ವಿಶಾಖಪಟ್ಟಣ, ಜೂ.09 www.bengaluruwire.com: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಸ್ಥಾವರದಲ್ಲಿ (RINL – Visakhapatnam Steel Plant) ಇತ್ತೀಚೆಗೆ ಸಂಭವಿಸಿದ ಭೀಕರ ಸ್ಫೋಟದ ಸ್ಥಳಕ್ಕೆ ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಭೇಟಿ ನೀಡಿ, ವಿಸ್ತೃತ ಪರಿಶೀಲನೆ ನಡೆಸಿದರು.
8 ಕಾರ್ಮಿಕರನ್ನು ಬಲಿಪಡೆದ ಈ ದುರಂತದ ಬಗ್ಗೆ ತೀವ್ರ ಕಂಬನಿ ಮಿಡಿದಿರುವ ಸಚಿವರು, ಘಟನೆಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆಗೆ ಆದೇಶಿಸಿದ್ದಾರೆ.
ಸ್ಥಾವರಕ್ಕೆ ಭೇಟಿ ನೀಡಿದ ವೇಳೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ ಸ್ಫೋಟದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಸಚಿವರು, ಮೃತಪಟ್ಟ ಹಾಗೂ ಗಾಯಗೊಂಡ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದರು.
ಸಂತ್ರಸ್ತರಿಗೆ ಘೋಷಣೆಯಾದ ಪರಿಹಾರದ ವಿವರ:

ಮೃತರಿಗೆ ಪರಿಹಾರ: ಮೃತಪಟ್ಟ ಪ್ರತಿ ಕಾರ್ಮಿಕರ ಕುಟುಂಬಕ್ಕೆ ₹25 ಲಕ್ಷ ರೂ. ಆರ್ಥಿಕ ನೆರವು.
ಉದ್ಯೋಗ ಭರವಸೆ: ಮೃತ ಕಾರ್ಮಿಕರ ಪ್ರತಿ ಕುಟುಂಬದ ಓರ್ವ ಅರ್ಹ ಸದಸ್ಯನಿಗೆ ಕಾರ್ಖಾನೆಯಲ್ಲಿಯೇ ಉದ್ಯೋಗ.
ಗಾಯಾಳುಗಳಿಗೆ ನೆರವು: ಗಾಯಗೊಂಡಿರುವ ಕಾರ್ಮಿಕರಿಗೆ ತಲಾ ₹10 ಲಕ್ಷ ರೂ. ಪರಿಹಾರ ಹಾಗೂ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಕಾರ್ಖಾನೆಯೇ ಭರಿಸಲಿದೆ.
ಶಿಕ್ಷಣಕ್ಕೆ ಬೆಂಬಲ: ಮೃತ ಕಾರ್ಮಿಕರ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಕಾರ್ಖಾನೆಯಿಂದ ಸಂಪೂರ್ಣ ನೆರವು.
”ಈ ಭೀಕರ ದುರ್ಘಟನೆ ಬಗ್ಗೆ ನನಗೆ ತೀವ್ರ ಆಘಾತ ಉಂಟಾಗಿದೆ. ನೊಂದ ಕುಟುಂಬಗಳಿಗೆ ನನ್ನ ಪ್ರಗಾಢ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ದುರಂತದ ನಿಖರ ಕಾರಣವನ್ನು ಪತ್ತೆ ಹಚ್ಚಲು ಸ್ವತಂತ್ರ ತನಿಖೆಗೆ ಆದೇಶಿಸಲಾಗಿದೆ” ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಸಂದರ್ಭದಲ್ಲಿ ತಿಳಿಸಿದರು.
ದುರಂತಕ್ಕೆ ಕಾರಣವೇನು? ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಮಾಹಿತಿ
ಕಾರ್ಖಾನೆಗಳ ಮುಖ್ಯ ಇನ್ಸ್ಪೆಕ್ಟರ್ (chief inspector of factories) ನೀಡಿರುವ ಪ್ರಾಥಮಿಕ ತನಿಖಾ ವರದಿಯ ಪ್ರಕಾರ, “ದ್ರವ ಉಕ್ಕಿನಲ್ಲಿ ಸಿಲುಕಿದ್ದ ಅನಿಲಗಳು ಏಕಾಏಕಿ ಬಿಡುಗಡೆಯಾಗಿದ್ದೇ” ಈ ಭೀಕರ ಸ್ಫೋಟಕ್ಕೆ ಪ್ರಮುಖ ಕಾರಣವಾಗಿದೆ.
ಸೋಮವಾರ ಸಂಜೆ 4:15ರ ಸುಮಾರಿಗೆ ಈ ಘಟನೆ ನಡೆದಿದೆ. ಸಂಪೂರ್ಣವಾಗಿ ಉಕ್ಕಿನಿಂದ ತುಂಬಿದ್ದ ಸೌಟನ್ನು (steel ladle) ಎರಕಹೊಯ್ಯಲು (casting) ತಿರುಗಿಸುತ್ತಿದ್ದ ಮತ್ತು ಮಧ್ಯಕ್ಕೆ ತರುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಸ್ಲೈಡ್ ಗೇಟ್ ತೆರೆಯುವ ಮುನ್ನವೇ ಏಕಾಏಕಿ ಸ್ಫೋಟಗೊಂಡ ಪರಿಣಾಮ, ಸೌಟು ವಾಲಿಹೋಗಿ ಕೆಳಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕರಗಿದ ಬಿಸಿ ಉಕ್ಕು ಬಿದ್ದಿದೆ.
ಸ್ಫೋಟದ ತೀವ್ರತೆಗೆ ಮೇಲ್ಭಾಗದಲ್ಲಿದ್ದ ಕ್ರೇನ್ಗೂ ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದಿಂದ ಉಂಟಾದ “ಬೆಂಕಿಯ ಚೆಂಡು” (ball of fire) ಕಾರ್ಖಾನೆಯ ಛಾವಣಿಯವರೆಗೂ ವ್ಯಾಪಿಸಿತ್ತು ಎಂದು ಪ್ರತ್ಯಕ್ಷದರ್ಶಿ ಕಾರ್ಮಿಕರೊಬ್ಬರು ತನಿಖಾಧಿಕಾರಿಗಳಿಗೆ ವಿವರಿಸಿದ್ದಾರೆ.
ಕೇಂದ್ರ ಉಕ್ಕು ಸಚಿವಾಲಯದ ವ್ಯಾಪ್ತಿಗೆ ಬರುವ ಈ ಘಟಕದ ಸುರಕ್ಷತಾ ಇಂಜಿನಿಯರಿಂಗ್ ವಿಭಾಗವು ಪ್ರತಿ ಮೂರು ತಿಂಗಳಿಗೊಮ್ಮೆ ಆಂತರಿಕ ತಪಾಸಣೆ (internal inspections) ನಡೆಸುತ್ತದೆ ಮತ್ತು ಪ್ರತಿ ವರ್ಷ ಬಾಹ್ಯ ಸುರಕ್ಷತಾ ಆಡಿಟ್ (external safety audit) ಕೂಡ ನಡೆಯುತ್ತದೆ ಎಂದು ವಿಶಾಖಪಟ್ಟಣ ಸ್ಟೀಲ್ ಪ್ಲಾಂಟ್ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.


















