ಬೆಂಗಳೂರು, ಮೇ.09 www.bengaluruwire.com: “ಊರಿಗೆಲ್ಲಾ ಉಪದೇಶ ಹೇಳೋದು, ಒಲೆಮೇಲೆ….” ಎಂಬ ಗಾದೆಯಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (BSWML) ಗೆ ಅಕ್ಷರಶಃ ಅನ್ವಯವಾಗುತ್ತಿದೆ.
ನಗರವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಹೊತ್ತಿರುವ ಈ ಸಂಸ್ಥೆಯ ಕೇಂದ್ರ ಕಚೇರಿಯ ಹಿಂಭಾಗವೇ ಈಗ ‘ತಿಪ್ಪೆಯ ಕೊಂಪೆ’ಯಾಗಿ ಮಾರ್ಪಟ್ಟಿದೆ. ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠ ಮಾಡುವ ಅಧಿಕಾರಿಗಳಿಗೆ ತಮ್ಮ ಕಚೇರಿಯ ಹಿತ್ತಲಲ್ಲೇ ಬಿದ್ದಿರುವ ಕಸ ಕಾಣುತ್ತಿಲ್ಲವೇ ಎಂಬ ಪ್ರಶ್ನೆ ಈಗ ನಾಗರಿಕರನ್ನು ಕಾಡುತ್ತಿದೆ.
ಕೇಂದ್ರ ಕಚೇರಿಯೇ ಕಸದ ಅಡ್ಡೆ:
ಬೆಂಗಳೂರಿನ ಮೂಲಸೌಕರ್ಯದ ರೂಪುರೇಷೆ ಸಿದ್ಧಪಡಿಸುವ ಬಿಸ್ಮೈಲ್ (BSMEAL) ಮತ್ತು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ನಂತಹ ಪ್ರಮುಖ ಕಚೇರಿಗಳಿರುವ ಇದೇ ಕಟ್ಟಡದ ಆವರಣದಲ್ಲಿ ಈಗ ಕಟ್ಟಡ ತ್ಯಾಜ್ಯ ಮತ್ತು ಘನತ್ಯಾಜ್ಯ ರಾಶಿ ಬಿದ್ದಿದೆ. ವರ್ಷಂಪ್ರತಿ 1200 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ತ್ಯಾಜ್ಯ ವಿಲೇವಾರಿಗೆ ಖರ್ಚು ಮಾಡುತ್ತಿದ್ದರೂ, ಎಂಜಿನಿಯರ್ಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ‘ಬಿಎಸ್ಡಬ್ಲ್ಯುಎಂಎಲ್’ ಈಗ ಸಾರ್ವಜನಿಕ ವಲಯದಲ್ಲಿ “ಕಸದ ಆಫೀಸು” ಎಂಬ ಕುಖ್ಯಾತಿಗೆ ಗುರಿಯಾಗಿದೆ.


ಸ್ವಚ್ಛ ಸರ್ವೇಕ್ಷಣೆಯಲ್ಲಿ ಬೆಂಗಳೂರಿಗೆ ಹಿನ್ನಡೆ ಏಕೆ?
2024-25ರ ಸ್ವಚ್ಛ ಸರ್ವೇಕ್ಷಣಾ ಫಲಿತಾಂಶದ ಪ್ರಕಾರ, 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಭಾರತದ 5ನೇ ಅತ್ಯಂತ ಕೊಳಕು ನಗರ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ.

2024-25ರಲ್ಲಿ 36ನೇ ಸ್ಥಾನಕ್ಕೇರಿ ಸುಧಾರಣೆ ಕಂಡಿದ್ದ ನಗರ, ಈಗ ಮತ್ತೆ ಪಾತಾಳಕ್ಕೆ ಕುಸಿದಿದೆ. ಇದಕ್ಕೆ ಮುಖ್ಯ ಕಾರಣ ಬಿಎಸ್ಡಬ್ಲ್ಯುಎಂಎಲ್ನ ತಳಮಟ್ಟದ ಕಳಪೆ ಕಾರ್ಯವೈಖರಿ.
ವೈಜ್ಞಾನಿಕ ಸಂಸ್ಕರಣೆಯ ಕೊರತೆ: ಸಂಗ್ರಹಿಸಿದ ತ್ಯಾಜ್ಯದ ಕೇವಲ 60-70% ಮಾತ್ರ ಸಂಸ್ಕರಣೆಯಾಗುತ್ತಿದೆ.
ಬ್ಲಾಕ್ ಸ್ಪಾಟ್ ಸಮಸ್ಯೆ: ಕಸದ ಕಿಯೋಸ್ಕ್ಗಳಿದ್ದರೂ ನಗರದಾದ್ಯಂತ ಕಪ್ಪು ಚುಕ್ಕೆಗಳು (Black Spots) ಹೆಚ್ಚಾಗುತ್ತಲೇ ಇವೆ.
ನಾಗರಿಕರ ಆಕ್ರೋಶ: ಹೊರವಲಯಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲ.
ನಾಗರಿಕರಿಗೆ ದಂಡ, ಇಲಾಖೆಗೆ ಯಾಕಿಲ್ಲ ದಂಡ?
ಕಸ ಹಾಕುವ ಸಾರ್ವಜನಿಕರಿಗೆ ದಂಡ ವಿಧಿಸುವ ಬಿಎಸ್ಡಬ್ಲ್ಯುಎಂಎಲ್, ತನ್ನದೇ ಕಚೇರಿ ಆವರಣವನ್ನು ಮಲಿನಗೊಳಿಸಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದು ಯಾವಾಗ? ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕೂಡಲೇ ಇತ್ತ ಗಮನಹರಿಸಿ, ಈ “ಕಸದ ಆಫೀಸನ್ನು” ಮೊದಲು ಸ್ವಚ್ಛಗೊಳಿಸಬೇಕಿದೆ.
ಸ್ವಂತ ಮನೆಯನ್ನೇ ಸ್ವಚ್ಛವಾಗಿಡದ ಇವರು ಇಡೀ ಬೆಂಗಳೂರನ್ನು “ಬ್ರಾಂಡ್ ಬೆಂಗಳೂರು” ಮಾಡಲು ಹೇಗೆ ಸಾಧ್ಯ ಎಂಬುದು ಈಗಿನ ಮಿಲಿಯನ್ ಡಾಲರ್ ಪ್ರಶ್ನೆ.






















