ಬೆಂಗಳೂರು, ಜೂ.30 www.bengaluruwire.com: ನಗರದ ಬೀದಿ ನಾಯಿಗಳ ಸಮಸ್ಯೆ, ವೃಕ್ಷ ಗಣತಿಯಲ್ಲಿನ ಕಳ್ಳಾಟ, ಫುಟ್ಪಾತ್ ತೆರವು ಮತ್ತು ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು, ಅಧಿಕಾರಿಗಳು ಹಾಗೂ ವಿರೋಧ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಕಳೆದ 8 ವರ್ಷಗಳಲ್ಲಿ 3 ಲಕ್ಷ ನಾಯಿಗಳಿಗೆ ಸಂತಾನಹರಣ (ABC) ಮಾಡಲಾಗಿದ್ದು, ಇದಕ್ಕಾಗಿ ಬರೋಬ್ಬರಿ 120 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, ನಾಯಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದು ಸಚಿವರು ಪಶುಪಾಲನಾ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
”ಹಣ ಎಲ್ಲಿಗೆ ಹೋಯ್ತು? ಸಂತಾನ ಹರಣ ಯಾರಿಗೆ ಮಾಡಿದ್ರು ಅನ್ನೋ ಸಂಶಯವಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಂದಿನ ಆರು ತಿಂಗಳಲ್ಲಿ 90,000 ಎಬಿಸಿ ಗುರಿ ಮುಟ್ಟಬೇಕು. ವರ್ಷಕ್ಕೆ 30 ಸಾವಿರದ ಬದಲು, ಸತತ ಮೂರು ವರ್ಷ 90,000 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಈ ಸಮಸ್ಯೆಗೆ ದೀರ್ಘಾವಧಿ ಪರಿಹಾರ ಸಿಗಲಿದೆ ಎಂದರು. ಪ್ರಸ್ತುತ 6,799 ನಾಯಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗಿದೆ.
ನೆಟ್ಟ 20 ಲಕ್ಷ ಗಿಡಗಳು ಎಲ್ಲಿ ಹೋದವು?:

2008ರಿಂದ ಈಚೆಗೆ ನಗರದಲ್ಲಿ 20 ಲಕ್ಷ ಗಿಡಗಳನ್ನು ನೆಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಶೇ. 85ರಷ್ಟು ಪೂರ್ಣಗೊಂಡಿರುವ ‘ಟ್ರೀ ಸೆನ್ಸಸ್’ (ವೃಕ್ಷ ಗಣತಿ) ಪ್ರಕಾರ ನಗರದಲ್ಲಿರುವ ಒಟ್ಟು ಮರಗಳ ಸಂಖ್ಯೆ ಕೇವಲ 9 ಲಕ್ಷ. “ಹಾಗಾದರೆ 2008ಕ್ಕೂ ಮುನ್ನ ನೆಟ್ಟ ಮರಗಳು, ಮೈಸೂರು ಮಹಾರಾಜರು ನೆಟ್ಟ ಮರಗಳು ಮತ್ತು ಬಾಕಿ ಗಿಡಗಳೆಲ್ಲ ಎಲ್ಲಿ ಹೋದವು?” ಎಂದು ಸಚಿವರು ಪ್ರಶ್ನಿಸಿದ್ದಾರೆ. ಇದಕ್ಕೆ ಅಧಿಕಾರಿಗಳಿಂದ ಸರಿಯಾದ ಉತ್ತರ ಸಿಕ್ಕಿಲ್ಲ.
ಒಂದು ಗಿಡ ನೆಡಲು ಸರ್ಕಾರಕ್ಕೆ ಸರಾಸರಿ 2,300 ರೂ. ಖರ್ಚಾಗುತ್ತಿದೆ. (ಗುಂಡಿ ತೋಡಲು 300 ರೂ., ಗಿಡಕ್ಕೆ 150 ರೂ., ಟ್ರೀ ಗಾರ್ಡ್ಗೆ 452 ರೂ., ಕಡ್ಡಿಗೆ 60 ರೂ., ಕಾವಲುಗಾರನಿಗೆ 160 ರೂ., ಹಾಗೂ ಮೂರು ವರ್ಷ ನೀರು ಹಾಕಲು 1400 ರೂ.). ಈ ವರ್ಷದಿಂದ ಸಾರ್ವಜನಿಕರ ಸಹಭಾಗಿತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಬೇಡಿಕೆಗೆ ಅನುಗುಣವಾಗಿ ಗಿಡಗಳನ್ನು ನೀಡಲಾಗುವುದು. 64 ಸಾವಿರ ಗಿಡ ನೆಡಲು 9 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.
ಸಹಾಯ್ ಪೋರ್ಟಲ್ನಲ್ಲಿ ದೂರು ನೀಡಿ: ವಯಸ್ಸಾಗಿರುವ, ಅಪಾಯಕ್ಕೆ ಎಡೆಮಾಡುವ ಅಥವಾ ಒಣಗಿರುವ ಮರಗಳಿದ್ದರೆ ಸಾರ್ವಜನಿಕರು ಜಿಬಿಎ ‘ಸಹಾಯ್’ ಪೋರ್ಟಲ್ (Sahaya Portal) ಮೂಲಕ ಆನ್ಲೈನ್ನಲ್ಲಿ ದೂರು ನೀಡಬಹುದು ಎಂದು ಸಚಿವರು ಮಾಹಿತಿ ನೀಡಿದರು.
ಫುಟ್ಪಾತ್ ವ್ಯಾಪಾರಿಗಳ ಸಂಪೂರ್ಣ ಒಕ್ಕಲೆಬ್ಬಿಸುವಿಕೆ ಇಲ್ಲ:
ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ನಗರದ ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ (ಮುಖ್ಯ ರಸ್ತೆಗಳು) ರಸ್ತೆಗಳ 2,000 ಕಿ.ಮೀ ಉದ್ದದ ಫುಟ್ಪಾತ್ ಒತ್ತುವರಿಯನ್ನು ಮಾತ್ರ ತೆರವುಗೊಳಿಸಲಾಗುತ್ತಿದೆ. ಫುಟ್ಪಾತ್ ವ್ಯಾಪಾರಿಗಳನ್ನು ನಾವು ಸಂಪೂರ್ಣವಾಗಿ ಒಕ್ಕಲೆಬ್ಬಿಸುತ್ತಿಲ್ಲ. ಬೆಂಗಳೂರಿನಲ್ಲಿ ವರ್ಷಕ್ಕೆ 300 ಪಾದಚಾರಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ರಸ್ತೆಗಳನ್ನು ಬಿಟ್ಟು ಬೇರೆಡೆ ವ್ಯಾಪಾರ ಮಾಡಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು.
ಬಿಜೆಪಿ ಶಾಸಕರಿಗೆ ಅನುದಾನ ತಾರತಮ್ಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ:
ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಬಿಜೆಪಿ ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿದ ಕೃಷ್ಣ ಬೈರೇಗೌಡ, “ಬಿಜೆಪಿ ಸರ್ಕಾರವಿದ್ದಾಗ ಅವರ ಶಾಸಕರಿಗೆ ಸರಾಸರಿ 480 ಕೋಟಿ ರೂ. ಮತ್ತು ಕಾಂಗ್ರೆಸ್ ಶಾಸಕರಿಗೆ ಕೇವಲ 110 ಕೋಟಿ ರೂ. ಅನುದಾನ ನೀಡಲಾಗಿತ್ತು. ಕಾಂಗ್ರೆಸ್ ಶಾಸಕರಿಗೆ ಕೇವಲ ಶೇ. 20ರಷ್ಟು ಅನುದಾನ ಕೊಟ್ಟು ಅನ್ಯಾಯ ಮಾಡಿದ್ದ ಬಿಜೆಪಿಗೆ ಈಗ ಮಾತನಾಡುವ ನೈತಿಕತೆ ಇಲ್ಲ,” ಎಂದರು.
ಕಳೆದ ನಾಲ್ಕು ವರ್ಷಗಳಿಂದ ವಿರೋಧ ಪಕ್ಷದ ಕ್ಷೇತ್ರಗಳ ಅಭಿವೃದ್ಧಿ ಕುಂಠಿತವಾಗಿತ್ತು. ಈಗ ನಾವು ಸರಾಸರಿ ಶೇ. 50ರಷ್ಟು ಅನುದಾನ ನೀಡುವ ಮೂಲಕ ಆ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.






















