ಬೆಂಗಳೂರು, ಮಾ.17 www.bengaluruwire.com: ಸಿಟಿ ಲೈಫ್ನ ಜೀವನಾಡಿ ಎನಿಸಿಕೊಂಡಿರುವ ಆಟೋಗಳಿಗೆ ಇಂಧನ ಮತ್ತು ಅಡುಗೆ ಅನಿಲದ ತೀವ್ರ ಕೊರತೆ ಉಂಟಾಗಿರುವುದನ್ನು ಖಂಡಿಸಿ, ರಾಜಧಾನಿಯ ಫ್ರೀಡಂ ಪಾರ್ಕ್ನಲ್ಲಿ ಇಂದು ವಿವಿಧ ಚಾಲಕ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್, ಸಂಚಾರಿ ಚಾಲಕರ ಸೇವಾ ಟ್ರಸ್ಟ್ ಹಾಗೂ ಸ್ನೇಹಜೀವಿ ಚಾಲಕರ ಸಂಘದ ನೇತೃತ್ವದಲ್ಲಿ ನಡೆದ ಈ ಹೋರಾಟದಲ್ಲಿ ನೂರಾರು ಚಾಲಕರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಶಿಷ್ಟವಾಗಿ ನಡೆದ ಪ್ರತಿಭಟನೆ:
ಕೇವಲ ಘೋಷಣೆಗಳಿಗೆ ಸೀಮಿತವಾಗದ ಪ್ರತಿಭಟನಾಕಾರರು, ರಸ್ತೆಯಲ್ಲಿ ಆಟೋಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಇಂಧನವಿಲ್ಲದೆ ಆಟೋಗಳು ಸ್ಥಗಿತಗೊಂಡಿರುವುದನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು. ಅಲ್ಲದೆ, ಅಡುಗೆಯ ಖಾಲಿ ಸಿಲಿಂಡರ್ಗಳನ್ನು ಹಿಡಿದು ಪ್ರದರ್ಶಿಸುವ ಮೂಲಕ ಮನೆಯಲ್ಲೂ ಮತ್ತು ಕೆಲಸದಲ್ಲೂ ಅನಿಲದ ಬೆಲೆ ಏರಿಕೆ ಹಾಗೂ ಕೊರತೆಯಿಂದ ಎದುರಾಗಿರುವ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದರು.

ಚಾಲಕರ ಕುಟುಂಬಕ್ಕೆ ₹10,000 ಪರಿಹಾರ ನೀಡಲು ಆಗ್ರಹ:
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, “ಇಂದು ಆಟೋ ಚಾಲಕರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಮನೆಗೆ ಅಡುಗೆ ಸಿಲಿಂಡರ್ ಸಿಗುತ್ತಿಲ್ಲ, ಆಟೋ ಓಡಿಸಲು ಬಂಕ್ಗಳಲ್ಲಿ ಗ್ಯಾಸ್ ಸಿಗುತ್ತಿಲ್ಲ. ಕೇಂದ್ರ ಸರ್ಕಾರದ ಅವೈಜ್ಞಾನಿಕ ಧೋರಣೆಯಿಂದಾಗಿ ಜೀವನೋಪಾಯಕ್ಕೆ ಕುತ್ತು ಬಂದಿದೆ. ಸಂಕಷ್ಟದಲ್ಲಿರುವ ಪ್ರತಿ ಚಾಲಕನ ಕುಟುಂಬಕ್ಕೆ ತಕ್ಷಣವೇ ₹10,000 ಪರಿಹಾರ ಘೋಷಿಸಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ನೇಹಜೀವಿ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ, ಸಂಚಾರಿ ಸತೀಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ, ಸಮಸ್ಯೆ ಶೀಘ್ರ ಬಗೆಹರಿಯದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.


















