ಬೆಂಗಳೂರು, ಫೆ.2 www.bengaluruwire.com : ರಾಜಧಾನಿ ಬೆಂಗಳೂರಿನ ಮತ್ತಷ್ಟು ರಸ್ತೆಗಳನ್ನು ಕಾಂಕ್ರಿಟ್ ಮಯ ಮಾಡಲು ಬಿಬಿಎಂಪಿ ಹೊರಟಿದೆ. ನಗರದ ಆಸ್ತಿ ತೆರಿಗೆದಾರರ ಹಣದಲ್ಲಿ ಅತಿ ವೆಚ್ಚದಾಯಕವಾದ ಸುಮಾರು 1,200 ಕೋಟಿ ರೂ. ಮೊತ್ತದ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದಿಂದ ಆತುರಾತುರವಾಗಿ ಅನುಮೋದನೆ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬ್ರ್ಯಾಂಡ್ ಬೆಂಗಳೂರು ಯೋಜನೆ ಹಿನ್ನಲೆಯಲ್ಲಿ ನಗರದ ಜನತೆಗೆ ಸುಗಮ ವಾಹನ ಸಂಚಾರ ಹಾಗೂ ಉತ್ತಮ ಪಾದಚಾರಿ ಮಾರ್ಗದ ಹೆಸರಿನಲ್ಲಿ 2023-24, 2024-25 ಹಾಗೂ 2025-26ನೇ ಇಸವಿಯಲ್ಲಿ ತಲಾ 400 ಕೋಟಿ ರೂ.ಗಳಂತೆ ಹೆಚ್ಚುವರಿ ನಿರೀಕ್ಷಿಸಿದ ಆಸ್ತಿ ತೆರಿಗೆಯನ್ನು ಆಧಾರವಾಗಿಟ್ಟುಕೊಂಡು ಪಾಲಿಕೆ ಸಂಪನ್ಮೂಲದಲ್ಲಿಯೇ ಈ ಯೋಜನೆಯನ್ನು ಕಾರ್ಯಗತ ಮಾಡಲು ರಾಜ್ಯ ಸರ್ಕಾರ ಜ.12ರಂದು ಒಪ್ಪಿಗೆ ನೀಡಿತ್ತು. ಅದಕ್ಕೆ ಫೆ.1ರಂದು ನಡೆದ ಸಚಿವ ಸಂಪುಟ ಅನುಮೋದನೆಯ ಮುದ್ರೆಯು ಬಿದ್ದಂತಾಗಿದೆ.
900 ಕೋಟಿ ರೂ. ಹಣವನ್ನು ನಗರದ 70 ರಸ್ತೆಗಳಲ್ಲಿ ವೈಟ್ ಟಾಪಿಂಗ್ ನಿರ್ಮಾಣಕ್ಕೆ, 91.50 ಕೋಟಿ ರೂ., ನಾಮಕಾವಸ್ತೆಗೆ ಮಹದೇವಪುರ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ತಲಾ 6 ರಸ್ತೆಗಳಂತೆ ಒಟ್ಟು 12 ರಸ್ತೆಗಳ ಡಾಂಬರೀಕರಣ, ಮಳೆನೀರು ಮೋರಿ ಅಭಿವೃದ್ಧಿ ಹಾಗೂ 200 ಕೋಟಿ ರೂ. ಹಣವನ್ನು ರಾಜಕಾಲುವೆ ರಕ್ಷಣೆ, ಅಭಿವೃದ್ಧಿ ಹಾಗೂ ಬಫರ್ ಜೋನ್ನಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮತ್ತು ಟಾರ್ ಹಾಕಲು ಹಣ ನಿಗದಿಪಡಿಸಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ 800 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿದೆ. ಅದರ ಜೊತೆಗೆ ಪಾಲಿಕೆ ಸ್ವಂತ ಸಂಪನ್ಮೂಲ 1,200 ಕೋಟಿ ಸೇರಿದರೆ ಒಟ್ಟಾರೆ ಬರೋಬ್ಬರಿ 2,000 ಕೋಟಿ ರೂ. ವೆಚ್ಚದಲ್ಲಿ ನಗರದ ರಸ್ತೆಗಳಿಗೆ ಶಾಶ್ವತವಾಗಿ ಕಾಂಕ್ರಿಟ್ ಮಯವಾಗುತ್ತೆ. ಕಾಂಕ್ರೀಟ್ ರಸ್ತೆಯಿಂದಾಗುವ ದುಷ್ಪರಿಣಾಮಗಳಲ್ಲಿ ರಸ್ತೆಯಲ್ಲಿ ನೀರು ಇಂಗದಿರುವುದು ಪ್ರಮುಖ ಸಮಸ್ಯೆಯಾಗಿದೆ. ವೈಟ್ ಟಾಪಿಂಗ್ ರಸ್ತೆಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಅಧ್ಯಯನ ಅಗತ್ಯವಿದೆ.


ದೊಡ್ಡ ಯೋಜನೆಯಲ್ಲಿ ಸಣ್ಣ ಗುತ್ತಿಗೆದಾರರಿಗೆ ಅವಕಾಶವೇ ಇಲ್ಲ :
1200 ಕೋಟಿ ರೂ. ನಷ್ಟು ದೊಡ್ಡ ಮೊತ್ತದ ಯೋಜನೆಯಲ್ಲಿ ಪಾಲಿಕೆಯ ಸಣ್ಣ ಗುತ್ತಿಗೆದಾರರು ಟೆಂಡರ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಯಾಕಂದ್ರೆ ಇಲ್ಲಿ ಪ್ರತಿ ಕಾಮಗಾರಿಗಳ ಪ್ಯಾಕೇಜ್ ಕನಿಷ್ಠ ಮೊತ್ತ 100 ಕೋಟಿ ರೂ.ಗಳಿಗಿಂತ ಕಡಿಮೆಯಿರಬಾರದು ಎಂದು ಸರ್ಕಾರ ಷರತ್ತು ವಿಧಿಸಿದೆ.
ನಗರದಲ್ಲಿ 2023-24ನೇ ಸಾಲಿನ ಪಾಲಿಕೆ ಬಜೆಟ್ ನಲ್ಲಿ ಘೋಷಣೆ ಮಾಡಿದ ಶೇ.30ರಷ್ಟು ಅಂಶಗಳು ಅನುಷ್ಠಾನ ಆಗಿಲ್ಲ ಎನ್ನುತ್ತಿವೆ ಉನ್ನತ ಮೂಲಗಳು. ಯೋಜನೆ ಗೆ ಟೆಂಡರ್ ಪಡೆಯಲು ಹಾಗೂ ಯೋಜನೆ ಅನುಷ್ಠಾನ ಹಾಗೂ ಬಿಲ್ ಪಡೆಯಲು ಅಧಿಕಾರಿ ಮತ್ತು ಜನಪ್ರತಿನಿಧಿಗಳು ಪರ್ಸೆಂಟೇಜ್ ಪಡೆಯುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ನಡುವೆಯೇ ಬೆಂಗಳೂರಿನ ನಗರ ಯೋಜನಾ ತಜ್ಞರು, ಪರಿಸರ ತಜ್ಞರು ರಸ್ತೆಗಳಿಗೆ ಕಾಂಕ್ರಿಟ್ ಹಾಕುವ ವೈಟ್ ಟಾಪಿಂಗ್ ಯೋಜನೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಪ್ರತಿ ಕಿಲೋಮೀಟರ್ಗೆ 75 ಲಕ್ಷದಿಂದ 1 ಕೋಟಿ ರೂಪಾಯಿ ವೆಚ್ಚದ ಡಾಂಬರೀಕರಣಕ್ಕೆ ಹೋಲಿಸಿದರೆ ಪ್ರಸ್ತುತ ಬಿಬಿಎಂಪಿಯು ಒಂದು ಕಿಲೋಮೀಟರ್ ರಸ್ತೆಯ ವೈಟ್-ಟಾಪ್ಗೆ ಸರಾಸರಿಯಾಗಿ 9 ರಿಂದ 10 ಕೋಟಿ ರೂ. ವೆಚ್ಚ ಮಾಡುತ್ತಿದೆ. ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಹಿಂಬಾಗಿಲಿನಿಂದ ಸಾರ್ವಜನಿಕರು ಹಾಗೂ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಮೂಲಸೌಕರ್ಯ ಕಲ್ಪಿಸುವ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಅನವಶ್ಯಕವಾಗಿ ವ್ಯರ್ಥ ಮಾಡಲು ಹೊರಟಿದೆ.
ಆತುರಾತುರವಾಗಿ ಟೆಂಡರ್ ಕರೆದು ಕಾಮಗಾರಿಗೆ ಕ್ರಮ :
ಈ ಯೋಜನೆಗೆ ಆದಷ್ಟು ಶೀಘ್ರದಲ್ಲೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಟೆಂಡರ್ ಕರೆದು, ಆ ಸಂದರ್ಭದಲ್ಲೇ ತಾಂತ್ರಿಕ ಮೌಲ್ಯಮಾಪನ ನಡೆಸಿ, ಒಂದೇ ಬಾರಿಗೆ ಟೆಂಡರ್ ಹಾಗೂ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕೆಂದು ಜ.12ರ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಎಸ್ಕ್ರೂ ಖಾತೆಯಲ್ಲಿಟ್ಟ ಹಣ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ :
ಈ ಯೋಜನೆ ಕಾರ್ಯಾರಂಭ ಮಾಡಿದ ದಿನಾಂಕದಿಂದ ಪಾಲಿಕೆ ಕಂದಾಯ ವಿಭಾಗದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಆಸ್ತಿ ತೆರಿಗೆ ಹಣವನ್ನು ಪ್ರತ್ಯೇಕವಾಗಿ ಈ ಯೋಜನೆಗಾಗಿಯೇ ಎಸ್ಕ್ರೂ ಖಾತೆ ತೆರೆದು ಪ್ರತಿ ತಿಂಗಳು 1/12 ಭಾಗದಷ್ಟು ಹಣವನ್ನು ವರ್ಗಾಯಿಸಬೇಕು. ಯಾವುದೇ ಕಾರಣಕ್ಕೂ ಇದರಲ್ಲಿನ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಹಾಗೊಮ್ಮೆ ಬಳಸಬೇಕಾದ ಪರಿಸ್ಥಿತಿ ಬಂದರೆ ಆರ್ಥಿಕ ಇಲಾಖೆ ಹಾಗೂ ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕೆಂದು ಷರತ್ತಿನಲ್ಲಿ ತಿಳಿಸಲಾಗಿದೆ.
ಯೋಜನೆ ಜಾರಿಯಿಂದ ಆದಾಯ ಕೊರತೆಯಾದರೆ ಪಾಲಿಕೆಯೇ ಜವಾಬ್ದಾರಿ!! :
ಬಿಬಿಎಂಪಿಯು ತನ್ನ ಆದಾಯದಲ್ಲಿ ವಾರ್ಷಿಕ 400 ಕೋಟಿ ರೂ.ಗಳ ಹೆಚ್ಚುವರಿ ಆದಾಯವನ್ನು ನಿರೀಕ್ಷಿಸಿರುವುದರಿಂದ, ಪಾಲಿಕೆಯು ತನ್ನ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಸೋರಿಕೆಯನ್ನು ತಪ್ಪಿಸಲು ಹೆಚ್ಚು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ತೆರಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಲಭ್ಯವಿರುವ ಎಲ್ಲಾ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕು.
ಈ ಯೋಜನೆಯ ಜಾರಿಯಿಂದಾಗಿ ಸಂಬಳ ಮತ್ತು ಇನ್ನಿತರೆ ವೆಚ್ಚಗಳು ಸೇರಿದಂತೆ ಉದ್ಭವಿಸಬಹುದಾದ ಯಾವುದೇ ಅನುದಾನದ ಕೊರತೆ ಎದುರಾದರೆ ಅದಕ್ಕೆ ಬಿಬಿಎಂಪಿಯೇ ಜವಾಬ್ದಾರಿಯಾಗಿರುತ್ತದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಯಾವುದೇ ಬಾಧ್ಯತೆ ಇರುವುದಿಲ್ಲ ಅಂತ ಹೇಳಿ ಸರ್ಕಾರ ಜಾರಿಕೊಂಡಿದೆ.
ಮಳೆ ಬಾರದೆ ರಸ್ತೆಗುಂಡಿ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ :
ವರ್ಷಂಪ್ರತಿ ಸಾವಿರಾರು ಕೋಟಿ ರೂ. ಹಣ ವೆಚ್ಚ ಮಾಡುತ್ತಿದ್ದರೂ ನಗರದ ಮುಖ್ಯ ರಸ್ತೆಗಳು, ಪಾದಚಾರಿ ಮಾರ್ಗ ಹಾಗೂ ಚರಂಡಿಗಳಾಗಲಿ ಸುಸ್ಥಿತಿಯಲ್ಲಿಲ್ಲ. 2023-24ನೇ ಸಾಲಿನ ಮಳೆಗಾಲದಲ್ಲಿ ಮಳೆಯ ಆರ್ಭಟ ಹೆಚ್ಚಿಲ್ಲದ ಕಾರಣ ದೊಡ್ಡ ದುರ್ಘಟನೆಗಳು ಸಂಭವಿಸದೆ, ರಸ್ತೆಗಳಲ್ಲಿ ಸ್ವಲ್ಪ ಮಟ್ಟಿಗೆ ವಾಹನ ಸಂಚರಿಸುವಂತಿದೆ. ಸಾರ್ವತ್ರಿಕ ವಿಧಾನಸಭೆಯ ಕಾರಣಕ್ಕೆ ಹಿಂದಿನ ಸರ್ಕಾರ, ಆಡಳಿತಾಧಿಕಾರಿಗಳ ಆಡಳಿತಾವಧಿಯಲ್ಲಿ ನಗರದ ಪ್ರಮುಖ ರಸ್ತೆಗಳಿಗೆ ಡಾಂಬರ್ ಹಾಕುವ ಶಾಸ್ತ್ರ ಮಾಡಿತ್ತು. ಆದರೂ ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ರಾಜಿಯಾಗಿತ್ತು ಎಂದು ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.
ಪಾಲಿಕೆ ಒಟ್ಟಾರೆ ಸಂಪನ್ಮೂಲ 6 ಸಾವಿರ ಕೋಟಿ ರೂ.ದಾಟಿಲ್ಲ :
ಪಾಲಿಕೆಯ ಎಲ್ಲಾ ಮೂಲಗಳಿಂದ ಲೆಕ್ಕ ಹಾಕಿದರೂ ವರ್ಷಂಪ್ರತಿ ಆರ್ಥಿಕ ಸಂಪನ್ಮೂಲ 6,000 ಕೋಟಿ ರೂ. ಮೀರುವುದಿಲ್ಲ. ಅದರಲ್ಲೂ ಮೂಲಭೂತ ಸೌಕರ್ಯ ಕಲ್ಪಿಸುವ ಈ ಯೋಜನೆಗೆ ಆಸ್ತಿ ತೆರಿಗೆ ಸಂಗ್ರಹದ ಮೇಲೆ ಅವಲಂಬಿತವಾಗಿರೋದರಿಂದ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹ ಸಂಪನ್ಮೂಲವನ್ನು ಇನ್ನಿತರ ಅವಶ್ಯಕ ಕಾರ್ಯಗಳಾದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ನಗರ ನೈರ್ಮಲ್ಯತೆ, ಕುಡಿಯುವ ನೀರು ಹಾಗೂ ಬೀದಿ ದೀಪಗಳಂತಹ ಕೆಲಸಗಳಿಗೆ ಬಳಸುವುದು ತಪ್ಪುತ್ತದೆ. ಇದರಿಂದ ಆರ್ಥಿಕ ಸಂಪನ್ಮೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದೆ ದೇಹೀ ಎನ್ನುವಂತೆ ಪಾಲಿಕೆಯನ್ನು ಈ ಕ್ರಮ, ಪರಾವಲಂಬಿ ಮಾಡುವ ಹುನ್ನಾರವಲ್ಲದೆ ಮತ್ತಿನ್ನೇನಲ್ಲ.




















