ಬೆಂಗಳೂರು, ಮೇ.03 www.bengaluruwire.com: ರಾಜಧಾನಿಯ ಪ್ರಮುಖ ಸಂಪರ್ಕ ಕೊಂಡಿಯಾದ ಎನ್.ಎಚ್-4ರಲ್ಲಿನ ಪೀಣ್ಯ ಮೇಲ್ಸೇತುವೆ (ಡಾ. ಶ್ರೀ ಶಿವಕುಮಾರ್ ಸ್ವಾಮೀಜಿ ಫ್ಲೈಓವರ್) ಮೇಲಿನ ಸಂಚಾರದಲ್ಲಿ ಮೇ 5ರಿಂದ ವ್ಯತ್ಯಯ ಉಂಟಾಗಲಿದೆ.
ಫ್ಲೈಓವರ್ನ ಕೇಬಲ್ ದುರಸ್ತಿ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮೇಲ್ಸೇತುವೆಯ ಸುರಕ್ಷತೆ ಮತ್ತು ದೃಢತೆಯನ್ನು ಪರೀಕ್ಷಿಸಲು ‘ಲೋಡ್ ಟೆಸ್ಟಿಂಗ್’ ಪ್ರಕ್ರಿಯೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನೀಡಿರುವ ಮಾಹಿತಿಯಂತೆ, ಮೇ 05, 2026ರ ಬೆಳಿಗ್ಗೆ 05:00 ಗಂಟೆಯಿಂದ ಮೇ 08, 2026ರ ಬೆಳಿಗ್ಗೆ 11:00 ಗಂಟೆಯವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಫ್ಲೈಓವರ್ ಮೇಲೆ ನಿಷೇಧಿಸಲಾಗಿದೆ.
ಸಂಚಾರ ನಿರ್ಬಂಧದ ವಿವರಗಳು:

ಕೆನ್ನಮೆಟಲ್ ವಿಡಿಯಾ ಅಪ್ಪರ್ ರಾಂಪ್ನಿಂದ ಎಸ್ಆರ್ಎಸ್ ಡೌನ್ ರಾಂಪ್ವರೆಗೆ.
ಸಿಎಂಟಿಐ ಜಂಕ್ಷನ್ನಿಂದ ಪಾರ್ಲೆ-ಜಿ ಟೋಲ್ವರೆಗೆ (ಫ್ಲೈಓವರ್ ಮೂಲಕ).
ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳು:
ನೆಲಮಂಗಲದಿಂದ ಬೆಂಗಳೂರು ಕಡೆಗೆ: ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಡೈವರ್ಷನ್ ಪಡೆದು, ಫ್ಲೈಓವರ್ ಕೆಳಗಿನ ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಸ್ಟೇಷನ್ ಜಂಕ್ಷನ್, ಎಸ್ಆರ್ಎಸ್ ಜಂಕ್ಷನ್ ದಾಟಿ ಗೊರಗುಂಟೆಪಾಳ್ಯ ತಲುಪಬಹುದು.
ಸಿಎಂಟಿಐನಿಂದ ನೆಲಮಂಗಲ ಕಡೆಗೆ: ಫ್ಲೈಓವರ್ ಕೆಳಗಿನ ರಸ್ತೆ ಮತ್ತು ಸರ್ವಿಸ್ ರಸ್ತೆ ಮೂಲಕ ಎಸ್ಆರ್ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಸ್ಟೇಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ದಾಟಿ ಪಾರ್ಲೆ-ಜಿ ಟೋಲ್ ತಲುಪಲು ಸೂಚಿಸಲಾಗಿದೆ.
ಸಾರ್ವಜನಿಕರು ಮತ್ತು ವಾಹನ ಸವಾರರು ಈ ತಾತ್ಕಾಲಿಕ ಬದಲಾವಣೆಗೆ ಸಹಕರಿಸಬೇಕೆಂದು ಎನ್ಎಚ್ಎಐ ಕೋರಿದೆ.





















