ಬೆಂಗಳೂರು, ಮೇ.09 www.bengaluruwire.com: ಬೆಂಗಳೂರಿನ ಬಹುನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆ ಅನುಷ್ಠಾನ ಮೂರು ಪ್ಯಾಕೇಜ್ ಗಳ ಪೈಕಿ, ಮಾರ್ಚ್ ನಲ್ಲಿ ಕರೆದಿದ್ದ 3,100 ಕೋಟಿ ರೂ. ಮೌಲ್ಯದ ಮೊದಲ ಪ್ಯಾಕೇಜ್ ತಾಂತ್ರಿಕ ಬಿಡ್ ಮೇ.08ರಂದು ತೆರೆದಿದ್ದು, ಜೂನ್ ವೇಳೆಗೆ ಯೋಜನೆಗೆ ಚಾಲನೆ ದೊರಕಲಿದೆ.
ಒಟ್ಟು 27,000 ಕೋಟಿ ರೂ. ಮೊತ್ತದ ಬೃಹತ್ ಯೋಜಮೆ ಪೈಕಿ ₹10,600 ಕೋಟಿ ಬಿಬಿಸಿ ರಸ್ತೆ ಹಾಗೂ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ವೆಚ್ಚವಾದರೆ ಉಳಿದ ಹಣವು ಭೂಮಿ ನೀಡಿದ ರೈತರಿಗೆ ಪರಿಹಾರ ಒದಗಿಸಲು ಮೀಸಲಿಡಲಾಗಿದೆ. ಹುಡ್ಕೋ ಸಂಸ್ಥೆಯು ಈ ಯೋಜನೆಗೆ ಸಾಲ ನೀಡುತ್ತಿದೆ. ಈಗಾಗಲೇ ಹುಡ್ಕೋ ಸಾಲ ಮಂಜೂರು ಮಾಡಿದ್ದು, ರೈತರ ಪರಿಹಾರ ನೀಡಲು ಪ್ರಾರಂಭಿಕವಾಗಿ ₹200 ಕೋಟಿ ಹಣವನ್ನು ತೆಗೆಯಲಾಗಿದೆ ಎಂದು ಬಿಬಿಸಿ ಸಂಸ್ಥೆಯು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ಬಿಬಿಸಿ ಯೋಜನೆಯು ಬೆಳೆಯುತ್ತಿರುವ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಪರಿಹಾರ ಒದಗಿಸಲಿದ್ದು, 21 ಕಿ.ಮೀ ಉದ್ದದ ಮೊದಲ ಪ್ಯಾಕೇಜ್ 3,100 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತವಾಗಲಿದೆ.

ಯೋಜನೆಯ ಕುರಿತಂತೆ ಬೆಂಗಳೂರು ವೈರ್ ಜೊತೆ ಮಾತನಾಡಿದ ಬಿಬಿಸಿ ಅಧ್ಯಕ್ಷ ಎಲ್.ಕೆ.ಅತೀಕ್, “ಮೇ.08ರಂದು ಮೊದಲ ಪ್ಯಾಕೇಜ್ ತಾಂತ್ರಿಕ ಬಿಡ್ ತೆರೆಯಲಾಗಿದ್ದು, ಶಂಕರನಾರಾಯಣ ಕನ್ ಸ್ಟ್ರಕ್ಷನ್ ಹಾಗೂ ವಿಶ್ವ ಸಮುದ್ರ ಇಂಜಿನಿಯರಿಂಗ್ ಸಂಸ್ಥೆಯು ಟೆಂಡರ್ ನಲ್ಲಿ ಪಾಲ್ಗೊಂಡಿದೆ. ಎರಡು ಸಂಸ್ಥೆಗಳ ತಾಂತ್ರಿಕ ಮೌಲ್ಯಮಾಪನ ನಡೆಸಿ ಬಳಿಕ ಆರ್ಥಿಕ ಬಿಡ್ ತೆರೆದು ಮೌಲ್ಯಮಾಪನ ಕೈಗೊಂಡು ಜೂನ್- ಜುಲೈ ವೇಳೆಗೆ ಕಾರ್ಯಾದೇಶ ನೀಡಲಾಗುತ್ತೆ. ಜೂನ್ ಕೊನೆಯಲ್ಲಿ ಎರಡನೇ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.

“ಪಿಆರ್ ಆರ್-1 ಯೋಜನೆಯಲ್ಲಿ ಶೇ.80ರಷ್ಟು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ನೂರಾರು ರೈತರು, ಬಿಬಿಸಿ ನೀಡಿರುವ ವಿವಿಧ ರೀತಿಯ ಅವಕಾಶಗಳನ್ನು ಬಳಸಿಕೊಂಡು ಭೂಪರಿಹಾರ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ಮೂರು ಪ್ಯಾಕೇಜ್ ಗಳಡಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತಿದೆ. ಆಗಸ್ಟ್ ಅಂತ್ಯದ ವೇಳೆಗೆ ಎರಡು ಪ್ಯಾಕೇಜ್ ಟೆಂಡರ್ ನೀಡುವ ಕಾರ್ಯ ಪೂರ್ಣಗೊಂಡಿರುತ್ತದೆ” ಎಂದು ಅತೀಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪಿಆರ್ ಆರ್-1 ಬಿಬಿಸಿ ಯೋಜನೆಗಾಗಿ ಮೊದಲ ಪ್ಯಾಕೇಜ್ ನಲ್ಲಿನ ರಸ್ತೆಯು ಸಿಗ್ನಲ್ ಮುಕ್ತ ರಸ್ತೆಯಾಗಲಿದ್ದು, ರಸ್ತೆಯು ಅಡ್ಡ ರಸ್ತೆಗಳಿಂದ ನೇರವಾಗಿ ಛೇದಿಸಲ್ಪಡುವುದಿಲ್ಲ. ಇದು 8 ಎಕ್ಸ್ಪ್ರೆಸ್ ಲೇನ್ಗಳನ್ನು ಹೊಂದಿರುವ ಟೋಲ್ ರಸ್ತೆಯಾಗಲಿದೆ. ವಾಹನಗಳು ಇಂಟರ್ಚೇಂಜ್ಗಳಲ್ಲಿ ಮಾತ್ರ ಸೇವಾ ರಸ್ತೆಗಳ ಮೂಲಕ ಎಕ್ಸ್ಪ್ರೆಸ್ ಲೇನ್ಗಳನ್ನು ಸೇರಬಹುದು. 73 ಕಿಮೀ ಉದ್ದದ ಈ ರಸ್ತೆಯು 10 ಇಂಟರ್ಚೇಂಜ್ಗಳನ್ನು ಹೊಂದಿರುತ್ತದೆ, ಅವುಗಳಲ್ಲಿ ಹೆಚ್ಚಿನವು ಕ್ಲೋವರ್ ಲೀಫ್ ಇಂಟರ್-ಚೇಂಜ್ಗಳಾಗಿವೆ.
ಪಿಆರ್ ಆರ್-1 ಅಂದರೆ ಬಿಬಿಸಿ ಪ್ಯಾಕೇಜ್-1 ಯೋಜನೆಯಡಿ ಬರುವ 10 ರಸ್ತೆಗಳೆಂದರೆ:
1. ಹೊಸೂರು ರಸ್ತೆ ಜಂಕ್ಷನ್ (ಎಲೆಕ್ಟ್ರಾನಿಕ್ ಸಿಟಿ ಪಾಯಿಂಟ್ನಲ್ಲಿ ನೈಸ್ ಇಂಟಿಗ್ರೇಷನ್ ಮತ್ತು ಹುಸ್ಕೂರ್ ಹೊಸೂರು ಕಡೆಗೆ 3 ಕಿ.ಮೀ ಕೆಳಗೆ) 2. ಸರ್ಜಾಪುರ, 3. ಗುಂಜೂರು 4. ವೈಟ್ಫೈಲ್ಡ್ 5. ಹಳೆ ಮದ್ರಾಸ್ ರಸ್ತೆ 6. ಹೆಣ್ಣೂರು ರಸ್ತೆ 7. ಬಳ್ಳಾರಿ ರಸ್ತೆ 8. ದೊಡ್ಡಬಳ್ಳಾಪುರ ರಸ್ತೆ 9. ಹೆಸರಘಟ್ಟ 10. ಮಾದವರ NH4 ನಲ್ಲಿ ನೈಸ್ ಇಂಟಿಗ್ರೇಷನ್ 11. NH4 ನಲ್ಲಿ #PRR2 ಕಡೆಗೆ ಮಾದನಾಯಕನ ಹಳ್ಳಿ ಕಡೆಗೆ ಸಾಗುವ ತನಕ ಈ ಯೋಜನೆ ವ್ಯಾಪ್ತಿ ಇರಲಿದೆ.
ಬಿಬಿಸಿಯ ಪ್ರಮುಖ 3-ಪ್ಯಾಕೇಜ್ ವಿವರಗಳು (ಯೋಜನೆಯ ರಚನೆ) ಹೀಗಿವೆ:
ಪ್ಯಾಕೇಜ್ 1: ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗಿನ ಉತ್ತರದ ಭಾಗವನ್ನು (19.37 ಕಿ.ಮೀ) ಒಳಗೊಂಡಿದೆ.
ಪ್ಯಾಕೇಜ್ 2: ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್ ರಸ್ತೆಯವರೆಗೆ (18 ಕಿ.ಮೀ) ವಿಸ್ತರಿಸುತ್ತದೆ.
ಪ್ಯಾಕೇಜ್ 3: ಹಳೆ ಮದ್ರಾಸ್ ರಸ್ತೆಯನ್ನು ಹೊಸೂರು ರಸ್ತೆಗೆ ಸಂಪರ್ಕಿಸುತ್ತದೆ (27.75 ಕಿ.ಮೀ).
ಹೇಗಿರಲಿದೆ ಈ ರಸ್ತೆಗಳು?
8 ಎಕ್ಸ್ಪ್ರೆಸ್ ಲೇನ್ಗಳು: ಇದು ಸಂಪೂರ್ಣ ಸಿಗ್ನಲ್ ಮುಕ್ತ ರಸ್ತೆಯಾಗಲಿದ್ದು, ಟೋಲ್ ಪಾವತಿಸಬೇಕಾಗುತ್ತದೆ.
ಇಂಟರ್ಚೇಂಜ್ಗಳು: 10 ಪ್ರಮುಖ ಜಂಕ್ಷನ್ಗಳಲ್ಲಿ ಕ್ಲೋವರ್ ಲೀಫ್ ಮಾದರಿಯ ಇಂಟರ್ಚೇಂಜ್ಗಳು ಇರಲಿವೆ.
ಮೆಟ್ರೋ ಸಂಪರ್ಕ: ರಸ್ತೆಯ ಮಧ್ಯಭಾಗದಲ್ಲಿ (Median) ಭವಿಷ್ಯದ ಮೆಟ್ರೋ ಯೋಜನೆಗೆ 5 ಮೀಟರ್ ಜಾಗ ಮೀಸಲಿಡಲಾಗಿದೆ.
ಪ್ರಮುಖ ಸಂಪರ್ಕಗಳು: ಹೊಸೂರು ರಸ್ತೆ, ವೈಟ್ಫೀಲ್ಡ್, ಸರ್ಜಾಪುರ, ಬಳ್ಳಾರಿ ರಸ್ತೆ ಮತ್ತು ತುಮಕೂರು ರಸ್ತೆಗಳನ್ನು ಇದು ಜೋಡಿಸಲಿದೆ.
ಭೂಪರಿಹಾರದ ಆಯ್ಕೆಗಳು
ರೈತರ ವಿರೋಧವನ್ನು ಶಮನಗೊಳಿಸಲು ಸರ್ಕಾರ ಮೂರು ರೀತಿಯ ಪರಿಹಾರಗಳನ್ನು ನೀಡುತ್ತಿದೆ:
ನಗದು ಪರಿಹಾರ: ಮಾರುಕಟ್ಟೆ ದರದ ದುಪ್ಪಟ್ಟು ಹಣ.
TDR: ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು.
ಅಭಿವೃದ್ಧಿಪಡಿಸಿದ ಭೂಮಿ: ಭೂಮಿ ನೀಡಿದ ರೈತರಿಗೆ ಲೇಔಟ್ಗಳಲ್ಲಿ ಶೇ. 40ರಷ್ಟು ಅಭಿವೃದ್ಧಿಪಡಿಸಿದ ಜಾಗ.
ಒಟ್ಟಿನಲ್ಲಿ ದಶಕಗಳ ಕಾಲ ವಿಳಂಬವಾಗಿದ್ದ ಪಿಆರ್ ಆರ್ ರಸ್ತೆ ಯೋಜನೆ ಕಾಮಗಾರಿ ಜೂನ್ ನಲ್ಲಿ ಆರಂಭವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.






















