ಬೆಂಗಳೂರು/ತಿರುವನಂತಪುರಂ, ಮೇ.14 www.bengaluruwire.com: ನೆರೆರಾಜ್ಯ ಕೇರಳದ ಇಂಧನ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ದಿಢೀರ್ ಮಿತಿ ಹೇರಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.
ಬೃಹತ್ ಪ್ರಮಾಣದಲ್ಲಿ ಇಂಧನ ಖರೀದಿ ಮಾಡುವ ಗ್ರಾಹಕರಿಗೆ ನಿರ್ಬಂಧ ವಿಧಿಸಲಾಗಿದ್ದು, ಒಬ್ಬ ವ್ಯಕ್ತಿಗೆ ಗರಿಷ್ಠ 200 ಲೀಟರ್ ಡೀಸೆಲ್ ಹಾಗೂ 5,000 ರೂಪಾಯಿ ಮೌಲ್ಯದ ಪೆಟ್ರೋಲ್ ಮಾತ್ರ ನೀಡುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಏನಿದು ಹೊಸ ನಿಯಮ?:
ಮಾತೃಭೂಮಿ ಡಾಟ್ ಕಾಮ್ ವರದಿಯ ಪ್ರಕಾರ, ತೈಲ ಕಂಪನಿಗಳು ಸ್ಟಾಕ್ ನಿರ್ವಹಣೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿವೆ. ಈ ಹಿಂದೆ ದೀರ್ಘಾವಧಿಯ ಪೂರೈಕೆ ವ್ಯವಸ್ಥೆ ಇತ್ತು. ಆದರೆ ಈಗ ಕೇವಲ 2-3 ದಿನಗಳಿಗೆ ಸಾಕಾಗುವಷ್ಟು ಮಾತ್ರ ಇಂಧನವನ್ನು ಪಂಪ್ಗಳಿಗೆ ಸರಬರಾಜು ಮಾಡಲಾಗುತ್ತಿದೆ. ತೈಲ ಕಂಪನಿಗಳು ಕ್ರೆಡಿಟ್ ಆಧಾರಿತ ವ್ಯವಸ್ಥೆಯನ್ನು ರದ್ದುಗೊಳಿಸಿ, ಮುಂಗಡ ಪಾವತಿಯನ್ನು ಕಡ್ಡಾಯಗೊಳಿಸಿರುವುದು ಪಂಪ್ ಮಾಲೀಕರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮೇಲೆ ಪರಿಣಾಮ ಬೀರಲಿದೆಯೇ?:
ಕೇರಳದ ಗಡಿಭಾಗಗಳಾದ ಮಂಗಳೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಬೆಳವಣಿಗೆಯ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಕೇರಳದಲ್ಲಿ ಇಂಧನ ಪೂರೈಕೆ ವ್ಯತ್ಯಯವಾದಾಗ ಗಡಿ ಭಾಗದ ಗ್ರಾಹಕರು ಕರ್ನಾಟಕದ ಪಂಪ್ಗಳ ಮೇಲೆ ಅವಲಂಬಿತರಾಗುತ್ತಾರೆ. ಇದರಿಂದ ಕರ್ನಾಟಕದ ಗಡಿ ಜಿಲ್ಲೆಗಳ ಪಂಪ್ಗಳಲ್ಲಿ ಇಂಧನ ಖಾಲಿಯಾಗುವ ಸಾಧ್ಯತೆ ಇರುತ್ತದೆ. ನಮ್ಮ ರಾಜ್ಯದಲ್ಲೂ ಇಂತಹ ಪಡಿತರ ಪದ್ಧತಿ ಜಾರಿಯಾಗಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ.
ಅಭಾವವಿಲ್ಲ, ಆದರೆ ನಿರ್ಬಂಧವೇಕೆ?:
ದೇಶದಲ್ಲಿ ಇಂಧನ ಅಭಾವವಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಆದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದರಿಂದ ತೈಲ ಕಂಪನಿಗಳು ಆರ್ಥಿಕ ಒತ್ತಡ ಎದುರಿಸುತ್ತಿವೆ ಎನ್ನಲಾಗಿದೆ. ದಿನನಿತ್ಯ ಸಾವಿರಾರು ಕೋಟಿ ನಷ್ಟ ಅನುಭವಿಸುತ್ತಿರುವ ಕಂಪನಿಗಳು, ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಪೂರೈಕೆಯಲ್ಲಿ ಶಿಸ್ತು ತರಲು ಇಂತಹ ಮಿತಿಗಳನ್ನು ಹೇರುತ್ತಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಸದ್ಯಕ್ಕೆ ಈ ನಿಯಮ ಸಾಮಾನ್ಯ ವಾಹನ ಸವಾರರಿಗಿಂತ ಹೆಚ್ಚಾಗಿ ಲಾರಿಗಳು, ಬಸ್ಗಳು ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬೃಹತ್ ಪ್ರಮಾಣದಲ್ಲಿ ತೈಲ ಖರೀದಿಸುವವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕರ್ನಾಟಕ ಸರ್ಕಾರ ಅಥವಾ ಇಲ್ಲಿನ ತೈಲ ವಿತರಕರು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಿತಿಗಳನ್ನು ಘೋಷಿಸಿಲ್ಲವಾದರೂ, ನೆರೆರಾಜ್ಯದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.



















