ಬೆಂಗಳೂರು, ಮಾ.03 www.bengaluruwire.com : ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಸೋಮವಾರದಿಂದ (ಮಾ.03) ಆರಂಭವಾಗಲಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ, ಆರೋಪ- ಪ್ರತ್ಯಾರೋಪ, ಚರ್ಚೆಗೆ ಅಖಾಡ ಸಿದ್ಧವಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.7 ರಂದು 16ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. ಅದಾದ ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ಮಾರ್ಚ್ 4 ರಿಂದ 6 ರವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ನಂತರ ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಾರೆ. ಈ ಬಾರಿಯ ಬಜೆಟ್ ಮೇಲೆ ಜನರ ಚಿತ್ತ ನೆಟ್ಟಿದೆ.
ಇಂದಿನ ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯಪಾಲರ ಮೂಲಕ ಹೇಳಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇಂದು ಮತ್ತೆ ನಾಳೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.
ವಿಪಕ್ಷ – ಆಡಳಿತ ಪಕ್ಷಗಳ ತಂತ್ರ – ಪ್ರತಿತಂತ್ರ :

ಮಾರ್ಚ್ 7 ಕ್ಕೆ ಸಿದ್ದರಾಮಯ್ಯ ದಾಖಲೆಯ 16 ನೇ ಬಜೆಟ್ ಮಂಡನೆ ಒಂದೆಡೆಯಾದರೆ, ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳು ಸಿದ್ಧವಾಗುತ್ತಿದೆ. ಗ್ಯಾರೆಂಟಿಗಳ ಅನುಷ್ಠಾನದಿಂದ ಆರ್ಥಿಕ ಹೊರೆಯಾಗಿದೆ, ಇದರಿಂದ ಅನುದಾನಕ್ಕೆ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂದು ವಿಪಕ್ಷಗಳು ಸರ್ಕಾರದ ಮೇಲೆ ಆರೋಪಗಳ ದಾಳ ಹಾಕಲಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬಕ್ಕೆ ಲೋಕಾಯುಕ್ತ ಸಂಸ್ಥೆ ಕ್ಲೀನ್ಚಿಟ್ ಕೊಟ್ಟಿರುವ ಬಗ್ಗೆ, ಸರ್ಕಾರವನ್ನ ಕಟ್ಟಿಹಾಕಲು ವಿಪಕ್ಷಗಳು ಮುಂದಾಗಲಿವೆ.
ಮುಡಾ ಹಗರಣ, ಅಧಿಕಾರಿಗಳ ಸರಣಿ ಆತ್ಮಹತ್ಯೆ, ಗ್ಯಾರಂಟಿ ಗೊಂದಲ, ಸರ್ಕಾರದಲ್ಲಿ ಕುರ್ಚಿಗಾಗಿ ಫೈಟ್, ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ, ಕಾಮಗಾರಿಗಳ ಬಿಲ್ ಪಾವತಿಗೆ ಕಮಿಷನ್, ಬಾಣಂತಿಯರ ಸರಣಿ ಆತ್ಮಹತ್ಯೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಯೋಜನೆ ರೂಪಿಸಿವೆ.
ವಿಪಕ್ಷಗಳ ಅಸ್ತ್ರಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಪ್ರತಿತಂತ್ರ ಕೂಡ ಸಿದ್ದಮಾಡಿಟ್ಟುಕೊಂಡಿದೆ. ಕೋವಿಡ್ ಹಗರಣ ಕುರಿತ ನ್ಯಾ.ಮೈಕಲ್ ಡಿ ಕುನ್ಹಾ ವರದಿ, ಕೇಂದ್ರ ಸಚಿವ ಹೆಚ್ಡಿಕೆ ವಿರುದ್ದದ ಭೂಹಗರಣ, ಮಹಾದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗೆ ಸ್ಪಂದಿಸದ ಕೇಂದ್ರ ಸರ್ಕಾರ ಈ ವಿಷಯಗಳನ್ನ ಪ್ರಸ್ತಾಪಿಸಲು ಸರ್ಕಾರ ಮುಂದಾಗಿದೆ. ಇನ್ನು ಕೇಂದ್ರ ಬಜೆಟ್ನಲ್ಲಿ ಆಗಿರುವ ಅನ್ಯಾಯ, ತೆರಿಗೆ ಪಾಲು ಹಂಚಿಕೆಯಲ್ಲಿ ಮಾಡಿರುವ ತಾರತಮ್ಯದ ಬಗ್ಗೆ ಧ್ವನಿ ಎತ್ತುವ ಮೂಲಕ ಪ್ರತಿದಾಳಿಗೆ ಸರ್ಕಾರ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.
ಬಜೆಟ್ ಮಂಡನೆಯ ದಿನವೇ ಬಿಜೆಪಿ ಪ್ರತಿಭಟನೆ :
ಮಾ.07ರಂದು ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಬಜೆಟ್ ಮಂಡನೆಯ ದಿನ ವಿಪಕ್ಷ ಬಿಜೆಪಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಅಪಮಾನ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಶಾಸಕರ ಭವನದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ಕಮಲ ಪಕ್ಷ ನಡೆಸಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಈಗಾಗಲೇ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ಶಾಸಕರಿಗೆ ಸಲಹೆ, ಸೂಚನೆ ನೀಡಲಾಗುತ್ತದೆ. ವಿಪಕ್ಷಗಳಿಗೆ ತಿರುಗೇಟು ಕೊಡುವ ಬಗ್ಗೆ ಶಾಸಕರಿಗೆ ಹಿರಿಯ ನಾಯಕರು ಸಲಹೆ, ಸೂಚನೆ ನೀಡಲಿದ್ದಾರೆ.
ವಿಧಾನಸಭೆ ಕಾರ್ಯಕಲಾಪಗಳ ನೇರ ಪ್ರಸಾರ :
ಈ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಸ್, ಮೆಟ್ರೋ ಪ್ರಯಾಣ ದರ, ವಿದ್ಯುತ್ ಬಿಲ್, ಕುಡಿಯುವ ನೀರು, ಹಾಲಿನ ಬಿಲ್ ದರ ಏರಿಕೆ ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಬಜೆಟ್ನಲ್ಲಿ ಅನುದಾನ ಘೋಷಿಸುತ್ತೇನೆ, ಯಾರೂ ಅನುದಾನದ ಬಗ್ಗೆ ಮಾತನಾಡಬೇಡಿ ಎಂದು ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ತೀರ್ಮಾನ ಅಂತಿಮ ನಿರ್ಧಾರ ಮಾಡುತ್ತದೆ. ಹೀಗಾಗಿ ಯಾವುದೇ ರೀತಿಯಲ್ಲಿ ಬಹಿರಂಗ ಹೇಳಿಕೆಗಳನ್ನು ನೀಡಬೇಡಿ ಎಂದು ಸಚಿವರು, ಶಾಸಕರಿಗೆ ಸೂಚನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅಧಿವೇಶನದ ಮೊದಲ ದಿನದ ಬೆಳಗ್ಗೆಯೇ ಬಿಜೆಪಿ ಪ್ರತಿಭಟನೆ ಯೋಜನೆ ರೂಪಿಸಿದೆ. ರಾಜಭವನ, ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರದಿಂದ ಅಗೌರವ ವಿಚಾರವಾಗಿ ಬಿಜೆಪಿ ಶಾಸಕರ ಭವನದಿಂದ ವಿಧಾನಸೌಧದ ತನಕ ಕಾಲ್ನಡಿಗೆ ಮೆರವಣಿಗೆ ಕೈಗೊಂಡು ಬಳಿಕ ಪ್ರತಿಭಟನೆ ನಡೆಸಲಿದೆ. ಪ್ರತಿಭಟನೆ ಮೂಲಕ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ತಂತ್ರ ರೂಪಿಸಿದೆ.
ಬಜೆಟ್ ಲೆಕ್ಕಾಚಾರ ಹೇಗಿದೆ?:
ಒಟ್ಟಿನಲ್ಲಿ 16ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿರುವ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಹಳಿತಪ್ಪಿದೆ ಎಂಬ ಆರೋಪಗಳ ನಡುವೆ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಎಲ್ಲರನ್ನು ಒಳಗೊಳ್ಳುವ, ಅಭಿವೃದ್ಧಿ ಪ್ರೇರಿತ, ಸಮತೋಲಿತ ಬಜೆಟ್ ಮಂಡಿಸುತ್ತಾರಾ? ಯಾವೆಲ್ಲಾ ವರ್ಗದವರನ್ನು ಸಂತುಷ್ಠ ಪಡಿಸುತ್ತಾರೆ ಎಂಬುದರ ಬಗ್ಗೆ ಎಲ್ಲರ ಗಮನ ಕೇಂದ್ರೀಕರಿಸಿದೆ.
ವಿಧಾನಪರಿಷತ್ ಕಾರ್ಯಕಲಾಪಗಳ ನೇರ ಪ್ರಸಾರದ ಲಿಂಕ್ : https://youtube.com/@KarnatakaLCSessions






















