ಬೆಂಗಳೂರು, ಮೇ.28 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ‘ಇ-ಖಾತಾ’ (e-Khata) ವ್ಯವಸ್ಥೆಯ ಕುರಿತು ಕೆಲ ಹಿತಾಸಕ್ತಿ ಗುಂಪುಗಳು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದು, ಸಾರ್ವಜನಿಕರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಕಂದಾಯ ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಮ್ಯಾನುಯಲ್ (ಕೈಬರಹದ) ಖಾತಾ ವ್ಯವಸ್ಥೆಯಲ್ಲಿನ ಅಪಾರದರ್ಶಕತೆಯಿಂದ ಲಾಭ ಪಡೆಯುತ್ತಿದ್ದ ಮಧ್ಯವರ್ತಿಗಳು ಹಾಗೂ ಅಕ್ರಮ ಬಡಾವಣೆಗಳ ನಿರ್ವಾಹಕರು ಈಗ ಇ-ಖಾತಾ ಜಾರಿಯಿಂದ ಕಂಗೆಟ್ಟಿದ್ದಾರೆ. ಹೀಗಾಗಿ, ಆಡಳಿತಾತ್ಮಕ ಚೌಕಟ್ಟಿನ ಬಗ್ಗೆ ಅರಿವಿಲ್ಲದ ಕೆಲವರನ್ನು ಬಳಸಿಕೊಂಡು ವದಂತಿಗಳನ್ನು ಹರಡಲಾಗುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇ-ಖಾತಾ ಜಾರಿಯಿಂದ ಆದ ಪ್ರಮುಖ ಬದಲಾವಣೆಗಳು:
ಅಕ್ರಮ ವಹಿವಾಟುಗಳಿಗೆ ಬ್ರೇಕ್: ಕಾವೇರಿ ತಂತ್ರಾಂಶದಲ್ಲಿ ನಡೆಯುತ್ತಿದ್ದ ಶೇ.85ರಷ್ಟು ವಹಿವಾಟುಗಳು ಅನಧಿಕೃತ ಬಡಾವಣೆಗಳು, ಅಕ್ರಮ ಕಂದಾಯ ನಿವೇಶನಗಳು ಹಾಗೂ ದೋಷಪೂರಿತ ಮಾಲೀಕತ್ವಕ್ಕೆ ಸೇರಿದ್ದಾಗಿದ್ದವು. 2024-25ನೇ ಸಾಲಿನಲ್ಲಿ ಅಕ್ಟೋಬರ್ 1ರ ಮೊದಲು ಇಂತಹ 75,000ಕ್ಕೂ ಹೆಚ್ಚು ವಹಿವಾಟುಗಳು ನಡೆದಿದ್ದವು. ಆದರೆ, ಇ-ಖಾತಾ ಕಡ್ಡಾಯವಾದ ನಂತರ ಇಂತಹ ಅಕ್ರಮ ವಹಿವಾಟುಗಳು ಬಹುತೇಕ ಶೂನ್ಯಕ್ಕೆ ಇಳಿದಿವೆ.

ನಾಗರಿಕರ ರಕ್ಷಣೆ: ಯೋಜನಾ ಅನುಮೋದನೆ ಇಲ್ಲದ ಆಸ್ತಿಗಳನ್ನು ಖರೀದಿಸುವಂತೆ ಮುಗ್ಧ ನಾಗರಿಕರನ್ನು ದಾರಿ ತಪ್ಪಿಸುವ ಜಾಲವನ್ನು ಭೇದಿಸಲು ಹಾಗೂ ಆಸ್ತಿ ಖರೀದಿಯಲ್ಲಿ ಪಾರದರ್ಶಕತೆ ತರಲು ಈ ಡಿಜಿಟಲ್ ವ್ಯವಸ್ಥೆ ನೆರವಾಗಿದೆ.
ಸಂಪೂರ್ಣ ಕಾನೂನು ಮಾನ್ಯತೆ: ಇ-ಖಾತಾ ವ್ಯವಸ್ಥೆಯು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024, ನೋಂದಣಿ ಕಾಯ್ದೆ ಹಾಗೂ ನಗರ ಯೋಜನಾ ಕಾನೂನುಗಳ ಅಡಿ ಸಂಪೂರ್ಣ ಶಾಸನಬದ್ಧ ಮಾನ್ಯತೆ ಹೊಂದಿದೆ. ಹೈಕೋರ್ಟ್ನಲ್ಲಿ ದಾಖಲಾಗಿದ್ದ ಹಲವು ರಿಟ್ ಅರ್ಜಿಗಳಲ್ಲೂ ನ್ಯಾಯಾಲಯವು ಇ-ಖಾತಾ ವ್ಯವಸ್ಥೆಯನ್ನು ಎತ್ತಿಹಿಡಿದಿದೆ.
ಭ್ರಷ್ಟಾಚಾರಕ್ಕೆ ಮುಕ್ತಾಯ, ಪಾರದರ್ಶಕತೆಗೆ ಆದ್ಯತೆ:
ಹಿಂದಿನ ವ್ಯವಸ್ಥೆಯಲ್ಲಿ ಖಾತೆ ಮಾಡಿಕೊಡಲು ಅಧಿಕಾರಿಗಳು ವಿವೇಚನಾ ಅಧಿಕಾರ ಬಳಸುತ್ತಿದ್ದರು. ಇದರಿಂದ ಭ್ರಷ್ಟಾಚಾರಕ್ಕೆ ಮುಕ್ತ ಅವಕಾಶವಿತ್ತು. ಆದರೆ ಈಗ ಸರಿಯಾಗಿ ನೋಂದಾಯಿತವಾದ ಮಾರಾಟ ಪತ್ರ, ದಾನ ಪತ್ರ (Gift Deeds), ಬಿಡುಗಡೆ ಪತ್ರ ಹಾಗೂ ಪಾರಂಪರಿಕ ಹಕ್ಕು ದಾಖಲೆಗಳಿಗೆ ತಕ್ಷಣವೇ ಮಾನ್ಯತೆ ಸಿಗಲಿದ್ದು, ‘ಮ್ಯುಟೇಶನ್’ (Mutation) ಪ್ರಕ್ರಿಯೆ ಬಹುಪಾಲು ಸ್ವಯಂಚಾಲಿತಗೊಂಡಿದೆ. ಸಾರ್ವಜನಿಕರು ತಮ್ಮ ಆಸ್ತಿ ದಾಖಲೆಗಳನ್ನು ಬಿಬಿಎಂಪಿ ಇ-ಆಸ್ತಿ ಪೋರ್ಟಲ್ (https://bbmpeaasthi.karnataka.gov.in/) ಮೂಲಕ ಮುಕ್ತವಾಗಿ ವೀಕ್ಷಿಸಬಹುದು.
ಪ್ರತಿ ಶನಿವಾರ ಮುಕ್ತ ಸಭೆ (Open House):
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯ ಮೇರೆಗೆ, ಇ-ಖಾತಾಗೆ ಸಂಬಂಧಿಸಿದ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಪ್ರತಿ ಶನಿವಾರ ಬೆಂಗಳೂರಿನ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಮುಕ್ತ ಸಭೆಗಳನ್ನು (Open House) ನಡೆಸಲಾಗುತ್ತಿದೆ. ಸಾವಿರಾರು ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿಯ ಗರಿ: ಜಿಬಿಎ ಈ ಕ್ರಾಂತಿಕಾರಿ ‘ಇ-ಖಾತಾ’ ವ್ಯವಸ್ಥೆಗೆ ಭಾರತ ಸರ್ಕಾರವು 2025ನೇ ಸಾಲಿನ ಪ್ರತಿಷ್ಠಿತ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’ (ಚಿನ್ನದ ಪದಕ) ನೀಡಿ ಗೌರವಿಸಿದೆ. ಇದು ಕಾನೂನುಬದ್ಧ ಆಸ್ತಿ ಮಾಲೀಕರಿಗೆ ನೆರವಾಗುವ ಪಾರದರ್ಶಕ ವ್ಯವಸ್ಥೆಯೇ ಹೊರತು, ನಾಗರಿಕರ ವಿರುದ್ಧದ ವ್ಯವಸ್ಥೆಯಲ್ಲ ಎಂದು ಮುನೀಶ್ ಮೌದ್ಗಿಲ್ ಸ್ಪಷ್ಟಪಡಿಸಿದ್ದಾರೆ.




















