ಮಂಡ್ಯ/ಬೆಂಗಳೂರು, ಜೂ.14 www.bengaluruWire.com: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ‘ಬಿಡದಿ ಟೌನ್ಶಿಪ್’ ಯೋಜನೆಯು ಇದೀಗ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು “ರಿಯಲ್ ಎಸ್ಟೇಟ್ ದೊರೆ” ಎಂದು ಜರಿದಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರವು ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈಜೋಡಿಸಿ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
₹1400 ಕೋಟಿ ಆಸ್ತಿ ಗಳಿಕೆ ಬಗ್ಗೆ ಸಿಎಂ ಪಾಠ ಮಾಡಲಿ:
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ಆಸ್ತಿ ಗಳಿಕೆಯ ಬಗ್ಗೆ ತೀಕ್ಷ್ಣ ವಾಗ್ದಾಳಿ ನಡೆಸಿದರು. “1999ರಲ್ಲಿ ಕೇವಲ 3 ಎಕರೆ ಪಿತ್ರಾರ್ಜಿತ ಆಸ್ತಿ ಹೊಂದಿದ್ದ ಮುಖ್ಯಮಂತ್ರಿಗಳ ಆಸ್ತಿ 2018ರ ವೇಳೆಗೆ ₹1400 ಕೋಟಿ ಹೇಗಾಯಿತು? ಇಷ್ಟು ವೇಗವಾಗಿ ಶ್ರೀಮಂತರಾಗುವುದು ಹೇಗೆ ಎಂಬುದರ ಬಗ್ಗೆ ಇಡೀ ರಾಜ್ಯದ ಜನತೆಗೆ ಅವರು ತರಬೇತಿ ಮತ್ತು ಮಾರ್ಗದರ್ಶನ ನೀಡಲಿ, ಜನರಿಗೂ ಅನುಕೂಲವಾಗುತ್ತದೆ,” ಎಂದು ಲೇವಡಿ ಮಾಡಿದರು.
ಬಿಡದಿ ಟೌನ್ಶಿಪ್ ಯೋಜನೆಯು ಸಂಪೂರ್ಣವಾಗಿ ಸರ್ಕಾರದ ರಿಯಲ್ ಎಸ್ಟೇಟ್ ಯೋಜನೆಯಾಗಿದೆ. ರೈತರು ತಮ್ಮ ಭೂಮಿಯನ್ನು ನೀಡಲು ಸಿದ್ಧರಿಲ್ಲದಿದ್ದರೂ, ಪೊಲೀಸರು ಮತ್ತು ರೌಡಿಗಳನ್ನು ಛೂಬಿಟ್ಟು ಬೆದರಿಸಿ ಜಾಗ ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಫಲವತ್ತಾದ ಭೂಮಿಯಲ್ಲಿ ಟೌನ್ಶಿಪ್ ಏಕೆ?:
ಈ ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ತಿರುಗೇಟು ನೀಡಿದ ಹೆಚ್.ಡಿ.ಕೆ, “ಗುಜರಾತ್ನಲ್ಲಿ ಬೃಹತ್ ಕೈಗಾರಿಕೆಗಳು ಮತ್ತು ಟೌನ್ಶಿಪ್ಗಳು ನಿರ್ಮಾಣವಾಗಿರುವುದು ನಿಜ. ಆದರೆ, ಅಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಿತ್ತುಕೊಂಡಿಲ್ಲ. ಬದಲಾಗಿ, ನೀರಾವರಿಗೆ ಯೋಗ್ಯವಲ್ಲದ ಒಣಭೂಮಿಯಲ್ಲಿ ಅಂತಹ ಯೋಜನೆಗಳನ್ನು ಮಾಡಲಾಗಿದೆ,” ಎಂದು ಸ್ಪಷ್ಟಪಡಿಸಿದರು.
”ಬಿಡದಿ ಬಳಿ ಉತ್ತಮ ನೀರಾವರಿ ಸೌಲಭ್ಯವಿದೆ, ಅತ್ಯಂತ ಫಲವತ್ತಾದ ಭೂಮಿ ಇದೆ. ಇಲ್ಲಿನ ರೈತರು ಪ್ರತಿ ತಿಂಗಳು 6 ಲಕ್ಷ ಲೀಟರ್ ಹಾಲನ್ನು ಬೆಂಗಳೂರು ಡೇರಿಗೆ ಪೂರೈಸುತ್ತಾರೆ. ಇಂತಹ ಕೃಷಿ ಭೂಮಿಯನ್ನು ನಾಶಪಡಿಸಿ ಟೌನ್ಶಿಪ್ ಮಾಡುವುದರಿಂದ ಏನು ಸಾಧಿಸಿದಂತಾಗುತ್ತದೆ? ರಾಜ್ಯದಲ್ಲಿ ಬೇರೆ ಕಡೆ ಸಾಕಷ್ಟು ಒಣಭೂಮಿ ಇದೆ, ಅಲ್ಲಿ ಟೌನ್ಶಿಪ್ ಮಾಡಲಿ,” ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಬಿಎಂಐಸಿಎ (BMIC) ಇತಿಹಾಸ ನೆನಪಿಸಿದ ಸಚಿವರು:
ಹಿಂದೆ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು-ಮೈಸೂರು ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಅವರು ಪ್ರಧಾನಿಯಾಗಿ ದೆಹಲಿಗೆ ಹೋದ ನಂತರ ಯೋಜನೆಯ ಸ್ವರೂಪವೇ ಬದಲಾಯಿತು. ಬಿಎಂಐಸಿಎ (BMICA) ಪ್ರಾಧಿಕಾರ ರಚನೆಯಾಗಿ, ಅದರ ಅಧ್ಯಕ್ಷರಾಗಿದ್ದ ಈಗಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಏನೆಲ್ಲಾ ನಡೆಯಿತು, ರಸ್ತೆ ಮತ್ತು ಟೌನ್ಶಿಪ್ ಹೆಸರಿನಲ್ಲಿ 1.75 ಲಕ್ಷ ಎಕರೆ ರೈತರ ಭೂಮಿ ಸ್ವಾಧೀನದ ನೋಟಿಫಿಕೇಶನ್ ಹೊರಡಿಸಿ ಭೂಮಿ ಲೂಟಿ ಮಾಡಿದ್ದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೆಚ್.ಡಿ.ಕೆ ನೆನಪಿಸಿದರು.
ರೈತರ ಹೆಸರಲ್ಲಿ ₹12,000 ಕೋಟಿ ಸಾಲ:
ಟೌನ್ಶಿಪ್ ನಿರ್ಮಾಣಕ್ಕಾಗಿ ರೈತರ ಜಾಗವನ್ನು ವಶಪಡಿಸಿಕೊಳ್ಳುವುದಾಗಿ ಹೇಳಿ ‘ಹುಡ್ಕೋ’ (HUDCO) ಬ್ಯಾಂಕ್ನಿಂದ ₹12,000 ಕೋಟಿ ಸಾಲ ಪಡೆಯಲು ಸರ್ಕಾರ ಮುಂದಾಗಿದೆ. ಆದರೆ, ಈವರೆಗೆ ರೈತರಿಗೆ ಒಂದು ರೂಪಾಯಿ ಕೂಡ ತಲುಪಿಲ್ಲ. ಪಿಪಿಪಿ (PPP) ಮಾದರಿಯಲ್ಲಿ ಜಾರಿಯಾಗುತ್ತಿರುವ ಈ ಯೋಜನೆಯಲ್ಲಿ ಸರ್ಕಾರವು ಕೇವಲ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ರಿಯಲ್ ಎಸ್ಟೇಟ್ ಕುಳಗಳಿಗೆ ಜಾಗ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ದೂರಿದರು.
ರಾಹುಲ್ ಗಾಂಧಿಗೆ ವಿಜಯೇಂದ್ರ ಮುಕ್ತ ಪತ್ರ:
ಇದೇ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುತ್ತಿರುವ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ತಡೆಯುವಂತೆ ಆಗ್ರಹಿಸಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಅವರು ಮುಕ್ತ ಪತ್ರ ಬರೆದಿದ್ದಾರೆ.
”ಬಿಡದಿ ಬಳಿಯ ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಕಬಳಿಸುವ ಹುನ್ನಾರದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕೈಗೆತ್ತಿಕೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕೂಡಲೇ ಮಧ್ಯಪ್ರವೇಶಿಸಿ, ರಾಜ್ಯ ಸರ್ಕಾರಕ್ಕೆ ನಿಲ್ಲಿಸಲು ಸೂಚಿಸುವಂತೆ ಕೋರಿ ರಾಹುಲ್ ಗಾಂಧಿ ಅವರಿಗೆ ಮುಕ್ತ ಪತ್ರ ಬರೆದು ಒತ್ತಾಯಿಸಿದ್ದೇನೆ. ತಾವು ಈ ಕೂಡಲೇ ಮಧ್ಯಪ್ರವೇಶಿಸಿ ಕಣ್ಣೀರು ಹಾಕುತ್ತಿರುವ ರೈತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು,” ಎಂದು ವಿಜಯೇಂದ್ರ ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಆಗ್ರಹಿಸಿದ್ದಾರೆ.


















