ಬೆಂಗಳೂರು, ಮೇ.08 www.bengaluruwire.com: ಸಿಲಿಕಾನ್ ಸಿಟಿ ಬೆಂಗಳೂರು ಈಗ ‘ಗಾರ್ಬೇಜ್ ಸಿಟಿ’ಯಾಗಿ ಮಾರ್ಪಡುತ್ತಿದ್ದು, ನಗರದ ಘನತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಲೋಕಾಯುಕ್ತ ತನಿಖೆ ಮುಗಿಯುವವರೆಗೆ ಟೆಂಡರ್ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಅರ್ಹತೆ ಇಲ್ಲದವರಿಗೂ ಟೆಂಡರ್ ಭಾಗ್ಯ?
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ವತಿಯಿಂದ ಕರೆಯಲಾದ 33 ಪ್ಯಾಕೇಜ್ಗಳ ಟೆಂಡರ್ನಲ್ಲಿ ಕನಿಷ್ಠ ಅರ್ಹತೆ ಇಲ್ಲದ ಗುತ್ತಿಗೆದಾರರನ್ನು ತಾಂತ್ರಿಕ ಸಮಿತಿಯು ಕಾನೂನು ಬಾಹಿರವಾಗಿ ಅರ್ಹಗೊಳಿಸಿದೆ ಎಂದು ನಾರಾಯಣಸ್ವಾಮಿ ದೂರಿದ್ದಾರೆ. ಅನುಭವದ ಕೊರತೆ, ಹಣಕಾಸು ದಾಖಲೆಗಳ ಲೋಪ ಹಾಗೂ ತಾಂತ್ರಿಕ ಸಾಮರ್ಥ್ಯವಿಲ್ಲದಿದ್ದರೂ ಅಂತಹ ಕಂಪನಿಗಳಿಗೆ ಮಣೆ ಹಾಕಲಾಗಿದೆ ಎಂಬುದು ಅವರ ಪ್ರಮುಖ ಆರೋಪ.

ಶೇ. 14ರಷ್ಟು ಹೆಚ್ಚುವರಿ ದರ: ತೆರಿಗೆ ಹಣದ ಲೂಟಿ?
ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಅಂದಾಜು ವೆಚ್ಚಕ್ಕಿಂತ ಶೇ. 14ರಷ್ಟು ಹೆಚ್ಚಿನ ದರಕ್ಕೆ ಟೆಂಡರ್ ನೀಡಲು ಬಿ.ಎಸ್.ಡಬ್ಲ್ಯೂ.ಎಂ.ಎಲ್ ಶಿಫಾರಸ್ಸು ಮಾಡಿದೆ. ಮಾರುಕಟ್ಟೆ ಪರಿಸ್ಥಿತಿ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯ ನೆಪವೊಡ್ಡಿ ನೀಡಿರುವ ಈ ಸಮರ್ಥನೆಗಳು ಅತ್ಯಂತ ಬಾಲಿಶವಾಗಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚುನಾವಣಾ ಫಂಡ್ ಸಂಗ್ರಹದ ಆರೋಪ
ಗುರುವಾರವಷ್ಟೇ ಅವರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, “ಜಿ.ಬಿ.ಎ (Greater Bengaluru Authority) ಚುನಾವಣೆ ಹತ್ತಿರ ಬರುತ್ತಿದ್ದಂತೆ ಗುತ್ತಿಗೆದಾರರಿಂದ ಫಂಡ್ ಸಂಗ್ರಹಿಸಲು ಈ ಅಕ್ರಮ ನಡೆಸಲಾಗುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ 1,301 ಕೋಟಿ ರೂ. ವ್ಯಯಿಸಲಾಗಿದ್ದರೆ, 2025-26ರ ಸಾಲೊಂದರಲ್ಲೇ 1,040 ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಹಣ ಎಲ್ಲಿಗೆ ಹೋಯಿತು? ನಗರದ ರಸ್ತೆಗಳು ಹೆಚ್ಚಿವೆಯೇ ಅಥವಾ ಸೌಲಭ್ಯಗಳು ಸುಧಾರಿಸಿವೆಯೇ ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಪತ್ರವನ್ನು ಸರ್ಕಾರ, ಜಿಬಿಎ ಮುಖ್ಯ ಆಯುಕ್ತರು ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ.
ಅಧಿಕಾರಿಗಳ ಅದಕ್ಷತೆ – ನಾಗರೀಕರ ಆಕ್ರೋಶ
ನಗರದ ಸ್ವತ್ತು ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಕಸದ ಶುಲ್ಕವನ್ನೂ ಸಂಗ್ರಹಿಸಲಾಗುತ್ತಿದೆ. ಆದರೂ ನಗರದ ಬೀದಿಗಳಲ್ಲಿ ಪ್ಲಾಸ್ಟಿಕ್ ಹಾಗೂ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಬಿಎಸ್ ಡಬ್ಲ್ಯೂಎಂಎಲ್ ಸಿಇಒ ಕರೀಗೌಡ ಹಾಗೂ ರಾಜೇಶ್ ಎಂಬುವರ ಕಾರ್ಯವೈಖರಿಯಿಂದಾಗಿ ಕಸದ ಸಮಸ್ಯೆ ಬಿಗಡಾಯಿಸಿದೆ ಎಂದು ನಾಗರೀಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿ.ಬಿ.ಎ ವ್ಯಾಪ್ತಿಯ 369 ವಾರ್ಡ್ಗಳಿಗೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಈ ಕಸದ ಹಗರಣವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಗರದಲ್ಲಿ ಕಸದ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿರುವ ಬಿಎಸ್ ಡಬ್ಲ್ಯುಎಂಎಲ್ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಹಾಗೂ ಮಾಧ್ಯಮದವರು ಪ್ರಶ್ನಿಸಿದಾಗ, ಈ ಬಗ್ಗೆ ಅವರು ದ್ರಾಷ್ಟ್ಯತನದಿಂದ ಉತ್ತರಿಸುತ್ತಾರೆ. ತಮ್ಮ ವಿರುದ್ಧ ಯಾರೂ ಏನು ಮಾಡಲಾಗದು. ಮಾಧ್ಯಮದವರು ಏನಾದರೂ ಬರೆದುಕೊಳ್ಳಲಿ. ಅವರು ನನಗೇನು ಮಾಡಲಾಗದು ಎಂದು ನಿರಂಕುಶಾಧಿಕಾರಿಯ ರೀತಿ ವರ್ತಿಸುತ್ತಿದ್ದಾರೆ” ಎಂಬ ದೂರುಗಳಿವೆ.
ಸರ್ಕಾರಿ ಹುದ್ದೆ ಸೇವೆ ಮಾಡಲು: ದರ್ಪ ತೋರುವ ಸ್ಥಳವಲ್ಲ:
ಯಾವುದೇ ಅಧಿಕಾರಿಯಾದರೂ ಸಾರ್ವಜನಿಕರ ಸೇವೆ ಮಾಡಲೆಂದೇ ಸರ್ಕಾರ ಅವರಿಗೆ ಸಂಬಳ ಕೊಡುವುದು. ನಾಗರೀಕರ ಮೇಲೆ ದರ್ಪ ತೋರಲಲ್ಲ. ಹಿಂದಿನ ಬಿಬಿಎಂಪಿ ಹಾಗೂ ಈಗಿನ ಘನತ್ಯಾಜ್ಯ ನಿರ್ವಹಣಾ ಕಂಪನಿಯಲ್ಲಿ ಬೀಡುಬಿಟ್ಟಿದ್ದ 20ಕ್ಕೂ ಹೆಚ್ಚು ಪರಿಸರ ಎಂಜಿನಿಯರ್ ಗಳನ್ನು ರಾಜ್ಯ ವಿವಿಧೆಡೆ ಖಾಲಿಯಿರುವ ಅಗತ್ಯ ಹುದ್ದೆಗಳಿಗೆ ಸರ್ಕಾರ ವರ್ಗಾಯಿಸಿತ್ತು. ಆದರೆ ಈತನಕ ಎಷ್ಟೋ ಇಂಜಿನಿಯರ್ ಗಳು ಸರ್ಕಾರದ ಆದೇಶವನ್ನು ಪಾಲಿಸದೆ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಆ ಪರಿಸರ ಇಂಜಿಯರ್ ಗಳನ್ನು ವರ್ಗಾಯಿಸದೇ ಬಿಎಸ್ ಎಬ್ಲ್ಯುಎಂಎಲ್ ಕಂಪನಿಯ ಅದೇ ಹುದ್ದೆಯಲ್ಲಿ ಮುಂದುವರೆಯಲು ಇದೇ ಸಿಇಒ ಕರೀಗೌಡ ಅವರು ಹಾಗೂ ಚೀಫ್ ಜನರಲ್ ಮ್ಯಾನೇಜರ್-2 ರಾಜೇಶ್ ಹಣ ಸಂಗ್ರಹಿಸುತ್ತಿದ್ದಾರೆ” ಎಂದು ಇತ್ತೀಚೆಗಷ್ಟೇ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಗುರುತರ ಆರೋಪ ಮಾಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.























