ನವದೆಹಲಿ, ಜು.17 www.bengaluruwire.com: ಭಾರತೀಯ ಚುನಾವಣಾ ಆಯೋಗವು (ECI) ಚುನಾವಣೆ ಮತ್ತು ಮಾಧ್ಯಮಗಳ ಪಾತ್ರದ ಕುರಿತಂತೆ ನವದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್ಮೆಂಟ್ (ಐಐಐಡಿಇಎಮ್) ನಲ್ಲಿ ಶುಕ್ರವಾರ ಅಖಿಲ ಭಾರತೀಯ ಮಾಧ್ಯಮ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ದೇಶಾದ್ಯಂತ ಆಗಮಿಸಿರುವ ಮಾಧ್ಯಮ ಪ್ರತಿನಿಧಿಗಳನ್ನು ‘ಚುನಾವಣಾ ಆಯೋಗದ ಕುಟುಂಬ’ ಎಂದು ಬಣ್ಣಿಸಿದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಮತದಾರರ ನಿರ್ವಹಣೆ:
ದೇಶದಲ್ಲಿ ಚುನಾವಣೆ ನಡೆಸುವ ಭಾರತೀಯ ಚುನಾವಣಾ ಆಯೋಗವು ಬರೋಬ್ಬರಿ 1.80 ಕೋಟಿ ಸಿಬ್ಬಂದಿಯನ್ನು ಹೊಂದಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ಸಿಬ್ಬಂದಿ ಹೊಂದಿರುವ ಏಕೈಕ ಸಂಸ್ಥೆಯಾಗಿದೆ. “ನಮ್ಮ ದೇಶದಲ್ಲಿ 95 ಕೋಟಿ ಮತದಾರರಿದ್ದು, ಪ್ರತಿವರ್ಷ ಶೇ.8ರಷ್ಟು ಮತದಾರರ ಪಟ್ಟಿಯಲ್ಲಿ ಬದಲಾವಣೆಯಾಗುತ್ತದೆ. ಅಂದರೆ, ಪ್ರತಿ ತಿಂಗಳು ಸುಮಾರು 63 ಲಕ್ಷದಷ್ಟು ಬದಲಾವಣೆಗಳಾಗುತ್ತವೆ. ಹಲವು ದೇಶಗಳನ್ನು ಸೇರಿಸಿದರೂ ಭಾರತದ 95 ಕೋಟಿ ಮತದಾರರನ್ನು ಮೀರಿಸಲು ಸಾಧ್ಯವಿಲ್ಲ,” ಎಂದು ಅವರು ಹೆಮ್ಮೆಯಿಂದ ನುಡಿದರು.

ಇಸಿಐನೆಟ್ (ECINet) ಮತ್ತು ಪಾರದರ್ಶಕತೆ:
ಚುನಾವಣಾ ಆಯೋಗದ ಪಾರದರ್ಶಕತೆಗೆ ‘ಇಸಿಐನೆಟ್’ ಆಪ್ ಸಾಕ್ಷಿಯಾಗಿದೆ. ಜನವರಿ 26, 2026ರವರೆಗೆ ಈ ಮೊಬೈಲ್ ಆಪ್ ಅನ್ನು 11.5 ಕೋಟಿಗೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ. ಆಯೋಗದ ಪ್ರತಿಯೊಂದು ಮಾಹಿತಿಯೂ ಇದರಲ್ಲಿ ಲಭ್ಯವಿದೆ. “ಇಲ್ಲಿನ ಪಾರದರ್ಶಕತೆಯು ಪ್ರಶ್ನಾತೀತವಾಗಿದೆ. ಹೀಗಿರುವಾಗ ‘ವೈ ದಿಸ್ ಕೊಲವರಿ?’ (ಅನುಮಾನವೇಕೆ?)” ಎಂದು ಜ್ಞಾನೇಶ್ ಕುಮಾರ್ ಪ್ರಶ್ನಿಸಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಭಿಯಾನದಡಿ ತಳಮಟ್ಟದಲ್ಲಿ ಮತದಾರರ ಪಟ್ಟಿ ತಯಾರಿಸಲಾಗುತ್ತಿದ್ದು, ಇದಕ್ಕಾಗಿ ದೇಶಾದ್ಯಂತ 12 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು ಸೇರಿದಂತೆ ಒಟ್ಟು 37 ಲಕ್ಷ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. 95 ಕೋಟಿ ಮತದಾರರ ಪೈಕಿ 60 ಕೋಟಿ ಮತದಾರರ SIR ಪೂರ್ಣಗೊಂಡಿದ್ದು, ಉಳಿದ 35 ಕೋಟಿ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಸುಳ್ಳು ಸುದ್ದಿ ನಿಯಂತ್ರಣ ಹಾಗೂ ಮಾಧ್ಯಮಗಳ ಹೊಣೆಗಾರಿಕೆ:
ಚುನಾವಣೆಯಲ್ಲಿ ಪೇಯ್ಡ್ ಸುದ್ದಿ (Paid News) ಪ್ರಕಟಿಸಿದ್ದು ಸಾಕ್ಷಿ ಸಮೇತ ಸಾಬೀತಾದರೆ, ಆ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ಎಚ್ಚರಿಸಲಾಯಿತು. ಚುನಾವಣಾ ಆಯೋಗದ ಕಾನೂನು ವಿಭಾಗದ ಉಪ ಮಹಾನಿರ್ದೇಶಕ ವಿಜಯ್ ಕುಮಾರ್ ಪಾಂಡೆ ಮಾತನಾಡಿ, “ಪ್ರಜಾಪ್ರಭುತ್ವದ ಉಳಿವಿಗಾಗಿ ಚುನಾವಣೆಗೆ ಅಡ್ಡಿಯಾಗುವಂತಹ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಿಂದ ಆಯೋಗದ ಮನವಿಯ ಮೇರೆಗೆ ತಕ್ಷಣವೇ ತೆಗೆದುಹಾಕಬೇಕು” ಎಂದು ಕೋರಿದರು.

ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ ಡಾ.ಸೀಮಾ ಖನ್ನಾ ಅವರು ಚುನಾವಣೆಯಲ್ಲಿ ತಂತ್ರಜ್ಞಾನದ ಪಾತ್ರ ಮತ್ತು ಇಸಿಐನೆಟ್ ವೇದಿಕೆಯ ಪ್ರಾಮುಖ್ಯತೆಯನ್ನು ವಿವರಿಸಿದರು.
ಮತದಾನ ಪ್ರಮಾಣ: ವಿಶ್ವಮಟ್ಟದಲ್ಲಿ ಭಾರತದ ಸಾಧನೆ
ಮಾಧ್ಯಮ ವಿಭಾಗದ ಮಹಾನಿರ್ದೇಶಕ ಆಶಿಶ್ ಗೋಯಲ್ ಅವರು ಇತ್ತೀಚಿನ ವಿಧಾನಸಭಾ ಚುನಾವಣೆಗಳ ಅಂಕಿ-ಅಂಶಗಳನ್ನು ಹಂಚಿಕೊಂಡರು. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 6.83 ಕೋಟಿ (ಶೇ.93.70) ಮತದಾರರು ಹಕ್ಕು ಚಲಾಯಿಸಿದ್ದು, ಇದು ವಿಶ್ವದಲ್ಲೇ ಅತಿಹೆಚ್ಚು. ಸಿಂಗಾಪುರದಲ್ಲಿ (2025) ಶೇ.92.83, ಪುದುಚೇರಿಯಲ್ಲಿ ಶೇ.91.19, ಅಸ್ಸಾಂನಲ್ಲಿ ಶೇ.86.33, ತಮಿಳುನಾಡಿನಲ್ಲಿ ಶೇ.86.03, ಕೇರಳದಲ್ಲಿ ಶೇ.79.53 ಹಾಗೂ ಬಿಹಾರದಲ್ಲಿ ಶೇ.67.25 ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಇಸಿಐನೆಟ್ ತಂತ್ರಾಂಶದಲ್ಲಿ ‘ಎಲೆಕ್ಟೋರಲ್ ಲಿಟ್ರೆಸಿ ಕ್ಲಬ್-2.0’ ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

ಚುನಾವಣಾ ಪ್ರಕ್ರಿಯೆಯಲ್ಲಿ ವಿಶ್ವಾಸ ಹೆಚ್ಚಿಸಲು ಆಯೋಗದ ನೂತನ ಕ್ರಮಗಳು:
100% ವೆಬ್ಕಾಸ್ಟಿಂಗ್: ಮತದಾನ ಪ್ರಕ್ರಿಯೆಯ ನಿರಂತರ ಮೇಲ್ವಿಚಾರಣೆಗೆ ಎಲ್ಲಾ ಮತಗಟ್ಟೆಗಳಲ್ಲಿ ಶೇ.100ರಷ್ಟು ವೆಬ್ಕಾಸ್ಟಿಂಗ್ ವ್ಯವಸ್ಥೆ.
ನಿರಂತರ ಸಂವಾದ: 28,000ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಳಗೊಂಡಂತೆ ರಾಜಕೀಯ ಪಕ್ಷಗಳೊಂದಿಗೆ ನಿರಂತರ ತೊಡಗಿಸಿಕೊಳ್ಳುವಿಕೆ (ಡಿಸೆಂಬರ್ 2025ರ ದತ್ತಾಂಶದಂತೆ).
ಇವಿಎಂ ಬ್ಯಾಲೆಟ್ ಸುಧಾರಣೆ: ಅಭ್ಯರ್ಥಿಗಳ ವಿವರ ಮತ್ತು ಗುರುತುಗಳು ಸ್ಪಷ್ಟವಾಗಿ ಕಾಣುವಂತೆ ಬ್ಯಾಲೆಟ್ ಪೇಪರ್ಗಳ ಮಾರ್ಪಾಡು (Enhanced Visibility).
ಕ್ಯೂಆರ್ (QR) ಆಧಾರಿತ ಭದ್ರತೆ: ಮತ ಎಣಿಕೆ ಕೇಂದ್ರಗಳಲ್ಲಿ ಭದ್ರತೆ ಬಲಪಡಿಸಲು ಕ್ಯೂಆರ್ ಆಧಾರಿತ ಗುರುತಿನ ಚೀಟಿ ವ್ಯವಸ್ಥೆ.
ಕಡ್ಡಾಯ ವಿವಿಪ್ಯಾಟ್ ಎಣಿಕೆ: ನಮೂನೆ 17 ಸಿ ಮತ್ತು ಇವಿಎಂ ದತ್ತಾಂಶಗಳ ನಡುವೆ ವ್ಯತ್ಯಾಸ ಕಂಡುಬಂದರೆ, ಕಡ್ಡಾಯವಾಗಿ ವಿವಿಪ್ಯಾಟ್ ಚೀಟಿಗಳ ಎಣಿಕೆ.
ವೋಟರ್ ಸ್ಲಿಪ್ ಮಾರ್ಪಾಡು: ಮತದಾರರ ಸರಣಿ ಮತ್ತು ಭಾಗದ ಸಂಖ್ಯೆ ಎದ್ದು ಕಾಣುವಂತೆ ‘ವೋಟರ್ ಇನ್ಫಾರ್ಮೇಶನ್ ಸ್ಲಿಪ್’ ಬದಲಾವಣೆ.
72 ಗಂಟೆಗಳಲ್ಲಿ ವರದಿ: ಫಲಿತಾಂಶ ಘೋಷಣೆಯಾದ 72 ಗಂಟೆಗಳೊಳಗೆ ಸೂಚ್ಯಂಕ ಕಾರ್ಡ್ಗಳು ಮತ್ತು ಅಂಕಿಅಂಶಗಳ ವರದಿಗಳ ಹಂಚಿಕೆ.
ನಿಖರ ದತ್ತಾಂಶ ದಾಖಲಾತಿ: ಮತದಾನದ ದಿನದಂದು ಪ್ರತಿ 2 ಗಂಟೆಗೊಮ್ಮೆ ಅಧ್ಯಕ್ಷೀಯ ಅಧಿಕಾರಿಗಳಿಂದ ನೇರವಾಗಿ ECINET ಆ್ಯಪ್ಗೆ ಮತದಾನದ ಪ್ರಮಾಣ ದಾಖಲಾತಿ. ಮತದಾನ ಮುಕ್ತಾಯದ ನಂತರವೂ ಕಡ್ಡಾಯ ನಮೂದು.
ಸಮ್ಮೇಳನದಲ್ಲಿ ಪತ್ರಕರ್ತರಿಗಾಗಿ ಚುನಾವಣೆ ಕುರಿತಂತೆ ಕ್ವಿಜ್ ಏರ್ಪಡಿಸಲಾಗಿತ್ತು. ಐಐಐಡಿಇಎಮ್ ಡಿಜಿ ರಾಕೇಶ್ ಕುಮಾರ್ ವರ್ಮಾ, ಮಾಧ್ಯಮ ವಿಭಾಗದ ಉಪನಿರ್ದೇಶಕ ಅಪೂರ್ವ ಕುಮಾರ್ ಸಿಂಗ್, ದೇಅಸದ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ 380ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.





















