ಬೆಂಗಳೂರು, ಮೇ.14 www.bengaluruwire.com: ರಾಜ್ಯದ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಸಮವಸ್ತ್ರ ವಿವಾದಕ್ಕೆ ಸರ್ಕಾರ ತೆರೆ ಎಳೆದಿದೆ.
2022ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಟ್ಟುನಿಟ್ಟಿನ ಸಮವಸ್ತ್ರ ಸಂಹಿತೆಯ ಆದೇಶವನ್ನು ಹಿಂಪಡೆದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ‘ಮಿತವಾದ ಸಾಂಪ್ರದಾಯಿಕ ಚಿಹ್ನೆಗಳನ್ನು’ ಧರಿಸಲು ಅಧಿಕೃತವಾಗಿ ಅವಕಾಶ ನೀಡಿದೆ.
ಸಂಪ್ರದಾಯಕ್ಕೂ ಉಂಟು ಗೌರವ:
ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರದ ಜೊತೆಗೆ ಪೇಟ, ಜನಿವಾರ, ರುದ್ರಾಕ್ಷಿ ಮತ್ತು ಶಿರವಸ್ತ್ರ (ಹಿಜಾಬ್) ಸೇರಿದಂತೆ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಬಹುದು. ಆದರೆ, ಈ ಚಿಹ್ನೆಗಳು ಸಮವಸ್ತ್ರದ ಮೂಲ ಉದ್ದೇಶಕ್ಕೆ ಧಕ್ಕೆ ತರಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.

ಸಚಿವ ಮಧು ಬಂಗಾರಪ್ಪ ಹೇಳಿಕೆ:
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಮಕ್ಕಳು ಶಾಲೆಗೆ ಬರುವುದು ಶಿಕ್ಷಣಕ್ಕಾಗಿ. ಪ್ರತಿಯೊಬ್ಬರಿಗೂ ತಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಪಾಲಿಸುವ ಹಕ್ಕಿದೆ. ಸಮಾನತೆ ಮತ್ತು ಸಮನ್ವಯತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಯಾವುದೇ ವಿದ್ಯಾರ್ಥಿಗೆ ಧಾರ್ಮಿಕ ಕಾರಣಗಳಿಗಾಗಿ ಶಿಕ್ಷಣ ನಿರಾಕರಿಸಬಾರದು ಎಂಬುದು ನಮ್ಮ ಆಶಯ,” ಎಂದು ತಿಳಿಸಿದರು.
ಪ್ರಮುಖ ಮಾರ್ಗಸೂಚಿಗಳು:
* ಸಾಂಪ್ರದಾಯಿಕ ಚಿಹ್ನೆಗಳು ಸಮಸ್ತ್ರಕ್ಕೆ ಪೂರಕವಾಗಿರಬೇಕು. ವಿದ್ಯಾರ್ಥಿಗಳ ಗುರುತು ಪತ್ತೆ ಹಚ್ಚಲು ಮತ್ತು ಶಿಸ್ತಿಗೆ ಯಾವುದೇ ಅಡ್ಡಿಯಾಗಬಾರದು.
* ಯಾವುದೇ ಸಂಸ್ಥೆಯು ಈ ಚಿಹ್ನೆಗಳ ಕಾರಣಕ್ಕೆ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗಿಡುವಂತಿಲ್ಲ.
* ಪರೀಕ್ಷಾ ಸಮಯದಲ್ಲಿ ರಾಷ್ಟ್ರೀಯ ಅಥವಾ ರಾಜ್ಯ ಮಟ್ಟದ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಇದ್ದಲ್ಲಿ ಅದನ್ನು ಪಾಲಿಸುವುದು ಕಡ್ಡಾಯ.
ಏಪ್ರಿಲ್ 24 ರಂದು ಇತ್ತೀಚೆಗೆ ವಿದ್ಯಾರ್ಥಿಯೊಬ್ಬನ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆಯಿಂದ ರಾಜ್ಯದಾದ್ಯಂತ ಜನರಲ್ಲಿ ಉಂಟಾದ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು, ಬಸವಣ್ಣನವರ ‘ಇವ ನಮ್ಮವ ಇವ ನಮ್ಮವ’ ಎಂಬ ತತ್ವದಡಿ ಈ ಬದಲಾವಣೆ ತರಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಘಟನೆಯು ವಿದ್ಯಾರ್ಥಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಈ ವಿಷಯದ ಕುರಿತು ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಅಂತಹ ಕ್ರಮಗಳಿಗೆ ಸ್ಥಾನವಿಲ್ಲ ಎಂದು ಪುನರುಚ್ಚರಿಸಿದರು. “ಮಕ್ಕಳು ಶಿಕ್ಷಣಕ್ಕಾಗಿ ಮಾತ್ರ ಶಾಲೆಗೆ ಬರುತ್ತಾರೆ, ಮತ್ತು ನಾವು ಅದನ್ನು ತಲುಪಿಸಬೇಕು” ಎಂದು ಅವರು ಹೇಳಿದರು.



















