ಬೆಂಗಳೂರು, ಏ.09 www.bengaluruwire.com: ರಾಜ್ಯದ ಜನಸಾಮಾನ್ಯರಿಗೆ ಸರ್ಕಾರವು ಭರ್ಜರಿ ಆರೋಗ್ಯ ಭಾಗ್ಯವೊಂದನ್ನು ನೀಡಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB PMJAY-CM’s ArK) ಯೋಜನೆಯಡಿ ಹಲ್ಲಿನ ‘ರೂಟ್ ಕೆನಾಲ್’ (RCT) ಚಿಕಿತ್ಸೆಯನ್ನು ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಹಲ್ಲಿನ ಸೋಂಕು ಅಥವಾ ತೀವ್ರ ನೋವಿನ ಸಂದರ್ಭದಲ್ಲಿ ನೀಡಲಾಗುವ ಈ ಚಿಕಿತ್ಸೆಯು ಈವರೆಗೆ ಯೋಜನೆಯ ವ್ಯಾಪ್ತಿಯಲ್ಲಿ ಇರಲಿಲ್ಲ. ಇದರಿಂದಾಗಿ ಅನೇಕರು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚ ಭರಿಸಲಾಗದೆ ಹಲ್ಲುಗಳನ್ನೇ ಕಿತ್ತಿಸಿಕೊಳ್ಳುತ್ತಿದ್ದರು. ಈ ಸಮಸ್ಯೆಯನ್ನು ಗಮನಿಸಿದ ಸರ್ಕಾರ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೀಡಿದ ಪ್ರಸ್ತಾವನೆಯನ್ನು ಪುರಸ್ಕರಿಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಹೊಸ ಆದೇಶದ ಮುಖ್ಯಾಂಶಗಳು
ಯಾರಿಗೆ ಅನ್ವಯ: ಬಿಪಿಎಲ್ (PHH) ಮತ್ತು ಎಪಿಎಲ್ (NPHH) ಕಾರ್ಡ್ ಹೊಂದಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯಲಿದೆ.
ಚಿಕಿತ್ಸಾ ವೆಚ್ಚ: ಮುಂಭಾಗದ ಹಲ್ಲಿನ (Anterior RCT) ಚಿಕಿತ್ಸೆಗೆ 1,360 ರೂ. ಹಾಗೂ ಹಿಂಭಾಗದ ಹಲ್ಲಿನ (Posterior RCT) ಚಿಕಿತ್ಸೆಗೆ 2,040 ರೂ. ದರವನ್ನು ನಿಗದಿಪಡಿಸಲಾಗಿದೆ.

ಬಜೆಟ್ ಮಿತಿ: ಈ ಯೋಜನೆಯಡಿ ವಾರ್ಷಿಕವಾಗಿ ಗರಿಷ್ಠ 50,000 ಪ್ರಕರಣಗಳು ಅಥವಾ 5 ಕೋಟಿ ರೂಪಾಯಿಗಳವರೆಗೆ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಚಿಕಿತ್ಸೆಯ ವರ್ಗ: ರೂಟ್ ಕೆನಾಲ್ ಚಿಕಿತ್ಸೆಯನ್ನು ‘ಸಂಕೀರ್ಣ ದ್ವಿತೀಯಕ ಕಾರ್ಯವಿಧಾನ’ (Complex Secondary Procedures – 2B) ಅಡಿಯಲ್ಲಿ ಸೇರಿಸಲಾಗಿದೆ.
ಹಲ್ಲು ಕಿತ್ತಿಸುವುದರಿಂದ ಉಂಟಾಗುವ ಜಗಿಯುವ ತೊಂದರೆ ಹಾಗೂ ನಂತರ ಹಾಕಿಸಿಕೊಳ್ಳಬೇಕಾದ ಕೃತಕ ಹಲ್ಲುಗಳ ದುಬಾರಿ ವೆಚ್ಚವನ್ನು ತಪ್ಪಿಸಲು ರೂಟ್ ಕೆನಾಲ್ ಚಿಕಿತ್ಸೆ ಅತ್ಯಗತ್ಯ. ಈಗ ಈ ಸೌಲಭ್ಯ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಸಿಗುವುದರಿಂದ ರಾಜ್ಯದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.






















