ಬೆಂಗಳೂರು, (www.bengaluruwire.com) : ರಾಜ್ಯದ ಪಾಲಿಗೆ ಇಂದು ಹಮ್ಮೆಯ ದಿನ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹತ್ವದ ಮಾನವ ಸಹಿತ ಗಗನಯಾನ ಯೋಜನೆಗೆ ಸಂಬಂಧಿಸಿದಂತೆ ಭಾರತೀಯ ವೈಮಾನಿಕ ಸಂಸ್ಥೆ (HAL) ನಿರ್ಮಿಸಿದ ಮೊದಲ ಹಂತದ ಹಾರ್ಡ್ ವೇರ್ ಅನ್ನು ಹಸ್ತಾಂತರಿಸಲಾಯಿತು.
ನಗರದ ಎಚ್ ಎಎಲ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡನೇ ಹಂತದ ಪಿಎಸ್ ಎಲ್ ವಿ ರಾಕೆಟ್ ಜೋಡಣಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಇದೇ ವೇಳೆಯಲ್ಲಿ ಎಚ್ ಏಲ್ ನಿಂದ ಇಸ್ರೋ ಗೆ ಗಗನಯಾನ ಕಕ್ಷಾವಾಹಕದ ರಚನೆಯನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಎಚ್ಎಎಲ್ ಮಾನವ ಸಹಿತ ಗಗನಯಾನ ಸಹಿತ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತನ್ನ ನೈಪುಣ್ಯತೆ ಹಾಗೂ ಜ್ಞಾನದ ಮೂಲಕ ಪ್ರಮುಖ ಪಾತ್ರವಹಿಸಲಿದೆ ಎಂದರು.
ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಸ್ವದೇಶಿ ಹಾಗೂ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ಜಾರಿಗೆ ತರುವ ಸವಾಲಿನ ಕೆಲಸದಲ್ಲಿ ಎಚ್ ಎಎಲ್ ಅಷ್ಟೇ ಅಲ್ಲದೆ ಖಾಸಗಿಯವರ ಪಾತ್ರ ಕೂಡ ಬಹಳ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.


ಎರಡನೇ ಹಂತದ ಪಿಎಸ್ ಎಲ್ ವಿ ರಾಕೆಟ್ ಜೋಡಣಾ ಕೇಂದ್ರ
ಎಚ್ ಎಎಲ್ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ (CMD) ಆರ್.ಮಾಧವನ್ ಮಾತನಾಡಿ, ಇಸ್ರೊ- ಎಚ್ ಏಲ್ ನಡುವಿನ ನಾಲ್ಕು ದಶಕಗಳ ಸಂಬಂಧವನ್ನು ಮೆಲುಕು ಹಾಕಿದರು. ಇಸ್ರೋ ಬಾಹ್ಯಾಕಾಶ ಉಡಾವಣಾ ವಾಹಕದ ಜೋಡಣೆ ಕಾರ್ಯದಲ್ಲಿ ಎಚ್ ಎಎಲ್ ದೊಡ್ಡ ಜವಾಬ್ದಾರಿಯನ್ನು ಹೊರಲು ಸನ್ನದ್ಧವಾಗಿದೆ ಎಂದು ಹೇಳಿದ ಅವರು, “ಇಸ್ರೋ ಜೊತೆ ಎಎಚ್ ಎಲ್ ನಂಬಿಕಸ್ಥ ಜೊತೆಗಾರನಾಗಿ ಸಮರ್ಪಣಾ ಮನೋಭಾವ, ಭಕ್ತಿ ಹಾಗೂ ಹುರುಪಿನಿಂದ ಕಾರ್ಯನಿರ್ವಹಿಸಲಿದೆ” ಎಂದು ತಿಳಿಸಿದರು.




















