ಬೆಂಗಳೂರು, ಮೇ.13 www.bengaluruwire.com: ಸಿಲಿಕಾನ್ ಸಿಟಿಯ ಆಸ್ತಿ ಮಾಲೀಕರ ದಶಕಗಳ ಕಾಲದ ಆತಂಕಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಬೆಂಗಳೂರಿನಲ್ಲಿರುವ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾವಾಗಿ ಪರಿವರ್ತಿಸಲು ವಿಧಿಸಲಾಗುತ್ತಿದ್ದ ಮಾರ್ಗಸೂಚಿ ದರದ (Guidance Value) ಶುಲ್ಕವನ್ನು ಶೇ. 5ರಿಂದ ಶೇ. 2ಕ್ಕೆ ಇಳಿಕೆ ಮಾಡಲಾಗುತ್ತಿದೆ. ಈ ವಿಶೇಷ ಅಭಿಯಾನದಡಿ 100 ದಿನಗಳ ಕಾಲ, ಒಂದು ಬಾರಿಗೆ ಮಾತ್ರವೇ ಈ ಅವಕಾಶ ಕಲ್ಪಿಸಿರುವುದಾಗಿ ಅವರು ಪ್ರಕಟಿಸಿದ್ದಾರೆ.
ಏನಿದು ‘ಭೂ ಗ್ಯಾರಂಟಿ’ ಯೋಜನೆ?
ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಯಶಸ್ಸಿನ ಬೆನ್ನಲ್ಲೇ ಬೆಂಗಳೂರಿಗರಿಗಾಗಿ 6ನೇ ಗ್ಯಾರಂಟಿಯಾಗಿ “ಭೂ ಗ್ಯಾರಂಟಿ”ಯನ್ನು ಘೋಷಿಸಲಾಗಿದೆ. ಈ ಯೋಜನೆಯಡಿ ನಗರದ ಸುಮಾರು 23 ಲಕ್ಷ ಆಸ್ತಿ ಮಾಲೀಕರಿಗೆ ಸುರಕ್ಷಿತ, ವಂಚನೆ ಮುಕ್ತ ಮತ್ತು ಡಿಜಿಟಲ್ ಇ-ಖಾತಾ ಒದಗಿಸಲಾಗುವುದು. ಈಗಾಗಲೇ 23 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಡಿಜಿಟಲ್ ಸ್ಕ್ಯಾನಿಂಗ್ ಮಾಡಲಾಗಿದ್ದು, ಇವುಗಳನ್ನು ನಾಗರಿಕರ ಮನೆ ಬಾಗಿಲಿಗೇ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.


‘ನನ್ನ ಖಾತಾ – ನನ್ನ ಹಕ್ಕು’ ಅಭಿಯಾನ:
ಮೇ 16ರಿಂದ ಪ್ರತಿ ಶನಿವಾರ ಬೆಂಗಳೂರಿನ 50 ಆಯ್ದ ಸ್ಥಳಗಳಲ್ಲಿ (ಶಾಲೆಗಳು ಮತ್ತು ಪಾಲಿಕೆ ಕಚೇರಿಗಳು) “ನನ್ನ ಖಾತಾ – ನನ್ನ ಹಕ್ಕು” (ಇ-ಖಾತಾ ಸಿಟಿಜನ್ ಓಪನ್ ಹೌಸ್) ಕಾರ್ಯಕ್ರಮ ನಡೆಯಲಿದೆ. ಮುಂದಿನ 100 ದಿನಗಳ ಕಾಲ ಈ ಅಭಿಯಾನ ನಡೆಯಲಿದ್ದು, ಈ ಅವಧಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಶೇ. 2ರಷ್ಟು ರಿಯಾಯಿತಿ ದರದ ಶುಲ್ಕ ಅನ್ವಯವಾಗಲಿದೆ. 100 ದಿನಗಳ ನಂತರ ಹಳೆಯ ಶೇ. 5ರಷ್ಟು ಶುಲ್ಕವೇ ಅನ್ವಯವಾಗಲಿದೆ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಕಳೆದ ವರ್ಷ ನ.01 ರಂದು “ನಮ್ಮ ಖಾತೆ ನಮ್ಮ ಹಕ್ಕು” ಆಂದೋಲನವನ್ನು ಜಿಬಿಎ ವ್ಯಾಪ್ತಿಯಲ್ಲಿ ಪಾಲಿಕೆಗಳು ಹಮ್ಮಿಕೊಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಪ್ರತಿಕ್ರಿಯೆ ಬಂದಿರಲಿಲ್ಲ. ಇ-ಆಸ್ತಿ ತಂತ್ರಾಂಶದಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸದ ಕಾರಣ ಈಗಲೂ ಸ್ವತ್ತಿನ ಮಾಲೀಕರು ಇ-ಖಾತಾ ಪಡೆದುಕೊಳ್ಳುವಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಒಂದು ಮಾತು ಆಡಲಿಲ್ಲ.
ಕಟ್ಟಡ ನಿಯಮ ಉಲ್ಲಂಘನೆ ಮಿತಿ ಏರಿಕೆ:
ನಗರದ ಭೂಮಿ ಕೊರತೆ ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕಟ್ಟಡ ನಕ್ಷೆ ಉಲ್ಲಂಘನೆಯ ಮಿತಿಯನ್ನು ಈಗಿರುವ ಶೇ. 5ರಿಂದ ಶೇ. 15ಕ್ಕೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ಸಣ್ಣಪುಟ್ಟ ಉಲ್ಲಂಘನೆಗಳಿಂದಾಗಿ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಪಡೆಯಲಾಗದೆ ನೀರು ಮತ್ತು ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದ ಸಾವಿರಾರು ಮಾಲೀಕರಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.
ಗುರುಗುಂಟೆಪಾಳ್ಯ ಸಿಗ್ನಲ್ ಟ್ರಾಫಿಕ್ ಜಾಮ್:
ಗುರುಗುಂಟೆಪಾಳ್ಯ ಸಿಗ್ನಲ್ ನಲ್ಲಿ ಹೆಚ್ಚಿನ ವಾಹನ ಸಂಚಾರದಿಂದ ಸುಗಮವಾಗಿ ವಾಹನ ಸಂಚರಿಸಲು ಸಾಧ್ಯವಾಗದೆ ಟ್ರಾಫಿಕ್ ಜಾಮ್ ಆಗುತ್ತಿದ್ದು, ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ರಕ್ಷಣಾ ಇಲಾಖೆಯಿಂದ ಅಗತ್ಯ ಜಾಗ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ.
ಈ ಭಾಗದಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ಒಂದೇ ಪರಿಹಾರ. ಬೆಂಗಳೂರಿಂದ ಮೈಸೂರಿಗೆ ತೆರಳುವ ವಾಹನಗಳು ನೆಲಮಂಗಲದಿಂದ ಮೈಸೂರು ರಸ್ತೆಗೆ ತೆರಳಲು ಪರ್ಯಾಯ ಮಾರ್ಗ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಮೇ.15ರಿಂದ ಕಾರಂತ ಬಡಾವಣೆ ಭೂಮಾಲೀಕರಿಗೆ ನಿವೇಶನ ಹಂಚಿಕೆ:
3,502 ಭೂ ಮಾಲೀಕರು ಡಾ.ಶಿವರಾಮಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ್ದಾರೆ. ಇಂತಹವರ ಪೈಕಿ 18,000 ಮಂದಿಗೆ ನಿವೇಶನಗಳನ್ನು ಮೇ.15ರಿಂದ ಹಕ್ಕುಪತ್ರ ನೀಡಲಾಗುತ್ತದೆ. ಉದಾಹರಣೆಗೆ ಒಬ್ಬ ಭೂಮಾಲೀಕ ಒಂದು ಎಕರೆ ಜಾಗ ನೀಡಿದ್ದರೆ 3983 ಚದರ ಅಡಿ ಜಾಗವನ್ನು ಅವರು ಬಯಸಿದ ಒಂದೇ ಕಡೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜೂ.27 ರಂದು ನಗದಲ್ಲಿ ಒಂದೇ ದಿನ 15 ಲಕ್ಷ ಸಸಿ ನಡುವಿಕೆ:
ಕೆಂಪೇಗೌಡ ಜಯಂತಿ ದಿನದಂದು ಹಸಿರು ಬೆಂಗಳೂರು ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಎನ್ ಜಿಒ, ಖಾಸಗಿ ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಸೇರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (BBC) ಯೋಜನೆ ಮೊದಲ ಫೇಸ್-1 ಟೆಂಡರ್ ಕರೆಯಾಗಿದೆ. ಸದ್ಯದಲ್ಲೇ ಫೇಸ್-2 ಯೋಜನೆಗೆ ಎರಡನೇ ಟೆಂಡರ್ ಕರೆಯಲಾಗುತ್ತದೆ. ಬಿಬಿಸಿ ಯೋಜನೆ ಅನುಷ್ಠಾನ ಮಾಡುವ ಮೂಲಕ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತೇವೆ. ಯಾವುದೇ ಸಂದರ್ಭದಲ್ಲೂ ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಯೋಜನೆಗೆ ಗುರ್ತಿಸಿದ ಭೂಮಿಯನ್ನು ಡಿನೋಟಿಫೈ ಮಾಡುವುದಿಲ್ಲ. ಸಾಕಷ್ಟು ಭೂಪರಿಹಾರವನ್ನು ಭೂಮಾಲೀಕರಿಗೆ ಕಲ್ಪಿಸಿದ್ದೇವೆ.
ಹೆಬ್ಬಾಳದಿಂದ ಜಿಕೆವಿಕೆ ತನಕ ಸಣ್ಣ 2.2 ಕಿ.ಮೀ ಸುರಂಗ ಮಾರ್ಗವನ್ನು, ಅಲ್ಲಿಂದ 1.7 ಕಿ.ಮೀ ಮೇಖ್ರಿ ಸರ್ಕಲ್ ತನಕ ಮೇಲ್ಸೇತುವೆಯನ್ನು 18 ತಿಂಗಳಲ್ಲಿ ಮುಗಿಸಲು ಗಡವು ನೀಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರೀಸ್, ಪುಲಕೇಶಿನಗರ ವಿಧಾನಸಭೆ ಕ್ಷೇತ್ರದ ಶಾಸಕ ಎ.ಸಿ.ಶ್ರೀನಿವಾಸ್, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮತ್ತಿತರರು ಉಪಸ್ಥಿತರಿದ್ದರು.



















