ಬೆಂಗಳೂರು, ನ.11 www.bengaluruwire.com : ರಾಜಧಾನಿಯಲ್ಲಿ ಪಟಾಕಿ ಸಿಡಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿ ಸಿಡಿಸಲು ಅವಕಾಶ ಮಾಡಿಕೊಟ್ಟಿದೆ. ಆದರೂ ಈ ಸಂದರ್ಭದಲ್ಲಿ ಪಟಾಕಿ ಅವಘಡ, ಅಪಘಾತಗಳಾದರೆ ಕಣ್ಣಿಗೆ, ಮೈಗೆ ಹಾನಿಯಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲು ನಗರದಲ್ಲಿನ ಹಲವು ಆಸ್ಪತ್ರೆಗಳು ದಿನ 24 ಗಂಟೆಗಳ ಕಾಲ ಸೇವೆ ನೀಡಲು ಸಿದ್ದವಾಗಿವೆ.

ಇತ್ತೀಚೆಗಷ್ಟೇ ಆನೇಕಲ್ ನ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಹಲವರು ಸಾವನ್ನಪ್ಪಿದ್ದರು. ಈ ಹಿನ್ನಲೆಯಲ್ಲಿ ನಗರದ ಆಸ್ಪತ್ರೆಗಳು ದೀಪಾವಳಿ ಸಂದರ್ಭದಲ್ಲಿ ಸಂಭವಿಸುವ ಆಗ್ನಿ ಅನಾಹುತ, ಪಟಾಕಿ ಸಿಡಿತದಿಂದ ಕಣ್ಣಿಗೆ ಆಗುವ ಹಾನಿಯನ್ನು ತಪ್ಪಿಸಲು ವೈದ್ಯರು, ಔಷಧಿ, ನರ್ಸ್ ಗಳು ಸೇರಿದಂತೆ ಅಗತ್ಯ ಉಪಕರಣಗಳೊಂದಿಗೆ ಸರ್ವ ಸನ್ನದ್ಧವಾಗಿದೆ. ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ, ನಾರಾಯಣ ನೇತ್ರಾಲಯ, ಮೋದಿ ಆಸ್ಪತ್ರೆ, ಶಂಕರ, ಡಾ.ಅಗರವಾಲ್ ಆಸ್ಪತ್ರೆ, ನೇತ್ರಧಾಮ, ಮಣಿಪಾಲ್ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳು ಸೇರಿದಂತೆ ವಿವಿಧ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸಜ್ಜಾಗಿವೆ.
ನಗರದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8 ರಿಂದ 10 ಗಂಟೆಯ ತನಕ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ. ಅದರಲ್ಲೂ ಹಸಿರು ಪಟಾಕಿ ಮಾರಾಟ ಮತ್ತು ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಇದರ ಬಗ್ಗೆ ನಿಗಾವಹಿಸಲು ನಗರದಾದ್ಯಂತ ಎಸಿಪಿ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಕಾರ್ಯಾಪಡೆ ರಚಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಕೇವಲ 62 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಟ್ಟಾರೆ 912 ವ್ಯಾಪಾರಿಗಳು ಪಟಾಕಿ ಮಾರಾಟಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 263 ವ್ಯಾಪಾರಿಗಳಿಗೆ ಈಗಾಗಲೇ ಪರವಾನಗಿ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಕ್ಕೆ ತುರ್ತುಚಿಕಿತ್ಸೆ :


ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತ ಅಥವಾ ಅಗ್ನಿ ಅವಘಡದಿಂದ ಸುಟ್ಟಗಾಯಗಳಾದಲ್ಲಿ ಅಥವಾ ವ್ಯಾಪಕವಾಗಿ ಅಗ್ನಿ ಅಪಘಾತವಾದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆ ಮತ್ತು ಸುಟ್ಟಗಾಯದ ವಿಭಾಗವು ಅಗತ್ಯ ಔಷಧಿ ಮತ್ತು ಉಪಕರಣಗಳೊಂದಿಗೆ ಸಿದ್ದವಾಗಿದೆ. ಆಸ್ಪತ್ರೆಯ ಆವರಣದಲ್ಲಿರುವ ಮಹಾಬೋಧಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ 24×7 ಕಾರ್ಯನಿರ್ವಹಿಸಲು ಅಗತ್ಯ ವೈದ್ಯರು, ಶುಶ್ರೂಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತೀವ್ರ ತರಹದ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಪ್ಲಾಸ್ಟಿಕ್ ಸರ್ಜರಿ ವಿಭಾಗ ಹಾಗೂ ಸಿಬ್ಬಂದಿಯು ಕಾರ್ಯನಿರ್ವಹಿಸುತ್ತಿರುತ್ತಾರೆ. ಪಟಾಕಿ ಅವಘಡದಿಂದ ಚರ್ಮ ಮತ್ತಿತರ ತೀವ್ರ ಸುಟ್ಟಗಾಯಗಳಿಂದ ನರಳುತ್ತಿರುವವರಿಗೆ ಚಿಕಿತ್ಸೆ ನೀಡಲು ಕೃತಕ ಉಸಿರಾಟದ ವ್ಯವಸ್ಥೆಯ ಜೊತೆಗೆ ತುರ್ತು ನಿಘಾ ಘಟಕ (ICU)ದ ಸೌಲಭ್ಯವಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ನಿರ್ದೇಶಕ ಮತ್ತು ಮುಖ್ಯಸ್ಥ ಡಾ.ರಮೇಶ್ ಕೃಷ್ಣ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಮಿಂಟೊ ಆಸ್ಪತ್ರೆಯಲ್ಲಿ 35 ಹಾಸಿಗೆ ಸೌಲಭ್ಯ :
ದೀಪಾವಳಿ ಹಬ್ಬದ ಸಯಮದಲ್ಲಿ ಪಟಾಕಿ ಅನಾಹುತದಿಂದ ಕಣ್ಣಿಗೆ ತೊಂದರೆಯಾಗುವ ಮಕ್ಕಳು, ವಯಸ್ಕರಿಗೆ ಚಿಕಿತ್ಸೆ ನೀಡಲು ಮಿಂಟೊ ಆಸ್ಪತ್ರೆ ಅಗತ್ಯವಾದ ಔಷಧಿ ದಾಸ್ತಾನು, ಶಸ್ತ್ರಚಿಕಿತ್ಸೆಗೆ ಅಗತ್ಯ ವೈದ್ಯರು, ಶುಶ್ರೂಷಕರು, ಅಗತ್ಯ ಉಪಕರಣಗಳೊಂದಿಗೆ 35 ಹಾಸಿಗೆಗಳನ್ನು ಪಟಾಕಿ ಗಾಯಗಳಾದವರಿಗೆ ಚಿಕಿತ್ಸೆ ನೀಡಲು ಮೀಸಲಿಟ್ಟಿದೆ. ಇದರಲ್ಲಿ ತಲಾ 10 ಹಾಸಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಹಾಗೂ 15 ಹಾಸಿಗೆಗಳನ್ನು ಮಕ್ಕಳಿಗಾಗಿ ನಿಗದಿಪಡಿಸಲಾಗಿದೆ. ಇದೇ ವೇಳೆ ಹೊರ ರೋಗಿಗಳ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗವನ್ನು ಪಟಾಕಿ ಗಾಯಗಳಾದವರಿಗಾಗಿ ಚಿಕಿತ್ಸೆ ನೀಡಲು ಸಿದ್ದವಾಗಿಟ್ಟುಕೊಳ್ಳಲಾಗಿದೆ ಎಂದು ಡಾ.ರಮೇಶ್ ಕೃಷ್ಣ ವಿವರಿಸಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ವೈದ್ಯರು ನೀಡಿರುವ ಅಗತ್ಯ ಸಲಹೆಗಳು ಹೀಗಿವೆ :
* ನಿಮ್ಮ ಕೈಯಲ್ಲಿ ಪಟಾಕಿಗಳನ್ನು ಹಚ್ಚಬೇಡಿ.
* ವ್ಯಕ್ತಿ ಅಥವಾ ಪ್ರಾಣಿಗಳ ಮೇಲೆ ಎಂದಿಗೂ ಪಟಾಕಿಗಳನ್ನು ಎಸೆಯಬೇಡಿ.
*ಸಿಡಿಯಲು ವಿಫಲವಾಗಿರುವ ಪಟಾಕಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಏಕೆಂದರೆ ಇವುಗಳು ಸ್ಫೋಟಗೊಳ್ಳುವ ಸಾಧ್ಯತೆಯಿರುತ್ತದೆ.
*ಸಿಡಿಯದೇ ಇರುವ ಪಟಾಕಿಗಳನ್ನು ನೀರು ಅಥವಾ ಮರಳಿನಲ್ಲಿ ಹಾಕಬೇಕು. ಮಕ್ಕಳು ಈ ರೀತಿಯ ಪಟಾಕಿಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
* ಬಳಸಿದ ಪಟಾಕಿಗಳನ್ನು ಬಕೆಟ್ ನೀರಿನಲ್ಲಿ ಅಥವಾ ಮರಳಿನ ಬಕೆಟ್ನಲ್ಲಿ ಹಾಕಿ. ಹೀಗಿ ಮಾಡಿದಲ್ಲಿ ನೀವು ನೆಲದ ಮೇಲೆ ಎಸೆಯುವ ಬಳಸಿದ ಪಟಾಕಿಗಳಿಂದ ಜನರು ಅದರ ಮೇಲೆ ಕಾಲಿಡುವುದನ್ನು ತಪ್ಪಿಸಬಹುದು.
* ಪಟಾಕಿ ಸುಡುವುದಕ್ಕೆ ಗಾಜಿನ ಬಾಟೆಲ್ ಗಳನ್ನು ಬಳಸಬೇಡಿ. ಇವು ಒಂದೊಮ್ಮೆ ಸಿಡಿದರೆ, ಗಾಜಿನ ಚೂರುಗಳು ಜನರ ಮುಖಕ್ಕೆ ಹಾರಿ ಕಣ್ಣಿನ ಗಾಯಗಳಿಗೆ ಕಾರಣವಾಗಬಹುದು.
* ತೆರೆದ ಸ್ಥಳಗಳಾದ ಮೈದಾನ, ಖಾಲಿ ಜಾಗಗಳಲ್ಲಷ್ಟೇ ಪಟಾಕಿಯನ್ನು ಹಚ್ಚಿರಿ.
* ಪಟಾಕಿಗಳನ್ನು ಯಾವಾಗಲೂ ದೂರದಿಂದಲೇ ಹಚ್ಚಿ.

* ಮಕ್ಕಳು ಯಾವಾಗಲೂ ಪಾಲಕರ ಉಪಸ್ಥಿತಿಯಲ್ಲಿ ಮಾತ್ರ ಪಟಾಕಿಗಳನ್ನು ಸುಡಲು ಅವಕಾಶವಿರಲಿ.
* ಒಂದು ಬಾರಿಗೆ ಒಂದು ಪಟಾಕಿಯನ್ನು ಹಚ್ಚಿ.
* ಪಟಾಕಿ ಹಚ್ಚುವಾಗ ಯಾವಾಗಲೂ ಹತ್ತಿ ಬಟ್ಟೆಗಳನ್ನು ಮಾತ್ರ ಧರಿಸಿರಿ.
* ಅಗ್ನಿ ಅವಘಡದ ಸಂದರ್ಭದಲ್ಲಿ ಒಂದು ಬಕೆಟ್ ನೀರು ಹತ್ತಿರದಲ್ಲಿ ಇಟ್ಟಿರಿ.
* ಸುಟ್ಟಗಾಯಗಳಾದಾಗ ವೈದ್ಯರು ಶಿಫಾರಸು ಮಾಡದ ಮುಲಾಮುಗಳು ಅಥವಾ ಕ್ರೀಮ್ಗಳನ್ನು ಬಳಸಬೇಡಿ.
* ಗಾಯಗೊಂಡ ಸ್ಥಳವನ್ನು ಸ್ವಚ್ಛ, ಒಣ ಬಟ್ಟೆ ಅಥವಾ ಬ್ಯಾಂಡೇಜ್ನಿಂದ ಮುಚ್ಚಿ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಧಾವಿಸಿ.
* ಪಟಾಕಿ ಸಿಡಿದಾಗ ಅದರ ಕಿಡಿ ಬಿದ್ದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ.
ಆಸ್ಪತ್ರೆ ಸಹಾಯವಾಣಿಗಳ ಸಂಪರ್ಕ ಸಂಖ್ಯೆ ಹೀಗಿದೆ :

- ಮಿಂಟೊ ಆಸ್ಪತ್ರೆ : 9481740137, 08026707176
- ವಿಕ್ಟೋರಿಯಾ ಆಸ್ಪತ್ರೆ : 7498809105, 9740322179, 8197969128, 9994584495.
- ನಾರಾಯಣ ನೇತ್ರಾಲಯ : ರಾಜಾಜಿನಗರ ಬ್ರಾಂಚ್ – 08066121641/1643 ಅಥವಾ 9902546046.
- ಶಂಕರ ಕಣ್ಣಿನ ಆಸ್ಪತ್ರೆ : (ಮಾರತ್ ಹಳ್ಳಿ) 08069038900 ಅಥವಾ 9739270477.
- ನೇತ್ರಧಾಮ : (ಜಯನಗರ) 08026088000 ಅಥವಾ 9448071816.
- ಮಣಿಪಾಲ್ ಆಸ್ಪತ್ರೆ : (ಹಳೇ ವಿಮಾನ ನಿಲ್ದಾಣ ರಸ್ತೆ) 080-22221111
- ಡಾ.ಎಂ.ಸಿ.ಮೋದಿ ಕಣ್ಣಿನ ಆಸ್ಪತ್ರೆ : 08023492233
- ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ : ಬನ್ನೇರುಘಟ್ಟ ಶಾಖೆ- 08048193419, ರಾಜರಾಜೇಶ್ವರಿನಗರ ಶಾಖೆ – 918048193501.
- ಶೇಖರ್ ಕಣ್ಣಿನ ಆಸ್ಪತ್ರೆ : (ಜೆ.ಪಿ.ನಗರ) 09980562020



















