ಮಂಡ್ಯ, ಏ.15 www.bengaluruwire.com: ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ಗುರು ಭೈರವೈಕ್ಯ ಮಂದಿರವನ್ನು ಬುಧವಾರ ಲೋಕಾರ್ಪಣೆಗೊಳಿಸಿದರು.
ಬಾಲಗಂಗಾಧರನಾಥ ಸ್ವಾಮೀಜಿಗಳ ಗದ್ದುಗೆಯ ಈ ಮಂದಿರಕ್ಕೆ ಪೂಜೆ ಸಲ್ಲಿಸಿದ ನಂತರ ಅವರು ಭಕ್ತರನ್ನುದ್ದೇಶಿಸಿ ಮಾತನಾಡಿದರು.
ಸಂಪ್ರದಾಯ ಮತ್ತು ಆಧುನಿಕತೆಯ ಸಂಗಮ:
ಈ ಮಂದಿರವು ದ್ರಾವಿಡ, ಹೊಯ್ಸಳ ಮತ್ತು ಚಾಲುಕ್ಯ ಶೈಲಿಗಳ ಅದ್ಭುತ ಸಮ್ಮಿಶ್ರಣವಾಗಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. “ಭಾರತವು ಸಾವಿರಾರು ವರ್ಷಗಳ ಇತಿಹಾಸವಿರುವ ಜೀವಂತ ನಾಗರಿಕತೆ. ಇಂತಹ ಪುಣ್ಯಕ್ಷೇತ್ರಗಳು ನಮ್ಮ ಸಂಸ್ಕೃತಿಯ ವಾಹಕಗಳಾಗಿವೆ” ಎಂದು ಅವರು ಬಣ್ಣಿಸಿದರು. 71ನೇ ಪೀಠಾಧಿಪತಿಗಳಾದ ಬಾಲಗಂಗಾಧರನಾಥ ಶ್ರೀಗಳ ಸಾಮಾಜಿಕ ಕಾರ್ಯಗಳನ್ನು ಸ್ಮರಿಸಿದ ಅವರು, “ಸಮಾಜ ಸೇವೆಯೇ ಪರಮ ಧರ್ಮ” ಎಂಬ ಶ್ರೀಗಳ ಸಂದೇಶ ಇಂದಿಗೂ ಪ್ರಸ್ತುತ ಎಂದರು.

ನವ ಭಾರತಕ್ಕಾಗಿ ಒಂಬತ್ತು ಸಂಕಲ್ಪಗಳು:
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಜನರಿಗೆ ಒಂಬತ್ತು ಪ್ರಮುಖ ಸಂಕಲ್ಪಗಳನ್ನು ಮಾಡುವಂತೆ ಕರೆ ನೀಡಿದರು:
1. ಜಲ ಸಂರಕ್ಷಣೆ ಮತ್ತು ಹನಿ ನೀರಾವರಿಗೆ ಆದ್ಯತೆ.
2. ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಗಿಡ ನೆಡುವುದು.
3. ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳ ಸ್ವಚ್ಛತೆ.
4. ‘ವೋಕಲ್ ಫಾರ್ ಲೋಕಲ್’ ಮೂಲಕ ಸ್ಥಳೀಯ ಉತ್ಪನ್ನಗಳ ಉತ್ತೇಜನ.
5. ದೇಶೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು.
6. ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಅಳವಡಿಕೆ.
7. ಸಿರಿಧಾನ್ಯಗಳ ಬಳಕೆಯನ್ನು ಜೀವನಶೈಲಿಯಾಗಿಸುವುದು.
8. ಯೋಗ ಮತ್ತು ಫಿಟ್ನೆಸ್ ಮೂಲಕ ಆರೋಗ್ಯ ರಕ್ಷಣೆ.
9. ಸಮಾಜ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೊತೆಗೂಡಿ ಸೌಂದರ್ಯ ಲಹರಿ ಮತ್ತು ಶಿವ ಮಹಿಮ್ನ ಸ್ತೋತ್ರಂ ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.






















