ಬೆಂಗಳೂರು, ಏ.2 www.bengaluruwire.com: ಕರ್ನಾಟಕದ ಇಂಧನ ವಲಯದಲ್ಲಿ ಗುರುವಾರ ಎರಡು ಮಹತ್ವದ ಬೆಳವಣಿಗೆಗಳು ಸಂಭವಿಸಿವೆ. ಅದೇನು ಗೊತ್ತಾ?
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) 233 ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಮಾಡುವ ಮೂಲಕ ಉದ್ಯೋಗ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರೆ, ಇತ್ತ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸಲು ಜಾಗತಿಕ ಮಟ್ಟದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಕೆಪಿಸಿಎಲ್ನಲ್ಲಿ 233 ಹುದ್ದೆಗಳಿಗೆ ಸ್ಥಳ ನಿಯುಕ್ತಿ:
ಕೆಪಿಸಿಎಲ್ನಲ್ಲಿ ಖಾಲಿ ಇರುವ ಒಟ್ಟು 622 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 233 ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲಾಯಿತು.

ಆಯ್ಕೆಯಾದವರಲ್ಲಿ ಸಹಾಯಕ ಇಂಜಿನಿಯರ್ಗಳು (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಇನ್ಸ್ಟ್ರುಮೆಂಟೇಷನ್), ಕಿರಿಯ ಇಂಜಿನಿಯರ್ಗಳು ಹಾಗೂ ಕೆಮಿಸ್ಟ್ಗಳು ಸೇರಿದ್ದಾರೆ.
ಈ ವೇಳೆ ಮಾತನಾಡಿದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, “ಯುವ ಇಂಜಿನಿಯರ್ಗಳು ಕೇವಲ ವೇತನಕ್ಕಾಗಿ ಕೆಲಸ ಮಾಡದೆ, ನಿಗಮದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸಬೇಕು. ನಿಗಮಕ್ಕೆ ನಿಮ್ಮ ಕೊಡುಗೆ ಅಪಾರವಾಗಿರಲಿ,” ಎಂದು ಕರೆ ನೀಡಿದರು. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ನಿಗಮವನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ನವೋದ್ಯಮಗಳ ವಿಸ್ತರಣೆಗೆ ಜಾಗತಿಕ ಒಪ್ಪಂದ:
ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡಲು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (KREDL), ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ (UNSW), ಬೆಂಗಳೂರಿನ ಐಐಎಸ್ಸಿ (IISc) ಮತ್ತು ಐಐಎಂಬಿ (IIMB) ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದ ಅನ್ವಯ ಬೆಂಗಳೂರಿನಲ್ಲಿ ಇನ್ಕ್ಯುಬೇಷನ್ ಮತ್ತು ತಂತ್ರಜ್ಞಾನ ನಾವೀನ್ಯತೆ ಕೇಂದ್ರ ಸ್ಥಾಪನೆಯಾಗಲಿದ್ದು, ಪ್ರತಿ ವರ್ಷ 20 ನವೋದ್ಯಮಗಳಿಗೆ ತಾಂತ್ರಿಕ ಮಾರ್ಗದರ್ಶನ ಮತ್ತು ಜಾಗತಿಕ ಮಾರುಕಟ್ಟೆಯ ಸಂಪರ್ಕ ಕಲ್ಪಿಸಲಾಗುವುದು. “ಈ ಸಹಯೋಗವು ಪರಿಸರ ಸಂರಕ್ಷಣೆ ಮತ್ತು ಇಂಧನ ಪರಿವರ್ತನೆಗೆ ಹೊಸ ದಿಕ್ಸೂಚಿಯಾಗಲಿದೆ,” ಎಂದು ಯುಎನ್ಎಸ್ಡಬ್ಲ್ಯು ಪ್ರೊ ವೈಸ್-ಚಾನ್ಸೆಲರ್ ಲಿಸಾ ಝಾಂಬರ್ಲಾನ್ ಅಭಿಪ್ರಾಯಪಟ್ಟರು.























