ಬೆಂಗಳೂರು, ಏ.24 www.bengaluruwire.com : ರಾಜ್ಯದಲ್ಲಿ ಮತ್ತೆ ‘ಜನಿವಾರ’ ವಿವಾದದ ಕಿಡಿ ಹೊತ್ತಿಕೊಂಡಿದೆ. ಗುರುವಾರ ನಡೆದ ಸಿಇಟಿ (CET) ಪರೀಕ್ಷೆಯ ವೇಳೆ ಬೆಂಗಳೂರಿನ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪ ಕೇಳಿಬಂದಿದ್ದು, ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಆನಂದ್ ಸುಧೀರ್ ರಾವ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕೇಂದ್ರಕ್ಕೆ ಬಂದಾಗ, ಅಲ್ಲಿನ ಸಿಬ್ಬಂದಿ ಜನಿವಾರ ತೆಗೆಯುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳು ನಿರಾಕರಿಸಿದಾಗ, “ಜನಿವಾರ ತೆಗೆಯದಿದ್ದರೆ ಮನೆಗೆ ವಾಪಸ್ ಹೋಗಿ” ಎಂದು ಧಮಕಿ ಹಾಕಿದ್ದಾರೆ ಎನ್ನಲಾಗಿದೆ.
ಮಗನ ಭವಿಷ್ಯದ ದೃಷ್ಟಿಯಿಂದ ಪೋಷಕರು ಅನಿವಾರ್ಯವಾಗಿ ಜನಿವಾರ ತೆಗೆಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಪೋಷಕರ ಮನವೊಲಿಸಲು ಯತ್ನಿಸಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಪತ್ರ ಬರೆಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಸಚಿವ ಎಂ.ಸಿ. ಸುಧಾಕರ್ ಭೇಟಿ:

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಇಂದು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, “ಡ್ರೆಸ್ ಕೋಡ್ ಬಗ್ಗೆ ಈಗಾಗಲೇ ಅರಿವು ಮೂಡಿಸಲಾಗಿದೆ. ಕೃಪಾನಿಧಿ ಕಾಲೇಜಿನ ಘಟನೆ ಕೆಇಎ (KEA) ಗಮನಕ್ಕೆ ಬಂದಿಲ್ಲ. ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಕೆಟ್ಟ ಹೆಸರು ತರಲು ಕೆಲವರು ಹೀಗೆ ಮಾಡುತ್ತಾರೆ. ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ:
ಈ ವಿಚಾರವಾಗಿ ಎಕ್ಸ್ (X) ಖಾತೆಯಲ್ಲಿ ಸರಣಿ ಪೋಸ್ಟ್ ಹಾಕಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಹಾಲ್ ಟಿಕೆಟ್ನಲ್ಲಿ ಎಲ್ಲೂ ಜನಿವಾರ ಧರಿಸಬಾರದು ಎಂದು ಉಲ್ಲೇಖವಿಲ್ಲ. ಹೀಗಿದ್ದರೂ ಬಲವಂತ ಮಾಡಿದ್ದು ಯಾಕೆ? ಈ ದೌರ್ಜನ್ಯಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, “ಹಿಜಾಬ್ ಪರವಾಗಿ ಬೀದಿಗಿಳಿದ ಕಾಂಗ್ರೆಸ್ ನಾಯಕರು, ವಿದ್ಯಾರ್ಥಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಮೌನಕ್ಕೆ ಶರಣಾಗಿದ್ದಾರೆ,” ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ವರ್ಷವೂ ಬೀದರ್ನಲ್ಲಿ ಇಂತಹದ್ದೇ ಘಟನೆ ನಡೆದಿದ್ದರೂ, ಪರೀಕ್ಷಾ ಪ್ರಾಧಿಕಾರ ಮುನ್ನೆಚ್ಚರಿಕೆ ವಹಿಸದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನಿವಾರ ತೆಗೆಸಿದ ವಿಚಾರ ರಾಜ್ಯಾದ್ಯಂತ ಕಾವೇರುತ್ತಿದ್ದಂತೆ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಘಟನೆಗೆ ಮೇಲ್ನೋಟಕ್ಕೆ ಕಾರಣರಾದವರೆನ್ನಲಾದ ಡಿ.ಸುಧಾಕರ್, ಆರ್.ಸರಿತಾ ಹಾಗೂ ಗಿರಿಜಮ್ಮ ಎಂಬುವರನ್ನು ಕಾಲೇಜು ಆಡಳಿತ ಮಂಡಳಿ ಅಮಾನತುಪಡಿಸಿದೆ.





















