ಬೆಂಗಳೂರು, ಆ.30 www.bengaluruwire.com : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ದುರಂತದಲ್ಲಿ 11 ಅಭಿಮಾನಿಗಳನ್ನು ಕಳೆದುಕೊಂಡ ನಂತರ ಮೌನಕ್ಕೆ ಶರಣಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ) ತಂಡವು, ಘಟನೆ ನಡೆದು ಸುಮಾರು ಮೂರು ತಿಂಗಳ ನಂತರ ಮಹತ್ವದ ಘೋಷಣೆ ಮಾಡಿದೆ.
ಆಗಸ್ಟ್ 30 (ಇಂದು) ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಆರ್.ಸಿ.ಬಿ, ದುರ್ಘಟನೆಯಲ್ಲಿ ಮಡಿದ 11 ಅಭಿಮಾನಿಗಳ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡುವ ಮೂಲಕ ‘ಆರ್ ಸಿಬಿ ಕೇರ್ಸ್’ (RCB Cares) ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ.
ಜೂನ್ 4, 2025 ರಂದು ನಡೆದ ಈ ದುರಂತವು ತಂಡಕ್ಕೆ ಹಾಗೂ ಅದರ ಅಭಿಮಾನಿಗಳಿಗೆ ತೀವ್ರ ನೋವನ್ನುಂಟು ಮಾಡಿತ್ತು. ಈ ಬಗ್ಗೆ ದುರ್ಘಟನೆಯ ನಂತರ ಇಂದು ಮಾಡಿರುವ ಪೋಸ್ಟ್ ನಲ್ಲಿ ಆರ್.ಸಿ.ಬಿ, “ಜೂನ್ 4, 2025 – ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ. ನಾವು ಕಳೆದುಕೊಂಡಿದ್ದು ಕೇವಲ 11 ಅಭಿಮಾನಿಗಳನ್ನಲ್ಲ, ಅವರು ನಮ್ಮ ಕುಟುಂಬದ ಸದಸ್ಯರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು” ಎಂದು ಭಾವುಕವಾಗಿ ಬರೆದುಕೊಂಡಿದೆ.
ಈ ಹಿಂದೆ ದುಃಖದ ಸಂದರ್ಭದಲ್ಲಿ ತಕ್ಷಣವೇ ಪ್ರತಿಕ್ರಿಯಿಸದೆ ಇದ್ದ ತಂಡದ ಮೌನವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅದರೆ ಘಟನೆ ನಡೆದ ಮೂರು ತಿಂಗಳ ನಂತರ ಆಗಸ್ಟ್ 27ರಂದು ಮೌನಕ್ಕೆ ಉತ್ತರವಾಗಿ, ಮೂರು ತಿಂಗಳ ನಂತರ ಆರ್.ಸಿ.ಬಿ ಮತ್ತೊಂದು ಪೋಸ್ಟ್ ಹಂಚಿಕೊಂಡಿತ್ತು. ಅದರಲ್ಲಿ “ನಮ್ಮ ಮೌನ, ಖಾಲಿತನದಿಂದಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು” ಎಂದು ತಂಡವು ಹೇಳಿಕೊಂಡಿದೆ. ಘಟನೆಯ ನೋವು ಮತ್ತು ಮೌನದ ಅವಧಿಯಲ್ಲಿ ಆಳವಾಗಿ ಯೋಚಿಸಿ, ನೋವನ್ನೇ ಶ್ರದ್ಧೆ ಮತ್ತು ನಂಬಿಕೆಯಾಗಿ ಪರಿವರ್ತಿಸಲು ನಿರ್ಧರಿಸಿದೆ. ಅದರ ಫಲವೇ ‘ಆರ್ ಸಿಬಿ ಕೇರ್ಸ್’ ಯೋಜನೆ ಎಂದು ತಿಳಿಸಿತ್ತು.

ಈ ಯೋಜನೆಯು ಕೇವಲ ಆರ್ಥಿಕ ನೆರವಿಗೆ ಸೀಮಿತವಾಗಿಲ್ಲ. ತಂಡದ ಪೋಸ್ಟ್ ಪ್ರಕಾರ, ಇದು ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆಯಾಗಿದೆ. ಅಲ್ಲದೆ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆಯನ್ನು ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆಯನ್ನು ಇದು ಒಳಗೊಂಡಿದೆ ಎಂದು ಪೋಸ್ಟ್ ನಲ್ಲಿ ಆರ್.ಸಿ.ಬಿ ಬರೆದುಕೊಂಡಿತ್ತು.
ಯಾರು ಏನೇ ಆರ್ಥಿಕ ಪರಿಹಾರ ಕೊಟ್ಟರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿದ ದುರ್ಘಟನೆಯು ತಮ್ಮವರನ್ನು ಕಳೆದುಕೊಂಡ ಆ ಕುಟುಂಬಗಳಿಗೆ ಮರೆಯಲಾರದ ಕಹಿ ಘಟನೆಯಾಗಿ ಉಳಿದಿದೆ. ಅಭಿಮಾನಿಗಳಲ್ಲಿ ಇನ್ನೂ ಆ ಕಹಿಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
“ಬೆಂಗಳೂರು ವೈರ್” ಪ್ರತಿ ಸುದ್ದಿ ನಿತ್ಯ ನಿರಂತರವಾಗಿ, ಉಚಿತವಾಗಿ ನಿಮಗೆ ಲಭ್ಯವಾಗಲಿದೆ. ಇದಕ್ಕಾಗಿ ಇಂದೇ ನಿಮಿಷದೊಳಗಾಗಿ Subscribe ಆಗಿ. ಈ ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.























