ಬೆಂಗಳೂರು, ಏ.09, www.bengaluruwire.com: ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂಗದಂತೆ ಮುನ್ನೆಚ್ಚರಿಕೆ ವಹಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಬುಧವಾರ ಬೆಂಗಳೂರಿನಿಂದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವರು, ನೀರಿನ ಲಭ್ಯತೆ ಮತ್ತು ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಶುದ್ಧ ನೀರಿನ ಘಟಕಗಳ ಪುನಶ್ಚೇತನಕ್ಕೆ ಆದ್ಯತೆ:
ರಾಜ್ಯಾದ್ಯಂತ ಸ್ಥಗಿತಗೊಂಡಿರುವ ಅಥವಾ ದುರಸ್ತಿಯಲ್ಲಿರುವ ಶುದ್ಧ ನೀರಿನ ಘಟಕಗಳನ್ನು (RO Plants) ಈ ವರ್ಷ ಆದ್ಯತೆಯ ಮೇಲೆ ಸರಿಪಡಿಸಲು ಸರ್ಕಾರ ನಿರ್ಧರಿಸಿದೆ. “ಅನೇಕ ಕಡೆ ನೀರಿನ ಮೂಲಗಳಿಲ್ಲದೆ ಅಥವಾ ನಿರ್ವಹಣೆಯ ಕೊರತೆಯಿಂದ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇವುಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ, ವಾಸ್ತವ ವರದಿಯೊಂದಿಗೆ ವಿವರವಾದ ನೀಲನಕ್ಷೆಯನ್ನು ಸಿದ್ಧಪಡಿಸಿ ಕಳುಹಿಸಬೇಕು” ಎಂದು ಸಚಿವರು ಆದೇಶಿಸಿದರು.

ಅಧಿಕಾರಿಗಳು ಉತ್ತರದಾಯಿಗಳಾಗಿರಲಿ:
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಅಥವಾ ಜನಪ್ರತಿನಿಧಿಗಳು ದೂರು ನೀಡಿದಾಗ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ತಾಲ್ಲೂಕು ಮಟ್ಟದಲ್ಲಿ ನೀರಿನ ಸಮಸ್ಯೆಗಳ ಕುರಿತು ದೂರು ಸ್ವೀಕರಿಸಲು “ವಿಶೇಷ ಸಹಾಯವಾಣಿ” ಗಳನ್ನು ಆರಂಭಿಸುವಂತೆ ಅವರು ತಿಳಿಸಿದರು.
ಹಣ ಪಾವತಿಯಲ್ಲಿ ವಿಳಂಬ ಸಲ್ಲದು:
ಬೇಸಿಗೆಯಲ್ಲಿ ಬಾಡಿಗೆಗೆ ಪಡೆಯುವ ಟ್ಯಾಂಕರ್ಗಳು ಹಾಗೂ ಖಾಸಗಿ ಕೊಳವೆಬಾವಿಗಳ ಬಾಡಿಗೆ ಹಣ ಪಾವತಿಸುವಲ್ಲಿ ಯಾವುದೇ ವಿಳಂಬವಾಗಬಾರದು. ಕಳೆದ ವರ್ಷದ ಬಾಕಿ ಪಾವತಿಗೆ ಈಗ ಪತ್ರ ಬರೆಯುತ್ತಿರುವ ಎಂಜಿನಿಯರ್ಗಳ ಕಾರ್ಯವೈಖರಿಯನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಸಮೀರ್ ಶುಕ್ಲ, ಡಿ. ರಣ್ದೀಪ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.























