ಬೆಂಗಳೂರು, ನ.30 www.bengaluruwire.com : ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯಂತಿದ್ದ, ತಮ್ಮ ವಿಶಿಷ್ಟ ಮ್ಯಾನರಿಸಂ ಹಾಗೂ ಹಾಸ್ಯ ಪಾತ್ರಗಳ ಮೂಲಕ ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಹಿರಿಯ ನಟ ಎಂ.ಎಸ್. ಉಮೇಶ್ (80) ಅವರು ಭಾನುವಾರ ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯದಿಂದ ಸಾಕಷ್ಟು ಬಳಲಿದ್ದ ಜೀವ:
ಇತ್ತೀಚೆಗೆ ಮನೆಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಉಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ.

ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ:

1945ರ ಏಪ್ರಿಲ್ 24ರಂದು ಮೈಸೂರಿನಲ್ಲಿ ಜನಿಸಿದ ಉಮೇಶ್, ಕೇವಲ 4 ವರ್ಷದವರಿದ್ದಾಗಲೇ ಬಣ್ಣ ಹಚ್ಚಿದ್ದರು. ಕಿರಣ್ ಹಿರಣ್ಣಯ್ಯರ ನಾಟಕ ಕಂಪನಿ ಮತ್ತು ಗುಬ್ಬಿ ವೀರಣ್ಣರ ಕಂಪನಿಯಲ್ಲಿ ಪಳಗಿದ ಅವರು, 1960ರಲ್ಲಿ ಬಿ.ಆರ್. ಪಂಥುಲು ನಿರ್ದೇಶನದ ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಾಲನಟನಾಗಿ ಪದಾರ್ಪಣೆ ಮಾಡಿದರು.
350ಕ್ಕೂ ಹೆಚ್ಚು ಚಿತ್ರಗಳ ಸರದಾರ:
ಭಾಗ್ಯವಂತರು, ಕಿತಾಪತಿ, ಕಿಲಾಡಿ ಜೋಡಿ, ಗುರು ಶಿಷ್ಯರು, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಶೃತಿ ಸೇರಿದಾಗ, ಆಕಸ್ಮಿಕ, ಸರ್ವರ್ ಸೋಮಣ್ಣ, ಜಾಕಿ, ರ್ಯಾಂಬೊ, ಮುಸ್ಸಂಜೆ ಮಾತು ಸೇರಿದಂತೆ ಇತ್ತೀಚಿನ ‘ಡೇರ್ ಡೆವಿಲ್ ಮುಸ್ತಫಾ’ ವರೆಗೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ತಮ್ಮದೇ ಆದ ವಿಶಿಷ್ಟ ಸಂಭಾಷಣಾ ಶೈಲಿ (ಡೈಲಾಗ್ ಡೆಲಿವರಿ) ಮತ್ತು ಹಾಸ್ಯಮಯ ಅಭಿನಯದ ಮೂಲಕ ಅವರು ಕನ್ನಡಿಗರ ಮನ ಗೆದ್ದಿದ್ದರು.























