ಬೆಂಗಳೂರು, ಮಾ.28 www.bengaluruwire.com: ಇಂದಿನಿಂದ ಆರಂಭವಾಗುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳ ಅಬ್ಬರಕ್ಕೂ ಮುನ್ನವೇ ಕರ್ನಾಟಕದಲ್ಲಿ ‘ಟಿಕೆಟ್ ರಾಜಕೀಯ’ ಜೋರಾಗಿದೆ. ಕೆಎಸ್ಸಿಎ (KSCA) ತಮಗೆ ಉಚಿತ ಟಿಕೆಟ್ ನೀಡುತ್ತಿಲ್ಲ ಮತ್ತು ಸಾರ್ವಜನಿಕರ ಜೊತೆ ಕೂರಿಸುತ್ತಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.
ಶಾಸಕರ ಬೇಡಿಕೆ ಏನು?:
ಬಾಗಲಕೋಟೆ ಜಿಲ್ಲೆಯ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಈ ಕುರಿತು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. “ನಾವು ಜನಪ್ರತಿನಿಧಿಗಳು, ನಮಗೆ ಕನಿಷ್ಠ ಐದು ಟಿಕೆಟ್ಗಳನ್ನು ಮೀಸಲಿಡಬೇಕು. ನಮ್ಮನ್ನು ಸಾಮಾನ್ಯ ಜನರ ಗ್ಯಾಲರಿಯಲ್ಲಿ ಕೂರಿಸುವುದು ಸರಿಯಲ್ಲ, ನಮಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಇರಬೇಕು. ಆನ್ಲೈನ್ನಲ್ಲಿ ಟಿಕೆಟ್ ಸಿಗುವುದು ಕಷ್ಟ, ಅಲ್ಲಿ ಕಪ್ಪು ದಂಧೆ ನಡೆಯುತ್ತಿದೆ,” ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಈ ವಿಷಯವನ್ನು ವಿಧಾನಸಭೆಯ ಸಭಾಧ್ಯಕ್ಷರ ಗಮನಕ್ಕೂ ತರಲಾಗುವುದು ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಅವರ ತೀವ್ರ ವಾಗ್ದಾಳಿ:

ಶಾಸಕರ ಈ ಬೇಡಿಕೆಯನ್ನು ಸಂಸದ ತೇಜಸ್ವಿ ಸೂರ್ಯ ಕಟುವಾಗಿ ಟೀಕಿಸಿದ್ದಾರೆ. ಈ ಕುರಿತು ‘X’ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಅವರು, “ಸಾರ್ವಜನಿಕ ಸೇವೆಯು ಒಂದು ಜವಾಬ್ದಾರಿಯೇ ಹೊರತು ಸವಲತ್ತಲ್ಲ. ವಿಧಾನಸೌಧದಲ್ಲಿ ಜನರ ಭದ್ರತೆಯ ಬಗ್ಗೆ ಚರ್ಚಿಸಬೇಕಾದ ಶಾಸಕರು, ಉಚಿತ ಟಿಕೆಟ್ಗಾಗಿ ಪಟ್ಟು ಹಿಡಿಯುತ್ತಿರುವುದು ಸದನದ ಘನತೆಗೆ ಕುಂದು ತರುತ್ತದೆ,” ಎಂದು ಕಿಡಿಕಾರಿದ್ದಾರೆ.
“ಸಾಮಾನ್ಯ ನಾಗರಿಕರು ಹಣ ಕೊಟ್ಟು ಟಿಕೆಟ್ ಖರೀದಿಸುವಾಗ ಶಾಸಕರಿಗೆ ಮಾತ್ರ ಉಚಿತ ಏಕೆ? ಈ ವಿಐಪಿ ಸಂಸ್ಕೃತಿ ಮತ್ತು ದಬ್ಬಾಳಿಕೆಯ ಮನೋಭಾವ ಪ್ರಜಾಪ್ರಭುತ್ವಕ್ಕೆ ಮಾರಕ,” ಎಂದು ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಭರವಸೆ:
ಈ ಮಧ್ಯೆ, ಉಪಮುಖ್ಯಮಂತ್ರಿಗಳು ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಶಾಸಕರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಕೆಎಸ್ಸಿಎ ಮಾತ್ರ ನಿಯಮದಂತೆ ಆನ್ಲೈನ್ ಬುಕಿಂಗ್ಗೆ ಆದ್ಯತೆ ನೀಡುತ್ತಿದೆ.






















