೂನುಬದ್ಧ ರಾಜಕೀಯ ಪ್ರಾತಿನಿಧ್ಯ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕ ಭಾಗವಹಿಸುವಿಕೆ ಸೇರಿದಂತೆ ಎಲ್ಲಾ ನಾಲ್ಕು ನಗರ ವ್ಯವಸ್ಥೆಗಳ ವರ್ಗಗಳಲ್ಲಿ ನಿರಾಶಾದಾಯಕ ಅಂಕಗಳನ್ನು ಗಳಿಸಿದೆ. ಒಟ್ಟಾರೆಯಾಗಿ, ಜಿಬಿಜಿ ಮಸೂದೆಯು 10ರಲ್ಲಿ 3.35 ಅಂಕಗಳನ್ನು ಗಳಿಸಿದೆ. ಜಿಬಿಜಿ ಮಸೂದೆಯು ಬ್ರಾಂಡ್ ಬೆಂಗಳೂರು ಸಮಿತಿಯು ನೀಡಿದ ಕರಡು ಜಿಬಿಜಿ ಮಸೂದೆಗಿಂತ ಕೇವಲ ಅರ್ಧದಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
2014 ರಲ್ಲಿ, ರಾಜ್ಯ ಸರ್ಕಾರವು ಬಿಬಿಎಂಪಿ ಪುನರ್ ರಚನಾ ಸಮಿತಿಯನ್ನು ರಚಿಸಿತ್ತು. ಆನಂತರ ಅದನ್ನು ಬ್ರಾಂಡ್ ಬೆಂಗಳೂರು ಸಮಿತಿ ಎಂದು ಮರುನಾಮಕರಣ ಮಾಡಿತು. ಈ ಸಮಿತಿಗೆ ಬೆಂಗಳೂರು ಜಾಗತಿಕ ಮಟ್ಟದಲ್ಲಿ ತನ್ನ ಪ್ರಮುಖ ಸ್ಥಾನವನ್ನು ಉಳಿಸಿಕೊಳ್ಳಲು ಹೊಸ ಮತ್ತು ಆಧುನಿಕ ಆಡಳಿತ ರಚನೆಯನ್ನು ವಿನ್ಯಾಸಗೊಳಿಸುವ ನಿರ್ಣಾಯಕ ಜವಾಬ್ದಾರಿಯನ್ನು ವಹಿಸಲಾಯಿತು. ಅದರಂತೆ, ಸಮಿತಿಯು ಕರಡು ಮಸೂದೆಯನ್ನು ಸಿದ್ಧಪಡಿಸಿ ನೀಡಿತ್ತು. ಅದರ ಆಧಾರದ ಮೇಲೆ ಕೆಲವೊಂದು ಬದಲಾವಣೆಗಳೊಂದಿಗೆ ರಾಜ್ಯ ಸರ್ಕಾರವು ಇದೇ ಜುಲೈ 23ರಂದು ವಿಧಾನಸಭೆ ಅಧಿವೇಶನದಲ್ಲಿ ಬೃಹತ್ ಬೆಂಗಳೂರು ಆಡಳಿತ ಮಸೂದೆಯನ್ನು ಮಂಡಿಸಿತು.
ಜನಾಗ್ರಹದ ವಿಶ್ಲೇಷಣೆಯು ಜಿಬಿಜಿ ಮಸೂದೆಯಲ್ಲಿನ ಪ್ರಮುಖ ನ್ಯೂನ್ಯತೆಗಳನ್ನು ಗುರುತಿಸಿದೆ. ಪ್ರಮುಖ ಕ್ಷೇತ್ರಗಳಲ್ಲಿ ಹಲವಾರು ನಿರ್ಣಾಯಕ ಸುಧಾರಣೆಗಳನ್ನು ಸೂಚಿಸಿದೆ. ಬ್ರ್ಯಾಂಡ್ ಬೆಂಗಳೂರು ಸಮಿತಿಯು ಹಲವಾರು ಪ್ರಗತಿಪರ ಶಿಫಾರಸುಗಳನ್ನು ಮಾಡಿದ್ದರೂ, ಭವಿಷ್ಯದ ಬೆಂಗಳೂರಿಗೆ ದೃಢವಾದ ಆಡಳಿತ ರಚನೆಯನ್ನು ವಿನ್ಯಾಸಗೊಳಿಸಲು ಇನ್ನೂ ಹಲವು ಹಂತಗಳನ್ನು ಪರಿಗಣಿಸಬೇಕು ಎಂಬುದನ್ನು ಗಮನಿಸಬೇಕಿದೆ ಎಂದು ಹೇಳಿದೆ.
ನಗರ ವ್ಯವಸ್ಥೆಗಳ ಮೌಲ್ಯಮಾಪನ ಆಧಾರಿತ ತುಲನಾತ್ಮಕ ವಿಶ್ಲೇಷಣೆ ಏನೆನ್ನುತ್ತೆ? :
(10 ಅಂಕಗಳಲ್ಲಿ 0 ರಿಂದ 10 ಸ್ಕೋರ್ ಗಳನ್ನು ನೀಡಲಾಗಿದೆ)
| ವಿಶ್ಲೇಷಣೆಗೆ ಒಳಪಟ್ಟ ಮಸೂದೆ/ಕಾಯ್ದೆಗಳು | ಒಟ್ಟಾರೆ ತುಲನಾತ್ಮಕ ಅಂಕಗಳು | ನಗರ ಯೋಜನೆ ಮತ್ತು ವಿನ್ಯಾಸ | ನಗರದ ಸಾಮರ್ಥ್ಯ ಮತ್ತು ಸಂಪನ್ಮೂಲಗಳು | ಅಧಿಕಾರ ಮತ್ತು ನ್ಯಾಯ ಸಮ್ಮತ ರಾಜಕೀಯ ಪ್ರಾತಿನಿಧ್ಯ |
| ಬಿಬಿಸಿ ಜಿಬಿಜಿ ಕರಡು ಮಸೂದೆ 2024 | 6.50 | 6.33 | 9.00 | 6.21 |
| ಜಿಬಿಜಿ ಮಸೂದೆ 2024 | 3.35 | 0.00 | 6.50 | 4.55 |
| ಬಿಬಿಎಂಪಿ ಕಾಯ್ದೆ 2020 | 3.23 | 1.33 | 6.50 | 2.73 |
| ಕೆಎಂಸಿ ಕಾಯ್ದೆ 1976 | 2.04 | 1.33 | 3.50 | 1.58 |
ಮಸೂದೆ ಕುರಿತು ಮಾತನಾಡಿದ ಜನಾಗ್ರಹದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಾಂತ್ ವಿಶ್ವನಾಥನ್, “ಬೆಂಗಳೂರು ದೇಶದ ಆರ್ಥಿಕತೆಗೆ ಮಹತ್ವವಾದ ಕೊಡುಗೆಯನ್ನು ನೀಡುತ್ತದೆ. ರಾಜಧಾನಿಯ ದೃಢವಾದ ಬೆಳವಣಿಗೆಯ ಹಾದಿಯಲ್ಲಿ ಮುಂದುವರಿಯಲು ಒಂದು ಆಧುನಿಕ ಮತ್ತು ನವೀನ ಆಡಳಿತ ಮಾದರಿಗ ಅಗತ್ಯವಾಗಿದೆ. ಅಂತಾರಾಷ್ಟ್ರೀಯ ನಗರಗಳಿಗೆ ಸರಿಸಮಾನವಾಗಿ ಬೆಂಗಳೂರಿಗರು ಉತ್ತಮ ಗುಣಮಟ್ಟದ ಜೀವನಕ್ಕೆ ಅರ್ಹರಾಗಿದ್ದಾರೆ. ಜಿಬಿಜಿ ಮಸೂದೆಯು ಪ್ರಗತಿಪರ ಆಡಳಿತ ಮಾದರಿಯನ್ನು ಪರಿಚಯಿಸುತ್ತದೆ ಮತ್ತು ಜನರ ಜೀವನದ ವಿವಿಧ ಆಯಾಮಗಳಲ್ಲಿ ಗಮನಾರ್ಹ ಸುಧಾರಣೆಗೆ ಅನುವು ಮಾಡಿಕೊಡುತ್ತದೆ ಎಂಬ ನಿರೀಕ್ಷೆಯನ್ನು ಎಂದು ನಾಗರೀಕರು ಹೊಂದಿದ್ದರು. ಆದರೆ ರಾಜ್ಯ ಸರ್ಕಾರವು ಜುಲೈ 23ರಂದು ಸದನದಲ್ಲಿ ಮಂಡಿಸಿ ಮಸೂದೆಯು ಬಹಳ ಸೀಮಿತಗೊಳಿಸುವ ಮಸೂದೆಯಾಗಿದ್ದು, ಜನರ ನಂಬಿಕೆ ಹುಸಿಯಾಗಿಸಿದೆ. ಬ್ರಾಂಡ್ ಬೆಂಗಳೂರು ಸಮಿತಿಯ ಹಲವು ಮಹತ್ವದ ಶಿಫಾರಸುಗಳನ್ನು ಸರ್ಕಾರ ನಿರ್ಲಕ್ಷಿಸಿರುವುದು ಸರಿಯಲ್ಲ. ಈ ಅಧ್ಯಯನದ ಮೂಲಕ, ಕೆಲವು ಪ್ರಮುಖ ವಿಷಯಗಳ ಕುರಿತು ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಣಾಯಕ ಕ್ರಮಗಳತ್ತ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನ ಭವಿಷ್ಯದ ಮಹತ್ವದ ಮಸೂದೆಗೆ ಜನರ ಸಲಹೆ ಪರಿಗಣಿಸಿ :
ಜನಾಗ್ರಹದ ಸಹಭಾಗಿತ್ವ ಆಡಳಿತದ ಮುಖ್ಯಸ್ಥರಾದ ಸಂತೋಷ ನರಗುಂದ ಅವರು, “ವಿಧಾನಸಭೆಯಲ್ಲಿ ಮಂಡನೆಯಾಗಿರುವ ಜಿಬಿಜಿ ಮಸೂದೆ ಅತ್ಯಂತ ನಿರಾಶಾದಾಯಕವಾಗಿದೆ. ಆದರೂ ಸಹ ಅಗತ್ಯವಿರುವ ನಾಗರೀಕ ಸ್ನೇಹಿ ತಿದ್ದುಪಡಿ ಮಾಡಿಕೊಳ್ಳಲು ಈಗಲೂ ಆಸ್ಪದವಿದೆ. ಸರ್ಕಾರವು ಮಸೂದೆಯನ್ನು ಸದನ ಸಮಿತಿಗೆ ಉಲ್ಲೇಖಿಸಿದೆ. ಸರ್ಕಾರವು ಮಸೂದೆಗೆ ವ್ಯಾಪಕ ಪ್ರಚಾರವನ್ನು ನೀಡಬೇಕು ಮತ್ತು ಅದನ್ನು ಅಂಗೀಕರಿಸುವ ಮೊದಲು ಮಸೂದೆಯನ್ನು ಸುಧಾರಿಸಲು ನಾಗರಿಕರು, ನಗರ ತಜ್ಞರು ಮತ್ತು ನಾಗರಿಕ ಸಮಾಜ ಸಂಸ್ಥೆಗಳನ್ನು ಆಹ್ವಾನಿಸಿ ಮಸೂದೆಯಲ್ಲಿ ಅಗತ್ಯವಿರುವ ತಿದ್ದುಪಡಿಗಳನ್ನು ಸೂಚಿಸಲು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೂಡಬೇಕು. ಅತ್ಯಂತ ಗಂಭೀರವಾದ ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಈ ವಿಷಯವನ್ನು ಕೇವಲ ಒಂದು ರಾಜಕೀಯ ನಡೆಯ ಅಂಗವೆಂದು ಪರಿಗಣಿಸದೆ, ಈ ವಿಷಯವನ್ನು ಜನರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಬೆಂಗಳೂರಿನ ಭವಿಷ್ಯದ ಆಡಳಿತದ ರೂಪರೇಷೆಯನ್ನು ಕೈಗೊಳ್ಳಬೇಕಾಗಿರುವ ಮಹತ್ವಕಾಂಕ್ಷೆಯ ನಿರ್ಣಯವೆಂದು ಪರಿಗಣಿಸುವ ಅಗತ್ಯವಿದೆ.
ದೇಶದ ಇತರ ರಾಜ್ಯಗಳ ಮೆಟ್ರೊಪಾಲಿಟನ್ ಆಡಳಿತಕ್ಕೆ ಮಾದರಿಯಾಗಲಿ :
ಜನಾಗ್ರಹದ ಪೌರ ಕಾನೂನು ಮತ್ತು ನೀತಿಯ ಮುಖ್ಯಸ್ಥರಾದ ವಿ.ಆರ್.ವಚನ ಮಾತನಾಡಿ, “ಪ್ರಸ್ತುತವಾಗಿ ಬೆಂಗಳೂರು ನಗರ ನಿರ್ದಿಷ್ಟವಾದ ಮಹಾನಗರ ಪಾಲಿಕೆ ಶಾಸನವನ್ನು ಹೊಂದಿದ್ದರೂ, ಅದು ಮೆಟ್ರೋಪಾಲಿಟನ್ ಆಡಳಿತದ ವೈಶಿಷ್ಟ್ಯವನ್ನು ಹೊಂದಿರುವುದಿಲ್ಲ. ಬೆಂಗಳೂರು ತನ್ನ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನವನ್ನು ನೀಡಲು ಸಾಧ್ಯವಾಗಬೇಕಾದರೆ, ಅದು 21ನೇ ಶತಮಾನದ ಅವಕಾಶಗಳು ಮತ್ತು ಸವಾಲುಗಳನ್ನು ಪೂರೈಸುವ ಶಾಸನವನ್ನು ಹೊಂದಿರಬೇಕು. ಬೆಂಗಳೂರಿನ ಆಡಳಿತದ ಕಾಯ್ದೆಯನ್ನು ಮರುಪರಿಶೀಲಿಸುವ ಸರ್ಕಾರದ ನಿರ್ಧಾರವು ನಗರದ ಸಮಗ್ರ ಮತ್ತು ಸಂಘಟಿತ ಆಡಳಿತವನ್ನು ಸುಗಮಗೊಳಿಸಲು ಉತ್ತಮ ಅವಕಾಶವನ್ನು ನೀಡುತ್ತದೆ. ಹಾಗೆಯೆ, ಭಾರತದ ಇತರ ರಾಜ್ಯಗಳು ಅನುಕರಿಸಬಹುದಾದ ಮೆಟ್ರೋಪಾಲಿಟನ್ ಆಡಳಿತದ ಮಾದರಿಯನ್ನು ರಚಿಸಲು ಸದಾವಕಾಶ ಮಾಡಿಕೊಡುತ್ತದೆ. ಜಿಬಿಜಿ ಮಸೂದೆ, 2024 ರ ನಮ್ಮ ಮೌಲ್ಯಮಾಪನವು, ಬೆಂಗಳೂರನ್ನು ನಿಯಂತ್ರಿಸುವ ಹೊಸ ಕಾನೂನು ರಚಿಸುವ ಪ್ರಕ್ರಿಯೆಯಲ್ಲಿ ಯೋಜನೆ ಮತ್ತು ಸಾಮರ್ಥ್ಯಗಳಾದ್ಯಂತ ನಿರ್ಣಾಯಕ ಅಂಶಗಳತ್ತ ಹಾಗೂ ವಿಕೇಂದ್ರೀಕೃತ ಮತ್ತು ಸಹಭಾಗಿತ್ವದ ಆಡಳಿತವನ್ನು ಬಲಪಡಿಸುವತ್ತ ಗಮನ ಸೆಳೆಯುವ ಗುರಿಯನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2024ರಲ್ಲಿ ಹಲವು ನಾಗರೀಕ ಕೇಂದ್ರೀಕೃತ ಹಾಗೂ ಆಡಳಿತಾತ್ಮಕ ಮಹತ್ವದ ವಿಷಯಗಳನ್ನು ಸೇರ್ಪಡೆ ಮಾಡುವ ಅವಶ್ಯಕತೆಗಳ ಬಗ್ಗೆ ಜನಾಗ್ರಹ ವಿಶ್ಲೇಷಣಾತ್ಮಕ ವರದಿಯು ಬೊಟ್ಟು ಮಾಡಿ ತೋರಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.




















