ಬೆಂಗಳೂರು, ಅ.10 www.bengaluruwir.com : ರಾಜ್ಯದಾದ್ಯಂತ ಅನ್ನಭಾಗ್ಯ ಯೋಜನೆಯಡಿಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ಬುಡದ ಸಮೇತ ಕಿತ್ತುಹಾಕಲು ಸಂಕಲ್ಪ ತೊಟ್ಟಿರುವ ಕರ್ನಾಟಕ ರಾಷ್ಟ್ರಸಮಿತಿ ಪಕ್ಷ (KRS) ಇಂದಿನಿಂದ ಕರ್ನಾಟಕದ ಎಲ್ಲೆಡೆ ‘ಸಾಲುಮರದ ವೀರಾಚಾರಿ‘ಯವರ ಸ್ಮರಣಾರ್ಥ ಆಪರೇಷನ್ ವೀರಾಚಾರಿ (#OperationVeerachari) ಕಾರ್ಯಾಚರಣೆಯನ್ನು ಆರಂಭಿಸಿದೆ.
ಈ ಕಾರ್ಯಾಚರಣೆಗೆ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿಯವರು ತುಮಕೂರಿನಲ್ಲಿ ಚಾಲನೆ ನೀಡಿದರು. ವೀರಾಚಾರಿಯವರ ಮರಣಕ್ಕೆ ಕಾರಣರಾದ ಪ್ರಮುಖರಲ್ಲಿ ಒಬ್ಬರೆಂದು ಆರೋಪಿಸಲಾದ ಭ್ರಷ್ಟ ಅಧಿಕಾರಿ, ದಾವಣಗೆರೆ ಜಿಲ್ಲೆಯ ಆಹಾರ ಇಲಾಖೆಯ ಮಾಜಿ ಜಂಟಿ ನಿರ್ದೇಶಕ ಮತ್ತು ತುಮಕೂರು ಜಿಲ್ಲೆಯ ಆಹಾರ ಇಲಾಖೆಯ ಹಾಲಿ ಜಂಟಿ ನಿರ್ದೇಶಕ ಮಂಟೇಸ್ವಾಮಿ’ಯ ಕಚೇರಿಗೆ ಪಕ್ಷದ ಅಧ್ಯಕ್ಷರು ಪಕ್ಷದ ಕಾರ್ಯಕರ್ತರೊಂದಿಗೆ ಭೇಟಿ ಕೊಟ್ಟು ಭ್ರಷ್ಟ ಅಧಿಕಾರಿ ಮಂಟೇಸ್ವಾಮಿ ಅವರ ಕ್ರಮದಿಂದಾದ ದುಷ್ಪರಿಣಾಮವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ಪಡಿತರ ವಿತರಣೆಯ ವಿಚಾರಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಅವರಿಗೆ ತಿಳಿಸಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಆಗ್ರಹಿಸುವ ಮೂಲಕ ಚಾಲನೆ ನೀಡಿದರು ಎಂದು ಕೆಆರ್ ಎಸ್ ಪಕ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ದಾವಣಗೆರೆ ಭಾಗದಲ್ಲಿ ಸಾವಿರಾರು ಮರಗಳನ್ನು ಬೆಳೆಸಿದ್ದ ಪರಿಸರಪ್ರೇಮಿ “ಸಾಲುಮರದ ವೀರಾಚಾರಿ” ಹಾಗೂ ಕೆಆರ್ ಎಸ್ ಪಕ್ಷದ ಕಾರ್ಯಕರ್ತರಾಗಿದ್ದ ವೀರಾಚಾರಿ, ಅನ್ನಭಾಗ್ಯ ಯೋಜನೆಯಡಿ ಹರಿಹರ ತಾಲ್ಲೂಕಿಗೆ ಸೇರಿದ ಮಿಟ್ಲಕಟ್ಟೆ ಎನ್ನುವ ತಮ್ಮೂರಿನ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ನ್ಯಾಯಬದ್ಧವಾಗಿ ಪಡಿತರ ವಿತರಣೆಯಾಗುತ್ತಿಲ್ಲ ಎಂದು ಅನ್ಯಾಯದ ವಿರುದ್ಧ ಸೆಟೆದೆದ್ದು ಹೋರಾಟ ನಡೆಸಿದ್ದರು. ಆದರೂ ಅವರ ಹೋರಾಟದಲ್ಲಿ ನ್ಯಾಯ ದೊರೆಯದೆ ಬೇಸೆತ್ತು ಇದೇ ಸೆಪ್ಟೆಂಬರ್ 20ರಂದು ತಮ್ಮೂರಿನ ನಡು ರಸ್ತೆಯಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ದುರ್ಮರಣಕ್ಕೀಡಾದರು. ಈ ಹಿನ್ನಲೆಯಲ್ಲಿ ಕೆಆರ್ ಎಸ್ ಪಕ್ಷವು ರಾಜ್ಯದ್ಯಂತ ಪಡಿತರ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಸಾಲುಮರದ ವೀರಾಚಾರಿಯವರ ಸ್ಮರಣಾರ್ಥ #OperationVeerachari ಹೆಸರಿನಲ್ಲಿ ಕಾರ್ಯಾಚರಣೆ ಹಮ್ಮಿಕೊಂಡಿದೆ.
ರಾಜ್ಯದ ಹಲವು ನ್ಯಾಯಬೆಲೆ ಅಂಗಡಿಗಳಿಗೆ ಖುದ್ದು ಭೇಟಿ :


ಆಹಾರ ಇಲಾಖೆಯಲ್ಲಿನ ಅಕ್ರಮ ಮತ್ತು ಶಾಮೀಲುಗಳ ಕಾರಣಕ್ಕೆ ವರ್ಷಕ್ಕೆ ಕನಿಷ್ಠವೆಂದರೂ ಸಾವಿರ ಕೋಟಿ ರೂಪಾಯಿಗಳಿಗಿಂತ ಅಧಿಕ ಭ್ರಷ್ಟಾಚಾರ ಈ ಅನ್ನಭಾಗ್ಯ ಯೋಜನೆಯಡಿ ಆಗುತ್ತಿದೆ. ಆಪರೇಷನ್ ವೀರಾಚಾರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ರಾಜ್ಯದ ಮೂಲೆಮೂಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಖುದ್ದು ಭೇಟಿ ಕೊಟ್ಟು ಅಲ್ಲಿರುವ ವ್ಯವಸ್ಥೆಯನ್ನು ಪರಿಶೀಲಿಸಲಿದ್ದಾರೆ. ಅಲ್ಲಿಯ ವ್ಯವಸ್ಥೆ ಲೋಪಗಳಿಂದ ಕೂಡಿದ್ದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡುತ್ತಾರೆ ಅಥವ ಲಿಖಿತ ದೂರು ದಾಖಲಿಸುತ್ತಾರೆ. ಫಲಾನುಭವಿಗಳಿಗೆ ತೂಕದಲ್ಲಿ ಮೋಸ ಅಥವಾ ಅವರಿಂದ ಕಾನೂನುಬಾಹಿರವಾಗಿ ಹಣ ವಸೂಲಿ ಅಥವಾ ಅವರನ್ನು ಬೆದರಿಸುವುದು ಇತ್ಯಾದಿ ಕಂಡುಬಂದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಲಿದ್ದಾರೆ ಎಂದು ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
KRS ಪಕ್ಷವು ಹಮ್ಮಿಕೊಂಡಿರುವ #OperationVeerachari ಕಾರ್ಯಾಚರಣೆಗೆ ಸಾರ್ವಜನಿಕರು, ನ್ಯಾಯಬೆಲೆ ಅಂಗಡಿಯವರು ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಮತ್ತು ಎಲ್ಲರೂ ಕೂಡಿ ಅದನ್ನು ಯಶಸ್ವಿಗೊಳಿಸಬೇಕು ಎಂದು ಈ ಮೂಲಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮನವಿ ಮಾಡಿದೆ.
ಕಾರ್ಯಾಚರಣೆ ಫೇಸ್ ಬುಕ್ ಲೈವ್ ಮೂಲಕ ಬಹಿರಂಗ :
ಈ ಕಾರ್ಯಾಚರಣೆಯನ್ನು Facebook Live ಮೂಲಕ ಸಾರ್ವಜನಿಕವಾಗಿ ಮಾಡಲಿದ್ದಾರೆ ಮತ್ತು ಯಾವುದೇ ಸಂದರ್ಭದಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ. ಎಲ್ಲಿಯಾದರೂ ನ್ಯಾಯಬೆಲೆ ಅಂಗಡಿಯವರಿಂದ ಕಾನೂನುಬಾಹಿರ ವಿರೋಧ ಅಥವ ಗೂಂಡಾವರ್ತನೆ ಕಂಡುಬಂದರೆ ಅದಕ್ಕೆ ಹೆದರದೇ, ವಿಷಯವನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದು ಪರಿಸ್ಥಿಯನ್ನು ನಿಭಾಯಿಸಲಿದ್ದಾರೆ.
ಸಾಲಮರದ ವೀರಾಚಾರಿ ದುರಂತ ಅಂತ್ಯ ಹೇಗಾಯ್ತು?
ದಾವಣಗೆರೆ ಭಾಗದಲ್ಲಿ ಸಾವಿರಾರು ಮರಗಳನ್ನು ಬೆಳೆಸಿದ್ದ ಪರಿಸರಪ್ರೇಮಿ “ಸಾಲುಮರದ ವೀರಾಚಾರಿ”. ಅವರ ಕಾಳಜಿ ಪರಿಸರದ ವಿಚಾರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ತಮ್ಮ ಸಾಮಾಜಿಕ ಪರಿಸರದಲ್ಲಿ ನಡೆಯುವ ಅನ್ಯಾಯ ಹಾಗೂ ಭ್ರಷ್ಟಾಚಾರದ ವಿರುದ್ಧವೂ ಈ ಗಾಂಧಿ ಟೋಪಿಧಾರಿ ಹೋರಾಡುತ್ತಿದ್ದರು. ಹರಿಹರ ತಾಲ್ಲೂಕಿಗೆ ಸೇರಿದ ಮಿಟ್ಲಕಟ್ಟೆ ಎನ್ನುವ ತಮ್ಮೂರಿನ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ನ್ಯಾಯಬದ್ಧವಾಗಿ ಪಡಿತರ ವಿತರಣೆಯಾಗುತ್ತಿಲ್ಲ ಎಂದು ಆ ನ್ಯಾಯಬೆಲೆ ಅಂಗಡಿಯ ಅಕ್ರಮದ ವಿರುದ್ಧ ಕಳೆದ ಐದಾರು ವರ್ಷಗಳಿಂದ ಸತತವಾಗಿ ಹೋರಾಡುತ್ತಿದ್ದರು. ಇತ್ತೀಚೆಗೆ ಕೆಆರ್ ಎಸ್ ಪಕ್ಷದ ಸದಸ್ಯತ್ವವನ್ನು ಸಹಾ ಪಡೆದು ಪಕ್ಷದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಅಕ್ರಮ ಮತ್ತು ವಂಚನೆಗೆ ಕುಖ್ಯಾತಿ ಪಡೆದಿದ್ದ ತಮ್ಮೂರಿನ ನ್ಯಾಯಬೆಲೆ ಅಂಗಡಿಯ ವಿರುದ್ಧದ ಅವರ ನಿರಂತರ ಹೋರಾಟದಿಂದಾಗಿ ಆ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಸರ್ಕಾರಿ ಅಧಿಕಾರಿಗಳು ಅಮಾನತು ಮಾಡಿದ್ದರು. ಆದರೆ ಆಹಾರ ಇಲಾಖೆಯ ದಾವಣಗೆರೆ ಜಿಲ್ಲಾ ಜಂಟಿ ನಿರ್ದೇಶಕ ಮಂಟೇಸ್ವಾಮಿ ಎನ್ನುವ ಪರಮಭ್ರಷ್ಟ ಅಧಿಕಾರಿಯು ಹರಿಹರ ತಹಸೀಲ್ದಾರರ ಲಿಖಿತ ದೂರು ಮತ್ತು ಆಕ್ಷೇಪಣೆಯನ್ನು ಬದಿಗೊತ್ತಿ ಇದೇ ಜೂನ್ 6ರಂದು ಆ ವಂಚಕ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಪುನರ್ ಸ್ಥಾಪಿಸಿ ಆದೇಶ ಮಾಡಿದ್ದರು. ಕೊನೆಗೆ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಈ ವಿಚಾರವಾಗಿ ವೀರಾಚಾರಿಯವರು ಜಿಲ್ಲಾಧಿಕಾರಿಗಳೂ ಸೇರಿದಂತೆ ಹಲವಾರು ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಒತ್ತಾಯಿಸಿದ್ದರು.
ಆದರೆ ಭ್ರಷ್ಟ ಮತ್ತು ಅದಕ್ಷ ಅಧಿಕಾರಿಗಳು ಇವರ ಮನವಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಇದರಿಂದ ತೀವ್ರವಾಗಿ ಮನನೊಂದು, ಬೇಸತ್ತ ವೀರಾಚಾರಿಯವರು ಇದೇ ಸೆಪ್ಟೆಂಬರ್ 20ರಂದು ತಮ್ಮೂರಿನ ನಡುರಸ್ತೆಯಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ದುರ್ಮರಣಕ್ಕೀಡಾದರು.
ನ್ಯಾಯಬೆಲೆ ಅಂಗಡಿಯವರಿಂದ ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಂದ ಕೆಆರ್ ಎಸ್ ಪಕ್ಷ ಕನಿಷ್ಠ ಈ ಕೆಳಗಿನ ಅಂಶಗಳನ್ನು ನಿರೀಕ್ಷೆ ಮಾಡುತ್ತದೆ:-
ನ್ಯಾಯಬೆಲೆ ಅಂಗಡಿಗಳಲ್ಲಿ ಇರಬೇಕಾದ ವ್ಯವಸ್ಥೆ ಮತ್ತು ಫಲಾನುಭವಿಗಳಿಗೆ ಪಡಿತರ ವಿತರಣೆಯಲ್ಲಿ ಪಾಲಿಸಬೇಕಾದ ನಿಯಮಗಳೇನು?

1. ಎಲೆಕ್ಟ್ರಾನಿಕ್ ತೂಕದ ಯಂತ್ರ ಕಡ್ಡಾಯ ಹಾಗೂ ಆಹಾರ ತೂಕ ಎಷ್ಟು ಎಂಬುದು ಫಲಾನುಭವಿಗಳಿಗೆ ಕಾಣಿಸಬೇಕು.
2. ಅಂಗಡಿಯ ಮುಂದೆ ಅಥವಾ ಒಳಗಿನ ನೋಟಿಸ್ ಬೋರ್ಡ್ನಲ್ಲಿ ಅಂಗಡಿಯವರ ಸಂಪರ್ಕ ಸಂಖ್ಯೆ, ಆಹಾರ ನಿರೀಕ್ಷಕರ ಮತ್ತು ಆಹಾರ ಶಿರಸ್ತೆದಾರರ ಫೋನ್ ನಂಬರ್, ಅಂಗಡಿಯ ಪರವಾನಗಿ ಮಂಜೂರು ಅಥವಾ ನವೀಕರಣದ ಪ್ರತಿಯನ್ನು ಕಡ್ಡಾಯವಾಗಿ ಪ್ರದರ್ಶಿಸಿರಬೇಕು.
3. ನ್ಯಾಯಬೆಲೆ ಅಂಗಡಿಯ ಮುಂದೆ ಅಥವಾ ಬಾಗಿಲ ಮೇಲೆ ಆ ನ್ಯಾಯಬೆಲೆ ಅಂಗಡಿಯ ಹೆಸರು, ಅದರ ಪರವಾನಗಿ ಸಂಖ್ಯೆ, ಪರವಾನಗಿದಾರರ ಹೆಸರು, ಮತ್ತು ಆಹಾರ ಇಲಾಖೆಯ ಸಹಾಯವಾಣಿ ಸಂಖ್ಯೆಯ ಮಾಹಿತಿಗಳನ್ನು ಒಳಗೊಂಡ ದೊಡ್ಡ ನಾಮಫಲಕವನ್ನು (Name Board) ಹಾಕಿರಬೇಕು.
4. ವಿವಿಧ ಬಗೆಯ ಕಾರ್ಡುಗಳ ಫಲಾನುಭವಿಗಳಿಗೆ ಆಯಾ ತಿಂಗಳಿನಲ್ಲಿ ಮಂಜೂರು ಆಗಿರುವ ಪಡಿತರದ ಮಾಹಿತಿಯನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣಿಸುವಂತೆ ಪ್ರಕಟಿಸಿರಬೇಕು.
5. ಫಲಾನುಭವಿಗಳಿಗೆ ಮಂಜೂರಾಗಿರುವ ಪಡಿತರ ವಿತರಿಸಲು ಬಯೋಮೆಟ್ರಿಕ್ ಅಥವಾ ಇನ್ಯಾವುದೇ ನೆಪದಲ್ಲಿ ಅವರಿಂದ ಯಾವುದೇ ರೀತಿಯ ಹಣ ಪಡೆಯುವಂತಿಲ್ಲ.
6. ಬಯೋಮೆಟ್ರಿಕ್ ಪಡೆದ ನಂತರ ತಕ್ಷಣವೇ ಪಡಿತರ ವಿತರಣೆ ಮಾಡತಕ್ಕದ್ದು. ಆಮೇಲೆ ಬನ್ನಿ, ನಾಳೆ ಬನ್ನಿ ಎಂದೆಲ್ಲಾ ಹೇಳುವಂತಿಲ್ಲ.
7. ಮಂಜೂರಾಗಿರುವ ಪಡಿತರವನ್ನು ಬಿಟ್ಟು ಇತರೆ ಸಾಮಾನುಗಳನ್ನು ಒತ್ತಾಯಪೂರ್ವಕವಾಗಿ ಮಾರುವಂತಿಲ್ಲ.
8. ಮಂಗಳವಾರ ಮತ್ತು ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ದಿನಗಳಲ್ಲಿ ನಿಗದಿತ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದಿರಬೇಕು.
ಆಹಾರ ಇಲಾಖೆಯ ಅಧಿಕಾರಿಗಳು ಪಾಲಿಸಬೇಕಾದ ನಿಯಮಗಳು:
1. ನ್ಯಾಯಬೆಲೆ ಅಂಗಡಿಯಲ್ಲಿ electronic scale ಸೇರಿದಂತೆ ಪಡಿತರ ವಿತರಣೆಗಾಗಿ ಇರಲೇಬೇಕಾದ ಮೂಲಭೂತ ಸೌಕರ್ಯಗಳು, ಇಲಾಖೆಯ ಅಧಿಕಾರಿಗಳ ಸಂಪರ್ಕ ಸಂಖ್ಯೆಯೂ ಸೇರಿದಂತೆ ಫಲಾನುಭವಿಗಳಿಗೆ ಸ್ಪಷ್ಟವಾಗಿ ಕಾಣಿಸುವಂತೆ ನೀಡಬೇಕಾದ ಮಾಹಿತಿಗಳು ಅಂಗಡಿಯಲ್ಲಿ ಕಡ್ಡಾಯವಾಗಿ ಇರುವಂತೆ ಖಾತರಿ ಪಡಿಸಿಕೊಳ್ಳುವುದು.
2. ನ್ಯಾಯಬೆಲೆ ಅಂಗಡಿಯವರಿಂದ ಮೋಸ, ವಂಚನೆ ಅಥವಾ ದಬ್ಬಾಳಿಕೆಗೆ ಒಳಗಾದ ಸಂತ್ರಸ್ತ ಫಲಾನುಭವಿಗಳು ಫೋನ್ ಮೂಲಕ ದೂರು ನೀಡಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿ ದೂರಿಗೆ ಸಂಬಂಧಿಸಿದಂತೆ ಪಾರದರ್ಶಕವಾಗಿ ವಿಚಾರಣೆ ನಡೆಸಬೇಕು.
3. ದಾಸ್ತಾನು ಪರಿಶೀಲನೆಯ (Stock Verification) ಸಂದರ್ಭದಲ್ಲಿ ಅಂಗಡಿಯಲ್ಲಿ ಆ ಸಮಯದಲ್ಲಿ ಇರಬೇಕಾದದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಡಿತರ ಇದ್ದಲ್ಲಿ ಖೋತಾ ಆಗಿರುವಷ್ಟು ಪ್ರಮಾಣದ ಪಡಿತರವನ್ನು ಈಗಾಗಲೇ ಕದ್ದು ಕಾಳಸಂತೆಯಲ್ಲಿ ಮಾರಲಾಗಿರುತ್ತದೆ. ಹಾಗಾಗಿ ಆಹಾರ ನಿರೀಕ್ಷಕರು ಆ ಕೂಡಲೇ ಆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ IPC ಕಲಂ 379, Essential Commodities Act ಕಲಂ 3 ಮತ್ತು 7ರ ಅಡಿಯಲ್ಲಿ ಲಿಖಿತ ದೂರು ದಾಖಲಿಸಬೇಕು.
4. ದಾಸ್ತಾನು ಪರಿಶೀಲನೆಯ (Stock Verification) ಸಂದರ್ಭದಲ್ಲಿ ಅಂಗಡಿಯಲ್ಲಿ ಆ ಸಮಯದಲ್ಲಿ ಇರಬೇಕಾದದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪಡಿತರ ಇದ್ದಲ್ಲಿ ಅದು ಫಲಾನುಭವಿಗಳಿಗೆ ವಂಚನೆ ಮಾಡಿ ಕೂಡಿಟ್ಟ ಪಡಿತರ ಆಗಿರುತ್ತದೆ. ಹಾಗಾಗಿ ಆಹಾರ ನಿರೀಕ್ಷಕರು ಆ ಕೂಡಲೇ ಆ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಬೇಕು.
5. ಇದರ ಜೊತೆಗೆ ಮೇಲಿನ ಎರಡೂ ಸಂದರ್ಭದಲ್ಲಿ ತಕ್ಷಣವೇ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಅಮಾನತು ಮಾಡಿ ಅದನ್ನು ಶಾಶ್ವತವಾಗಿ ವಜಾ ಮಾಡಲು ಕಾನೂನು ಕ್ರಮ ಜರುಗಿಸಬೇಕು.
6. ಅಕ್ರಮ ಎಸಗಿದ ನ್ಯಾಯಬೆಲೆಯ ಅಂಗಡಿಯು ಸರ್ಕಾರಿ ನ್ಯಾಯಬೆಲೆ ಅಂಗಡಿ ಆಗಿದ್ದಲ್ಲಿ ಅಕ್ರಮ ಎಸಗಿದ ಸರ್ಕಾರಿ ನೌಕರನನ್ನು ಕೂಡಲೇ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಮತ್ತು ಆತ ಅಥವಾ ಆಕೆಯನ್ನು ಕೆಲಸದಿಂದ ಅಮಾನತು ಮಾಡಲು ಶಿಫಾರಸು ಮಾಡಿ ಕಾನೂನು ಕ್ರಮ ಜರುಗಿಸಬೇಕು.
ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ತಿಳಿದಿರಬೇಕಾದ ಮಾಹಿತಿ:
1. ಪ್ರತಿ ಕಾರ್ಡಿಗೆ ಇಂತಿಷ್ಟು ಎಂದು ಸರ್ಕಾರದವರು ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಾರೆ. ಹಾಗಾಗಿ ತಮಗೆ ಮಂಜೂರಾಗಿರುವ ಪಡಿತರ ಪಡೆಯಲು ಕಾರ್ಡುದಾರರು ಯಾವುದೇ ಕಾರಣಕ್ಕೂ ನ್ಯಾಯಬೆಲೆ ಅಂಗಡಿಯವರಿಗೆ ಹಣ ನೀಡುವ ಅಗತ್ಯವಿಲ್ಲ.
2. ನ್ಯಾಯಬೆಲೆ ಅಂಗಡಿಯವರು ಹಣಕ್ಕಾಗಿ ಒತ್ತಾಯ ಮಾಡಿದರೆ ಆ ಕೂಡಲೇ ಆಹಾರ ನಿರೀಕ್ಷಕರಿಗೆ ಮತ್ತು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬೇಕು.
3. ನ್ಯಾಯಬೆಲೆ ಅಂಗಡಿಯವರು ಹೆದರಿಸಿ, ಬೆದರಿಸಿದಂತಹ ಸಂದರ್ಭದಲ್ಲಿ ಸಾಧ್ಯವಾದರೆ ವಿಡಿಯೋ ಮಾಡಿಕೊಳ್ಳಬೇಕು ಮತ್ತು ಆಹಾರ ಶಿರಸ್ತೆದಾರರಿಗೆ ಲಿಖಿತವಾಗಿ ದೂರು ನೀಡಬೇಕು.
4. ತಾವು ನೀಡಿದ ದೂರಿಗೆ ಆಹಾರ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದೆ ಇದ್ದ ಸಂದರ್ಭದಲ್ಲಿ ದಯವಿಟ್ಟು KRS ಪಕ್ಷದ (79756-25575) ಅಥವಾ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ (88842-77730) ಸಹಾಯವಾಣಿಗಳನ್ನು ಸಂಪರ್ಕಿಸಿ.
5. ಪಡಿತರ ಪಡೆಯುವುದಕ್ಕಿಂತ ಮೊದಲು ತಮಗೆ ಆ ತಿಂಗಳಿನಲ್ಲಿ ಸಿಗಬೇಕಾದ ಪಡಿತರದ ಪ್ರಮಾಣವನ್ನು ತಿಳಿದುಕೊಂಡಿರುವುದು ಉತ್ತಮ. ಹಾಗಾದಾಗ ಮಾತ್ರ ಅಂಗಡಿಯವರು ತೂಕದಲ್ಲಿ ಅಥವಾ ಪ್ರಮಾಣದಲ್ಲಿ ಮೋಸ ಮಾಡುವುದು ಗೊತ್ತಾಗುತ್ತದೆ ಮತ್ತು ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಿ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ.
6. ರಾಜ್ಯದ ಯಾವುದೇ ಕಾರ್ಡುದಾರ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತನ್ನ ಪಾಲಿನ ಪಡಿತರ ಪಡೆಯಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಅಂಗಡಿಯವರು ಪಡಿತರ ನೀಡಲು ನಿರಾಕರಿಸುವಂತಿಲ್ಲ. ಹಾಗೆ ನಿರಾಕರಿಸಿದಂತಹ ಸಂದರ್ಭದಲ್ಲಿ ಸ್ಥಳೀಯ ಆಹಾರ ನಿರೀಕ್ಷಕರಿಗೆ ಅಥವಾ ಆಹಾರ ಇಲಾಖೆಯ ಸಹಾಯವಾಣಿಗೆ ಅಥವಾ ಕೆಆರ್ ಎಸ್ ಪಕ್ಷದ ಅಥವಾ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸಹಾಯವಾಣಿಗೆ ಕರೆ ಮಾಡಿ ದೂರು ಅಥವಾ ಮಾಹಿತಿ ನೀಡಿ.
ಈ ಕಾರ್ಯಾಚರಣೆ ಯಶಸ್ವಿಯಾಗಿ, ಅನ್ನಭಾಗ್ಯ ಯೋಜನೆ ಹಾಗೂ ಪಡಿತರ ವಿತರಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಮೋಸ, ವಂಚನೆ ನಿಲ್ಲುವಂತಾದರೆ ಮಾತ್ರ ಸಾಲುಮರದ ವೀರಾಚಾರಿಯವರ ಬಲಿದಾನಕ್ಕೆ ಒಂದು ಅರ್ಥ ಇರುತ್ತದೆ. ಅದಾದಾಗ ಮಾತ್ರ ನಾವು ವೀರಾಚಾರಿಯವರಿಗೆ ಪ್ರಾಮಾಣಿಕ ಗೌರವ ಸಲ್ಲಿಸಿದಂತಾಗುತ್ತದೆ.
.




















