ಶಬರಿಮಲೆ (ಕೇರಳ), ಅ.22 www.bengaluruwire.com : ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಗೆ ಭೇಟಿ ನೀಡುವ ಸಂದರ್ಭದಲ್ಲಿ, ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಸೇನೆಯ ಎಂಐ-17 ಹೆಲಿಕಾಪ್ಟರ್ನ ಚಕ್ರವು ಲ್ಯಾಂಡಿಂಗ್ ವೇಳೆ ನೆಲದಲ್ಲಿ ಹೂತುಹೋಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.
ಈ ಘಟನೆ ತಿರುವನಂತಪುರಂನಿಂದ ಆಗಮಿಸಿದ ನಂತರ ಪ್ರಮಾಡಂ ಇನ್ ಡೋರ್ ಸ್ಟೇಡಿಯಂ ಬಳಿ ಸಂಭವಿಸಿದೆ.
ಹವಾಮಾನ ವೈಪರೀತ್ಯವೇ ಕಾರಣ:
ಮೂಲತಃ ರಾಷ್ಟ್ರಪತಿಗಳು ನೀಲಕ್ಕಲ್ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದ ಕಾರಣದಿಂದ ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಸ್ಥಳವನ್ನು ಪ್ರಮಾಡಂ ಇನ್ ಡೋರ್ ಸ್ಟೇಡಿಯಂ ಬಳಿಗೆ ಬದಲಾಯಿಸಲಾಯಿತು. ಈ ಸ್ಥಳದಲ್ಲಿ ಮಂಗಳವಾರ ತಡರಾತ್ರಿ ತುರ್ತಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು.

ತೂಕದಿಂದಾಗಿ ಹೂತುಹೋದ ಚಕ್ರ:
ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುತ್ತಿದ್ದಂತೆ, ಅದರ ಭಾರದಿಂದಾಗಿ ಹೊಸದಾಗಿ ನಿರ್ಮಿಸಲಾದ ಮೃದುವಾದ ಹೆಲಿಪ್ಯಾಡ್ನ ಮಣ್ಣಿನಲ್ಲಿ ಹೆಲಿಕಾಪ್ಟರ್ನ ಚಕ್ರ ಹೂತುಹೋಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಹೆಲಿಕಾಪ್ಟರ್ನ ತೂಕದ ಕಾರಣಕ್ಕೆ ಚಕ್ರ ನೆಲದಲ್ಲಿ ಹೂತುಹೋಗಿದೆ” ಎಂದು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ಅಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು. ಅವರು ಹೆಲಿಕಾಪ್ಟರ್ಗೆ ಹಾನಿಯಾಗದಂತೆ ಅದನ್ನು ತಳ್ಳಿ ಬದಿಗೆ ಸರಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೆಲಿಕಾಪ್ಟರ್ನಿಂದ ಸುರಕ್ಷಿತವಾಗಿ ಇಳಿದ ನಂತರ, ಯಾವುದೇ ವಿಳಂಬವಿಲ್ಲದೆ ಕಾರಿನ ಮೂಲಕ ಶಬರಿಮಲೆ ದೇವಾಲಯಕ್ಕೆ ತಮ್ಮ ಪೂರ್ವನಿಗದಿತ ಪ್ರಯಾಣವನ್ನು ಮುಂದುವರೆಸಿದರು. (ANI ವರದಿ ಆಧಾರಿತ)























