ಬೆಂಗಳೂರು, ಮಾ.27 www.bengaluruwire.com: ಸಿಲಿಕಾನ್ ಸಿಟಿಯ ಕಾಂಕ್ರೀಟ್ ಕಾಡಿನ ನಡುವೆ ಮಾನವೀಯತೆಯ ಸೆಲೆ ಹರಿಸುವ ಹಾಗೂ ಆಧುನಿಕ ತಂತ್ರಜ್ಞಾನವನ್ನು ಆಡಳಿತದಲ್ಲಿ ಅಳವಡಿಸುವ ಮಹತ್ವಾಕಾಂಕ್ಷಿ ‘ಬೆಂಗಳೂರು ಕೇಂದ್ರ ನಗರ ಪಾಲಿಕೆ’ಯ ಚೊಚ್ಚಲ ಬಜೆಟ್ ಶುಕ್ರವಾರ ಮಂಡನೆಯಾಯಿತು.
ಪುರಭವನದಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಮಂಡಿಸಿದ ₹3,427 ಕೋಟಿ ಮೊತ್ತದ ಈ ಬಜೆಟ್, ಕೇವಲ ಅಂಕಿ-ಅಂಶಗಳ ಆಟವಾಗದೆ ನಗರದ ಬಡವರು, ಹಿರಿಯ ನಾಗರಿಕರು ಮತ್ತು ವಿಶೇಷಚೇತನ ಮಕ್ಕಳ ಬಾಳಿಗೆ ಆಸರೆಯಾಗುವ ಭರವಸೆ ನೀಡಿದೆ.
ಮಾನವೀಯ ಯೋಜನೆಗಳ ‘ವಾತ್ಸಲ್ಯ’ ಹಸ್ತ:
ಈ ಬಾರಿಯ ಬಜೆಟ್ನಲ್ಲಿ ಆರೋಗ್ಯ ಮತ್ತು ಸಮಾಜ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಚಾರ ದಟ್ಟಣೆಯ ನಡುವೆಯೂ ಪ್ರಾಣ ಉಳಿಸಲು ‘ಬೈಕ್ ಆ್ಯಂಬುಲೆನ್ಸ್’ ಪರಿಚಯಿಸಲಾಗುತ್ತಿದ್ದು, ಬಡವರಿಗಾಗಿ 22 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ಗಳನ್ನು ಸ್ಥಾಪಿಸಲಾಗುತ್ತಿದೆ. ವಿಶೇಷಚೇತನ ಮಕ್ಕಳ ಆರೈಕೆಗಾಗಿ ‘ವಾತ್ಸಲ್ಯ ಮನೆ’ ಮತ್ತು ಒಂಟಿ ಹಿರಿಯ ನಾಗರಿಕರಿಗಾಗಿ ‘ಹಿರಿಯರ ವಾಡಿ’ ವಸತಿ ಯೋಜನೆಗಳನ್ನು ಘೋಷಿಸುವ ಮೂಲಕ ಪಾಲಿಕೆಯು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದೆ.

ಹಸಿರು ಬೆಂಗಳೂರು ಮತ್ತು ಮೂಲಸೌಕರ್ಯ:
ನಗರದ ಸೌಂದರ್ಯೀಕರಣಕ್ಕಾಗಿ ₹82 ಕೋಟಿ ವೆಚ್ಚದಲ್ಲಿ ಹಲಸೂರು ಕೆರೆ ಅಭಿವೃದ್ಧಿ ಹಾಗೂ 50,000 ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. 215 ಉದ್ಯಾನವನಗಳ ಅಭಿವೃದ್ಧಿಗೆ ಕ್ರಮ.
ರಸ್ತೆ ಅಭಿವೃದ್ಧಿ: ₹217.50 ಕೋಟಿ ವೆಚ್ಚದಲ್ಲಿ 145 ಕಿಮೀ ಪ್ರಮುಖ ರಸ್ತೆಗಳ ಅಭಿವೃದ್ಧಿ.
ಸಂಚಾರ ಸುಗಮ: 12 ಪ್ರಮುಖ ಜಂಕ್ಷನ್ಗಳ ಸುಧಾರಣೆ ಮತ್ತು 9 ಹೊಸ ಪಾದಚಾರಿ ಮೇಲೇತುವೆಗಳ ನಿರ್ಮಾಣ.
ಪರಿಸರ ಸ್ನೇಹಿ: ಶೇ.60ರಷ್ಟು ವಿದ್ಯುತ್ ಉಳಿಸುವ ಎಲ್ಇಡಿ ದೀಪಗಳ ಅಳವಡಿಕೆ ಹಾಗೂ ಬ್ಲೂ-ಗ್ರಿನ್ ಕಾರಿಡಾರ್ಗಳ ನಿರ್ಮಾಣ.
ನಗರ ಸೇವೆಗಳು: ಘನತ್ಯಾಜ್ಯ ನಿರ್ವಹಣೆಗೆ ₹215 ಕೋಟಿ, 60 ಸಾರ್ವಜನಿಕ ಶೌಚಾಲಯಗಳು, 20 ಶೀ-ಟಾಯ್ಲೆಟ್, ಪೌರಕಾರ್ಮಿಕರಿಗೆ ಮಸ್ಟರಿಂಗ್ & ಸುವಿಧಾ ಕೇಂದ್ರಗಳು.
ಪ್ರಾಣಿ ಕಲ್ಯಾಣಕ್ಕೆ ವಿಶೇಷ ಆದ್ಯತೆ:
ನಗರದ ಬೀದಿನಾಯಿಗಳ ಸಮಸ್ಯೆ ನೀಗಿಸಲು ₹2 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ಆಶ್ರಯತಾಣ ಹಾಗೂ ಸಾಕುಪ್ರಾಣಿಗಳ ಗೌರವಯುತ ವಿದಾಯಕ್ಕಾಗಿ ₹1 ಕೋಟಿ ವೆಚ್ಚದಲ್ಲಿ ಪ್ರಾಣಿಗಳ ವಿದ್ಯುತ್ ಚಿತಾಗಾರ ನಿರ್ಮಿಸಲು ಬಜೆಟ್ನಲ್ಲಿ ಹಣ ಮೀಸಲಿಡಲಾಗಿದೆ.
ಡಿಜಿಟಲ್ ಆಡಳಿತ ಮತ್ತು ಆರ್ಥಿಕ ಶಿಸ್ತು:
“ನಮ್ಮದು ಅಂಕಿ-ಅಂಶಗಳ ಬಜೆಟ್ ಅಲ್ಲ, ಇದೊಂದು ಜೀವಂತ ಬಜೆಟ್” ಎಂದು ಬಣ್ಣಿಸಿದ ಆಯುಕ್ತರು, ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಆಡಳಿತ ಮತ್ತು ಇ-ಖಾತಾ ವ್ಯವಸ್ಥೆಗೆ ಒತ್ತು ನೀಡಿದ್ದಾರೆ. ₹78.65 ಲಕ್ಷ ಮಿಗತೆ ಉಳಿಸುವ ಮೂಲಕ ಪಾಲಿಕೆಯು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ. ಆಸ್ತಿ ತೆರಿಗೆಯಿಂದ ₹1,150 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಐತಿಹಾಸಿಕ ರಸೆಲ್ ಮಾರುಕಟ್ಟೆಯನ್ನು ₹70 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುವುದು ಎಂದು ತಿಳಿಸಿದರು.
ಒಟ್ಟಾರೆ ಒಂದೇ ದಿನದಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಪೂರ್ವ (₹3889 ಕೋಟಿ) ಹಾಗೂ ಕೇಂದ್ರ (₹3427 ಕೋಟಿ) ನಗರ ಪಾಲಿಕೆಗಳಿಂದ ಒಟ್ಟು ₹7316 ಕೋಟಿ ಮೊತ್ತದ ಆಯವ್ಯಯ ಮಂಡನೆಯಾಗಿದೆ. ನಾಳೆ ಶನಿವಾರ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಪಶ್ಚಿಮ ನಗರ ಪಾಲಿಕೆಗಳ ಆಯವ್ಯಯವನ್ನು ಆಯಾ ನಗರ ಪಾಲಿಕೆಯವರು ಮಂಡಿಸಲಿದ್ದಾರೆ.























