ತುಮಕೂರು, ಮೇ.02 www.bengaluruwire.com: ಜಿಲ್ಲೆಯ ಸಿದ್ದಗಂಗಾ ಮಠ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ನವಿಲುಗಳು ಅಸಹಜವಾಗಿ ಮೃತಪಡುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಇದೀಗ ಈ ನವಿಲುಗಳ ಮಾದರಿಯನ್ನು ಪರೀಕ್ಷಿಸಿದಾಗ ಮಾರಕ H5N1 ಹಕ್ಕಿಜ್ವರ (Avian Influenza) ಇರುವುದು ದೃಢಪಟ್ಟಿದೆ.
ಭೋಪಾಲ್ನ ಐಸಿಎಆರ್ (ICAR-NIHSAD) ಸಂಸ್ಥೆಯು ಏಪ್ರಿಲ್ 29ರಂದು ಈ ಬಗ್ಗೆ ವರದಿ ನೀಡಿದ್ದು, ಜಿಲ್ಲಾಡಳಿತವು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಸೋಂಕಿತ ಪ್ರದೇಶಗಳು ಮತ್ತು ನಿಗಾ:
ಕೊಳಿಹಳ್ಳಿ ಬೈರಸಂದ್ರ, ಹುಲ್ಲೆನಹಳ್ಳಿ ಹಾಗೂ ತಿಮ್ಮೇಗೌಡನಪಾಳ್ಯ ಗ್ರಾಮಗಳ ಸುತ್ತಮುತ್ತ ಸತ್ತ ನವಿಲುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ನವಿಲುಗಳು ಮರಣ ಹೊಂದಿದ ಸ್ಥಳದಿಂದ 0-3 ಕಿ.ಮೀ ವ್ಯಾಪ್ತಿಯನ್ನು ಸಾಂಕ್ರಾಮಿಕ ವಲಯ ಮತ್ತು 3-10 ಕಿ.ಮೀ ವ್ಯಾಪ್ತಿಯನ್ನು ನಿಗಾ ವಲಯ ಎಂದು ಗುರುತಿಸಲಾಗಿದೆ. ಮುಂದಿನ 10 ದಿನಗಳ ಕಾಲ ಈ ಭಾಗದ ಸುಮಾರು 38 ಗ್ರಾಮಗಳ 20,432 ಜನಸಂಖ್ಯೆಯನ್ನು ಆರೋಗ್ಯ ಇಲಾಖೆ ಸರ್ವೇಕ್ಷಣೆಗೆ ಒಳಪಡಿಸಲಿದೆ.

ಜಿಲ್ಲಾಧಿಕಾರಿಗಳ ತುರ್ತು ಸಭೆ:
ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಅಂತರ ಇಲಾಖಾ ಸಮನ್ವಯ ಸಭೆಯಲ್ಲಿ, ಪರಿಸ್ಥಿತಿಯನ್ನು ಹತೋಟಿಗೆ ತರಲು ತ್ವರಿತ ಪ್ರತಿಕ್ರಿಯಾ ತಂಡಗಳನ್ನು (RRT) ರಚಿಸಲಾಗಿದೆ. ಜ್ವರ, ಶೀತ ಮತ್ತು ಉಸಿರಾಟದ ತೊಂದರೆ (ILI/SARI) ಇರುವವರ ಮೇಲೆ ವಿಶೇಷ ನಿಗಾ ಇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ನೀಡಿರುವ ಪ್ರಮುಖ ಸೂಚನೆಗಳು:
* ಸತ್ತ ಅಥವಾ ಅಸ್ವಸ್ಥಗೊಂಡ ಪಕ್ಷಿಗಳ ಸಂಪರ್ಕಕ್ಕೆ ಬರಬೇಡಿ.
* ಕೈಗಳನ್ನು ನಿಯಮಿತವಾಗಿ ಸಾಬೂನಿನಿಂದ ತೊಳೆಯಿರಿ.
* ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು 80°C ಗಿಂತ ಹೆಚ್ಚಿನ ತಾಪಮಾನದಲ್ಲಿ ಸಂಪೂರ್ಣವಾಗಿ ಬೇಯಿಸಿ ಮಾತ್ರ ಸೇವಿಸಿ.
* ಪಕ್ಷಿಗಳನ್ನು ನಿರ್ವಹಣೆ ಮಾಡುವವರು ಕಡ್ಡಾಯವಾಗಿ ಪಿಪಿಇ (PPE) ಕಿಟ್ ಬಳಸಬೇಕು.
ಆರೋಗ್ಯ ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಾರ್ವಜನಿಕರು ಆತಂಕಪಡದೆ ಅಧಿಕೃತ ಮಾಹಿತಿಗಳನ್ನು ಮಾತ್ರ ನಂಬಬೇಕು ಎಂದು ಮನವಿ ಮಾಡಿದೆ. (Image Credit: 123ಫ್ರೀ ವೆಕ್ಟರ್ಸ್)



















