ಬೆಂಗಳೂರು, ಏ.03 www.bengaluruwire.com: ನೀವು ಅಂಗಡಿಯಿಂದ ತರುವ ಮೊಟ್ಟೆ ಎಷ್ಟು ದಿನದ ಹಳೆಯದು? ಅದು ತಾಜವಾಗಿದೆಯೇ ಅಥವಾ ಕೆಟ್ಟಿದೆಯೇ ಎಂದು ತಿಳಿಯಲು ಈಗ ಕೇವಲ ವ್ಯಾಪಾರಿಯ ಮಾತೇ ಆಧಾರ.
ಆದರೆ, ಈ ಗೊಂದಲಕ್ಕೆ ಉತ್ತರ ಪ್ರದೇಶ ಸರ್ಕಾರ ತೆರೆ ಎಳೆದಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಪ್ರತಿ ಮೊಟ್ಟೆಯ ಮೇಲೆ ಕಡ್ಡಾಯವಾಗಿ ಉತ್ಪಾದನಾ ದಿನಾಂಕ ಮತ್ತು ಅವಧಿ ಮುಕ್ತಾಯ ದಿನಾಂಕ (Expiry Date) ಮುದ್ರಿಸಬೇಕು ಎಂದು ಅಲ್ಲಿನ ಎಫ್ಡಿಎ (FDA) ಆದೇಶಿಸಿದೆ. ಈಗ ಇದೇ ಮಾದರಿ ಕರ್ನಾಟಕದಲ್ಲೂ ಜಾರಿಯಾಗಬೇಕೆಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ:
ದೇಶದ 5ನೇ ಅತಿದೊಡ್ಡ ಮೊಟ್ಟೆ ಬಳಕೆದಾರ ರಾಜ್ಯವಾಗಿರುವ ಕರ್ನಾಟಕದಲ್ಲಿ ಪ್ರತಿದಿನ 10 ಕೋಟಿಗೂ ಅಧಿಕ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ರಸೆಲ್ ಮಾರ್ಕೆಟ್ ಅಥವಾ ಕೆ.ಆರ್. ಮಾರುಕಟ್ಟೆಯಂತಹ ಮುಕ್ತ ಮಾರುಕಟ್ಟೆಗಳಲ್ಲಿ ಹಳಸಿದ ಮೊಟ್ಟೆಗಳ ಬಗ್ಗೆ ಗ್ರಾಹಕರು ಪದೇ ಪದೇ ದೂರು ನೀಡುತ್ತಲೇ ಇರುತ್ತಾರೆ. ಉತ್ತರ ಪ್ರದೇಶದ ಮಾದರಿಯಲ್ಲಿ 28 ದಿನಗಳ ‘ಬೆಸ್ಟ್ ಬಿಫೋರ್’ (Best Before) ದಿನಾಂಕವನ್ನು ಪ್ರತಿ ಮೊಟ್ಟೆಯ ಮೇಲೆ ಸ್ಟ್ಯಾಂಪ್ ಮಾಡಿದರೆ, ಗ್ರಾಹಕರು ಮೋಸ ಹೋಗುವುದು ತಪ್ಪುತ್ತದೆ.

ಸವಾಲುಗಳು ಮತ್ತು ಉದ್ಯಮದ ಅಭಿಪ್ರಾಯ:
ಕರ್ನಾಟಕದ ಮೊಟ್ಟೆ ಮಾರುಕಟ್ಟೆಯಲ್ಲಿ ಶೇ. 95 ರಷ್ಟು ಮೊಟ್ಟೆಗಳು ಅನ್-ಬ್ರಾಂಡೆಡ್ (Unbranded) ಆಗಿವೆ. ಕೇವಲ ಶೇ. 5 ರಷ್ಟು ಬ್ರಾಂಡೆಡ್ ಕಂಪನಿಗಳು ಮಾತ್ರ ದಿನಾಂಕಗಳನ್ನು ಮುದ್ರಿಸುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್ (KPFBA) ಮಾಜಿ ಅಧ್ಯಕ್ಷ ಎಂ.ಸಿ.ಆರ್ ಶೆಟ್ಟಿ ಅವರು, “ರಾಜ್ಯದಲ್ಲಿ ವಾರ್ಷಿಕ 50,000 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಈ ನಿಯಮ ತಂದರೆ, ಸಣ್ಣ ಉತ್ಪಾದಕರಿಗೆ ಸಬ್ಸಿಡಿ ಮತ್ತು ತಾಂತ್ರಿಕ ಅಳವಡಿಕೆಗೆ ಕಾಲಾವಕಾಶ ನೀಡಬೇಕು,” ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಡೈರಿ ಉತ್ಪನ್ನಗಳ ಮೇಲೆ ಎಫ್ಎಸ್ಎಸ್ಎಐ (FSSAI) ಲೇಬಲಿಂಗ್ ಕಡ್ಡಾಯಗೊಳಿಸಿರುವ ಕರ್ನಾಟಕ ಸರ್ಕಾರ, ದೇಶದಲ್ಲೇ ಅತಿ ಹೆಚ್ಚು ಮೊಟ್ಟೆ ಉತ್ಪಾದಿಸುವ ಐದನೇ ರಾಜ್ಯವಾಗಿರುವ ರಾಜ್ಯದಲ್ಲಿ ಮೊಟ್ಟೆಯ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಹಾರದಲ್ಲಿ ಕೃತಕ ಬಣ್ಣ ಬಳಕೆ ನಿಷೇಧ ಸೇರಿದಂತೆ ಆಹಾರ ಸುರಕ್ಷತೆ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವಾಗ ಉತ್ತರಪ್ರದೇಶ ಮಾದರಿಯಂತೆ ಪ್ರತಿ ಮೊಟ್ಟೆಯ ಮೇಲೆ ಕಡ್ಡಾಯವಾಗಿ ಉತ್ಪಾದನಾ ದಿನಾಂಕ ಮತ್ತು ಅವಧಿ ಪೂರ್ಣಗೊಂಡ ದಿನಾಂಕವನ್ನು ರಾಜ್ಯದಲ್ಲೂ ಜಾರಿ ಮಾಡಿದರೆ ಉತ್ತಮ. ಏಕೆಂದರೆ ಮಧ್ಯಾಹ್ನ ಬಿಸಿಯೂಟಕ್ಕೆ ಮೊಟ್ಟೆ ನೀಡುವ ಯೋಜನೆ ನಮ್ಮ ರಾಜ್ಯದಲ್ಲಿ ಜಾರಿಯಲ್ಲಿದೆ. ಇಲ್ಲಿ ವಿದ್ಯಾರ್ಥಿಗಳು ಹಾಗೂ ಇತರ ಮೊಟ್ಟೆ ಬಳಕೆ ಮಾಡುವವರ ಆರೊಗ್ಯದ ದೃಷ್ಟಿಯಿಂದ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಆಹಾರ ಸುರಕ್ಷತೆಯನ್ನು ಪ್ರಮುಖ ಅಜೆಂಡಾವನ್ನಾಗಿ ಮಾಡಿಕೊಂಡರೆ ಅಚ್ಚರಿಯಿಲ್ಲ. ಬೆಂಗಳೂರು ಮತ್ತು ಮೈಸೂರಿನಂತಹ ನಗರಗಳಲ್ಲಿ ಈ ನಿಯಮ ಮೊದಲು ಜಾರಿಯಾದರೆ, ಆಹಾರ ಪೋಲಾಗುವುದನ್ನು ಶೇ. 15-20 ರಷ್ಟು ಕಡಿಮೆ ಮಾಡಬಹುದು ಎಂದು ಅಂದಾಜಿಸಲಾಗಿದೆ.






















