ಬೆಂಗಳೂರು, ಮೇ.06 www.bengaluruwire.com: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅತ್ಯಂತ ಪ್ರಮುಖ ಹುದ್ದೆಗಳಲ್ಲೊಂದಾದ ‘ಎಂಜಿನಿಯರ್ ಸದಸ್ಯ’ (EM) ಸ್ಥಾನಕ್ಕೆ ಸರ್ಕಾರವು ಪ್ರವೀಣ್ ಲಿಂಗಯ್ಯ ಅವರನ್ನು ನಿಯೋಜಿಸಿ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಈ ಹುದ್ದೆಯಲ್ಲಿದ್ದ ಶಾಂತಾರಾಜಣ್ಣ ಅವರು ಏಪ್ರಿಲ್ 30ರಂದು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ತೆರವಾಗಿದ್ದ ಸ್ಥಾನಕ್ಕೆ ಅನುಭವೀ ಅಧಿಕಾರಿಯಾದ ಪ್ರವೀಣ್ ಲಿಂಗಯ್ಯ ಅವರ ಆಯ್ಕೆಯಾಗಿದೆ.ವರ್ಗಾವಣೆ ಮತ್ತು ನೇಮಕಾತಿಯ ಹಿನ್ನೆಲೆ:
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಮುಖ್ಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಲಿಂಗಯ್ಯ (ಮೂಲತಃ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿ) ಅವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಬಿಡಿಎಗೆ ನಿಯೋಜಿಸಲಾಗಿದೆ. ಅಭಿಯಂತರ ಸದಸ್ಯರ ಹುದ್ದೆಯು ಬಿಡಿಎನ ತಾಂತ್ರಿಕ ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ
ಈ ಹಿಂದೆ ಬಿಬಿಎಂಪಿಯಲ್ಲಿ ಟ್ರಾಫಿಕ್ ಎಂಜಿನಿರಿಂಗ್ ಸೆಲ್, ಘನತ್ಯಾಜ್ಯ ನಿರ್ವಹಣೆ ಚೀಫ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.

ಹೊಸ ಸಾರಥಿಯ ಮುಂದಿರುವ ಸವಾಲುಗಳೇನು?ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಪ್ರವೀಣ್ ಲಿಂಗಯ್ಯ ಅವರಿಗೆ ಆರಂಭದಲ್ಲೇ ಸವಾಲುಗಳ ಸರಮಾಲೆಯೇ ಎದುರಾಗಿದೆ. ಪ್ರಮುಖವಾಗಿ:
- ಕೆಂಪೇಗೌಡ ಬಡಾವಣೆ: ಇಲ್ಲಿನ ಅಭಿವೃದ್ಧಿ ಕಾಮಗಾರಿಗಳ ವಿಳಂಬದಿಂದಾಗಿ ನಿವೇಶನ ಹಂಚಿಕೆದಾರರಲ್ಲಿ ಉಂಟಾಗಿರುವ ತೀವ್ರ ಅಸಮಾಧಾನವನ್ನು ಹೋಗಲಾಡಿಸುವುದು.
- ಡಾ. ಶಿವರಾಮ ಕಾರಂತ ಬಡಾವಣೆ: ಈ ಪ್ರತಿಷ್ಠಿತ ಬಡಾವಣೆಯ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಚುರುಕುಗೊಳಿಸುವುದು.
- ಬ್ಯುಸಿನೆಸ್ ಕಾರಿಡಾರ್: ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ ‘ಬ್ಯುಸಿನೆಸ್ ಕಾರಿಡಾರ್’ (ಹಿಂದಿನ ಪೆರಿಫೆರಲ್ ರಿಂಗ್ ರೋಡ್) ಯೋಜನೆಯನ್ನು ಹಳಿಗೆ ತರುವುದು.
ನಗರದ ಒಟ್ಟಾರೆ ಮೂಲಸೌಕರ್ಯ ವೃದ್ಧಿ ಮತ್ತು ಬಾಕಿ ಉಳಿದಿರುವ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ಜವಾಬ್ದಾರಿ ಈಗ ನೂತನ ಎಂಜಿನಿಯರ್ ಸದಸ್ಯರ ಮೇಲಿದೆ.




















