ಬೆಂಗಳೂರು, ಡಿ.5, www.bengaluruwire.com : ನಗರದಲ್ಲಿ ಮುಂಬರುವ 2023ರ ಏರೊ ಇಂಡಿಯಾ ಪ್ರದರ್ಶನದ ಪೂರ್ವಸಿದ್ಧತೆ ಕಾರ್ಯವು ಸದ್ದಿಲ್ಲದೆ ಆರಂಭವಾಗಿದೆ. ಸೋಮವಾರ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಏರ್ ಶೋ ಪ್ರದರ್ಶನ ಕುರಿತಂತೆ ಚರ್ಚೆ ನಡೆಸಿದರು.
ಅನುರಾಗ್ ಬಾಜಪೇಯ್, ಜಂಟಿ ಕಾರ್ಯದರ್ಶಿ (ಡಿಐಪಿ) ಮತ್ತು ರಕ್ಷಣಾ ಪ್ರದರ್ಶನ ಸಂಸ್ಥೆ ಸಿಇಒ ಸಿ.ಡಿ. ಅಚಲ್ ಮಲ್ಹೋತ್ರಾ, ಹಿಂದೂಸ್ಥಾನ್ ಏರೊನಾಟಿಕ್ಸ್ ಲಿ. ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸಿ.ಬಿ ಅನಂತಕೃಷ್ಣನ್
ರಕ್ಷಣಾ ಸಚಿವಾಲಯದ ತಂಡವು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮೂಲಭೂತ ಸೌಕರ್ಯ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ಭೇಟಿ ಮಾಡಿದರು.
ಏರೋ ಇಂಡಿಯಾ ದ 14ನೇ ಆವೃತಿಗೆ ಬೆಂಗಳೂರನ್ನು ಮತ್ತೊಮ್ಮೆ ಸ್ಥಳವಾಗಿ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಮಂತ್ರಿ ಮತ್ತು ರಕ್ಷಣಾ ಸಚಿವಾಲಯಕ್ಕೆ ಮುಖ್ಯಮಂತ್ರಿ ಅವರು ಧನ್ಯವಾದ ಅರ್ಪಿಸಿದರು ಮತ್ತು ಈ ಆವೃತ್ತಿಯನ್ನು ಪ್ರಾರಂಭದಿಂದಲೂ ಅತಿ ದೊಡ್ಡ ವಾಯುಯಾನ ಪ್ರದರ್ಶನವನ್ನಾಗಿಸಲು ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದರು.
ರಕ್ಷಣಾ ಉತ್ಪಾದನಾ ಇಲಾಖೆಯು ಏರೋ ಇಂಡಿಯಾದ 14 ನೇ ಆವೃತ್ತಿಯನ್ನು ಬೆಂಗಳೂರಿನ ಯಲಹಂಕದ ಏರ್ ಫೋರ್ಸ್ ಸ್ಟೇಷನ್ನಲ್ಲಿ ಫೆಬ್ರವರಿ 13-17, 2023 ರವರೆಗೆ ನಡೆಸಲಿದೆ. 1996 ರಿಂದ ಬೆಂಗಳೂರಿನಲ್ಲೇ ಆಯೋಜಿಸಲಾದ 13 ಯಶಸ್ವಿ ಆವೃತ್ತಿಗಳೊಂದಿಗೆ ಏರೋ ಇಂಡಿಯಾ ‘ಪ್ರಧಾನ ಏರೋಸ್ಪೇಸ್ ಪ್ರದರ್ಶನ’ ಎಂದು ಜಾಗತಿಕವಾಗಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
ನಂತರ ಈ ತಂಡವು ಯಲಂಹಕ ವಾಯುನೆಲೆಯ ಎಒಸಿ ಮನೋಜ್ ಕುಮಾರ್ ಯಾದವ್ ಅವರನ್ನು ಭೇಟಿ ಮಾಡಿದರು ಮತ್ತು ಏರೋ ಇಂಡಿಯಾ 2023 ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು. ರಕ್ಷಣಾ ಸಚಿವಾಲಯದ ತಂಡವು ಯಲಹಂಕದಲ್ಲಿನ ಏರ್ ಫೋರ್ಸ್ ಸ್ಟೇಷನಲ್ಲಿ ಸ್ಥಳ ಪರಿಶೀಲನೆ ಕೈಗೊಂಡಿತು. ಏರೋಸ್ಪೇಸ್ ಮತ್ತು ರಕ್ಷಣೆಯಲ್ಲಿ ‘ಆತ್ಮನಿರ್ಭರ’ ಸಾಧಿಸುವ ಭಾರತದ ಸಂಕಲ್ಪವನ್ನು ಪ್ರದರ್ಶಿಸುವ ಕಾರ್ಯಕ್ರಮವಾದ ‘ಏರೊ ಇಂಡಿಯಾ’ ಗೆ ಬೇಕಾದ ಸಕಲ ಯೋಜನೆಗಳನ್ನು ವೇಗಗತಿಯಲ್ಲಿ ಕಾರ್ಯಗತಗೊಳಿಸುವಿಕೆಯ ಕುರಿತು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಚರ್ಚಿಸಿದರು.