ಶ್ರೀರಂಗಪಟ್ಟಣ, ಜೂ.6 www.bengaluruwire.com : ಹಳೆ ಮೈಸೂರು ಭಾಗದಲ್ಲಿನ ಶ್ರೀರಂಗಪಟ್ಟಣ ತಾಲ್ಲೂಕು ಗಡಿ ಭಾಗದ ಮುಜರಾಯಿ ಇಲಾಖೆಗೆ ಸೇರಿದ ಆರತಿ ಉಕ್ಕಡದ ಅಹಲ್ಯಾದೇವಿ (ಮಾರಮ್ಮ) ಪ್ರಸಿದ್ಧ ದೇಗುಲದಲ್ಲಿ ಖಾಸಗಿ ವ್ಯಕ್ತಿಗಳಿಂದ ದೇವರ ದರ್ಶನಕ್ಕೆ ಭಕ್ತಾದಿಗಳ ಸುಲಿಗೆ ನಡೆಯುತ್ತಿದೆ. ಈ ವಿಷಯ ಬೆಂಗಳೂರು ವೈರ್ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಬಹಿರಂಗವಾಗಿದೆ.

ಉಕ್ಕಡ ಮಾರಮ್ಮ ದೇವರ ದರ್ಶನ ಪಡೆಯಲು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಸಹಸ್ರಾರು ಭಕ್ತರು ಈ ದೇವಾಲಯಕ್ಕೆ ಬಂದು ಪೂಜೆ, ಪುನಸ್ಕಾರ ಸಲ್ಲಿಸುತ್ತಾರೆ. ಇಂತಹ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಯಲ್ಲದವರು ಸಾಲಲ್ಲಿ ನಿಂತ ಭಕ್ತರಿಂದ ಹೆಜ್ಜೆ ಹೆಜ್ಜೆಗೂ ದೇವರ ದರ್ಶನದ ಹೆಸರಿನಲ್ಲಿ ಹಣ ಪೀಕುತ್ತಾರೆ. ಕಾಯಿ ಒಡೆಯಲು 10 ರೂ, ವಿಶೇಷ ದರ್ಶನಕ್ಕೆ ಬೇಗ ಹೋಗಬೇಕೆಂದರೆ ಖಾಸಗಿ ಸೆಕ್ಯುರಿಟಿಗೆ 100 ರೂ. ಮಿಸ್ಸಿಲ್ಲದೆ ನೀಡಬೇಕು. ಮುಜರಾಯಿ ಇಲಾಖೆಯ “ಎ” ದರ್ಜೆ ದೇವಸ್ಥಾನವಾಗಿದ್ದರೂ, ಪ್ರತಿಯೊಂದು ಸೇವೆಗೂ 21-09-2015ರಲ್ಲಿ ಮುಜರಾಯಿ ಇಲಾಖೆ ಸೇವಾರ್ಥ ದರಗಳನ್ನು ನಿಗದಿ ಮಾಡಿದ್ದರೂ ಅಧಿಕೃತವಾಗಿ ಶುಲ್ಕ ಕಟ್ಟಿಸಿಕೊಳ್ಳಲು ಕೌಂಟರ್ ಇದ್ದರೂ ಇಲ್ಲದಂತಾಗಿದೆ. ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲಿರುವ ಸೇವಾ ಕೌಂಟರ್ ಗೇಟ್ ಸದಾ ಮುಚ್ಚಿರುತ್ತೆ. ಭಕ್ತರು ಸಲೀಸಾಗಿ ಸೇವಾ ಕೌಂಟರ್ ತಲುಪಲು ದೊಡ್ಡ ಗೇಟ್ ಮುಚ್ಚಿರುತ್ತೆ. ಸೇವಾ ದರ ಬೋರ್ಡ್ ನಲ್ಲಷ್ಟೇ. ಅನಧಿಕೃತವಾಗಿ ಸೇವಾ ಶುಲ್ಕ ಅರ್ಚಕರ ಹೆಸರಲ್ಲಿ ವಸೂಲಿಯಾಗುತ್ತೆ.
ತಡೆ ಒಡೆಯುವುದು, ಕಲ್ಯಾಣಿಯಲ್ಲಿ ಕಟ್ಟೆ ಒಡೆಯುವುದು ಮತ್ತು ಕೋಳಿಮೊಟ್ಟೆ ಒಡೆಯುವುದು ಇಲ್ಲಿನ ಪ್ರಮುಖ ಆಚರಣೆ. ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆ ವರೆಗೆ ನಿರಂತರ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಈ ದಿನಗಳಲ್ಲಿ ಇಲ್ಲಿನ ದೇವಸ್ಥಾನ ಭಕ್ತರಿಂದ ತುಂಬಿ ಹೋಗಿರುತ್ತದೆ. ಬೇರೆ ದಿನಗಳಲ್ಲಿ ಉಕ್ಕಡ ಮಾರಮ್ಮನ ಸುತ್ತಮುತ್ತ ಅಂಗಡಿಗಳಲ್ಲಿ ವ್ಯಾಪಾರ ಅಷ್ಟಕಷ್ಟೆ. ತಡೆ ಒಡೆಯುವ ಸ್ಥಳದ ಪ್ರವೇಶದ್ವಾರದಲ್ಲೇ 10 ರೂ. ಮೊಟ್ಟೆ ಒಡೆಯೋದು, ಮಡಿಕೆ ಮೇಲೆ ಕಾಯಿ, ನಿಂಬೆಹಣ್ಣು ಇಟ್ಟು ದಾಟಿಸಲು ನಾಮಫಲಕ ಹಾಕಿ ಶುಲ್ಕ ನಿಗದಿ ಮಾಡಲಾಗಿದೆ. ಆದರೂ ಅಲ್ಲಿನವರು ಪ್ರತಿ ಭಕ್ತರಿಂದ ಪ್ರತಿ ಸೇವೆಗೂ 10 ರೂ.ನಿಂದ 50 ರೂ. ತನಕ ಮುಖ ನೋಡಿ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಾರೆ. ಹೀಗೆ ಸಂಗ್ರಹವಾಗುವ ಹಣ ಮುಜರಾಯಿ ಇಲಾಖೆಗೆ ಹೋಗಲ್ಲ ಬದಲಿಗೆ ಇಲ್ಲಿನ ಖಾಸಗಿ ಟ್ರಸ್ಟ್, ಸ್ಥಳೀಯರ ಸ್ವಹಿತಾಸಕ್ತಿ ಜನರ ಪಾಲಾಗುತ್ತಿರುವುದು ಕಂಡು ಬಂದಿದೆ.
ಎ- ಕೆಟಗರಿ ದೇವಸ್ಥಾನವಾಗಿದ್ದರೂ ಆದಾಯ ಸೋರಿಕೆ? :

ಮಾರಮ್ಮನ ದೇವರ ದರ್ಶನಕ್ಕೆ ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಭಕ್ತರಿಂದ ಮಾರುದ್ದ ಕ್ಯೂ ಇದ್ದು, ಸಾಲಲ್ಲಿ ನಿಲ್ಲಲಾಗದೆ ಶಾರ್ಟ್ ಕಟ್ ಹೋಗಬೇಕಂದ್ರೆ ಸೆಕ್ಯುರಿಟಿ ಕೈಗೆ, ಅಲ್ಲಿ ನಿಂತಿರೋ ದೊಡ್ಡ ಬಾಡಿಗಾರ್ಡ್ ಗಳ ಕೈ ಬೆಚ್ಚಗೆ ಮಾಡಬೇಕು. ಮಹಾಲಯ ಅಮಾವಾಸ್ಯೆ ಮತ್ತು ಭೀಮನ ಅಮಾವಾಸ್ಯೆಯಂದು ಭಕ್ತರ ಮಹಾಪೂರವೇ ಹರಿದು ಬರುತ್ತದೆ. ಅಂದು ಮುಂಜಾನೆ 2 ಗಂಟೆ ಹೊತ್ತಿಗೆ ಪೂಜೆಗಳು ಶುರುವಾಗುತ್ತವೆ. ಇದು ಎ ಕೆಟಗರಿ ದೇವಸ್ಥಾನವಾಗಿದ್ದು, ವಾರ್ಷಿಕ 2.5 ಕೋಟಿ ರೂ. ಭಕ್ತರಿಂದ ಕಾಣಿಕೆ ರೂಪದಲ್ಲಿ ಆಗುತ್ತೆ. ಈಗ ಒಂದು ವರ್ಷದಲ್ಲಿ ಸೇವಾ ಕೌಂಟರ್, ತೀರ್ಥದ ಬಾಟೆಲ್, ವಾಹನ ಪೂಜೆ ಮತ್ತು ಹುಂಡಿ ಇಟ್ಟ ಮೇಲೆ 2.10 ಕೋಟಿ ರೂ. ಗಿಂತಲೂ ಹೆಚ್ಚು ಆದಾಯ ಮುಜರಾಯಿ ಇಲಾಖೆಗೆ ಆದಾಯ ರೂಪದಲ್ಲಿ ಲಭ್ಯವಾಗಿದೆ. ಕಟ್ಟೆ ಒಡೆಯುವುದು ಹಾಗೂ ತಡೆ ಒಡೆಯುವ ಶುಲ್ಕ ಮುಜರಾಯಿಗೆ ಸಿಕ್ಕುತ್ತಿಲ್ಲ. ಈ ಎರಡು ಸೇವೆಗಳಿಂದ ವರ್ಷಕ್ಕೆ 3.5 ರಿಂದ 4 ಕೋಟಿ ರೂ. ಸಂಗ್ರಹವಾಗುತ್ತಿದ್ದು, ಆ ಹಣ ಸ್ಥಳೀಯರ 2-3 ಪಂಗಡಗಳು ತಮ್ಮಲ್ಲೇ ಈ ಹಣ ಹಂಚಿಕೊಳ್ಳುತ್ತಿವೆ. ಅದನ್ನು ಮುಜರಾಯಿ ಇಲಾಖೆಗೆ ಕೊಡುತ್ತಿಲ್ಲ. ಒಂದು ವೇಳೆ ಸಂಪೂರ್ಣ ಸೇವಾರ್ಥ ದರಗಳು ಮುಜರಾಯಿ ಇಲಾಖೆಯು ಜಾರಿಗೆ ತಂದಲ್ಲಿ ವಾರ್ಷಿಕ 10 ಕೋಟಿ ರೂ.ಗಳಷ್ಟು ಹಣ ಸರ್ಕಾರಕ್ಕೆ ಆದಾಯ ರೂಪದಲ್ಲಿ ಬರುತ್ತದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಮಂಡ್ಯ ಜಿಲ್ಲಾಧಿಕಾರಿಗಳು ಈ ವಿಷಯವನ್ನು ಮುಜರಾಯಿ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇದು ನಮ್ಮ ರಿಯಾಲಿಟಿ ಚೆಕ್ ನಲ್ಲೂ ಕಂಡು ಬಂದಿದೆ.
ಮುಜರಾಯಿ ಅಧಿಕೃತ ಸೇವಾರ್ಥ ದರ ಸಂಗ್ರಹ ಪೂರ್ಣ ಜಾರಿಯಾಗಿಲ್ಲ ಯಾಕೆ? :
“2015 ರಿಂದಲೇ ವಿವಿಧ ಸೇವಾರ್ಥ ದರಗಳನ್ನು ನಿಗದಿಪಡಿಸಿದ್ದರೂ ಹಿಂದಿನ ಖಾಸಗಿ ಟ್ರಸ್ಟ್ ಅಧ್ಯಕ್ಷರು ಮತ್ತು ಸ್ಥಳೀಯ ಸ್ವಹಿತಾಸಕ್ತಿ ಹೊಂದಿರುವ ಕೆಲವು ಗ್ರಾಮಸ್ಥರು, ಆ ದರದಲ್ಲಿ ಮುಜಾರಾಯಿ ಇಲಾಖೆಯವರು ಸೇವಾರ್ಥ ದರ ಜಾರಿ ಮಾಡಲು ಅವಕಾಶ ನೀಡಲಿಲ್ಲ. ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅವಕಾಶ ನೀಡಲಿಲ್ಲ. ದೇವಸ್ಥಾನದ ಆಸ್ತಿಗಳನ್ನು ಖಾಸಗಿ ಟ್ರಸ್ಟ್ ಅಧ್ಯಕ್ಷರು ದುರುಪಯೋಗಪಡಿಸಿಕೊಂಡಿದ್ದರು” ಎಂದು ಜಿಲ್ಲಾಧಿಕಾರಿಗಳ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆ ಪತ್ರದ ದಾಖಲೆ ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ದೇವಿಯ ದರ್ಶನಕ್ಕೆ ಉಚಿತ ಪ್ರವೇಶ. ಆದರೂ ಕಾಯಿ ಒಡೆಯೋದು, ದೇವರ ಕುಂಕಮ, ಹೂವ ನೀಡಲು ಹಣ ಕೊಡದೇ ಕೆಲಸ ಆಗಲ್ಲ. ಕೇವಲ ಭಾನುವಾರ ಒಂದೇ ದಿನ ಭಕ್ತರಿಂದ ತಡೆ ಒಡೆಯುವುದು, ಕಟ್ಟೆ ಒಡೆಯುವುದರಿಂದ 5 ರಿಂದ 10 ಲಕ್ಷ ರೂ. ಸಂಗ್ರಹವಾದರೆ, ಅಮವಾಸ್ಯೆ ಒಂದೇ ದಿನ 10 ರಿಂದ 15 ಲಕ್ಷ ರೂ. ಹಣ ಸಂಗ್ರಹವಾಗುತ್ತೆ ಅಂದರೆ ಯಾವ ಪರಿ ಇಲ್ಲಿ ಹಣ ಭಕ್ತರಿಂದ ಸುಲಿಗೆ ಮಾಡ್ತಿದ್ದಾರೆ ಎಂಬುದನ್ನ ಲೆಕ್ಕಹಾಕಬಹುದು. ಅಲ್ಲಿ ದೇವಸ್ಥಾನದ ಆವರಣದ ಒಳಗೆ ಹಾಗೂ ಹೊರಗೆ ಸಾಕಷ್ಟು ಅಂಗಡಿಗಳು ದೇವರ ಪೂಜಾ ಸಾಮಾನು ಅಂಗಡಿಗಳು, ಬೀದಿ ವ್ಯಾಪಾರಿಗಳು ಮುಜರಾಯಿ ಇಲಾಖೆಗೆ ಯಾವುದೇ ಶುಲ್ಕವಿಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಇಲಾಖೆಗೆ ಬರುವ ಆದಾಯ ಬರುತ್ತಿಲ್ಲ.
2013ರಲ್ಲೇ ಉಕ್ಕಡದ ಅಹಲ್ಯ ದೇವಸ್ಥಾನವು ಮುಜರಾಯಿ ಇಲಾಖೆ ಸುಪರ್ದಿಗೆ ಬಂದಿದ್ದರೂ, ಶೇ.100 ದೇವಸ್ಥಾನದ ಆಡಳಿತ ವ್ಯವಹಾರ ಇಲಾಖೆಗೆ ಕೈಗೆ ಬಂದಿಲ್ಲ. ಇಲ್ಲಿನ ದೇವಸ್ಥಾನದಲ್ಲಿ ಎಷ್ಟು ಜನ ಖಾಸಗಿ ಅರ್ಚಕರಿದ್ದಾರೆ? ಈ ಬಗ್ಗೆ ಕೇಳಿದ್ರು ಅವರ ಪಟ್ಟಿಯನ್ನು ಇಲಾಖೆಗೆ ಕೊಡ್ತಿಲ್ಲ. ಈಗ 77 ಜನ ನಾಯಕ ಜನಾಂಗದ ಅರ್ಚಕರಿದ್ದಾರೆ. ಇವರ ವಿವರವಾದ ಪಟ್ಟಿಯನ್ನು ಇಲಾಖೆಗೆ ಲಭ್ಯವಾದರೆ ಅವರಿಗೆ ನಿಗದಿತ ಗೌರವಧನ ನಿಗದಿ ಮಾಡಲು ಇಲಾಖೆಗೆ ಅನುಕೂಲವಾಗುತ್ತದೆ. ಉಕ್ಕಡ ಮಾರಮ್ಮ ದೇವಸ್ಥಾನ ಪುರಾತನ ಕಾಲದ್ದು. ಈ ನಾಯಕ ಜನಾಂಗದ 4-5 ತಲೆಮಾರುಗಳ ಹಿಂದೆ ತೆವಡಹಳ್ಳಿ ಕೆರೆಯಲ್ಲಿ ಮೀನು ಹಿಡಿಯುವಾಗ ಆ ಅಹಲ್ಯ ದೇವಿ ಮೂರ್ತಿ ಸಿಕ್ಕಿದ್ದು ಎಂದು ಮುಜರಾಯಿ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.


ದೇವಸ್ಥಾನ ಸಾರ್ವಜನಿಕ ಅಧಿಸೂಚಿತ ಸಂಸ್ಥೆಯಾಗುವುದು ಯಾವಾಗ?:
ಅರತಿ ಉಕ್ಕಡ ಗ್ರಾಮದ ಶ್ರೀ ಅಹಲ್ಯಾದೇವಿ ದೇವಸ್ಥಾನವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ-1997ರ ಸೆಕ್ಷನ್-42 ಮತ್ತು 43ರನ್ವಯ 16-02-2013ರಂದು ಘೋಷಿತ ಸಂಸ್ಥೆಯೆಂದು ಘೋಷಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಈ ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆದ ನಂತರ ಕಲಂ-45ರನ್ವಯ ದೇವಸ್ಥಾನದ ವ್ಯವಸ್ಥಾಪನೆಗಾಗಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಕ ಮಾಡಬೇಕಾಗಿದ್ದು, ಪ್ರಸ್ತುತ ಆಡಳಿತ ನಿರ್ವಹಣೆಯ ದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನಿಯೋಜಿಸಲಾಗಿದೆ.
ಖಾಸಗಿ ದೇವಸ್ಥಾನದಲ್ಲಿ ಟ್ರಸ್ಟ್ ನವರು ಅಕ್ರಮ ಎಸಗಿ ಸರ್ಕಾರದ ಪಾಲಾಗಿತ್ತು :

ಈ ದೇವಸ್ಥಾನವನ್ನು ಇಲಾಖೆ ವಶಕ್ಕೆ ಪಡೆಯುವ ಮೊದಲು ಖಾಸಗಿ ದೇವಸ್ಥಾನವಾಗಿದ್ದು, ಟ್ರಸ್ಟ್ ಹೆಸರಿನಲ್ಲಿ ಸಾರ್ವಜನಿಕರ ಹಣ ದುರುಪಯೋಗವಾಗಿದ್ದು ತನಿಖೆಯಿಂದ ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ 26-09-2012ರಂದು ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಗಳಲ್ಲಿ ಚರ್ಚಿಸಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ (1997) ಕಲಂ 42 ಮತ್ತು 43ರ ಅನ್ವಯ ಘೋಷಿತ ಸಂಸ್ಥೆಯೆಂದು ಘೋಷಿಸಲು ತೀರ್ಮಾನವಾಗಿತ್ತು. ಅದರಂತೆ ಕಂದಾಯ ಇಲಾಖೆ 18-02-2013ರಂದು ಅಹಲ್ಯಾ ದೇವಿ ದೇವಸ್ಥಾನವನ್ನು ಘೋಷಿತ ಸಂಸ್ಥೆಯೆಂದು ಘೋಷಿಸಿ ಆದೇಶಿಸಿತ್ತು. ಎಂದು ಮುಜಾರಾಯಿ ಇಲಾಖೆ ಮೂಲಗಳು ಹಾಗೂ ಭಕ್ತರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಈ ದೇವಸ್ಥಾನವನ್ನು ಶ್ರೀದೇವಾಲಯವನ್ನು ಸಾರ್ವಜನಿಕ ಸಂಸ್ಥೆಯೆಂದು ಪರಿಗಣಿಸುವುದು ಅಗತ್ಯವಾಗಿರುವುದರಿಂದ ಆಡಳಿತಾಧಿಕಾರಿಗಳು ಕೋರಿರುವಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ-1997ರ ಸೆಕ್ಸನ್-48ರನ್ವಯ ಕ್ರಮವಹಿಸಿ ಶ್ರೀ ಅಹಲ್ಯಾದೇವಿ ದೇವಾಲಯವನ್ನು ಸರ್ಕಾರದ ಅಧಿಸೂಚಿತ ಸಂಸ್ಥೆಗಳ ಪಟ್ಟಿಗೆ ಸೇರಿಸುವ ಸಂಬಂಧ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಕೋರಿದೆ” ಎಂದು ಮಂಡ್ಯ ಜಿಲ್ಲಾಧಿಕಾರಿಗಳು ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಅಕ್ರಮ, ಅನಾಚಾರ, ಮುಜರಾಯಿ ಇಲಾಖೆಗೆ ಆಗುತ್ತಿರುವ ನಷ್ಟದ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿಗಳು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ 09-01-2020 ಹಾಗೂ 06-11-2023ರಂದು ಬರೆದ ಪತ್ರದಲ್ಲಿ ಸ್ಪಷ್ಟವಾಗಿತಿಳಿಸಿದ್ದಾರೆ. ಆದರೆ ಈ ಪ್ರಸ್ತಾವನೆಗೆ ಪತ್ರ ಬರೆದರೂ ಈತನಕ ಮುಜರಾಯಿ ಇಲಾಖೆಯಾಗಲೀ, ಆ ಮೂಲಕ ರಾಜ್ಯ ಸರ್ಕಾರವಾಗಲಿ ಶ್ರೀದೇವಾಲಯವನ್ನು ಸಾರ್ವಜನಿಕ ಸಂಸ್ಥೆಯೆಂದು ಅಧಿಸೂಚಿತ ಸಂಸ್ಥೆಯ ಪಟ್ಟಿಗೆ ಸೇರಿಸಲು ಇನ್ನೂ ಸಾಧ್ಯವಾಗದಿರುವುದು ದುರ್ದೈವದ ಸಂಗತಿ.
ಆರತಿ ಉಕ್ಕಡ ದೇವಸ್ಥಾನದ ಐತಿಹ್ಯ :
ಆರತಿ ಉಕ್ಕಡದ ಅಹಲ್ಯಾದೇವಿ ಪ್ರತಿಷ್ಠಾಪನೆ ಬಗ್ಗೆ ಪುರಾಣದಲ್ಲಿ ಸ್ವಾರಸ್ಯಕರ ಸಂಗತಿಯ ಉಲ್ಲೇಖವಿದೆ. ಗೌತಮ ಮುನಿಗಳು ದಕ್ಷಿಣ ಭಾರತ ಪರ್ಯಟನೆ ಕೈಗೊಂಡು ಕಾವೇರಿ ನದಿ ತೀರಕ್ಕೆ ಬಂದು ತಪಸ್ಸು ಆಚರಿಸುವ ವೇಳೆ ಅವರ ಸೇವೆಯಲ್ಲಿ ನಿರತಳಾಗಿದ್ದ ಋಷಿ ಪತ್ನಿ ಅಹಲ್ಯೆ ಅನ್ಯ ಪುರುಷನತ್ತ ಆಸಕ್ತಿ ತೋರುತ್ತಾಳೆ. ತಮ್ಮ ದಿವ್ಯ ದೃಷ್ಟಿಯಿಂದ ಇದನ್ನು ಮನಗಂಡ ಮುನಿವರ್ಯ `ಕೂತಲ್ಲೇ ಕಲ್ಲಾಗು” ಎಂದು ಶಾಪ ಕೊಡುತ್ತಾರೆ. ಹಾಗೆ ಕಲ್ಲಿನ ರೂಪ ಪಡೆದವಳೇ ಆರತಿ ಉಕ್ಕಡದ ಅಹಲ್ಯಾದೇವಿ ಎಂಬ ನಂಬಿಕೆ ಸ್ಥಳೀಯವಾಗಿ ಪ್ರಚಲಿತದಲ್ಲಿದೆ.

ಉಕ್ಕಡದೇವಿ ಮಾಂಸಾಹಾರಪ್ರಿಯೆ :
ಅಹಲ್ಯಾದೇವಿ ದೇವಾಲಯ ಬಾಡೂಟದ ಸಮಾರಾಧನೆಗೆ ಹೆಸರುವಾಸಿ. ಹರಕೆ ಹೊತ್ತವರು ದೇವಾಲಯದ ಆಸುಪಾಸಿನಲ್ಲಿ ಕುರಿ, ಕೋಳಿ, ಮೇಕೆಗಳನ್ನು ಕೊಯ್ದು ಬಾಡೂಟ ತಯಾರಿಸಿ ಬಂಧುಗಳನ್ನೂ ಕರೆದು ಸಹ ಭೋಜನ ಮಾಡುತ್ತಾರೆ. ಮದುವೆ ನಂತರದ ಬೀಗರ ಔತಣ ಕೂಡ ಇಲ್ಲಿ ನಡೆಯುತ್ತವೆ. ಹಾಗಾಗಿ ಅಹಲ್ಯಾ ದೇವಿಯನ್ನು `ನಾನ್ವೆಜ್ (ಮಾಂಸಾಹಾರಿ) ದೇವರು ಎಂದು ಕರೆಯಲಾಗುತ್ತದೆ. ಪ್ರಾಣಿ ಬಲಿ ನಿಷೇಧ ಕಾಯ್ದೆ ಜಾರಿಯಿಂದಾಗಿ ದೇವಾಲಯದ ಮುಂದೆ ನಡೆಯುತ್ತಿದ್ದ ಪ್ರಾಣಿ ವಧೆ ಸ್ಥಗಿತಗೊಂಡಿದೆ. ಆದರೆ ದೇವಾಲಯದ ಆಸುಪಾಸಿನಲ್ಲಿ `ಅಮ್ಮ(ಅಹಲ್ಯಾದೇವಿ) ನಿಗೆ ಬಲಿ ಒಪ್ಪಿಸುವ ಕಾರ್ಯ ನಡೆಯುತ್ತಾ ಬಂದಿದೆ.
ಮುಜರಾಯಿ ಇಲಾಖೆಯ ನೂತನವಾಗಿ ಅಳವಡಿಸಿರುವ ಸೇವೆಗಳು :
ಮುಜರಾಯಿ ಇಲಾಖೆಯು ಇದೇ ವರ್ಷ ಮಾರ್ಚ್ 13ರಂದು ಪರಿಷ್ಕೃತ ಸೇವಾರ್ಥ ದರಗಳನ್ನು ಪ್ರಕಟಿಸಿದೆ. ಅಲ್ಲದೆ ನೂತನವಾಗಿ ಅಹಲ್ಯ ದೇವಸ್ಥಾನದಲ್ಲಿ, ಲಾಡು ಪ್ರಸಾದ ಮಾರಾಟ (100 ಗ್ರಾಂ) 25ರೂ., ಪಂಚಾಮೃತ ಸೇವೆ 1,500 ರೂ., ವಿಶೇಷ ಪ್ರವೇಶ 100 ರೂ., ನೇರ ದರ್ಶನ 500 ರೂ. ( 1 ಲಾಡು, 1 ತೀರ್ಥ ಬಾಟಲು ಹಾಗೂ ದೇವರ ಭಾವಚಿತ್ರ), ವಾಹನ ಪೂಜೆ 50ರೂ., ಚಂಡಿಕಾಹೋಮ 40,000 ರೂ., ದುರ್ಗಾಹೋಮ 30,000 ರೂ., ಸೇವೆಗಳನ್ನು ಅಳವಡಿಸಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೀಗೆ ಹೇಳುತ್ತಾರೆ :

“ಅರತಿ ಉಕ್ಕಡ ಗ್ರಾಮದ ಶ್ರೀ ಅಹಲ್ಯಾದೇವಿ ದೇವಸ್ಥಾನವನ್ನು ಘೋಷಿತ ಸಂಸ್ಥೆಯೆಂದು ಘೋಷಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಶ್ರೀದೇವಾಲಯವನ್ನು ಸಾರ್ವಜನಿಕ ಸಂಸ್ಥೆಯೆಂದು ಅಧಿಸೂಚಿತ ಸಂಸ್ಥೆಯ ಪಟ್ಟಿಗೆ ಸೇರಿಸಲು ಮಂಡ್ಯಾ ಜಿಲ್ಲಾಧಿಕಾರಿಗಳು ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಜರಾಯಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆ ದೇವಸ್ಥಾನದಲ್ಲಿ ಭಕ್ತರಿಂದ ವಿವಿಧ ಸೇವೆಗಳಿಗೆ ಹಣ ಸಂಗ್ರಹಿಸುವಲ್ಲಿ ಖಾಸಗಿ ಟ್ರಸ್ಟ್ ಹಸ್ತಕ್ಷೇಪದ ಬಗ್ಗೆ ನಿಮ್ಮ ಮೂಲಕ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಮುಜರಾಯಿ ಆಯುಕ್ತರೊಂದಿಗೆ ಸಮಲೋಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”
- ರಾಮಲಿಂಗಾರೆಡ್ಡಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು
ದೇವಸ್ಥಾನದ ಆಡಳಿತಾಧಿಕಾರಿಗಳು ಹೇಳುವುದೇನು?:

“ರಾಜ್ಯದ ಉಚ್ಛ ನ್ಯಾಯಾಲಯ ಆದೇಶದಂತೆ 2013ರಲ್ಲಿ ಉಕ್ಕಡದ ಅಹಲ್ಯದೇವಿ (ಮಾರಮ್ಮ) ದೇವಾಲಯ ಮುಜರಾಯಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ಆದರೆ ಶೇ.100ರಷ್ಟು ವಶಕ್ಕೆ ಪಡೆಯಲಾಗಿಲ್ಲ. ಆ ದೇವಸ್ಥಾನದ ಖಾಸಗಿ ಟ್ರಸ್ಟ್ ಮಾಜಿ ಅಧ್ಯಕ್ಷ ಚಂದ್ರು ಗೂಂಡಾಗಳನ್ನು ಇಟ್ಟುಕೊಂಡು ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ನಾನು ಸ್ಥಳೀಯನಾಗಿದ್ದರಿಂದ ಅವರ ದರ್ಪ ನಡೆಯುತ್ತಿಲ್ಲ. ಶೇ.100ರಷ್ಟು ಮುಜರಾಯಿ ವಶಕ್ಕೆ ಪಡೆಯಲು ಕ್ರಮವಹಿಸಲಾಗುತ್ತಿದೆ.
– ಸಿ.ಜಿ.ಕೃಷ್ಣ, ಆಡಳಿತಾಧಿಕಾರಿಗಳು, ಅಹಲ್ಯ ದೇವಸ್ಥಾನ, ಆರತಿ ಉಕ್ಕಡ






















