ಬೆಂಗಳೂರು, ಜು.18 www.bengaluruwire.com: ಅಭಿವೃದ್ಧಿ ಹಾಗೂ ಆಡಳಿತದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು, ಯುವಕರ ತಾಂತ್ರಿಕ ಜ್ಞಾನವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ‘ವಿಷನ್ 2030’ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಘೋಷಿಸಿದೆ.
ಇದರ ಬೆನ್ನಲ್ಲೇ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನಲೆಯಲ್ಲಿ ಮತದಾರರಿಗೆ ಅನುಕೂಲ ಕಲ್ಪಿಸಲು 98 ಮತದಾರರ ಸಹಾಯ ಕೇಂದ್ರಗಳನ್ನು (Voter Facilitation Centres) ತೆರೆದಿದೆ ಎಂದು ಪಾಲಿಕೆ ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ‘ವಿಷನ್ 2030’ ಇಂಟರ್ನ್ಶಿಪ್ ಅವಕಾಶ:
ನಗರದ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಪಾಲಿಕೆಯು ಆರ್.ವಿ. ಶಿಕ್ಷಣ ಸಂಸ್ಥೆಯೊಂದಿಗೆ ಒಪ್ಪಂದ (MOU) ಮಾಡಿಕೊಂಡಿದೆ. ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಕಾಲೇಜು ವಿದ್ಯಾರ್ಥಿಗಳನ್ನು ಇಂಟರ್ನ್ಶಿಪ್ ಕಾರ್ಯಕ್ರಮದ ಮೂಲಕ ನಗರಾಡಳಿತದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೆ ಎರಡು ಮಾದರಿಯ ಇಂಟರ್ನ್ಶಿಪ್ಗಳನ್ನು ರೂಪಿಸಲಾಗಿದೆ.

ಮೊದಲನೆಯದಾಗಿ, ನಗರದ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಿ ವರದಿ ಸಿದ್ಧಪಡಿಸುವುದು. ಎರಡನೆಯದಾಗಿ, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬಹುದಾದ ಭೌತಿಕ ವಿನ್ಯಾಸಗಳನ್ನು ರೂಪಿಸುವುದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡವಿರುವುದರಿಂದ, ಇತರೆ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುತ್ತಿದೆ.
ಯಾವ್ಯಾವ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶ?:
ಘನತ್ಯಾಜ್ಯ ನಿರ್ವಹಣೆ: ಶಿಕ್ಷಣ ಸಂಸ್ಥೆಗಳನ್ನು ಶೂನ್ಯ ತ್ಯಾಜ್ಯ ವಲಯಗಳನ್ನಾಗಿಸುವುದು.
ತಂತ್ರಜ್ಞಾನ ಹಾಗೂ ಎಐ ಬಳಕೆ: ಕೃತಕ ಬುದ್ಧಿಮತ್ತೆ (AI) ಬಳಸಿ ಆಸ್ತಿ ತೆರಿಗೆ ಮೌಲ್ಯೀಕರಣ, ರಸ್ತೆ ಗುಣಮಟ್ಟ ಪರಿಶೀಲನೆ, ಮತ್ತು ವಾರ್ಡ್ ಮಟ್ಟದ ಸೌಲಭ್ಯಗಳ ಡಿಜಿಟಲ್ ಮ್ಯಾಪಿಂಗ್.
ಪಾರ್ಕಿಂಗ್ & ಸಂಚಾರ ಸುಧಾರಣೆ:
ಜಯನಗರ, ಎಚ್.ಎಸ್.ಆರ್ ಲೇಔಟ್ ಹಾಗೂ ಕೋರಮಂಗಲದಲ್ಲಿ ಆನ್-ಸ್ಟ್ರೀಟ್ ಪಾರ್ಕಿಂಗ್ ನಿಯಂತ್ರಣ ಹಾಗೂ ಪಾದಚಾರಿ ಸ್ನೇಹಿ ರಸ್ತೆಗಳ ನಿರ್ಮಾಣ.
ಪರಿಸರ ಹಾಗೂ ಮೂಲಸೌಕರ್ಯ:
ಕೆರೆಗಳ ನೀರಿನ ಗುಣಮಟ್ಟ ಸುಧಾರಣೆ, ಹಸಿರು ದಕ್ಷಿಣ ಬೆಂಗಳೂರು ನಿರ್ಮಾಣ ಮತ್ತು ರಾಜಕಾಲುವೆಗಳ ಪ್ರವಾಹ ನಿಯಂತ್ರಣಕ್ಕೆ ಸೆನ್ಸರ್ ಅಳವಡಿಕೆ.
ಇದರ ನಿರ್ವಹಣೆಗಾಗಿ ಜಯನಗರ ಮತ್ತು ಬೊಮ್ಮನಹಳ್ಳಿ ವಲಯಗಳ ಮುಖ್ಯ ಎಂಜಿನಿಯರ್ಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಮಾಹಿತಿ ತಂತ್ರಜ್ಞಾನ ವಿಭಾಗದ ಜವಾಬ್ದಾರಿಯನ್ನು ಆಯುಕ್ತರೇ ವಹಿಸಿಕೊಂಡಿದ್ದಾರೆ.
98 ಮತದಾರರ ಸಹಾಯ ಕೇಂದ್ರಗಳ (VFCs) ಸ್ಥಾಪನೆ:
ಮತ್ತೊಂದೆಡೆ, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ ‘ವಿಶೇಷ ಸಮಗ್ರ ಪರಿಷ್ಕರಣೆ (SIR)-2026’ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಬೆಂಗಳೂರಿನ 98 ವಾರ್ಡ್ ಕಚೇರಿಗಳಲ್ಲಿ ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಖುದ್ದಾಗಿ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು ಹಾಗೂ ಗಣತಿ ನಮೂನೆ (Enumeration Form) ಭರ್ತಿ ಮಾಡಲು ಮಾರ್ಗದರ್ಶನ ಪಡೆಯಬಹುದು.
ಕ್ಷೇತ್ರವಾರು ಸಹಾಯ ಕೇಂದ್ರಗಳ ವಿವರ:
* ಗೋವಿಂದರಾಜನಗರ: 09
* ವಿಜಯನಗರ: 08
* ಬಸವನಗುಡಿ: 07
* ಪದ್ಮನಾಭನಗರ: 16
* ಬಿಟಿಎಂ ಲೇಔಟ್: 25
* ಜಯನಗರ: 10
* ಬೊಮ್ಮನಹಳ್ಳಿ: 23
ಸಾರ್ವಜನಿಕರು ಈ ಸಹಾಯ ಕೇಂದ್ರಗಳ ಸದುಪಯೋಗ ಪಡೆದುಕೊಂಡು ಮತದಾರರ ಪಟ್ಟಿಯ ನಿಖರತೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ.






















