ಬೆಂಗಳೂರು, ಮಾ.22 www.bengaluruwire.com: ಸಿಲಿಕಾನ್ ಸಿಟಿ ಜನತೆಗೆ ರಾಜ್ಯ ಸರ್ಕಾರ ಮತ್ತು ಜಲಮಂಡಳಿಯು ಯುಗಾದಿ ಹಬ್ಬದ ಖುಷಿಯಲ್ಲಿರುವವರಿಗೆ ವಿಶೇಷ ಉಡುಗೊರೆಯೊಂದನ್ನು ಘೋಷಿಸಿದೆ.
ಹಲವು ವರ್ಷಗಳಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗಾಗಿ ‘ಒನ್ ಟೈಮ್ ಸೆಟಲ್ಮೆಂಟ್’ (OTS) ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಬಾಕಿ ಬಿಲ್ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿರುವ ಲಕ್ಷಾಂತರ ಗ್ರಾಹಕರಿಗೆ ಈ ಯೋಜನೆಯಿಂದ ಆರ್ಥಿಕ ಹೊರೆ ತಗ್ಗಲಿದೆ. ಏಪ್ರಿಲ್ 2026 ರಿಂದ ಜೂನ್ 2026 ರವರೆಗೆ ಮೂರು ತಿಂಗಳ ಕಾಲ ಈ ಅವಕಾಶ ಲಭ್ಯವಿರಲಿದೆ.
₹311 ಕೋಟಿ ಬಡ್ಡಿ ಮನ್ನಾ:

ಜಲಮಂಡಳಿಯ ಅಂಕಿಅಂಶಗಳ ಪ್ರಕಾರ, ನಗರದ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಫೆಬ್ರವರಿ 2026 ರ ವೇಳೆಗೆ ಒಟ್ಟು 851.33 ಕೋಟಿ ರೂ. ಬಾಕಿ ಇತ್ತು. ಇದರಲ್ಲಿ ಅಸಲು ಮೊತ್ತ 539.43 ಕೋಟಿ ರೂ.ಗಳಾಗಿದ್ದರೆ, ಬಡ್ಡಿಯೇ 311.90 ಕೋಟಿ ರೂ.ಗಳಷ್ಟಿದೆ. ಈಗ ಜಾರಿಗೆ ತರುತ್ತಿರುವ “ಒಂದು ಬಾರಿ ಇತ್ಯರ್ಥ” ಯೋಜನೆಯಡಿ ಅಸಲು ಮೊತ್ತ ಪಾವತಿಸಿದರೆ ಈ ಬೃಹತ್ ಮೊತ್ತದ ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಲಿದೆ.
ಯೋಜನೆ ಯಾರಿಗೆ ಅನ್ವಯವಾಗುತ್ತೆ?:
ಈ ವಿನಾಯಿತಿಯು ಕೇವಲ ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಗೃಹ ಬಳಕೆ (Domestic), ವಾಣಿಜ್ಯ (Commercial), ಕೈಗಾರಿಕಾ (Industrial), ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳು ಸೇರಿದಂತೆ
ಜಲಮಂಡಳಿಯ ಎಲ್ಲಾ ವರ್ಗದ ಗ್ರಾಹಕರಿಗೂ ಈ ಯೋಜನೆ ಅನ್ವಯವಾಗಲಿದೆ.
ಹಣ ಪಾವತಿಸುವುದು ಹೇಗೆ?:
ಗ್ರಾಹಕರ ಅನುಕೂಲಕ್ಕಾಗಿ ಜಲಮಂಡಳಿಯು ಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಪ್ರತಿಯೊಬ್ಬ ಬಾಕಿದಾರರಿಗೆ ಅವರ ಆರ್ಆರ್ (RR) ಸಂಖ್ಯೆ, ಅಸಲು ಮೊತ್ತ ಮತ್ತು ಮನ್ನಾ ಆಗುವ ಬಡ್ಡಿಯ ವಿವರಗಳನ್ನು ನೀಡಲಾಗುತ್ತದೆ. ಗ್ರಾಹಕರು ಬಿಡಬ್ಲ್ಯೂಎಸ್ಎಸ್ಬಿ ಕಿಯೋಸ್ಕ್, ಆನ್ಲೈನ್ ಪೋರ್ಟಲ್ ಅಥವಾ ವಿವಿಧ ಡಿಜಿಟಲ್ ಪೇಮೆಂಟ್ ಆಪ್ಗಳ ಮೂಲಕ ಹಣ ಪಾವತಿಸಬಹುದು.
“ನಗರದ ಜನ ಸಾಮಾನ್ಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾಗರಿಕರು ಈ 3 ತಿಂಗಳ ಅವಕಾಶವನ್ನು ಬಳಸಿಕೊಂಡು ತಮ್ಮ ಬಾಕಿಯನ್ನು ಚುಕ್ತಾ ಮಾಡಿಕೊಳ್ಳಬೇಕು,” ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.























