ಬೆಂಗಳೂರು, ಜೂ.13 www.bengaluruwire.com: ಸಿಲಿಕಾನ್ ಸಿಟಿಯ ಮೂಲಸೌಕರ್ಯ ಬಲಪಡಿಸುವ ಹಾಗೂ ಸಾರ್ವಜನಿಕರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಶನಿವಾರ (ಜೂನ್ 13) ಬೆಂಗಳೂರು ಪಶ್ಚಿಮ ಮತ್ತು ದಕ್ಷಿಣ ನಗರ ಪಾಲಿಕೆಗಳು ಮಹತ್ವದ ಸಭೆ ಹಾಗೂ ಕಾರ್ಯಾಗಾರಗಳನ್ನು ನಡೆಸಿವೆ.
ಪಶ್ಚಿಮ ವಲಯದಲ್ಲಿ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸುರಕ್ಷತೆಗೆ ಒತ್ತು ನೀಡಿದರೆ, ದಕ್ಷಿಣ ವಲಯದಲ್ಲಿ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ಆಯವ್ಯಯ ಅನುದಾನದ ಸದ್ಬಳಕೆಗೆ ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ: ಪ್ರತಿ ವಾರ್ಡ್ನಲ್ಲಿ 10 ಕಿ.ಮೀ ಪಾದಚಾರಿ ಮಾರ್ಗ ಅಭಿವೃದ್ಧಿ ಗುರಿ
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಮತ್ತು ‘ಸುರಕ್ಷ 75’ ಉಪಕ್ರಮದ ಯಶಸ್ಸಿಗಾಗಿ ಇಂಜಿನಿಯರ್ಗಳಿಗೆ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ವಾಕಲೂರು ಎನ್.ಜಿ.ಓ ಸಂಸ್ಥಾಪಕ ಅರುಣ್ ಪೈ ಅವರು ಈ ತಾಂತ್ರಿಕ ಕಾರ್ಯಾಗಾರವನ್ನು ನಡೆಸಿಕೊಟ್ಟರು.


ಸಭೆಯಲ್ಲಿ ಭಾಗವಹಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಅವರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,100 ಕಿ.ಮೀ. ಪಾದಚಾರಿ ಮಾರ್ಗ ಅಭಿವೃದ್ಧಿಯ ಗುರಿ ಹೊಂದಲಾಗಿದೆ. ಪ್ರತಿ ವಾರ್ಡ್ನಲ್ಲಿ ವಾರಕ್ಕೆ 2.5 ಕಿ.ಮೀ ನಂತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಅಂಡರ್ಪಾಸ್ಗಳ ಸುಂದರೀಕರಣ ಮತ್ತು ಸೂಕ್ತ ಬೆಳಕಿನ ವ್ಯವಸ್ಥೆಗೂ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಆಯುಕ್ತರಾದ ಡಾ. ರಾಜೇಂದ್ರ ಕೆ. ವಿ. ಅವರ ಪ್ರಮುಖ ಸೂಚನೆಗಳು:
ಪಶ್ಚಿಮ ನಗರ ಪಾಲಿಕೆಯ ಆಯುಕ್ತರಾದ ಡಾ. ರಾಜೇಂದ್ರ ಕೆ. ವಿ. ಅವರು ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿಗಳನ್ನು ನೆನಪಿಸಿ, ಈ ಕೆಳಗಿನ ಕಟ್ಟುನಿಟ್ಟಿನ ಕ್ರಮಗಳಿಗೆ ಸೂಚಿಸಿದ್ದಾರೆ:
ಮಾದರಿ ವಾರ್ಡ್ ನಿರ್ಮಾಣ: ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ) ಒಂದೊಂದು ಮಾದರಿ ವಾರ್ಡ್ ರೂಪಿಸಲು ಶ್ರಮಿಸಬೇಕು.
ಬ್ಲ್ಯಾಕ್ ಸ್ಪಾಟ್ ಮುಕ್ತಿ: 200 ಬ್ಲ್ಯಾಕ್ ಸ್ಪಾಟ್ಗಳನ್ನು ಗುರುತಿಸಿ ಸ್ವಚ್ಛಗೊಳಿಸಿ, ಸುಂದರಗೊಳಿಸಬೇಕು. ಒಣತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಹಾಗೂ ‘ಕಸ ಕಿಯೋಸ್ಕ್’ ಸ್ಥಾಪನೆಗೆ ಚಿಂತನೆ.
ಕಟ್ಟುನಿಟ್ಟಿನ ಕ್ರಮ: ಬಲ್ಕ್ ಜನರೇಟರ್ಗಳು ಮತ್ತು ಟ್ರೇಡ್ ಲೈಸನ್ಸ್ ನಿಯಮ ಉಲ್ಲಂಘಿಸುವವರ ವಿರುದ್ಧ ಆರೋಗ್ಯ ಅಧಿಕಾರಿಗಳು ಮುಂದಿನ ಒಂದು ತಿಂಗಳಲ್ಲಿ 10 ಕಿ.ಮೀ. ರಸ್ತೆಯುದ್ದಕ್ಕೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು.
ಮೂಲಸೌಕರ್ಯ ದುರಸ್ತಿ: ಸ್ಕೈವಾಕ್, ಬಸ್ ನಿಲ್ದಾಣ, ಅಂಡರ್ಪಾಸ್ ಹಾಗೂ ಫ್ಲೈಓವರ್ಗಳನ್ನು ಪರಿಶೀಲಿಸಿ ನ್ಯೂನತೆ ಸರಿಪಡಿಸುವುದು. ಮಳೆನೀರು ಕಾಲುವೆ (ಸ್ಟಾರ್ಮ್ ವಾಟರ್ ಡ್ರೇನ್) ನಿರ್ವಹಣೆ ಮತ್ತು ರಸ್ತೆಗುಂಡಿ ಮುಚ್ಚುವಿಕೆ ಸಮರ್ಪಕವಾಗಿರಬೇಕು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ: ನುರಿತ ತಜ್ಞರ ಸಲಹೆಯೊಂದಿಗೆ ಬಜೆಟ್ ಬಳಕೆ
ಇನ್ನೊಂದೆಡೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ. ಎನ್. ರಮೇಶ್ ಅವರು, ಪಾಲಿಕೆಯ ಆಯವ್ಯಯ (ಬಜೆಟ್) ಅನುದಾನವನ್ನು ವೈಜ್ಞಾನಿಕವಾಗಿ ಬಳಸುವ ನಿಟ್ಟಿನಲ್ಲಿ ನುರಿತ ತಜ್ಞರಾದ ಅಶ್ವಿನ್ ಮಹೇಶ್, ಪ್ರಸನ್ನ ರಾವ್ ಹಾಗೂ ಪದ್ಮಶ್ರೀ ಬಲರಾಮ್ ಅವರೊಂದಿಗೆ ಪ್ರಥಮ ಸುತ್ತಿನ ಸಭೆ ನಡೆಸಿದರು.

ಸಭೆಯ ಪ್ರಮುಖ ನಿರ್ಧಾರಗಳು ಮತ್ತು ತಜ್ಞರ ಸಲಹೆಗಳು:
ಹಸಿರು ಬೆಂಗಳೂರು (ತಾಪಮಾನ ಇಳಿಕೆಗೆ ಕ್ರಮ): ಬೇಸಿಗೆಯ ತಾಪಮಾನ ತಗ್ಗಿಸಲು ‘ಗ್ರೀನ್ ಬೆಂಗಳೂರು ದಕ್ಷಿಣ’ ಅನುದಾನದಡಿ ರಸ್ತೆಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೇಶಿ ತಳಿಯ ಮರಗಳನ್ನು ನೆಟ್ಟು ಪೋಷಿಸುವುದು.
ಸಂಚಾರ ದಟ್ಟಣೆ ನಿಯಂತ್ರಣ: ಟ್ರಾಫಿಕ್ ಹೆಚ್ಚಿರುವ ರಸ್ತೆಗಳ ಪಕ್ಕದಲ್ಲಿರುವ ಖಾಲಿ ಸರ್ಕಾರಿ/ಖಾಸಗಿ ಜಾಗಗಳನ್ನು ಗುರುತಿಸಿ, ಮಾಲೀಕರೊಂದಿಗೆ ಚರ್ಚಿಸಿ ಅಲ್ಲಿ ವಾಹನ ಪಾರ್ಕಿಂಗ್ ಮತ್ತು ಬಸ್ ಬೇ ನಿರ್ಮಾಣಕ್ಕೆ ಕ್ರಮ.
ಸೌರಶಕ್ತಿ ಬಳಕೆ: ವಿದ್ಯುತ್ ವೆಚ್ಚ ಕಡಿತಗೊಳಿಸಲು ಬೀದಿ ದೀಪಗಳಿಗೆ ಮತ್ತು ಪಾಲಿಕೆಯ ಕಟ್ಟಡಗಳಿಗೆ ಕಡ್ಡಾಯವಾಗಿ ಸೌರಶಕ್ತಿ ಪ್ಯಾನೆಲ್ ಅಳವಡಿಕೆ. ದೂರುಗಳ ತ್ವರಿತ ವಿಲೇವಾರಿಗೆ ಸಿಸಿಎಂಎಸ್ (CCMS) ತಂತ್ರಜ್ಞಾನ ಬಳಕೆ.
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ: 74ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳಿಗೆ ನಿರಂತರ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಆದ್ಯತೆ.
ಡೇಟಾಬೇಸ್ ಸಿದ್ಧತೆ: ಪಾರ್ಕ್ ಮತ್ತು ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಲೈಟಿಂಗ್, ಗೇಟ್, ಸಿಸಿಟಿವಿ ಇದೆಯೇ ಎಂಬ ಬಗ್ಗೆ ನಿಖರ ಡೇಟಾಬೇಸ್ ಸಿದ್ಧಪಡಿಸಲು ಸೂಚನೆ.
ಆರೋಗ್ಯ ವಲಯದ ಬಲವರ್ಧನೆ: ಪಾಲಿಕೆ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (PHC) ಅಗತ್ಯವಿರುವ ನರ್ಸ್ಗಳ ವಿವರಗಳನ್ನು ಸಿದ್ಧಪಡಿಸುವುದು. ನರ್ಸಿಂಗ್ ಕಾಲೇಜುಗಳ ನೆರವು ಪಡೆಯಲು ಚಿಂತನೆ.
ಸಮಗ್ರವಾಗಿ, ಬೆಂಗಳೂರಿನ ಈ ಎರಡೂ ವಲಯಗಳಲ್ಲಿ ನಾಗರಿಕ ಕೇಂದ್ರಿತ ಯೋಜನೆಗಳು ಹಾಗೂ ವ್ಯವಸ್ಥಿತ ಆಡಳಿತದ ಮೂಲಕ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಲಾಗಿದೆ.






















