ಕೊಯಮತ್ತೂರು/ಈರೋಡ್, ಏ.15 www.bengaluruwire.com : ತಮಿಳುನಾಡು ವಿಧಾನಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ನೆರೆರಾಜ್ಯದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಬುಧವಾರ ಕೊಯಮತ್ತೂರು ಮತ್ತು ಈರೋಡ್ನಲ್ಲಿ ನಡೆದ ಜಂಟಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು, ಡಿಎಂಕೆ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಈ ಬಾರಿ ರಾಜ್ಯದಲ್ಲಿ ಮೂರನೇ ಎರಡರಷ್ಟು (2/3) ಸ್ಥಾನಗಳನ್ನು ಗೆಲ್ಲುವ ಮೂಲಕ ಸುಲಭ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ, ಇದಕ್ಕೆ ದಶಕಗಳ ಇತಿಹಾಸವಿದೆ. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಸರ್ಕಾರ ಪ್ರತಿಯೊಂದು ಸಮುದಾಯವನ್ನು ಸಮಾನವಾಗಿ ಕಂಡಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎಂದು ಸರ್ಕಾರದ ಸಾಧನೆಯನ್ನು ಕೊಂಡಾಡಿದರು.

ಯುವಜನತೆಗೆ ಕಿವಿಮಾತು: ಸಿನಿಮಾ ಡೈಲಾಗ್ ಶಾಶ್ವತವಲ್ಲ:

ಇತ್ತೀಚಿನ ದಿನಗಳಲ್ಲಿ ತಮಿಳುನಾಡು ರಾಜಕೀಯದಲ್ಲಿ ನಟರ ಪ್ರಭಾವ ಹೆಚ್ಚುತ್ತಿರುವ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್, ತಮಿಳುನಾಡಿನ ಯುವಕರು ಕೇವಲ ಸಿನಿಮಾ ಡೈಲಾಗ್ಗಳಿಗೆ ಮರುಳಾಗಬಾರದು ಎಂದು ಮನವಿ ಮಾಡಿದರು. ಸಿನಿಮಾ ಡೈಲಾಗ್ಗಳ ಪ್ರಭಾವ ಕೇವಲ ಒಂದೆರಡು ದಿನ ಮಾತ್ರ ಇರುತ್ತದೆ. ಆದರೆ ನಾವು ನೀಡುವ ಅಭಿವೃದ್ಧಿ ಮತ್ತು ಅವಕಾಶಗಳು ನಿಮ್ಮ ಜೀವನಪರ್ಯಂತ ಇರಲಿವೆ. ಹೀಗಾಗಿ ಅಭಿವೃದ್ಧಿ ಪರವಾಗಿರುವ ಸ್ಟಾಲಿನ್ ಸರ್ಕಾರವನ್ನು ಮತ್ತೊಮ್ಮೆ ಬೆಂಬಲಿಸಿ ಎಂದು ಕರೆ ನೀಡಿದರು.
ಮಹಿಳಾ ಮೀಸಲಾತಿ ಬಿಲ್ ಬಗ್ಗೆ ಅಸಮಾಧಾನ:
ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಸ್ಥಾನಗಳ ಹೆಚ್ಚಳದ ಬಿಲ್ ತರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಗಿಮಿಕ್. ವಿಧಾನಸಭಾ ಚುನಾವಣೆಗಳು ಮುಗಿದ ನಂತರ ಈ ಬಗ್ಗೆ ಚರ್ಚಿಸಬಹುದಿತ್ತು. ಯುಪಿಎ ಅವಧಿಯಲ್ಲೇ ಸೋನಿಯಾ ಗಾಂಧಿ ಅವರು ಈ ಬಗ್ಗೆ ಮೊದಲ ಹೆಜ್ಜೆ ಇಟ್ಟಿದ್ದರು. ಈಗ ಪ್ರತಿಯೊಂದು ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದರು.
ಪಳನಿಸ್ವಾಮಿಗೆ ಸೋಲಿನ ಭೀತಿ:
ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರ ಟೀಕೆಗಳಿಗೆ ಉತ್ತರಿಸಿದ ಶಿವಕುಮಾರ್, ಪಳನಿಸ್ವಾಮಿ ಅವರಿಗೆ ಡಿಎಂಕೆ-ಕಾಂಗ್ರೆಸ್ ಮೈತ್ರಿಯ ಅಲೆ ನೋಡಿ ಭಯ ಶುರುವಾಗಿದೆ. ನಮ್ಮ ಮೈತ್ರಿಕೂಟ ಅತ್ಯಂತ ಬಲಿಷ್ಠವಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಆಗಮನದಿಂದ ಮೈತ್ರಿಗೆ ಮತ್ತಷ್ಟು ಆನೆಬಲ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೇಕೆದಾಟು ವಿಚಾರ ಈಗ ನ್ಯಾಯಾಲಯದಲ್ಲಿದ್ದು, ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂರ್ಭದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಅಳಿಯ ಶಬರೀಸನ್, ಸೆಂದಿಲ್ ಬಾಲಾಜಿ, ಕರ್ನಾಟಕ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಪತ್ ರಾಜ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.























