ಬೆಂಗಳೂರು, ಮಾ.24 www.bengaluruwire.com: ಮೀಸಲು ಅರಣ್ಯ ಅಥವಾ ಪರಿಭಾವಿತ ಅರಣ್ಯ ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಮಂಜೂರು ಮಾಡಲು ಸಾಧ್ಯವಿಲ್ಲ. ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದರೂ ಕಂದಾಯ ಭೂಮಿಗೆ ಮಾತ್ರ ಅದು ಅನ್ವಯವಾಗಲಿದೆಯೇ ಹೊರತು ಅರಣ್ಯ ಭೂಮಿಗಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸೋಮವಾರ ಕಿಶೋರ್ ಕುಮಾರ್ ಪುತ್ತೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯ ಒತ್ತುವರಿ ಮತ್ತು ಜಮೀನು ಮಂಜೂರಾತಿ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ಜಂಟಿ ಸರ್ವೆಗೆ ಆದೇಶ:
ಒಂದೇ ಸರ್ವೆ ನಂಬರ್ನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಒಟ್ಟಾಗಿರುವ ಕಡೆಗಳಲ್ಲಿ ಗೊಂದಲ ನಿವಾರಿಸಲು ಜಂಟಿ ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲದ ಕಾರಣ, ಕಾಲಮಿತಿಯೊಳಗೆ ಗಡಿ ಗುರುತಿಸುವ ‘ಮೋಜಿಣಿ’ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಸದ್ಯ ರಾಜ್ಯದಲ್ಲಿ 2.21 ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದ್ದು, ಇವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಒತ್ತುವರಿ ಪತ್ತೆಗೆ ‘ಫಾರೆಸ್ಟ್ ಕವರ್ ಚೇಂಜ್ ಅಲರ್ಟ್ ಸಿಸ್ಟಮ್’ ಎಂಬ ಉಪಗ್ರಹ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವನ್ಯಜೀವಿ ಟ್ರೋಫಿ: ಹೊಸ ಪರವಾನಗಿ ಇಲ್ಲ
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ವನ್ಯಜೀವಿಗಳ ಅಂಗಾಂಗ ಅಥವಾ ಟ್ರೋಫಿಗಳನ್ನು (ಜಿಂಕೆ ಕೊಂಬು, ಚರ್ಮ ಇತ್ಯಾದಿ) ಇಟ್ಟುಕೊಳ್ಳಲು ಹೊಸದಾಗಿ ಪರವಾನಗಿ ನೀಡಲು ಅವಕಾಶವಿಲ್ಲ ಎಂದರು. 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಈ ಹಿಂದೆ ಹಲವು ಬಾರಿ ಘೋಷಣೆಗೆ ಅವಕಾಶ ನೀಡಲಾಗಿತ್ತು. 2024ರ ಆರಂಭದಲ್ಲೂ 90 ದಿನಗಳ ಕಾಲಾವಕಾಶ ನೀಡಿ ಸ್ವಯಂ ಪ್ರೇರಿತವಾಗಿ ಒಪ್ಪಿಸಲು ಸೂಚಿಸಲಾಗಿತ್ತು. ಈಗ ಈ ಕಾಯಿದೆಗೆ ತಿದ್ದುಪಡಿ ತರುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಅವರು ಪರಿಷತ್ ಸದಸ್ಯ ಕುಶಾಲಪ್ಪ ಎಂ.ಪಿ. ಅವರ ಪ್ರಶ್ನೆಗೆ ಉತ್ತರಿಸಿದರು.























