ಬೆಂಗಳೂರು, ಏ.24 www.bengaluruwire.com: ರಾಜಧಾನಿಯ ಪಶ್ಚಿಮ ಭಾಗದ ನಿವಾಸಿಗಳಿಗೆ ಅತ್ಯಾಧುನಿಕ ಹೃದಯ ಚಿಕಿತ್ಸೆಯನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ.
ಜಯದೇವ ಹೃದಯರಕ್ತನಾಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (SJICS & R) 100 ಹಾಸಿಗೆಗಳ ನೂತನ ಘಟಕವು ಶೀಘ್ರದಲ್ಲೇ ಪಶ್ಚಿಮ ಬೆಂಗಳೂರಿನ ಗೋವಿಂದರಾಜನಗರದಲ್ಲಿ ಕಾರ್ಯಾರಂಭ ಮಾಡಲಿದೆ.
ಶುಕ್ರವಾರ ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಯದೇವ ಸಂಸ್ಥೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಡುವೆ ಈ ಸಂಬಂಧ ಅಧಿಕೃತ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ನಲ್ಲಿ ನೀಡಿದ್ದ ಭರವಸೆಯೊಂದು ಈಡೇರಿದಂತಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಬಿ. ದಿನೇಶ್ ಮತ್ತು ಜಿಬಿಎ ಮುಖ್ಯ ಆಯುಕ್ತ ಎನ್.ಮಹೇಶ್ವರ ರಾವ್ ಒಪ್ಪಂದಕ್ಕೆ ಸಹಿ ಹಾಕಿದರು. ಶಾಸಕ ಪ್ರಿಯಾ ಕೃಷ್ಣ ಅವರ ಸಮ್ಮುಖದಲ್ಲಿ ಈ ಒಪ್ಪಂದ ನೆರವೇರಿತು.

ಯಾರಿಗೆಲ್ಲ ಅನುಕೂಲ?
ಈ ನೂತನ ಘಟಕವು ಗೋವಿಂದರಾಜನಗರದ ಮಲ್ಟಿಸ್ಪೆಷಾಲಿಟಿ ಕಟ್ಟಡದಲ್ಲಿ ತಲೆಯೆತ್ತಲಿದ್ದು, ಇದರಿಂದ ಈ ಕೆಳಗಿನ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ:
ಬೆಂಗಳೂರು ವ್ಯಾಪ್ತಿ: ವಿಜಯನಗರ, ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿನಗರ, ದಾಸರಹಳ್ಳಿ ಹಾಗೂ ಪೀಣ್ಯ
ಹೊರ ಜಿಲ್ಲೆಗಳು: ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ತುಮಕೂರು ಮತ್ತು ಹಾಸನ ಜಿಲ್ಲೆಗಳ ರೋಗಿಗಳಿಗೆ ಇದು ವರದಾನವಾಗಲಿದೆ.
₹15 ಕೋಟಿ ಅನುದಾನ ಮತ್ತು ಸಿಎಸ್ಆರ್ ನೆರವು:
ಈ ಯೋಜನೆಯ ಬಗ್ಗೆ ಮಾತನಾಡಿದ ಶಾಸಕ ಪ್ರಿಯಾ ಕೃಷ್ಣ, “100 ಹಾಸಿಗೆಗಳ ಈ ಘಟಕಕ್ಕೆ ರಾಜ್ಯ ಸರ್ಕಾರ ₹15 ಕೋಟಿ ಮೀಸಲಿರಿಸಿದೆ. ಸಿಎಸ್ಆರ್ (CSR) ನಿಧಿಯ ಅಡಿಯಲ್ಲಿ ಅತ್ಯಾಧುನಿಕ ಕ್ಯಾಥ್ಲ್ಯಾಬ್ ಸೌಲಭ್ಯವನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ” ಎಂದರು.
ಬೆಂಗಳೂರಿನಾದ್ಯಂತ ಜಯದೇವ ಜಾಲ ವಿಸ್ತರಣೆ:
ಮುಂದಿನ ದಿನಗಳಲ್ಲಿ ಬೆಂಗಳೂರಿನ ಉತ್ತರ, ಪೂರ್ವ ಮತ್ತು ಮಧ್ಯ ಭಾಗಗಳಲ್ಲೂ ಜಯದೇವ ಘಟಕಗಳನ್ನು ಸ್ಥಾಪಿಸುವ ಗುರಿ ಇದೆ ಎಂದು ಡಾ.ದಿನೇಶ್ ತಿಳಿಸಿದರು. ಉತ್ತರ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಘಟಕ ಸ್ಥಾಪನೆಗೆ ಈಗಾಗಲೇ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.
ಪಶ್ಚಿಮ ಬೆಂಗಳೂರಿಗೆ ಹೊಸ ವೈದ್ಯಕೀಯ ಕಾಲೇಜು:
ಇದೇ ಸಂದರ್ಭದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMC&RI) ಹೊಸ ಕ್ಯಾಂಪಸ್ ಅನ್ನು ಪಶ್ಚಿಮ ಬೆಂಗಳೂರಿನಲ್ಲಿ ಸ್ಥಾಪಿಸಲು 5 ಎಕರೆ ಭೂಮಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.






















