ಬೆಂಗಳೂರು, ಏ.23 www.bengaluruwire.com: ರಾಜ್ಯದ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ವಿಶೇಷವಾಗಿ ಮೊಣಕಾಲು (TKR) ಮತ್ತು ಸೊಂಟದ (THR) ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗಾಗಿ ಇನ್ನು ಮುಂದೆ ರೋಗಿಗಳು ದೊಡ್ಡ ನಗರಗಳ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವ ಅಗತ್ಯವಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೇ ಈ ಸೌಲಭ್ಯಗಳನ್ನು ಬಲಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯತಂತ್ರದ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹಿನ್ನೆಲೆ ಮತ್ತು ಸವಾಲುಗಳು:

ನಗರದ ಆರೋಗ್ಯಸೌಧದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, 2023-24ರ ಆರ್ಥಿಕ ವರ್ಷದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ನಡೆದ ಒಟ್ಟು 1,709 ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಲ್ಲಿ ಕೇವಲ 601 (ಶೇ. 35) ಪ್ರಕರಣಗಳು ಮಾತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವು. ಉಳಿದ 1,108 ಪ್ರಕರಣಗಳು (ಶೇ. 65) ಖಾಸಗಿ ಆಸ್ಪತ್ರೆಗಳಲ್ಲಿ ನಡೆದಿದ್ದವು. ಹೀಗಾಗಿ ಇದನ್ನು ಎದುರಿಸಲು ರಾಜ್ಯ ಸರ್ಕಾರವು, 2024 ಸೆಪ್ಟೆಂಬರ್ 11 ರಂದು ವಿಶೇಷ ಆದೇಶವನ್ನು (HFW 425 CGE 2024) ಹೊರಡಿಸಿತು.

ಈ ಆದೇಶದ ಅಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವುದು, ಒಳಗಿನ ಶಸ್ತ್ರಚಿಕಿತ್ಸಾ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಶಿಫಾರಸು ಮಾಡುವುದನ್ನು (Referrals) ಕಡಿತಗೊಳಿಸುವುದು ಪ್ರಮುಖ ಉದ್ದೇಶವಾಗಿತ್ತು. ಇದಕ್ಕಾಗಿ ಹಿರಿಯ ತಜ್ಞರ ಸಮಿತಿ ಮತ್ತು ಮಾರ್ಗದರ್ಶಕ ಶಸ್ತ್ರಚಿಕಿತ್ಸಕರನ್ನು ಒಳಗೊಂಡ ಹೊಸ ಆಡಳಿತ ರಚನೆಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಲ್ಲಿ ಗಮನಾರ್ಹ ಸುಧಾರಣೆಯಾಗಿದೆ.
ಈ ಮೊದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ನ್ಯೂನತೆ ಮತ್ತು ರೋಗಿಗಳು ಖಾಸಗಿ ಆಸ್ಪತ್ರೆಗಳ ಮೇಲೆ ಹೊಂದಿದ್ದ ಅತಿಯಾದ ಅವಲಂಬನೆಯನ್ನು ತೋರಿಸುತ್ತಿತ್ತು. ಇದರಿಂದಾಗಿ ರೋಗಿಗಳಿಗೆ ಆರ್ಥಿಕ ಹೊರೆಯಾಗುವುದಲ್ಲದೆ, ದೂರದ ನಗರಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಆದರೀಗ ಈ ಸಮಸ್ಯೆ ಕಡಿಮೆಯಾಗಿದೆ ಎಂದರು.
ಜಾರಿಗೆ ಬಂದ ಪ್ರಮುಖ ಸುಧಾರಣೆಗಳು:
1. ಪರಿಷ್ಕೃತ ಆನ್ಲೈನ್ ರೆಫರಲ್ ಸಿಸ್ಟಮ್ (ORS): 2024 ಅಕ್ಟೋಬರ್ 29 ರಿಂದ ಜಾರಿಗೆ ಬಂದ ಈ ವ್ಯವಸ್ಥೆಯು ಶಸ್ತ್ರಚಿಕಿತ್ಸೆಗೆ ಮೊದಲು ಕಟ್ಟುನಿಟ್ಟಿನ ವೈದ್ಯಕೀಯ ತಪಾಸಣೆಯನ್ನು ಖಚಿತಪಡಿಸುತ್ತದೆ. ಇದರಿಂದ ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ತಡೆಯಲು ಮತ್ತು ರೋಗಿಗಳಿಗೆ ಸರಿಯಾದ ಚಿಕಿತ್ಸಾ ಯೋಜನೆ ರೂಪಿಸಲು ಸಾಧ್ಯವಾಗುತ್ತಿದೆ.
2. ಆಸ್ಪತ್ರೆಗಳ ಜಾಲ ವಿಸ್ತರಣೆ: ಈ ಹಿಂದೆ ಕೇವಲ 17 ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಈ ಸೌಲಭ್ಯವಿತ್ತು. ಪ್ರಸ್ತುತ ವೈದ್ಯಕೀಯ ಕಾಲೇಜುಗಳು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 40 ಸೌಲಭ್ಯಗಳನ್ನು ಈ ಜಾಲಕ್ಕೆ ಸೇರಿಸಲಾಗಿದೆ.
3. ಮಾರ್ಗದರ್ಶನ ಕಾರ್ಯಕ್ರಮ (Mentorship Programme): ಅನುಭವಿ ಮೂಳೆ ಶಸ್ತ್ರಚಿಕಿತ್ಸಕರನ್ನು ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿ, ಅಲ್ಲಿನ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ಇದರ ಫಲವಾಗಿ ತರಬೇತಿ ಪಡೆದ ಸರ್ಕಾರಿ ಶಸ್ತ್ರಚಿಕಿತ್ಸಕರು ಈಗ ಸ್ವತಂತ್ರವಾಗಿ 11 THR ಮತ್ತು 7 TKR ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.
4. ಹಣಕಾಸು ನೆರವು: ಸರ್ಕಾರಿ ಆಸ್ಪತ್ರೆಗಳಿಗೆ ಶಸ್ತ್ರಚಿಕಿತ್ಸಾ ಮರುಪಾವತಿಯನ್ನು (Reimbursement) ಶೇ. 75 ರಿಂದ ಶೇ. 100 ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಆಸ್ಪತ್ರೆಗಳಿಗೆ ಉತ್ತಮ ಗುಣಮಟ್ಟದ ಇಂಪ್ಲಾಂಟ್ಗಳನ್ನು ಸಂಗ್ರಹಿಸಲು ಅನುಕೂಲವಾಗಿದೆ.
ಜಿಲ್ಲಾವಾರು ಸಾಧನೆ ಮತ್ತು ಪ್ರಾದೇಶಿಕ ಪ್ರಭಾವ:
ಸರ್ಕಾರದ ಈ ಯೋಜನೆಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಗರಿಷ್ಠ 6 ಸೌಲಭ್ಯಗಳಿದ್ದರೆ, ದಕ್ಷಿಣ ಕನ್ನಡದಲ್ಲಿ 4 ಕೇಂದ್ರಗಳಿವೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಈ ಹಿಂದೆ ಶೂನ್ಯವಾಗಿದ್ದ ಶಸ್ತ್ರಚಿಕಿತ್ಸೆಗಳ ಸಂಖ್ಯೆ, ಮಾರ್ಗದರ್ಶನ ಕಾರ್ಯಕ್ರಮದ ನಂತರ 36ಕ್ಕೆ ಏರಿದೆ. ಚಿತ್ರದುರ್ಗದಲ್ಲಿ 22 ಮತ್ತು ಕೋಲಾರದ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ 12 ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲೂ ಇದರ ಪ್ರಭಾವ ಸಕಾರಾತ್ಮಕವಾಗಿದೆ. ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಪಾಲು ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ.
ರೋಗಿಗಳಿಗೆ ದೊರೆಯುತ್ತಿರುವ ಪ್ರಯೋಜನಗಳು:
ಸರ್ಕಾರಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳು ಉಚಿತವಾಗಿ ದೊರೆಯುತ್ತಿರುವುದರಿಂದ ರೋಗಿಗಳ ‘ಸ್ವಂತ ಕೈಯಿಂದ ಆಗುವ ಖರ್ಚು’ (Out-of-pocket expenditure) ಕಡಿಮೆಯಾಗಿದೆ. ಈ ಹಿಂದೆ 300 ರಿಂದ 500 ಕಿ.ಮೀ ಪ್ರಯಾಣಿಸುತ್ತಿದ್ದ ರೋಗಿಗಳು ಈಗ ತಮ್ಮ ಜಿಲ್ಲಾ ಕೇಂದ್ರಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಫಿಸಿಯೋಥೆರಪಿ ಮತ್ತು ಕಾಲ್ ಸೆಂಟರ್ ಮೂಲಕ ಫಾಲೋ-ಅಪ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.
ಉಚಿತ ಎರಡನೇ ಅಭಿಪ್ರಾಯ ಸಹಾಯವಾಣಿ (1800 425 8330):
ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ಬಗ್ಗೆ ಇರುವ ಆತಂಕ ಮತ್ತು ಅನಿಶ್ಚಿತತೆಯನ್ನು ದೂರ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಅಡಿಯಲ್ಲಿ ಉಚಿತ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. 24×7 ಲಭ್ಯವಿರುವ ಈ ಸಹಾಯವಾಣಿಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರೋಗಿಗಳಿಗೆ ತಜ್ಞರಿಂದ ಎರಡನೇ ಅಭಿಪ್ರಾಯ (Second Opinion) ಪಡೆಯಲು ನೆರವಾಗುತ್ತದೆ. ಗ್ರೇಡ್ 1 ಮತ್ತು 2 ರ ಸಂಧಿವಾತಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದಿರಬಹುದು, ಇಂತಹ ಸಂದರ್ಭಗಳಲ್ಲಿ ರೋಗಿಗಳಿಗೆ ಪರ್ಯಾಯ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಲು ಇದು ಸಹಕಾರಿಯಾಗಿದೆ.
ಈ ಸಮಗ್ರ ಸುಧಾರಣೆಗಳಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಶಸ್ತ್ರಚಿಕಿತ್ಸೆಗಳ ಪಾಲು ಶೇ. 35 ರಿಂದ ಶೇ. 99 ಕ್ಕೆ ಏರಿಕೆಯಾಗುವ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಹೆಚ್ಚಿದೆ.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಗುರುದತ್ ಹೆಗಡೆ, ಹಿರಿಯ ತಜ್ಞ ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.





















