ಬೆಂಗಳೂರು, ಮಾ.27 www.bengaluruwire.com: ರಾಜಧಾನಿಯ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು, ಅವರನ್ನು ವ್ಯವಸ್ಥಿತವಾಗಿ ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸುವ ಬೃಹತ್ ಜಾಲವೊಂದನ್ನು ಕರ್ನಾಟಕ ಲೋಕಾಯುಕ್ತ ಪತ್ತೆಹಚ್ಚಿದೆ.
ಈ ಸಂಬಂಧ ವಿಕಟ್ಓರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೆಸರಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ, ರೋಗಿಗಳಿಗೆ ಆಗುತ್ತಿದ್ದ ಕಿರುಕುಳಗಳ ಬಗ್ಗೆ ವ್ಯಾಪಕ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿದ್ದು ಹೇಗೆ?:
ಲೋಕಾಯುಕ್ತ ಸಂಸ್ಥೆಗೆ ಬಂದ ಸತತ ದೂರುಗಳ ಹಿನ್ನೆಲೆಯಲ್ಲಿ, ಅಧಿಕಾರಿಗಳು ಅತ್ಯಂತ ಗೌಪ್ಯವಾಗಿ ಕಾರ್ಯಾಚರಣೆ ರೂಪಿಸಿದ್ದರು. ತನಿಖೆ ನಡೆದ ಹಾದಿ ಹೀಗಿದೆ:

ಗುಪ್ತ ವಿಚಾರಣೆ (Secret Inquiry): ಲೋಕಾಯುಕ್ತ ಅಧಿಕಾರಿಗಳು ಸಾಮಾನ್ಯ ರೋಗಿಗಳ ಸೋಗಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಚಟುವಟಿಕೆಗಳನ್ನು ಗಮನಿಸಿದರು.
ಸ್ಥಳೀಯ ಪರಿಶೀಲನೆ: ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ (Trauma Care) ಮತ್ತು ICU ವಿಭಾಗಗಳಲ್ಲಿ ಮೂಲಸೌಕರ್ಯಗಳ ಕೊರತೆಯ ನೆಪವೊಡ್ಡಿ ರೋಗಿಗಳನ್ನು ಹೇಗೆ ದಿಕ್ಕು ತಪ್ಪಿಸಲಾಗುತ್ತಿದೆ ಎಂಬುದನ್ನು ದಾಖಲಿಸಿಕೊಂಡರು.
ಸಿಸಿಟಿವಿ ಮತ್ತು ಸಿಬ್ಬಂದಿ ವಿಚಾರಣೆ: ಆಸ್ಪತ್ರೆಯ ಆವರಣದಲ್ಲಿ ಬೀಡುಬಿಟ್ಟಿರುವ ಖಾಸಗಿ ಆಂಬುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳು ವೈದ್ಯರೊಂದಿಗೆ ನಡೆಸುವ ಸಂವಹನವನ್ನು ಪತ್ತೆಹಚ್ಚಲಾಯಿತು.
ಅನಿರೀಕ್ಷಿತ ಭೇಟಿ: ಫೆಬ್ರವರಿ 6ರಂದು ಲೋಕಾಯುಕ್ತ ತಂಡವು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ, ಐಸಿಯು ಬೆಡ್ಗಳು ಖಾಲಿ ಇದ್ದರೂ ರೋಗಿಗಳಿಗೆ ಇಲ್ಲ ಎಂದು ಸುಳ್ಳು ಹೇಳುತ್ತಿರುವುದು ಸಾಬೀತಾಯಿತು.
ತನಿಖೆಯಲ್ಲಿ ಕಂಡುಬಂದ ಆಘಾತಕಾರಿ ಅಂಶಗಳು
ಲೋಕಾಯುಕ್ತರ ವರದಿಯ ಪ್ರಕಾರ, ವಿಕ್ಟೋರಿಯಾ ಆಸ್ಪತ್ರೆಯ ಒಳಗೆ ಖಾಸಗಿ ಆಸ್ಪತ್ರೆಗಳ ಏಜೆಂಟ್ಸ್ಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ರೋಗಿ ಬಂದ ಕೂಡಲೇ “ಇಲ್ಲಿ ವೆಂಟಿಲೇಟರ್ ಇಲ್ಲ, ಚಿಕಿತ್ಸೆ ಸರಿಯಿಲ್ಲ” ಎಂದು ಹೆದರಿಸಿ, ತಮ್ಮ ಆಂಬುಲೆನ್ಸ್ ಮೂಲಕ ಮೊದಲೇ ಫಿಕ್ಸ್ ಆಗಿರುವ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುತ್ತಿದ್ದಾರೆ. ಇದಕ್ಕೆ ಕೆಲವು ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿಗಳು ಕೂಡ ಕೈಜೋಡಿಸಿರುವುದು ಪತ್ತೆಯಾಗಿದೆ.
ವಿಶೇಷವೆಂದರೆ, ಟ್ರಾಮಾ ಕೇರ್ ಸೆಂಟರ್ನ ಮುಖ್ಯಸ್ಥರೇ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದು, ಆಸ್ಪತ್ರೆಯಲ್ಲಿ ವೆಂಟಿಲೇಟರ್ಗಳು ಸುಸ್ಥಿತಿಯಲ್ಲಿದ್ದರೂ ಅವು ಕೆಲಸ ಮಾಡುತ್ತಿಲ್ಲ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಲೋಕಾಯುಕ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದಿನ ಕ್ರಮವೇನು?:
ಈ ಗಂಭೀರ ಲೋಪವನ್ನು ಪರಿಗಣಿಸಿರುವ ಲೋಕಾಯುಕ್ತರು, ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮತ್ತು ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ. ಏಪ್ರಿಲ್ 27, 2026 ರೊಳಗೆ ಈ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ತಪ್ಪಿತಸ್ಥ ವೈದ್ಯರು ಮತ್ತು ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.























