ಬೆಂಗಳೂರು/ಮುಂಬೈ, ಏ.24 www.bengaluruwire.com: ಕನ್ನಡ ಚಿತ್ರರಂಗದ ಧ್ರುವತಾರೆ, ಕರ್ನಾಟಕ ರತ್ನ ಡಾ. ರಾಜ್ಕುಮಾರ್ ಅವರ 97ನೇ ಜನ್ಮದಿನಾಚರಣೆಯನ್ನು ಇಂದು ರಾಜ್ಯಾದ್ಯಂತ ಅತ್ಯಂತ ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಗುತ್ತಿದೆ.
ಈ ವಿಶೇಷ ದಿನದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಣ್ಣಾವ್ರ ಪುಣ್ಯಭೂಮಿಗೆ ದೊಡ್ಮನೆ ಕುಟುಂಬದವರು ಹಾಗೂ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಮಾಧಿ ಸ್ಥಳದಲ್ಲಿ ದೊಡ್ಮನೆ ಕುಟುಂಬದ ಪೂಜೆ:
ನಟ ರಾಘವೇಂದ್ರ ರಾಜ್ಕುಮಾರ್ ಅವರು ಪತ್ನಿ ಮಂಗಳಾ ಅವರೊಂದಿಗೆ ಸಮಾಧಿ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಪ್ಪಾಜಿ ನಮ್ಮನ್ನು ಅಗಲಿ 20 ವರ್ಷಗಳಾದರೂ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಅಚಲವಾಗಿದೆ. ಇನ್ನು ಮೂರು ವರ್ಷಗಳಲ್ಲಿ ಅಪ್ಪಾಜಿಗೆ 100 ವರ್ಷ ತುಂಬಲಿದೆ. ಆ ಹೊತ್ತಿಗೆ ಈ ಪುಣ್ಯಭೂಮಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು. ಇಂದಿನ ದಿನವಿಡೀ ಶಿವಣ್ಣ, ಪೂರ್ಣಿಮಾ ಮತ್ತು ಕುಟುಂಬದ ಉಳಿದ ಸದಸ್ಯರು ಭೇಟಿ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಅಣ್ಣಾವ್ರು ಸಂಗೀತದ ವಿಶ್ವಕೋಶ: ಸಾಧು ಕೋಕಿಲ ಬಣ್ಣನೆ
ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, “ಡಾ. ರಾಜ್ಕುಮಾರ್ ಕೇವಲ ನಟರಲ್ಲ, ಅವರು ಈ ನಾಡಿನ ಸಂಸ್ಕೃತಿ ಮತ್ತು ದೇವಸ್ಥಾನವಿದ್ದಂತೆ. ಅವರ ಸಂಗೀತ ಜ್ಞಾನ ಅಪಾರವಾಗಿತ್ತು. ಸಾವಿರಾರು ಜನರ ಮಧ್ಯೆ ಆರ್ಕೆಸ್ಟ್ರಾದಲ್ಲಿ ಸಣ್ಣ ತಪ್ಪು ನಡೆದರೂ ಅವರು ಅದನ್ನು ಗುರುತಿಸುತ್ತಿದ್ದರು. ಒಂದೇ ಟೇಕ್ನಲ್ಲಿ ರಾಗಮಾಲಿಕಾ ಹಾಡಬಲ್ಲ ಏಕೈಕ ನಟ ಅವರು” ಎಂದು ಕೊಂಡಾಡಿದರು. ತಾವು ಅಣ್ಣಾವ್ರ ಚಿತ್ರಗಳನ್ನು ನೋಡಲು ಪೊಲೀಸರಿಂದ ಏಟು ತಿಂದಿದ್ದನ್ನು ಮತ್ತು ಸಣ್ಣ ಸಂದಿಗಳಲ್ಲಿ ನುಗ್ಗಿ ಸಿನಿಮಾ ನೋಡುತ್ತಿದ್ದ ಅಭಿಮಾನದ ದಿನಗಳನ್ನು ಅವರು ಸ್ಮರಿಸಿದರು.
ಒಟ್ಟಾರೆಯಾಗಿ, ಕರುನಾಡಿನ ಮನೆಮಗನ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ, ಅನ್ನದಾನ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಅಭಿಮಾನಿಗಳು ರಾಜ್ಯದ ಉದ್ದಗಲಕ್ಕೂ ಹಮ್ಮಿಕೊಂಡಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 53ನೇ ಹುಟ್ಟುಹಬ್ಬವೂ ಇಂದೇ ಆಗಿರುವುದು ವಿಶೇಷವಾಗಿದೆ. ಹುಟ್ಟುಹಬ್ಬದ ಪ್ರಯುಕ್ತ ಮುಂಬೈನಲ್ಲಿ ಅಭಿಮಾನಿಗಳು ಕ್ರಿಕೆಟ್ ದಂತಕಥೆ ಸಚಿನ್ ಪೋಸ್ಟರ್ ಹಿಡಿದು ಮೆರವಣಿಗೆ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು.





















